Advertisement

ರಾಜ್ಯದ ಮೊದಲ ರೋಪ್‌ ವೇಗೆ ಗ್ರಹಣ!

04:10 PM Jun 13, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೇ ಮೊದಲ ರೋಪ್‌ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಬರೋಬ್ಬರಿ 93.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿ ಚಾಲನೆ ನೀಡಲಾಗಿದ್ದ ರೋಪ್‌ವೇ ಕಾಮಗಾರಿ ಸದ್ದಿಲ್ಲದೇ ಸ್ಥಗಿತಗೊಂಡಿದ್ದು ಕಾಮಗಾರಿ ಕೇವಲ ಭೂಮಿ ಪೂಜೆಗೆ ಮಾತ್ರ ಸೀಮಿವಾಗಿದೆ.

Advertisement

ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೂ ಮೊದಲು ಮಾ.27 ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಎಂಟಿಬಿ ನಾಗರಾಜ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಡಾ.ಕೆ.ಸುಧಾಕರ್‌ ಮತ್ತಿತರರು ನಂದಿಗಿರಿಧಾಮದ ತಪ್ಪಲಿನಲ್ಲಿ ರೋಪ್‌ ವೇ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಈ ಹಿಂದಿನ ಸರ್ಕಾರ ಮಂಜೂರಾತಿ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದ ಹಲವು ಕಾಮಗಾರಿಗಳಿಗೆ ತಡೆಯೊಡ್ಡಿದ್ದು ಸದ್ದಿಲ್ಲದೇ ಕಾಮಗಾರಿ ಸ್ಥಗಿತಗೊಂಡಿದೆ.

2.93 ಕಿ.ಮೀ ಉದ್ದದ ರೋಪ್‌ ವೇ: ಜಿಲ್ಲೆಯ ದಶಕಗಳ ಬೇಡಿಕೆ ಆಗಿದ್ದ ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಸುಲಭವಾಗಿ ಪ್ರಯಾಣಿಕರು ಬಂದು ಹೋಗಲು ಅನುಕೂಲವಾಗುವಂತೆ ಪಿಪಿಪಿ ಮಾದರಿಯಲ್ಲಿ ಸರಿ ಸುಮಾರು 2.93 ಕಿ.ಮೀ. ದೂರದ ರೋಪ್‌ ವೇ ಪ್ಯಾಸೆಂಜರ್‌ ರೋಪ್‌ ನಿರ್ಮಾಣ ಕಾಮಗಾರಿಗೆ 93.40 ಕೋಟಿ ವೆಚ್ಚಕ್ಕೆ ಹಿಂದಿನ ಸರ್ಕಾರ ಅನುಮೋದನೆ ನೀಡಿತ್ತು. ಅಲ್ಲದೇ, ರೋಪ್‌ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಡೈನಾಮಿಕ್ಸ್‌ ರೋ ಪ್‌ ವೇ ಪ್ರೈವೇಟ್‌ ಲಿಮಿಟೆಡ್‌ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಡೈನಾಮಿಕ್‌ ರೋಪ್‌ವೇ ಪ್ರೈವೇಟ್‌ ಲಿಮಿಟೆಡ್‌ 30 ವರ್ಷಗಳ ರಿಯಾಯ್ತಿ ಅವಧಿಯೊಂದಿಗೆ ನಿರ್ಮಾಣ, ವಿನ್ಯಾಸ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಚೌಕಟ್ಟಿನ ಮೇಲೆ ಯೋಜನೆ ಕಾರ್ಯರೂಪಕ್ಕೆ ಬರಬೇಕಿತ್ತು. ಆದರೆ, ಈಗ ಕಾಮಗಾರಿ ನಡೆಯದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪ್ರವಾಸಿಗರಲ್ಲಿ ಬೇಸರ: ರೋಪ್‌ ವೇ ನಿರ್ಮಾಣದಿಂ ದಾಗಿಯೇ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ದೇವನಹಳ್ಳಿ ಕೋಟೆ, ನಂದಿ, ಭೋಗ ನಂದಿಧೀಶ್ವರ, ಘಾಟಿ ಸುಬ್ರಹ್ಮಣ್ಯ, ವಿಧುರಾಶ್ವತ್ಥ, ಮುದ್ದೇ ನ ಹಳ್ಳಿ ಮುಂತಾದ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಲಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹಳ ಹತ್ತಿರವಿರುವ ಕಾರಣ ದೇಶಿಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯಲಿದೆ. ಆದರೆ, ಕಾಮಗಾರಿ ನಿಂತಿರುವುದು ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಕಾಲಮಿತಿಯೊಳಗೆ ರೋಪ್‌ ವೇ ಕಾಮಗಾರಿ ಮುಗಿಯದೇ ಸದ್ಯ ಸ್ಥಗಿತಗೊಂಡಿರು ವುದು ಗಿರಿಧಾಮಕ್ಕೆ ಬರುವ ಪ್ರವಾಸಿಗರದಲ್ಲಿ ಬೇಸರ ತರಿಸಿದೆ.

ತಡವಾಗಿದೆಯಷ್ಟೇ, ಕಾಮಗಾರಿ ನಿಲ್ಲಲ್ಲ : ಜುಲೈನಲ್ಲಿ ರೋಪ್‌ ವೇ ಕಾಮಗಾರಿ ಆರಂಭಗೊಳ್ಳುತ್ತದೆ. ಈಗಾಗಲೇ ಸರ್ಕಾರ ಟೆಂಡರ್‌ ಕರೆದು 93.40 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಅನುಮೋದನೆ ಕೊಟ್ಟಿದೆ. ತಡ ಆಗಿರಬಹುದು ಅಷ್ಟೇ, ನಿಲ್ಲಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

Advertisement

ಶಂಕುಸ್ಥಾಪನೆಗೆ ಸೀಮಿತ : ರೋಪ್‌ ವೇ ನಿರ್ಮಾಣ ಸುಗಮ ಸಂಪರ್ಕದ ಜತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿ ಆಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್‌ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್‌ನಲ್ಲಿ 480 ಬೈಕ್‌, 410 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್‌, ಫ‌ುಡ್‌ ಕೋರ್ಟ್‌, ಕುಡಿವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್‌ ಕೌಂಟರ್‌, ವಿಶ್ರಾಂತಿ ಕೊಠಡಿ, ರೆಸ್ಟೋರೆಂಟ್‌, ಮಳಿಗೆಗಳು ಈ ಯೋಜನೆಯಡಿ ಬರುತ್ತವೆ. ಆದರೆ ಕಾಮಗಾರಿ ಕೇವಲ ಶಂಕುಸ್ಥಾಪನೆಗೆ ಸೀಮಿತವಾಗಿರುವುದು ಎದ್ದು ಕಾಣುತ್ತಿದೆ.

ನೀಲನಕ್ಷೆ ಸಿದ್ಧವಾಗಿತ್ತು : ರೋಪ್‌ ವೇ ಕಾಮಗಾರಿ ಜತೆಗೆ ಬೆಟ್ಟದ ಮೇಲಿನ ಟರ್ಮಿನಲ್‌ ನಲ್ಲಿ ಫ‌ುಡ್‌ ಕೋರ್ಟ್‌, ಕುಡಿವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ , ಟಿಕೆಟ್‌ ಕೌಂಟರ್‌, ವಿಶ್ರಾಂತಿ ಕೊಠಡಿ ನಿರ್ಮಾಣ ಆಗಲಿವೆ. ನಿರ್ಮಿತ ರೋಪ್‌ ವೇಗೆ ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣ ತಲುಪಲು ಅಂದಾಜು 14-15 ನಿಮಿಷ ಆಗಲಿದೆ. ಪ್ರತಿ ಗಂಟೆಗೆ ಅಂದಾಜು 1,000 ಜನರನ್ನು ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣಕ್ಕೆ ಕರೆದೊಯ್ಯಬಹುದು. 50 ಕ್ಯಾಬಿನ್‌ ಅಳವಡಿಸಲಾಗುತ್ತಿದ್ದು, ಪ್ರತಿ ಕ್ಯಾಬಿನ್‌ನಲ್ಲಿ 10 ಪ್ರಯಾಣಿಕರನ್ನು ಕರೆದೊಯ್ಯಬಹುದು. ಈ ಯೋಜನೆಯಿಂದಾಗಿ ನೇರವಾಗಿ 500 ಜನರಿಗೆ, ಪರೋಕ್ಷವಾಗಿ 5000 ಜನರಿಗೆ ಉದ್ಯೋಗಾವಕಾಶ ದೊರೆಯಲಿವೆ ಎಂದು ಯೋಜನೆ ನೀಲನಕ್ಷೆಯಲ್ಲಿ ತಿಳಿಸಲಾಗಿತ್ತು. ಆದರೆ, ಕಾಮಗಾರಿ ಶಂಕುಸ್ಥಾಪನೆ ಬಳಿಕ ಶರವೇಗದಿಂದ ನಡೆಯಬೇಕಿತ್ತಾದರೂ ಇದೀಗ ಸ್ಥಗಿತಗೊಂಡಿರುವುದು ಸಹಜವಾಗಿಯೇ ಪ್ರವಾಸಿಗರಲ್ಲಿ ಅಸಮಾಧಾನ ಮೂಡಿಸಿದೆ.

-ಕಾಗತಿ ನಾಗರಾಜಪ್ಪ 

Advertisement

Udayavani is now on Telegram. Click here to join our channel and stay updated with the latest news.

Next