Advertisement

ಗೋಮಾಳಗಳು ಮಾಯ-ಗಾಂವಠಾಣಾ ಗುಳುಂ |ಸರ್ಕಾರಿ ರಸ್ತೆಗಳೇ ಹೈನುಗಾರಿಕೆಯ ಹಾದಿ

03:48 PM Sep 14, 2021 | Team Udayavani |

ವರದಿ: ಬಸವರಾಜ ಹೊಂಗಲ್‌

Advertisement

ಧಾರವಾಡ: ಗೋವುಗಳು ಮೇಯಲು ಇದ್ದ ಗೋಮಾಳ ನುಂಗಣ್ಣರ ಪಾಲಾಗಿವೆ. ಹೊಲದ ಬದುಗಳೆಲ್ಲವೂ ಸಾಗುವಳಿಯಾಗಿ ದೇಶಿ ಹುಲ್ಲು ಸಿಕ್ಕದಾಗಿದೆ, ಕೆರೆಕುಂಟೆಯ ಮೂಲೆಗಳು ಅತಿಕ್ರಮಣಕ್ಕೆ ಒಳಗಾಗಿವೆ. ಸದ್ಯಕ್ಕೆ ಸರ್ಕಾರಿ ರಸ್ತೆಗಳೇ ಪಶುಪಾಲನೆಗೆ ನೆಲೆ. ಗೋಮಾಳ ಮಾಯಾ ಜಾನುವಾರು ಗಯಾ, ಗಾಂವಠಾಣಾ ಗುಳುಂ.

ಹೌದು, ಒಂದೇ ದಿನಕ್ಕೆ ಜಿಲ್ಲೆಯಲ್ಲಿ ಅಂದಾಜು 10 ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆಯಾಗಿ, ಗ್ರಾಮೀಣರೇ ಅದನ್ನು ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಪಡದುಕೊಂಡಿದ್ದ ಕಾಲವೊಂದಿತ್ತು. ಅದರಲ್ಲೂ ದೇಶಿ ತಳಿಯ ಆಕಳು ಮತ್ತು ಧಾರವಾಡಿ ಎಮ್ಮೆ ಎಂದು ಕರೆಯುತ್ತಿದ್ದ ಉತ್ಕೃಷ್ಟ ಗುಣಮಟ್ಟದ ಹಾಲಿಗೆ ನಗರವಾಸಿಗಳಿಂದ ಭಾರಿ ಬೇಡಿಕೆ ಕೂಡ ಇತ್ತು. ಇದೆಲ್ಲದಕ್ಕೂ ಕಾರಣವಾಗಿದ್ದು ಅಂದಿನ ದೊಡ್ಡ ದೊಡ್ಡ ಗೋಮಾಳಗಳು, ಗಾಂವಠಾಣಾ ಅಡವಿಗಳು ಮತ್ತು ಸ್ವತ್ಛಂದವಾದ ಕೆರೆಕುಂಟೆಗಳ ಮಡಿಲುಗಳು.

ಜಿಲ್ಲೆಯ 144 ಗ್ರಾಪಂಗಳ ವ್ಯಾಪ್ತಿಯಲ್ಲಿನ ಅಂದಾಜು 15 ಸಾವಿರ ಎಕರೆ ಗೋಮಾಳ, 6500 ಎಕರೆ ಗಾಂವಠಾಣಾ ಹಾಗೂ 200 ಎಕರೆ ಖೇತ ಖರಾಬು ಭೂಮಿ ನುಂಗಣ್ಣರ ಪಾಲಾಗಿದ್ದು, ಇದೀಗ ಹೈನುಗಾರಿಕೆ ಮಾಡಬೇಕು ಎನ್ನುವವರು ಬರೀ ಸರ್ಕಾರಿ ರಸ್ತೆಗಳ ಇಕ್ಕೆಲಗಳಲ್ಲಿಯೇ ದನಕರುಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಅತಿಕ್ರಮಣದ ಹೊಸ್ತಿಲಲ್ಲಿ: ಕಂದಾಯ ಇಲಾಖೆ ಶತಮಾನಗಳ ಹಿಂದಿನಿಂದಲೂ ಎಲ್ಲೆಲ್ಲಿ ಗ್ರಾಮಗಳಿದ್ದವು ಮತ್ತು ಅವುಗಳ ವ್ಯಾಪ್ತಿಯಲ್ಲಿ ಎಷ್ಟೆಷ್ಟು ಭೂಮಿ ಇತ್ತು ಎಂಬುದನ್ನು ಅಳತೆ ಗೋಲು ಹಾಕಿ ಬಾಂದು ಕಲ್ಲುಗಳನ್ನು ನಿಲ್ಲಿಸಿಬಿಟ್ಟಿದೆ. ಕಾಲಾಂತರದಲ್ಲಿ ಮಂಡಳ ಪಂಚಾಯಿತಿ, ಗ್ರಾಪಂಗಳ ಅಧಿಕಾರ ಬರುತ್ತಿದ್ದಂತೆಯೇ ಆಯಾ ಗ್ರಾಮೀಣ ಮಟ್ಟದಲ್ಲಿಯೇ ಗಾಂವಠಾಣಾ ಜಮೀನನ್ನು ಜನರಿಗೆ ವಸತಿ ನಿವೇಶನಗಳಿಗಾಗಿ ಮಂಜೂರು ಮಾಡಿಕೊಟ್ಟಿವೆ. ಆದರೆ ಕಳೆದ 10 ವರ್ಷಗಳಲ್ಲಿ ಜಿಲ್ಲೆಯ 6500 ಎಕರೆಯಷ್ಟು ಗಾಂವಠಾಣಾ ಜಮೀನಿನ ಪೈಕಿ ಉಳಿದಿದ್ದು ಕೇವಲ 1300 ಎಕರೆ ಮಾತ್ರ. ಅದೂ ಕೂಡ ಇದೀಗ ಅತಿಕ್ರಮಣದ ಹೊಸ್ತಿಲಲ್ಲಿಯೇ ಇದೆ.

Advertisement

2013ರಲ್ಲಿ ಜಿಲ್ಲೆಯಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದ 116 ಎಕರೆಯಷ್ಟು ಭೂಮಿಯನ್ನು ಜಿಲ್ಲಾಡಳಿತ ಮರಳಿ ಪಡೆದುಕೊಂಡಿತು. ಆದರೆ ಇದೀಗ ಮತ್ತದೇ ಜಮೀನು ಅತಿಕ್ರಮಣಕ್ಕೆ ಒಳಗಾಗಿದೆ. ಭೂಮಾಪನ ಕಚೇರಿಯಲ್ಲಿಯಲ್ಲಿನ ಹಳೆಯ ನಕಾಶಗಳೇ ಮಾಯವಾಗಿದ್ದರೆ, ಕೆಲವು ತಿದ್ದುಪಡಿಯಾಗಿವೆ. ಗೋಮಾಳದ ಗಡಿಗುರುತಿನ ಕಲ್ಲುಗಳೇ ಕಿತ್ತು ಮನೆಗಳ ಅಡಿಪಾಯ ಸೇರಿಕೊಂಡಿವೆ.

ಬಾರಿ ದನಗಳೇ ಇಲ್ಲ: ಪ್ರತಿ ಕೃಷಿ ಕುಟುಂಬದಲ್ಲಿ ಒಂದಿಷ್ಟು ಕಾಗಾರ (ಆಕಳು, ಎಮ್ಮೆ, ಕರು)ದನಗಳು ಇರುತ್ತಿದ್ದವು. ಕೃಷಿ ಚಟುವಟಿಕೆಗೆ ಎತ್ತು, ಹೋರಿಗಳನ್ನು ಹೊರತುಪಡಿಸಿ ಹೈನುಗಾರಿಕೆಗೆ ಬಳಕೆಯಾಗುತ್ತಿದ್ದ ಮತ್ತು ಉತ್ತಮ ಗೊಬ್ಬರ ಸಂಗ್ರಹಣೆಗೆ ಬೆನ್ನೆಲುಬಾಗಿದ್ದ ದೇಶಿ ಆಕಳು, ದೇಶಿ ಎಮ್ಮೆ ತಳಿಗಳನ್ನು ಕೃಷಿ ಕುಟುಂಬಗಳೇ ಪೋಷಣೆ ಮಾಡಿಕೊಂಡು ಬಂದಿದ್ದವು. ಇಂತಿಪ್ಪ ದನಗಳನ್ನು ಬಾರಿ ಅಥವಾ ಕಾಗಾರ ದನಗಳು ಎಂದು ಕರೆಯಲಾಗುತ್ತಿತ್ತು. ಒಂದು ಗ್ರಾಮದಲ್ಲಿ ಕನಿಷ್ಟ ಇಂತಹ 200 ದನಗಳು ಇರುತ್ತಿದ್ದವು. ಇವುಗಳನ್ನು ಒಬ್ಬ ವ್ಯಕ್ತಿ ಗುಡ್ಡ, ಗೋಮಾಳ, ಅಡವಿಗೆ ಮೇಯಲು ಹೊಡೆದುಕೊಂಡು ಹೋಗುತ್ತಿದ್ದ. ಆತನಿಗೆ ತಿಂಗಳಿಗೆ ಪ್ರತಿ ಹಸುವಿಗೆ ಇಂತಿಷ್ಟು ದರ ನಿಗದಿ ಮಾಡಲಾಗಿರುತ್ತಿತ್ತು. ಆದರೆ ಇದೀಗ ಯಾರ ಮನೆಯಲ್ಲೂ ದನಗಳು ಈ ಪ್ರಮಾಣದಲ್ಲಿ ಉಳಿದಿಲ್ಲ. ಇರುವ ದನಗಳನ್ನು ಮೇಯಿಸಲು ಗೋಮಾಳದ ಕೊರತೆ ಎದುರಾಗಿದ್ದರಿಂದ ಎಲ್ಲರೂ ಗೋಸಂಪತ್ತಿನಿಂದ ದೂರಾಗುತ್ತಿದ್ದಾರೆ.

ಅರೆಮಲೆನಾಡು ಪ್ರದೇಶವೆಂದೇ ಬಿಂಬಿತವಾಗಿರುವ ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ಸಾವಿರ ಸಾವಿರ ಸಂಖ್ಯೆಯಲ್ಲಿ ಪಶು ಸಂಪತ್ತು ಇತ್ತು. ಇದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಆಯಾ ಗ್ರಾಮಾಠಾಣಾ ವ್ಯಾಪ್ತಿಯಲ್ಲಿನ ಗೋಮಾಳ, ಗಾಂವಠಾಣಾ ಭೂಮಿ. ಆದರೆ ಇದೀಗ ಈ ಭೂಮಿ ಅತಿಕ್ರಮಣಕ್ಕೆ ಒಳಗಾಗಿದ್ದು, ಜನರಿಗೆ ಹೈನುಗಾರಿಕೆ ಕೇವಲ ಹಟ್ಟಿಯಲ್ಲಿಯೇ ದನಕಟ್ಟಿ ಮಾಡುವುದಕ್ಕೆ ಸೀಮಿತವಾಗುವಂತೆ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next