Advertisement

ಕತೆ; ಗೂಡಂಗಡಿ

03:45 AM Jun 25, 2017 | Team Udayavani |

ಅವನು ಬೆಳಗಿನ ಜಾವದ ಬೆಂಗಳೂರು ಬಸ್ಸನ್ನೇರಿ ಕುಳಿತ. ಬಸ್ಸು ಏರುವಾಗಲೇ ಏನೋ ಆಯಾಸ. ಬಹುಶಃ ಮನಸ್ಸಿನ ದ್ವಂದ್ವಗಳು ಉಂಟುಮಾಡುವಷ್ಟು ಸುಸ್ತನ್ನು ಮತಾöವುದೂ ಮಾಡಲಾರದು ಎಂದೆನಿಸಿತು. ಹಾಗೇ ಸೀಟಿಗೆ ತಲೆಯಾನಿಸಿದ. ಅಷ್ಟರಲ್ಲಿ ಮಗನ ನೆನಪು. ಅವನಿಗೆ ಹೇಳಬೇಕು. ನಂಬರನ್ನು ಹುಡುಕುವುದು, ಕರೆ ಮಾಡುವುದು ಎರಡೂ ಬಹಳ ಸಾಹಸಮಯ ಎನ್ನುವ ವಯಸ್ಸು ಆತನದ್ದು. ಅಂತೂ ಕಷ್ಟಪಟ್ಟು ಆ ಸಾಹಸವನ್ನು ಮಾಡಿ ಮುಗಿಸಿದ್ದಾಯಿತು. ತಾನು ಬಸ್ಸು ಹತ್ತಿದ್ದೇನೆ ಎಂಬ ಸಂದೇಶವನ್ನು ರವಾನಿಸಿ ಮತ್ತೆ ಇಷ್ಟಗಲದ ಸೀಟಿನ ಮೇಲೆ ನಿರಾಳನಾಗಲು ಯತ್ನಿಸಿದ. ತಲೆಯಲ್ಲಿದ್ದ ಆಲೋಚನೆಗಳು ನಾ ಮುಂದು ತಾ ಮುಂದು ಎಂದು ಧಾಂಗುಡಿ ಇಡುತ್ತಾ ಕಾಡಿದವು. ಕಣ್ಣಿನ ಮುಂದೆ ಪದೇ ಪದೇ ತಾನು ಬಿಟ್ಟು ಬಂದ ಗೂಡಂಗಡಿ ಕಾಡಿತು. ಹಾಗೇ ಕಿಟಕಿಯಿಂದ ಹೊರಗೆ ದೃಷ್ಟಿ ಹಾಯಿಸಿದ. 

Advertisement

ಬೆಂಗಳೂರು- 182 ಕಿ.ಮೀ. ಎಂಬ ಬೋರ್ಡು ಕಣ್ಮುಂದೆ ಸರಿದು ಹಿಂದಕ್ಕೋಡಿತು. ಮತ್ತೆ ದಿಗಿಲು, ದ್ವಂದ್ವ. ಏನೆಂದರೂ ಹಳೆಯ ಜೀವಕ್ಕೆ ಹೊಸದೆಲ್ಲವೂ ಆತಂಕವೇ ಎಂದು ನಿಡುಸುಯ್ಯುತ್ತ ಕಣ್ಮುಚ್ಚಿ ಮಲಗುವ ಪ್ರಯತ್ನಕ್ಕೆ ಅನುವಾದ. ದೊಡ್ಡ ಊರಿನಲ್ಲಿ ದೊಡ್ಡ ಕೆಲಸದಲ್ಲಿದ್ದ ಮಗನನ್ನು ಸೇರಲು, ಅವನೊಡನೆ ಮುಂದಿನ ಬದುಕು ಸವೆಸಲು ಹೊರಟ ಪ್ರಯಾಣವದು. ಅದಕ್ಕಾಗಿ ತಾನು ನೆನಪಿನಿಂದ ಅಳಿಸಲಾಗದಷ್ಟು ವರ್ಷ ನಡೆಸಿಕೊಂಡು ಬಂದ ಗೂಡಂಗಡಿಯನ್ನು, ಬದುಕಿನ ಏರಿಳಿತವನ್ನು ಕಂಡು ತಾನೂ ತತ್ತರಿಸಿ ಹೋದ ಗೂಡಗಲದ ಮನೆಯನ್ನು, ತನ್ನ ಪ್ರಪಂಚವೇ ಆಗಿದ್ದ ಊರನ್ನು ಬಿಟ್ಟು ಹೊರಟುಬಿಟ್ಟಿದ್ದನವನು. ಇನ್ನು ಗೂಡಂಗಡಿ ಸೋಮ ಎಂಬುದು ತನ್ನ ನೆನಪಿನಲ್ಲಷ್ಟೇ ಉಳಿಯುವುದು. ಕಳೆದು ಹೋಗುವುದರಲ್ಲಿದ್ದವನು ಅದೇನೋ ಆದಂತೆ ಫ‌ಟ್ಟನೆ ಕಣಿºಟ್ಟನು. ಒಳಗೆ ಅದುಮಿಟ್ಟುಕೊಂಡಿದ್ದ ಗೊಂದಲ ಇದೇ ಸುಸಂದರ್ಭವೆಂದು ಅರಿತು ಪ್ರತ್ಯಕ್ಷವಾಯಿತು. 

ಬೆಂಗಳೂರಿಗೆ ಹೋಗಿ ನಾನೇನು ಮಾಡಲಿ? ಈ ಪ್ರಶ್ನೆ ಕಳೆದ ವರ್ಷದಿಂದಲೂ ಅವನನ್ನು ಎಡಬಿಡದೇ ಕಾಡಿ ಉತ್ತರ ಕಾಣದೇ ಕೂತಿದೆ. ಅಲ್ಲಿಯೂ ಗೂಡಂಗಡಿ ತೆರೆಯಲೇ ಎಂದು ಆಗೀಗ ಒಮ್ಮೊಮ್ಮೆ ಯೋಚಿಸುವನಾದರೂ, “ಛೇ! ದೊಡ್ಡ ಕೆಲಸದಲ್ಲಿರುವ ಮಗನ ಮರ್ಯಾದೆಯೇನಾದೀತು’ ಎಂದು ನೆನೆದು ತೆಪ್ಪಗಾಗುವನು. ಮಗನೂ ಒಳ್ಳೆಯವನೇ. ತಂದೆ ಎಷ್ಟು ದಿನ ದುಡಿಯಬೇಕು. ಆರಾಮವಾಗಿರಲಿ ಎಂಬ ಆಸೆ ಅವನದ್ದು. ಆದರೆ, ಆರಾಮವೆಂದರೇನು ಎಂಬುದನ್ನು ಅವನ ಇಷ್ಟು ವರ್ಷದ ಪರಿಶ್ರಮ ಮರೆಸಿಬಿಟ್ಟಿದೆ. ಸೌಕರ್ಯ, ಸಂಪತ್ತುಗಳು ಐಶಾರಾಮ ಎನಿಸುವುದರ ಬದಲು ಕಿರಿಕಿರಿ ಎನಿಸುವಷ್ಟು ಅವನ ಮನಸ್ಸು ದುಡಿಮೆಗೆ ಒಗ್ಗಿಕೊಂಡಿದೆ.
ಅವಳು ಇದ್ದಾಗಲಾದರೂ ಮಗನಲ್ಲಿಗೆ ಹೋಗಿದ್ದಿದ್ದರೆ ಖುಷಿ ಪಡುತ್ತಿದ್ದಳು ಪದೇಪದೇ ಅದೇ ಗೊಂದಲಗಳು ಕಾಡಿ ಮತ್ತಷ್ಟು ಗೋಜಲಾಗುವ ಸೂಚನೆ ಕಂಡವನು ಸಾಂಕೇತಿಕವಾಗಿ ತಲೆ ಕೊಡವಿಕೊಳ್ಳುತ್ತ ದೂರದ ಬೆಟ್ಟದತ್ತ ದೃಷ್ಟಿ ಹಾಯಿಸಿದ. ಎಲ್ಲವೂ ಇದ್ದರೂ ಏನೂ ಇಲ್ಲದಷ್ಟು ನುಣುಪಾಗಿ ಕಾಣುವ ಬೆಟ್ಟದ ಬಗ್ಗೆ ಅವಲೋಕಿಸಲು ಅವನು ಬಯಸಿದನಾದರೂ ಎಲ್ಲಾ ಇದ್ದೂ ಏನೂ ಇಲ್ಲದಂತೆನಿಸುತ್ತಿರುವ ಬದುಕಿನ ಬಗ್ಗೆ ಚಿಂತಿಸಲು ಮನಸ್ಸು ಹೊರಟಿತು.
  
ಬೆಂಗಳೂರು 150 ಕಿ. ಮೀ. 
ಜೀವನದಲ್ಲಿ ನೆಲೆಗಾಣಲು ಸೋಮ ಗೂಡಂಗಡಿ ಪ್ರಾರಂಭಿಸಿದ. ಶುರುಮಾಡಿದ ದಿನದಿಂದಲೂ ಅವನಿಗಿದ್ದದ್ದು ಒಂದೇ- ಎಷ್ಟು ದಿನ ಗೂಡಂಗಡಿ ನಡೆಸೋದು, ಬೆಂಗಳೂರು ಸೇರಿ ಬಿಡಬೇಕು. ಅಲ್ಲೊಂದು ಸಣ್ಣ ಹೊಟೇಲು ತೆರೆಯಬೇಕು. ಎಂದಿಗೂ ಕಂಡಿಲ್ಲದ ಆ ಬೆಂಗಳೂರಿನ ಕನಸು ಹತ್ತಿದ್ದು ಬೆಂಗಳೂರು ಸೇರಿ ಸರ್ವರೀತಿಯಲ್ಲೂ ಪರಿವರ್ತಿತನಾಗಿದ್ದ ದೂರದ ಮಾವನ ಶೋಕಿಯ ಮಾತಿನ ಪ್ರಭಾವದಿಂದಲೋ ಏನೋ.ಒಟ್ಟಾರೆ ಸೋಮನ ಗೂಡಂಗಡಿ ಶುರುವಾದದ್ದೇ ಅದನ್ನು ಆದಷ್ಟು ಬೇಗ ಮುಚ್ಚಬೇಕು ಎಂಬ ಮಹದಾಸೆಯ ಇಂಗಿತದಿಂದ. ಹೀಗಿರಲು ದೊಡ್ಡ ಊರಿನ ಕನಸನ್ನು ವಯಸ್ಸಿನ ಮಾಯೆಗಳು ಕಸಿದು ಬಿಟ್ಟವು. ಸೋಮನ ಮನಸ್ಸು ಮದುವೆಯ ಹಿಂದೋಡಿತು. ಗೂಡಂಗಡಿಯನ್ನು ಮುಚ್ಚಿ ಬೆಂಗಳೂರಿನಲ್ಲಿ ಹೊಟೇಲು ತೆರೆಯುವ ಕನಸನ್ನು ಹುಡುಗಿಗೂ, ಅವಳ ಮನೆಯವರಿಗೂ ತುಂಬಿಯೇ ಮದುವೆಯೂ ಆದದ್ದಾಯಿತು. ಹಾಗೇ ಮಗನೂ ಬಂದುಬಿಟ್ಟ. ಅವನ ಲಾಲನೆ-ಪಾಲನೆ ಪೋಷಣೆಯ ಹಂತಗಳಲ್ಲಿ ಅಂಗಡಿ ಮುಚ್ಚುವುದು ದುಸ್ತರವಾಯಿತು. ಮಗ ಹೈಸ್ಕೂಲು ಮುಗಿಸಿದ ಕೂಡಲೇ. ಕನಸು ಮುಂದಕ್ಕೆ ಹೋಯಿತು. 

ಹಾಗೇ ಬದುಕಿನ ಆವಶ್ಯಕತೆಗಳು ಹೆಚ್ಚಾದಂತೆ ಅದನ್ನು ಪೂರೈಸಲು ಗೂಡಂಗಡಿ ಪರದಾಡಿತು. ಎಲ್ಲೋ ಒಂದು ಕಡೆ ಸಿಲುಕಿಕೊಂಡ ಸೋಮ ಕನಸನ್ನು ಹಾಗೇ ಮರೆತುಬಿಟ್ಟ. ಮಾವನ ಶೋಕಿಗಿಷ್ಟು… ಅವನ ಮಾತು ಕೇಳಿ ನಾನೇಕೆ ಮೂರ್ಖನಾಗಲಿ ಎಂದು ಸಮಜಾಯಿಷಿ ಕೊಟ್ಟುಕೊಳ್ಳುತ್ತ ಗೂಡಂಗಡಿಯೆಂಬ ವಾಸ್ತವಕ್ಕೆ ಹೊಂದಿಕೊಳ್ಳತೊಡಗಿದ. ಅಷ್ಟಾದ ಮೇಲೂ ಬಿಡದೇ ತಲೆಯಲ್ಲಿ ಅಲ್ಲಿ ಇಲ್ಲಿ ಸುಳಿದು ಕಾಡುತ್ತಿದ್ದ ಬೆಂಗಳೂರಿನ ಮಾಯೆಯನ್ನು ಬಿಡಿಸುವ ಪಣತೊಟ್ಟಂತೆ ಅವನಮ್ಮ ಹಾಸಿಗೆ ಹಿಡಿದಳು. ಕಡೆಗಾಲವನ್ನು ತಾನು ಕಂಡಿರುವ ಊರಿನಲ್ಲೇ ಕಳೆಯಬೇಕೆಂಬ ಅವಳ ಆಸೆಗೆ ಬದ್ಧನಾದ ಮಗ ಸೋಮ ಗೂಡಂಗಡಿಗೇ ಬದುಕನ್ನು ಕಟ್ಟಿ ಹಾಕಿಕೊಂಡುಬಿಟ್ಟ. ಮನದ ಗೂಡಿನಲ್ಲೂ ಸ್ಥಾನ ಪಡೆಯದ ಗೂಡಂಗಡಿ ಅವನ ಬದುಕನ್ನೇ ಆವರಿಸಿಕೊಂಡುಬಿಟ್ಟಿತು. 

ಕ್ರಮೇಣ ಸೋಮ ಗೂಡಂಗಡಿಯ ಬದುಕಿಗೆ ತನ್ನನ್ನು ತಾನು ಬೆಸೆದುಕೊಳ್ಳುತ್ತಾ ಬೆಂಗಳೂರು ಬರೀ ತನ್ನ ಮನಸ್ಸಿನಾಟವೆಂದು ಘೋಷಿಸಿಕೊಂಡುಬಿಟ್ಟ. ಚಿಕ್ಕಪುಟ್ಟ ಕೆಲಸಕ್ಕೆಂದು ಆಗೀಗೊಮ್ಮೆ ಬೆಂಗಳೂರನ್ನು ಭೇಟಿ ಮಾಡಿ ದಿಗಿಲುಗೊಂಡು ಸಾವರಿಸಿಕೊಂಡಾಗಲೂ ಅಂಗಡಿಯ ಮೇಲಿನ ಮಮಕಾರ ಹೆಚ್ಚುತ್ತ ಸಾಗಿತು. ಗೂಡಂಗಡಿಯ ಸೋಮನೆಂಬ ಬಿರುದು ಅವನಿಗೆ ಹಿತವಾಗಿ ತೋರಿತು.

Advertisement

ಬದುಕು ಮುಂದೆ ಹೋದಂತೆ ಬೆಳೆದ ಮಗನ ಬೆಳೆದ ಕನಸಿನ ಮಾತುಗಳಲ್ಲಿ ಮತ್ತೆ ಬೆಂಗಳೂರು ಕಾಣಿಸಿಕೊಂಡಿತು. ಇನ್ನೆಷ್ಟು ದಿನ ಗೂಡಂಗಡಿಗೆ ಅಲೆಯೋದು. ಅವನಿಗೊಂದು ಕೆಲಸವಾಗಿಬಿಟ್ಟರೆ ಬೆಂಗಳೂರು ಸೇರಿಬಿಡೋಣ ತನ್ನ ತಲೆಯೊಳಗೆ ಉದಯಿಸಿ ಮೊರಟಿಹೋಗಿದ್ದ ಆಸೆ ಅದು ಹೇಗೋ ಅವನ ಹೆಂಡತಿಯ ತಲೆಯೊಳಗೆ ಉದಯಿಸಿಬಿಟ್ಟಿತ್ತು. ಅವಳ ಉತ್ಸಾಹ ಅವನಲ್ಲಿ ಗಾಬರಿ ತರುವಂಥದ್ದಾಗಿದ್ದರೂ ಹೋದಾಗ ನೋಡೋಣ ಎಂದು ಹೂಂಗುಟ್ಟುಬಿಟ್ಟ ಸೋಮ. ಮಗನ ಕೆಲಸಕ್ಕಾಗಿ ಮನೆಮಂದಿಯೆಲ್ಲ ಕಾದದ್ದಾಯಿತು. ಬುದ್ಧಿವಂತ ಮಗನಿಗೆ ಕೆಲಸವೂ ಸಿಕ್ಕಿತು. ಹರ್ಷಿಸಿದ್ದೂ ನೆರವೇರಿತು. ಪತ್ನಿಯ ಬೆಂಗಳೂರು ಸೇರುವ ಆಸೆಗೆ ರೆಕ್ಕೆ ಬಂದದ್ದೂ ನಡೆಯಿತು. ಇನ್ನೇನು ಬೆಂಗಳೂರಿಗೆ ಹಾರಿಬಿಡಬೇಕೆಂದು ಅವಳು ಎಣಿಸುವಷ್ಟರಲ್ಲೇ ಬದುಕು ಅವಳನ್ನು ಮತ್ತೆಲ್ಲೋ ಹಾರಿಸಿಕೊಂಡು ಹೋಯಿತು. ಪುನಃ ಬಾರದಷ್ಟು ದೂರ… ಬಾರದ ಲೋಕಕ್ಕೆ ! 

ಜೋರಾಗಿ ಚೀರುತ್ತಿದ್ದ ಗಾನವೊಂದು ಮತ್ತೆ ಮನಸ್ಸನ್ನು ಬಸ್ಸಿನ ಪ್ರಪಂಚದೊಳಗೆ ಕರೆತಂದಿತು. ಯಾರೋ ಮನಸ್ಸಂತೋಷ ಪಡಿಸಿಕೊಳ್ಳಲು ಹಾಕಿಕೊಂಡ ಹಾಡು ಬೇಕೋ ಬೇಡವೋ ಎಲ್ಲರ ಮನಸ್ಸಿನೊಳಗೂ ದಾಳಿಯಿಡುತ್ತಿತ್ತು. ನೆನಪಿನಲ್ಲಿ ಗೂಡಂಗಡಿಯ ರೇಡಿಯೋ, ಗೂಡಂಗಡಿಯಷ್ಟೇ ಹಳಬರಾದ ಗಿರಾಕಿಗಳು, ಹರಟೆ… ನಡುನಡುವೆ ಮಗ, ಪತ್ನಿಯ ಮುಖ. ಮತ್ತೆ ಸಾಲು ಸಾಲು ನೆನಪುಗಳು. ಎಲ್ಲವನ್ನೂ ಹೊಡೆದು ಹಾಕಿ ಮತ್ತೆ ಆ ಪ್ರಶ್ನೆ- ಅಲ್ಲಿ ಹೋಗಿ ನಾನೇನು ಮಾಡಲಿ? ಅದೆಷ್ಟು ಸಮಜಾಯಿಷಿ ಕೊಟ್ಟುಕೊಂಡರೂ ದ್ವಂದ್ವವೇ ತೀರಲಿಲ್ಲ. ಕ್ಷಣಕ್ಷಣಕ್ಕೂ ದೈಹಿಕವಾಗಿ ಹತ್ತಿರವಾಗುತ್ತಿದ್ದ ಬೆಂಗಳೂರು ಅಂತರಂಗದಿಂದ ದೂರದೂರವಾಗುತ್ತಿರುವಂತೆನಿಸುತ್ತಿತ್ತು. 

ಬೆಂಗಳೂರು 73 ಕಿ. ಮೀ.
ಅದೇನೋ ಅವಳು ತೀರಿಕೊಂಡ ಮೇಲೆ ಸೋಮ ಒಂದು ತರಹ ಆಗಿಬಿಟ್ಟ. ಮುಂದೇನು ಮುಂದೇನು ಎಂದು ಓಡುತ್ತಿದ್ದ ಬದುಕು ಥಟ್ಟನೆ ನಿಂತು ಬರೀ ಹಿಂದಿನ ನೆನಪುಗಳನ್ನಷ್ಟೇ ಉಳಿಸಿಬಿಟ್ಟಿತು ಎನಿಸಿತು. ಅವಳ ನೆನಪುಗಳ ಜೊತೆಗೆ ಇದ್ದದ್ದು ಬರೀ ಗೂಡಂಗಡಿಯೇ! ಈ ನಡುವೆಯಂತೂ ಪುಟ್ಟಂಗಡಿ ಆಪ್ಯಾಯಮಾನವಾಗಿ ಕಾಣುತ್ತಿತ್ತು. ತನ್ನಿಡೀ ಬದುಕನ್ನೇ ಸಾಕಿಬಿಟ್ಟಿತಲ್ಲ ಎನ್ನುವಂಥ ಧನ್ಯತಾಭಾವ. ಅವನ ಜೀವನದ ಅಗತ್ಯತೆಗಳನ್ನು ನೀಗಿಸಲು ಹೆಣಗಾಡುತ್ತಿದ್ದಾಗ ಅಷ್ಟೇನೂ ಆಪ್ತವೆನಿಸದ ಅಂಗಡಿ ಇಂದು ಅದರ ಕರ್ತವ್ಯವೆಲ್ಲ ಮುಗಿಯುವ ಸಮಯದಲ್ಲಿ ಅವನ ಮನಗೆದ್ದಿತ್ತು. ಹೆಚ್ಚು ಸಮಯ ಅಲ್ಲಿ ಕಳೆದಂತೆಲ್ಲ ತಾನೆಷ್ಟು ಅಂಗಡಿಯ ಬದುಕಿಗೆ ಒಗ್ಗಿ ಹೋಗಿದ್ದೇನೆಂದು ಅರ್ಥವಾಗತೊಡಗಿತ್ತು. ದಶಕಗಳು ನಡೆಸಿಕೊಂಡು ಬಂದ ದಿನಚರಿ; ಅದೇ ಬೆಳಗಿನ ಜಾವದ ರೇಡಿಯೋ ಕಾರ್ಯಕ್ರಮದಿಂದ ಶುರುವಾಗುವ ದಿನ. ಯಾರು ಎಷ್ಟು ಹೊತ್ತಿಗೆ ಬರುತ್ತಾರೆಂದು ಲೆಕ್ಕವಿಟ್ಟು ಆ ಹೊತ್ತಿಗೆ ಅವರಿಗೆ ಬೇಕಾದ್ದನ್ನು ತೆಗೆದಿಟ್ಟು ಅವರೊಡನೆ ಮಾತನಾಡಲು ಸಿದ್ಧಗೊಳ್ಳುವುದು, ಬಾರದವರ ಬಗ್ಗೆ ಚಿಂತೆ. ಊರಿನ-ಪರ ಊರಿನ ಎಲ್ಲಾ ಸುದ್ದಿಗಳ ಚರ್ಚೆ, ರಾಜಕೀಯ, ಯಾರೋ ಮಾಡಿಕೊಂಡ ಹೊಸ ಸಂಬಂಧ, ಹಳಸಲಾದ ಬಂಧದ ಬಗ್ಗೆ ತರ್ಕಗಳು, ಯಾವ ಬಸ್ಸು ಎಷ್ಟು ಹೊತ್ತಿಗೆ ಹೋಯಿತೆಂಬ ಲೆಕ್ಕ, ಹುಟ್ಟಿಕೊಂಡ ಹೊಸ ಯುವಕರು, ಕಳಚಿಹೋದ ಹಳೆಯ ಮುದುಕರು, ಒಂದಷ್ಟು ಮೋಸ ವಂಚನೆ ಕ್ರೌರ್ಯದ ಬಗ್ಗೆ ಮಾತುಗಳು. ಎಂದಿಗೂ ಅಳಿಸದ ನೆನಪುಗಳು… ಇದೆಲ್ಲವನ್ನೂ ಬಿಟ್ಟು ಬಿಟ್ಟರೆ ನಾನೇನಾಗುವೆ? ಬದುಕಿಗೆ ಹತ್ತಿರವಾಗಿದ್ದ ಒಂದು ಜೀವದ ಸಾವು, ತಾನು ಈ ವ್ಯವಸ್ಥೆಯ ಮೇಲೆ ಅದೆಷ್ಟು ಅವಲಂಬಿತನಾಗಿದ್ದೇನೆ ಎಂದು ಸಾಬೀತು ಪಡಿಸಿತ್ತು.

ಅತ್ತ ತನ್ನೊಡನಿರಬೇಕೆಂಬ ಮಗನ ಪ್ರೀತಿಯ ಒತ್ತಾಯ ಜಾಸ್ತಿಯಾದಂತೆ ಒಂದು ತರಹದ ಆತಂಕ ಮನೆಮಾಡಿಬಿಟ್ಟಿತ್ತವನಿಗೆ. ಎಲ್ಲರದ್ದೂ ಒಂದೇ ಸಲಹೆ, “ಎಷ್ಟು ದಿನ ದುಡಿಯುತ್ತೀಯ? ಮಗ ಕರೆಯುತ್ತಿರುವಾಗ ಹೋಗಿ ಸೇರಿಕೊಂಡು ಬಿಡು. ಮಗ ಮುಂದೆ ಕರೆಯದಿದ್ದರೆ ಕಷ್ಟವಾಗಬಹುದು. ಕರೆದಾಗ ಹೋಗಿಬಿಡಬೇಕು’ ಎನ್ನುವಂತೆ! ಜೊತೆಗೆ ಇಷ್ಟು ಒಳ್ಳೆಯ ಮಗ ಎಲ್ಲರ ಅದೃಷ್ಟದಲ್ಲಿರುವುದಿಲ್ಲ ಎಂಬ ಪ್ರೀತಿಯ ಸೆಳೆತವೂ ಒಂದು ಕಡೆ. ಅಂತೂ ಭವಿಷ್ಯ, ಆರೋಗ್ಯ ಅದು ಇದೂ ಎಂಬ ಲೆಕ್ಕಾಚಾರದ ಕೈ ಮೇಲಾಗಿ ಕಡೆಗೂ ಊರು ಬಿಡಲೇಬೇಕಾಯಿತು. ಹೋಗಲೇಬೇಕಾಯಿತು. ಸಾಮಾನುಗಳನ್ನೆಲ್ಲಾ ಒಂದೆಡೆ ಇರಿಸಿ ಬೀಗ ಜಡಿದು, ಯಾರಿಗೂ ಒಂದು ಮಾತೂ ಹೇಳದೇ ಬೆಳಗಿನ ಬಸ್ಸಿಗೆ ಬಂದು ಕುಳಿತಿದ್ದ. ಇನ್ನೆಲ್ಲಿ ಅವರಿವರ ಭಾವನೆಗಳು ಹೊರಡುವ ನಿರ್ಧಾರ ಬದಲಿಸಿ ಬಿಡುವವೋ ಎನ್ನುವಂತೆ.
 
ಬಸ್ಸು ಬೆಂಗಳೂರಿಗೆ ಆದಷ್ಟು ಬೇಗ ತಲುಪಿಸುವ ಹೊಣೆ ಹೊತ್ತಂತೆ ಓಡುತ್ತಿತ್ತು. ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ಕಂಡ ಕನಸು ಇನ್ನೇನು ಈಡೇರಿತು ಎನ್ನುತ್ತಿರುವಾಗಲೂ ಮನಸ್ಸು ಹೊಸ ಬದುಕಿನ ಬಗ್ಗೆ ಆತಂಕಿಸಿ ಹಿಂದಿನದ್ದನ್ನೇ ಅಪ್ಪಿಕೊಳ್ಳುವುದಂತೆ! ಪ್ರಶ್ನಿಸಿಕೊಂಡ ಕನಸು ನೆನ್ನೆಗಳದ್ದಾಯಿತು. ಇಂದಿನ ನನ್ನ ಕನಸೇನು? ಅವನು ಬದುಕು ಕಟ್ಟಿಕೊಳ್ಳಲು ಕಂಡ ಕನಸು ಬೆಂಗಳೂರು. ಬದುಕೇ ಒಂದು ಹಂತಕ್ಕೆ ಬಂದು ನಿಂತ ಮೇಲೆ ಬೆಂಗಳೂರಿನ ಯೋಜನೆ ಹಿಂದೆಹಿಂದೆ ಸರಿದು ಹೋಯಿತು. ಇವತ್ತಿಗೆ ಅವನ ಮನದ ಶಾಂತಿಗೆ ಗೂಡಂಗಡಿಯೊಳಗಿರುವ ಅನುಭೂತಿ ಬೇಕಿತ್ತೇ ಹೊರತು ಹೊಸ ಕನಸಿನ ಭರವಸೆಗಳಲ್ಲ. ಆಸೆ, ಕನಸು ಹೊತ್ತು ನಡೆಯುವ ಸ್ಥಾನದಲ್ಲಿ ಮಗನಿದ್ದಾನೆ. ತಾನು ಕಂಡ ಬೆಂಗಳೂರೆಂಬ ಕನಸಿನೊಳಗೇ ಬದುಕುತ್ತಲೂ ಇದ್ದಾನೆ. ಅವನ ಬದುಕಿನೊಳಗೆ ತಾನು ಹೋಗಿ ಬೆಸೆದುಕೊಳ್ಳಬಹುದೇ ವಿನಃ ಈಗ ಪಯಣಿಸುತ್ತಿರುವುದು ತಾನು ಸೇರಬೇಕೆಂದುಕೊಂಡಿದ್ದ ಬೆಂಗಳೂರಿಗಲ್ಲ! ಹಾಗೆಂದು ಗೂಡಂಗಡಿಯ ಬದುಕೇ ಅಂತಿಮವೂ ಅಲ್ಲ. ಯಾವ ಮಗುವಿಗಾಗಿ ಇಷ್ಟೆಲ್ಲಾ ಮಾಡಿದೆನೋ ಅವನಿಂದಲೇ, ಅವನ ಪ್ರೀತಿಯಿಂದಲೇ ದೂರ ಉಳಿದು ಸಾಧಿಸುವುದು ಏನೂ ಅಲ್ಲ. ಬರೀ ನೆನಪುಗಳಿಂದ ಏನೂ ಸಾಧ್ಯವಿಲ್ಲ. ಮಗನನ್ನು ಸೇರಲೇಬೇಕು. ಆದರೆ ಊರಿನವರಿಗೂ ಹೇಳದೇ ಹೊರಟ ಈ ಪರಿಸ್ಥಿತಿಯಲ್ಲೇ? ಈ ಸಮಯದಲ್ಲೇ? ಈ ಮನಃಸ್ಥಿತಿಯಲ್ಲೇ?

ಫೋನಿನ ಮೇಲೆ ಕೈಯಾಡಿಸಿದ ಮಗನಿಗೆ ಹೇಳಿ ಬಿಡಲೆ? “ಮುಂದೊಮ್ಮೆ ಖಂಡಿತಾ ಬರುವೆ. ಈಗ ಆಗುವುದಿಲ್ಲವೆಂದು?’ ಇದೆಲ್ಲಾ ಬರೀ ನಿರರ್ಥಕವಾದ ದಿಗಿಲೆ? ಇನ್ನೊಂದಷ್ಟು ಸಮಯ ಗೂಡಂಗಡಿ ನಡೆಸುವಷ್ಟು ಸಾಮರ್ಥ್ಯ ಈ ದೇಹಕ್ಕಿಲ್ಲವೆ? ಇನ್ನೂ ತೀರಾ ವಯಸ್ಸಾದ ಮೇಲೆ ಮಗನ ಮೇಲೆ ಹೋಗಿ ಅವಲಂಬಿತನಾಗಿಬಿಡುವುದು ಸರಿಯೆ? 

ಬೆಂಗಳೂರು 35 ಕಿ. ಮೀ.
ಬಸ್ಸು ನಿಂತಿತು. ಅವನು ಸರಸರನೆ ಕೆಳಗಿಳಿದುಬಿಟ್ಟ. ಮನಸ್ಸಿಗೆ ಹತ್ತಿರವಾದ ತನ್ನೂರು, ದೇಹಕ್ಕೆ ಸಮೀಪವಿರುವ ಬೆಂಗಳೂರು, ಎರಡೂ ಊರಿನ ಬೋರ್ಡುಗಳನ್ನು ಒಮ್ಮೆ ಎಡಕ್ಕೆ ಒಮ್ಮೆ ಬಲಕ್ಕೆ ನೋಡುತ್ತ ನಿಂತ. ಒಳ್ಳೆಯ ಮಗ- ಒಳ್ಳೆಯ ಊರಿನ ನಡುವಿನ ಆಯ್ಕೆಗಳ ಮಧ್ಯೆ! ಜೀವನವೇ ಹಾಗೆ; ಮನಸ್ಸಿಗೆ ಪ್ರಿಯವಾದ ಆಯ್ಕೆ ಬದುಕಿನ ಲೆಕ್ಕಾಚಾರಗಳಿಗೆ ಒಗ್ಗದು, ಲೆಕ್ಕಾಚಾರಕ್ಕೆ ಒಗ್ಗಿದ ಆಯ್ಕೆ ಮನಸ್ಸಿಗೆ ಮುದ ನೀಡದು! ಹಾಗೇ ನೋಡುತ್ತಿದ್ದವನ ಮುಖದ ಮೇಲೊಂದು ನಿರ್ಧಾರದ ನಗೆ ಮೂಡಿ ಹಾಗೆಯೇ ಅಚ್ಚೊತ್ತಿಬಿಟ್ಟಿತು. ಮುಂದೆ ಹೆಜ್ಜೆ ಇಡಲು ಅನುವಾಗುವಷ್ಟರಲ್ಲಿ ಫೋನು ರಿಂಗಣಿಸಿತು, ಕಿವಿಗಿಟ್ಟುಕೊಂಡ, “ಮಗಾ…’ ಕಣ್ಣಲ್ಲಿ ನೀರು ಜಿನುಗಿತು!

– ಸುಷ್ಮಾ ಸಿಂಧು

Advertisement

Udayavani is now on Telegram. Click here to join our channel and stay updated with the latest news.

Next