Advertisement

State Govt; ಕುಕ್ಕೆಗೂ ಅಭಿವೃದ್ಧಿ ಪ್ರಾಧಿಕಾರ, 2019ರಲ್ಲಿ ಕರಡು ಪ್ರತಿ ಸಿದ್ಧ

01:36 AM Mar 20, 2024 | Team Udayavani |

ಕಾರ್ಕಳ: ಕುಕ್ಕೆ ಸುಬ್ರಹ್ಮಣ್ಯವೂ ಸೇರಿದಂತೆ 10 ದೇವಸ್ಥಾನಗಳನ್ನು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಡಿಸಲು ರಾಜ್ಯ ಸರಕಾರ ಚಿಂತಿಸಿದೆ. ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗುವ ಸಂಭವವಿದೆ.

Advertisement

ರಾಜ್ಯದ 34,165 ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, 708.87 ಕೋಟಿ ರೂ. ಆದಾಯ ಪ್ರತೀ ವರ್ಷ ರಾಜ್ಯ ಸರಕಾರದ ಬೊಕ್ಕಸಕ್ಕೆ ಸೇರುತ್ತಿದೆ. ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ, ಮುಂದಿನ ದಿನಗಳಲ್ಲಿ ಹೆಚ್ಚಳವಾಗುವ ಭಕ್ತರ ದಟ್ಟಣೆಗೆ ಅನು  ಗುಣವಾಗಿ ಅಭಿ ವೃದ್ಧಿ ಪ್ರಾಧಿಕಾರ ರಚಿಸಲು ಸರಕಾರ ಆಲೋಚಿಸಿದೆ.

ಮೊದಲ ಹಂತದಲ್ಲಿ 10 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುವ 10 ದೇವ ಸ್ಥಾನಗಳಲ್ಲಿ ಪ್ರಾಧಿಕಾರ ರಚಿಸುವ ಉದ್ದೇಶ ವಿದೆ. ಮಲೆಮಹದೇಶ್ವರ ಬಳಿಕ ಇತ್ತೀಚೆಗೆ ಮುಗಿದ ಅಧಿವೇಶನದಲ್ಲಿ ಮೈಸೂರಿನ ಶ್ರೀ ಚಾಮುಂಡೇಶ್ವರೀ ಕ್ಷೇತ್ರ, ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ, ಶ್ರೀ ಹುಲಿಗಮ್ಮ ಕ್ಷೇತ್ರಗಳಿಗೆ ಪ್ರಾಧಿಕಾರ ರಚಿಸುವ ವಿಧೇಯಕಕ್ಕೆ ಅಂಗೀಕಾರ ದೊರಕಿದೆ. ಹಾಗಾಗಿ ಮುಂದಿನ ಅಧಿವೇಶನದಲ್ಲಿ ರಾಜ್ಯದ ನಂಬರ್‌ ವನ್‌ ದೇಗುಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಹಿತ 6 ದೇವಸ್ಥಾನಗಳು ಸೇರ್ಪಡೆಯಾಗಿ ಪ್ರಾಧಿಕಾರ ರಚನೆ ಸಂಬಂಧ ವಿಧೆಯಕ ಮಂಡಿಸುವ ಇರಾದೆ ಸರಕಾರದ್ದು. ಈ ಮಧ್ಯೆ ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿಯ ಅವಧಿ ಮಾರ್ಚ್‌ 4ಕ್ಕೆ ಕೊನೆಗೊಂಡಿದೆ.

10 ವರ್ಷದ ಹಿಂದಿನ ಪ್ರಸ್ತಾವ
ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಕ್ಷೇತ್ರದ ವ್ಯಾಪ್ತಿಯನ್ನು ಅಧಿಸೂಚಿತ ಪ್ರದೇಶ ವೆಂದು ಘೋಷಿಸಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಕುರಿತು 2008 ರಲ್ಲಿ ದಿ| ವೆಂಕಟರಮಣ ಭಟ್‌ ಸಮಿತಿ ಅಧ್ಯಕ್ಷರಾಗಿದ್ದಾಗ ಪ್ರಸ್ತಾಪ ಚರ್ಚೆಯಾಗಿತ್ತು. 2012ರಲ್ಲಿ ಈ ಪ್ರಕ್ರಿಯೆಗೆ ವೇಗ ದೊರಕಿತ್ತು. ರಾಜ್ಯ ಧಾರ್ಮಿಕ ಪರಿಷತ್‌, ಆಡಳಿತ ಸಮಿತಿ ಸಭೆ, ಮಾಸ್ಟರ್‌ ಪ್ಲಾನ್‌ ಸಮಿತಿಗಳಲ್ಲೂ ಚರ್ಚಿಸಲಾಗಿತ್ತು.

ಕರಡು ಪ್ರತಿ ರವಾನೆ
ಈ ಸಂಬಂಧ ದೇಗುಲದಿಂದ 2019ರ ಸೆ. 19ರಂದು ನಕ್ಷೆ ಸಹಿತ ಕರಡು ಪ್ರತಿಯನ್ನು ಜಿÇÉಾಧಿಕಾರಿ ಕಚೇರಿಗೆ ಅನುಮೋದನೆಗೆ ಕಳಿಸಲಾಗಿತ್ತು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಮಾದರಿಯಲ್ಲೇ ಈ ಪ್ರಾಧಿಕಾರವನ್ನೂ ರಚಿಸುವಂತೆ ತಿಳಿಸಲಾಗಿತ್ತು. ಜತೆಗೆ ಪ್ರಾಧಿಕಾರ ರಚನೆಯ ಸಾಧಕ-ಬಾಧಕ ತಿಳಿಯಲು ವಿಶೇಷ ಗ್ರಾಮಸಭೆಯನ್ನೂ ನಡೆಸಲಾಗಿತ್ತು. ಆಗ ಗ್ರಾಮಸ್ಥರಿಗೆ ತೊಂದರೆ, ಭೂಮಿ ಮಾರಾಟಕ್ಕೆ ಸಮಸ್ಯೆ ಹಾಗೂ ದೇಗುಲದ ತೆರಿಗೆ ವಿನಾಯಿತಿ ಪಡೆಯಲು ಪ್ರಾಧಿಕಾರ ರಚಿಸಲಾಗುತ್ತಿದೆ ಎಂಬಿತ್ಯಾದಿ ಸಂಗತಿಗಳು ಚರ್ಚೆಯಾಗಿ ಪ್ರಾಧಿಕಾರ ಪ್ರಸ್ತಾವ ವಿರೋಧಿಸಲು ಜಾಗೃತಿ ಸಮಿತಿಯನ್ನೂ ರಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಯೂ ಹಿನ್ನಡೆ ಅನುಭವಿಸಿತ್ತು.

Advertisement

ಪ್ರಾಧಿಕಾರವಾದರೆ ಏನು ಲಾಭ
ಪ್ರಾಧಿಕಾರ ರಚನೆಯಾದಲ್ಲಿ ಸರಕಾರದ ಅನುದಾನ ನೇರ ಅಭಿವೃದ್ಧಿ ಕಾರ್ಯ ಗಳಿಗೆ ಬಳಕೆಯಾಗಿ, ಯೋಜನೆಗಳು ಕಾರ್ಯಗತಗೊಳ್ಳುತ್ತವೆ. ಮುಖ್ಯಮಂತ್ರಿ ಯವರು ಅಧ್ಯಕ್ಷರಾಗಿದ್ದು, ಸರಕಾರದ ನಾಮ ನಿರ್ದೇಶಿತರು, ಇಲಾಖೆಗಳ ಕಾರ್ಯದರ್ಶಿ  ಗಳು ಸದಸ್ಯರಾಗಿರುತ್ತಾರೆ. ಕೆಎಎಸ್‌ ಅಧಿಕಾರಿ ನೇಮಕವಾಗುವ ಕಾರಣ ಆಡಳಿ ತಾತ್ಮಕ ನಿರ್ಧಾರ ಸುಲಭವಾಗುತ್ತದೆ. ಕ್ಷೇತ್ರದಲ್ಲಿ ಗೊಂದಲ, ಅಹಿತಕರ ಘಟನೆಗಳಿಗೂ ತೆರೆ ಬೀಳುತ್ತದೆ. ಹೊರಗಿನ ಹಸ್ತಕ್ಷೇಪಕ್ಕೂ ಅವಕಾಶ ವಿರುವುದಿಲ್ಲ ಎಂಬ ಅಭಿಪ್ರಾಯವೂ ಇದೆ.

ಗ್ರಾಮಸ್ಥರ ಮನವಿ
ಕುಕ್ಕೆ ಸುಬ್ರಹ್ಮಣ್ಯ ಪ್ರಾಚೀನ ದೇಗುಲ ವಾಗಿದ್ದು, ವೇಗವಾಗಿ ಬೆಳೆ ಯು ತ್ತಿದೆ. ಭಕ್ತರ ದಟ್ಟಣೆ ಹೆಚ್ಚಾಗುತ್ತಿದ್ದು ಮೂಲಸೌಕರ್ಯಗಳ ಬೇಡಿಕೆಯೂ ಹೆಚ್ಚುತ್ತಿದೆ. ಹಾಗಾಗಿ ಸೂಕ್ತ ಆಡಳಿತ ವ್ಯವಸ್ಥೆಗೆ ಪ್ರಾಧಿಕಾರ ರಚಿಸುವಂತೆ ಮುಖ್ಯಮಂತ್ರಿಯವರಿಗೆ, ವಿಧಾನಸಭಾ ಅಧ್ಯಕ್ಷರಿಗೆ, ಫೆ. 19ರಂದು ಗ್ರಾಮಸ್ಥರು ಮನವಿ ನೀಡಿದ್ದರು. ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್‌ ಪ್ರಾಧಿ ಕಾರ ರಚಿಸುವ ಕುರಿತು ಮುಜರಾಯಿ ಖಾತೆ ಸಚಿವರಿಗೆ ಸಲಹೆ ನೀಡಿದ್ದರು.

ಮಾದರಿ ನಕಾಶೆ ಹೀಗಿದೆ
ಪ್ರಾಧಿಕಾರದ ಮಾದರಿ ನಕಾಶೆಯು ದೇಗುಲದ ಕೇಂದ್ರ ಸ್ಥಾನದಿಂದ ದೇವರಗದ್ದೆ ಮಾನಾಡು ಭಾಗ, ಜಾಲೂÕರು ಸುಬ್ರಹ್ಮಣ್ಯ ರಸ್ತೆ ಭಾಗ, ಸುಬ್ರಹ್ಮಣ್ಯ-ಮಂಜೇಶ್ವರ ಭಾಗ, ಕುಮಾರಧಾರಾ-ಗುಂಡ್ಯ-ಉಪ್ಪಿನಂಗಡಿ ರಾ.ಹೆ. ಭಾಗ, ಆದಿಸುಬ್ರಹ್ಮಣ್ಯ- ನೂಚಿಲ ರಸ್ತೆ ಭಾಗಗಳಿಗೆ ತಲಾ 2 ಕಿ.ಮೀ. ವ್ಯಾಪ್ತಿ ಹೊಂದಿರುತ್ತದೆ. ಮಾದರಿಯಲ್ಲಿ ಬದಲಾವಣೆಗಳಾದರೆ ಇದರಲ್ಲೂ ವ್ಯತ್ಯಾಸವಾಗಲಿವೆ.

2022-23ರಲ್ಲಿ
ದೇಗುಲಗಳ ಆದಾಯ
-ಕುಕ್ಕೆ ಸುಬ್ರಹ್ಮಣ್ಯ-123.64 ಕೋ.ರೂ.
-ಕೊಲ್ಲೂರು ಮೂಕಾಂಬಿಕೆ-59,47 ಕೋ.ರೂ.
-ಮೈಸೂರು ಚಾಮುಂಡೇಶ್ವರಿ, ಅರಮನೆ ದೇಗುಲ-52.42 ಕೋ.ರೂ.
-ತುಮಕೂರು ಯಡಿಯೂರು ಸಿದ್ಧಲಿಂಗೇಶ್ವರ-36.48 ಕೋ.ರೂ.
-ಕಟೀಲು ಶ್ರೀ ದುರ್ಗಾಪರಮೇಶ್ವರೀ-32 ಕೋ.ರೂ.
-ಸವದತ್ತಿ ಎಲ್ಲಮ್ಮ- 22.52 ಕೋ.ರೂ.
-ಮಂದಾರ್ತಿದುರ್ಗಾಪರಮೇಶ್ವರೀ-14.55 ಕೋ.ರೂ.
-ಘಾಟಿ ಸುಬ್ರಹ್ಮಣ್ಯ 12.25 ಕೋ.ರೂ.
-ಬೆಂಗಳೂರು ಬನಶಂಕರಿ-10.58 ಕೋ.ರೂ.
-ಸೌತಡ್ಕ ಗಣಪತಿ-10 ಕೋ.ರೂ.

ಹಿಂದಿನ ಸರಕಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ರಚಿಸಿದೆ. ಲಕ್ಷಾಂತರ ಭಕ್ತರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ನೀಡುವುದು ಸರಕಾರದ ಕರ್ತವ್ಯವಾಗಿದ್ದು ಕುಕ್ಕೆ ಸಹಿತ ಸುಮಾರು 10 ದೇವಸ್ಥಾನಗಳಲ್ಲಿ ಪ್ರಾಧಿಕಾರ ರಚಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ.
– ರಾಮಲಿಂಗಾ ರೆಡ್ಡಿ , ಮುಜರಾಯಿ ಖಾತೆ ಸಚಿವ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next