Advertisement

ರಾಜ್ಯ ಲೂಟಿ ಮಾಡಿದವರಿಗೆ ಅಧಿಕಾರ ಸಿಗಲ

05:45 PM May 05, 2018 | |

ಶಿಕಾರಿಪುರ: ಯಡಿಯೂರಪ್ಪನವರೇ, ನೀವು ತಿಪ್ಪರಲಾಗ ಹಾಕಿದ್ರು ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನೂರು ಬಾರಿ ನರೇಂದ್ರ ಮೋದಿ ಬಂದರೂ, ಸಾವಿರಾರು ಬಾರಿ ಅಮಿತ್‌ ಶಾ ರಾಜ್ಯಕ್ಕೆ ಬಂದರೂ ಜನ ನಿಮ್ಮ ಪಕ್ಷಕ್ಕೆ ಅಧಿಕಾರ ಕೊಡುವುದಿಲ್ಲ. ರಾಜ್ಯವನ್ನು ಲೂಟಿ ಮಾಡಿದ ನಿಮಗೆ ಜನ ಆಶೀರ್ವಾದ ಮಾಡುವುದಿಲ್ಲ. ಲೂಟಿಕೂರರ ಮುಷ್ಟಿಯಿಂದ ಕರ್ನಾಟಕವನ್ನು ಕಾಪಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದ ಹೊಸ ಸಂತೆ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ನಂ. 1 ರೈತ ವಿರೋಧಿ. 2009 ರ ಡಿ. 30 ರಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂಧರ್ಭದಲ್ಲಿ ನಮ್ಮ ಪಕ್ಷದ ಉಗ್ರಪ್ಪ ರೈತರ ಸಾಲ ಮನ್ನಾ ಮಾಡಿ ಎಂದು ಮನವಿ ಮಾಡಿದಾಗ ನಮ್ಮ ಸರ್ಕಾರದಲ್ಲಿ ಹಣವಿಲ್ಲ. ಹಣ ಪ್ರಿಂಟ್‌ ಮಾಡುವ ಮಿಷನ್‌ ಇಲ್ಲ ಎಂದು ಹೇಳಿದ್ದನ್ನು ಜನ ಹಾಗೂ ರೈತರು ಮರೆತಿಲ್ಲ. 224 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ, ಮುಸ್ಲಿಂ , ಕ್ರಿಶ್ಚಿಯನ್ನರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿಮ್ಮಪಕ್ಷ ಅವಕಾಶ ಕೊಟ್ಟಿಲ್ಲ ಎಂದರು. ಧರ್ಮ- ಧರ್ಮಗಳ ನಡುವೆ, ಜಾತಿ- ಜಾತಿಗಳ ನಡುವೆ ಬೆಂಕಿ ಹಚ್ಚಿ ಸಂಘರ್ಷ ಮೂಡಿಸುವುದು ರಾಜಕಾರಣವಲ್ಲ. ಎಲ್ಲಾ ಧರ್ಮ, ಸಮುದಾಯ, ಜಾತಿಗಳನ್ನು ಒಂದೇ ದೃಷ್ಟಿಕೋನದಲ್ಲಿ ತೆಗೆದುಕೊಂಡು ಹೋಗುವುದು ನಿಜವಾದ ಜಾತ್ಯತೀತತೆಯ ಲಕ್ಷಣ. ಅದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ ಕಾಂಗ್ರೆಸ್‌ ಸಿದ್ಧಾಂತಗಳು ಮತ್ತು ಆಡಳಿತ ಎಂದರು.

ಸಾಮಾನ್ಯ ರೈತ ಕುಟುಂಬದಿಂದ ಬಂದ ಗೋಣಿ ಮಾಲತೇಶ ಅವರ ಮೇಲಿನ ಪ್ರೀತಿ, ಕಾಂಗ್ರೆಸ್‌ ಪಕ್ಷದ ಮೇಲಿನ ವಿಶ್ವಾಸ ಹಾಗೂ ಯಡಿಯೂರಪ್ಪ ಮತ್ತು ಮಗನ ಮೇಲಿರುವ ಆಕ್ರೋಶ ಮತಗಳಾಗಿ ಹೊರಹೊಮ್ಮಿ ವಿಧಾನಸಭೆ ಪ್ರವೇಶಿಸಲು ನಿಮ್ಮ ಆಶೀರ್ವಾದ ಬೇಕು. ಮೊದಿಯವರು ಪದೇ ಪದೇ ತಮ್ಮ ಎದೆ ತೋರಿಸಿ ವಿಶಾಲವಾದ ಎದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಜನಪರ, ಬಡವರ ಪರ ಪ್ರೀತಿ ಇಲ್ಲ. ಕೇವಲ ಪುರಸಭೆಯ ಸದಸ್ಯರಾಗಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಇನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತ ಗೋಣಿ ಮಾಲತೇಶ್‌ ಶಾಸಕನಾಗುವುದರಲ್ಲಿ ತಪ್ಪೇನಿದೆ. ಗೋಣಿ ಮಾಲತೇಶ್‌ ಈ ಮಣ್ಣಿನ ಮನನಾಗಿದ್ದಾನೆ. ನೀವು ಬೂಕನಕೆರೆಯಿಂದ ವಲಸೆ ಬಂದವರಿಗೆ ಅಧಿಕಾರ ಕೊಟ್ಟಿದ್ದೀರಿ. ನಿಮ್ಮ ಊರಿನ ನಿಮ್ಮ ಮನೆಯ ಮಗನಿಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಿಂದ ತಾಲೂಕು ಹಾಗೂ ಜಿಲ್ಲೆಯಲ್ಲಿ ಹಲವು ದಿನದಿಂದ ನೆನೆಗುದಿಗೆ ಬಿದ್ದಿದ್ದ ರೈತರ ಬಗರ್‌ಹುಕುಂ ಮತ್ತು ಅನೇಕ ಸಮಸ್ಯೆಗಳನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದರು  ಕಾಂಗ್ರೆಸ್‌ ಅಭ್ಯರ್ಥಿ ಗೋಣಿ ಮಾಲತೇಶ್‌ ಮಾತನಾಡಿ, ನೀವು ನನನ್ನು ಗೆಲ್ಲಿಸಿದರೆ ನನ್ನ ದೇಹದಲ್ಲಿ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುವೆ ಎಂದರು.

 ವಿ.ಪ. ಸದಸ್ಯ ಆರ್‌. ಪ್ರಸನ್ನ ಕುಮಾರ್‌, ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ, ಪಶ್ಚಿಮ ಘಟ್ಟ ನಿಗಮದ ಚಂದ್ರಶೇಖರ, ಮಾಜಿ ಎಂ.ಎಲ್‌.ಸಿ. ಶಾಂತವೀರಪ್ಪ ಗೌಡ, ಬಿ.ಎನ್‌. ಮಹಾಲಿಂಗಪ್ಪ, ಯುವ ಘಟಕದ ಮಯೂರ್‌ ದರ್ಶನ್‌, ಮಹೇಶ್‌ ಹುಲ್ಮಾರ್‌, ನರಸಿಂಗ ನಾಯ್ಕ, ಪಾರಿವಾಳದ ಶಿವರಾಂ, ಎಸ್‌.ಎಂ. ರಮೇಶ್‌ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಮಾಜಿ ಎಂ.ಎಲ್‌.ಸಿ. ಶಾಂತವೀರಪ್ಪ ಗೌಡ, ಬಿ.ಎನ್‌. ಮಹಾಲಿಂಗಪ್ಪ ಮತ್ತು ಅವರ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next