Advertisement

ಬಿ.ಎಸ್‌.ಯಡಿಯೂರಪ್ಪಗೆ ಸ್ಥಾನಮಾನ: ಬಿಜೆಪಿಯಲ್ಲಿ ಸಂಭ್ರಮ

09:44 PM Aug 17, 2022 | Team Udayavani |

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಹುದ್ದೆ ನೀಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ಸಂಭ್ರಮದ ವಾತಾವರಣ ಉಂಟಾಗಿದೆ.

Advertisement

ಯಡಿಯೂರಪ್ಪ ಅವರಿಗೆ ಇಡೀ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ದೆಹಲಿಯಿಂದ ನೇಮಕಾತಿ ಘೋಷಣೆ ಹೊರಬಿದ್ದ ಬೆನ್ನಲ್ಲೇ ನಾಯಕರು ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿ ಸಂಭ್ರಮ ಹಂಚಿಕೊಂಡರು. ಉನ್ನತ ಹುದ್ದೆ ಲಭಿಸಿರುವುದರಿಂದ ಅವರ ಮಾರ್ಗದರ್ಶನದಲ್ಲೇ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡೆಯಲಿದ್ದು ಪಕ್ಷಕ್ಕೆ ಬಲ ಬರಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯಡಿರೂರಪ್ಪ ಅವರು ಪಕ್ಷದ ಕಚೇರಿ ಹಾಗೂ ಆರ್‌ಎಸ್‌ಎಸ್‌ ಕಚೇರಿ ಕೇಶವ ಕೃಪಾಗೆ ತೆರಳಿ ಸಂತಸ ಹಂಚಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕಂದಾಯ ಸಚಿವ ಆರ್‌. ಅಶೋಕ್‌ ಸಾಥ್‌ ನೀಡಿದರು.

ಪ್ರಧಾನಿ ಮೋದಿಯವರ ದೂರದೃಷ್ಟಿ ಹಾಗೂ ಸಮಗ್ರ ಭಾರತದಲ್ಲಿ ಬಿಜೆಪಿಯನ್ನು ಬಲಗೊಳಿಸಬೇಕೆಂಬ ಸಂಕಲ್ಪದಿಂದಾಗಿ ಯಡಿಯೂರಪ್ಪ ಅವರಿಗೆ ಪಕ್ಷದ ಕೇಂದ್ರ ಸಮಿತಿಯಲ್ಲಿ ಉನ್ನತ ಸ್ಥಾನ ದೊರೆತಿದೆ .ಸಮಗ್ರ ಭಾರತದ ಅಭಿವೃದ್ಧಿ ಜೊತೆಗೆ ದೇಶದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಮಾಡಬೇಕು ಅನ್ನುವುದು ಪ್ರಧಾನಿಯವರ ಸಂಕಲ್ಪವಾಗಿದೆ.
– ಬಸವರಾಜ ಬೊಮ್ಮಾಯಿ, ಸಿಎಂ

ಬಿಎಸ್‌ವೈ ಅವರಿಗೆ ಉನ್ನತ ಸಮಿತಿಯಲ್ಲಿ ಅಧಿಕಾರ ಸಿಕ್ಕಿರುವುದರಿಂದ ಕರ್ನಾಟಕದ ಜೊತೆಗೆ ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲೂ ಅಧಿಕಾರಕ್ಕೆ ತರಲು ಅವರು ಪರಿಶ್ರಮ ಹಾಕುತ್ತಾರೆ ಅನ್ನುವ ನಂಬಿಕೆ ಇದೆ. ಮುಂದಿನ ಬಾರಿ ಅಧಿಕಾರಕ್ಕೆ ಬರುತ್ತೇವೆಂದು ಸಿಎಂ ಸ್ಥಾನಕ್ಕೆ ಟವಲ್‌ ಹಾಕಿದವರಿಗೆ ಈಗ ಉತ್ತರ ಸಿಕ್ಕಿದೆ.
-ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Advertisement

ರಾಜ್ಯದ ಪಕ್ಷದ ಹಿರಿಯರು, ಮಾರ್ಗದರ್ಶಕರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ…. ಸಂತೋಷ್‌ ಅವರನ್ನು ಸಂಸದೀಯ ಮಂಡಳಿಯಲ್ಲಿ ಸೇರಿಸಿರುವುದು ಮಹತ್ವದ ಕ್ರಮ.
-ನಳಿನ್‌ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಉನ್ನತ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ನೇಮಕಗೊಂಡ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶುಭಾಶಯಗಳು. ಅವರ ನೇಮಕದಿಂದ ಬಿಜೆಪಿ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಬಲ ಬಂದಂತಾಗಿದೆ.
– ಆರ್‌.ಅಶೋಕ್‌, ಕಂದಾಯ ಸಚಿವ

ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಿರುವುದು ನಮಗೆಲ್ಲ ಸಂತೋಷ ತಂದಿದೆ. ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.
– ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವರು

ದಕ್ಷಿಣ ಭಾರತದಲ್ಲಿ ಕರ್ನಾಟಕದ ಮೂಲಕ ಬಿಜೆಪಿಯು ಅಧಿಕಾರದ ಗದ್ದುಗೆ ಏರಲು ಬಿಎಸ್‌ವೈ ಅವರ ಪರಿಶ್ರಮ ದೊಡ್ಡದು. ನಾಡು ಹಾಗೂ ದೇಶದ ಅಭಿವೃದ್ಧಿಯ ಮುನ್ನೋಟವುಳ್ಳ ನಾಯಕನನ್ನು ಪಕ್ಷದ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ವರಿಷ್ಠರು ಆಯ್ಕೆ ಮಾಡಿರುವುದು ಸಂತಸ ತಂದಿದೆ.
-ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

ಯಡಿಯೂರಪ್ಪನವರ ಸುದೀರ್ಘ‌ ರಾಜಕೀಯ ಅನುಭವ, ಸಂಘಟನಾ ಶಕ್ತಿಯನ್ನು ಅರಿತ ಬಿಜೆಪಿ ವರಿಷ್ಠರು ಮಾಡಿರುವ ನೇಮಕಾತಿಗೆ ಧನ್ಯವಾದಗಳು. 2023 ರಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ.
-ಬಿ.ಎ.ಬಸವರಾಜ(ಬೈರತಿ), ನಗರಾಭಿವೃದ್ಧಿ ಸಚಿವ

ಪಕ್ಷದ ಬಲವರ್ಧನೆಗೆ ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ. ಅವರ ಅನುಭವ, ಸಂಘಟನೆಯ ಶಕ್ತಿ, ಮಾರ್ಗದರ್ಶನದೊಂದಿಗೆ 2023 ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಲ್ಲದೇ ದಕ್ಷಿಣ ಭಾರತದಲ್ಲಿ ಬಿಜೆಪಿಯ ಶಕ್ತಿ ಮತ್ತಷ್ಟು ಬಲಗೊಳ್ಳಲು ನೆರವಾಗಲಿದೆ.
-ಡಾ.ನಾರಾಯಣಗೌಡ, ರೇಷ್ಮೆ, ಯುವ ಸಬಲೀಕರಣ ಸಚಿವ

ನಾಡಿನ ಜನತೆಗೆ ಮತ್ತು ವೈಯಕ್ತಿಕವಾಗಿ ನನಗೆ ಅತೀವ ಹರ್ಷ ತಂದಿದೆ. ಜನನಾಯಕ ಯಡಿಯೂರಪ್ಪನವರು ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಾರೆ ಎಂಬ ವಿಶ್ವಾಸ ನನ್ನದು.
-ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ಹೈಕಮಾಂಡ್‌ ನಿರ್ಧಾರಕ್ಕೆ ನಾವು ತಲೆಬಾಗುತ್ತೇವೆ. ಸ್ವಾತಂತ್ರÂ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುವುದಾಗಿ ಹೇಳಿದ್ದರು. ಅಮೃತ ಕಾಲದಲ್ಲಿ ಅಮೃತ ನಿರ್ಣಯ ತೆಗೆದುಕೊಂಡಿದ್ದಾರೆ.
-ಬಸನಗೌಡ ಯತ್ನಾಳ್‌, ಶಾಸಕ

ದಕ್ಷಿಣ ಭಾಗವಾದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್‌ ನಾಯಕ ಯಡಿಯೂರಪ್ಪ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಯಡಿಯೂರಪ್ಪನವರ ಜವಾಬ್ದಾರಿಯಿಂದ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ.
-ಎಂ.ಪಿ. ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next