Advertisement

ವಿದ್ಯುತ್ ಸಂಪರ್ಕ ಪಡೆಯಲು ವಾಸ್ತವ್ಯ ಪ್ರಮಾಣ ಪತ್ರ ಕಡ್ಡಾಯ ನಿಯಮ ರದ್ದು ಮಾಡಿದ ರಾಜ್ಯಸರ್ಕಾರ

12:38 PM Jul 02, 2022 | Team Udayavani |

ಬೆಂಗಳೂರು: ವಾಸ್ತವ್ಯ ಪ್ರಮಾಣ ಪತ್ರ (ಓಸಿ) ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಿಸಲ್ಪಟ್ಟಿದ್ದ ಬೆಂಗಳೂರಿನ ನಾಗರಿಕರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ.

Advertisement

ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಓಸಿ ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕಲಾಗಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ತಿದ್ದುಪಡಿ ಆದೇಶಕ್ಕೆ ಶುಕ್ರವಾರ ರಾತ್ರಿ ರಾಜ್ಯಪತ್ರ ಹೊರಡಿಸಲಾಗಿದೆ. ನಿನ್ನೆಯಿಂದಲೇ ಹೊಸ ಆದೇಶ ಜಾರಿಗೆ ಬರಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ಕತ್ತಲೆ ಭಾಗ್ಯದ ಕಾನೂನನ್ನು ನಮ್ಮ ಸರಕಾರ ಬದಲಾಯಿಸಿದ್ದು, ಎಲ್ಲರ ಮನೆಯಲ್ಲೂ ಬೆಳಕು ಮೂಡಲಿದೆ ಎಂದು ಇಂಧನ, ಕನ್ನಡ- ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಟ್ವೀಟ್ ಮೂಲಕ ಹೊಸ ಆದೇಶದ ಮಾಹಿತಿ ಹಂಚಿಕೊಂಡಿದ್ದಾರೆ.

ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ನೆಪ‌ ನೀಡಿ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿ ವಾಸ್ತವ್ಯ ಪ್ರಮಾಣ ಪತ್ರ ನಿರಾಕರಿಸಿದ್ದರೆ ಅಂಥ ಮನೆ ಹಾಗೂ ಫ್ಲಾಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆದೇಶ ನೀಡಿದ್ದರು. ‌ಇದರಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೇ ತೊಂದರೆಗೆ ಒಳಗಾಗಿದ್ದವು.

ಇದನ್ನೂ ಓದಿ:ನಿಮಗೂ ಸ್ಪೂರ್ತಿಯಾಗಬಹುದು…; 48 ವರ್ಷ ಹಳೆಯ ತಮ್ಮ ರೆಸ್ಯೂಮ್ ಹಂಚಿಕೊಂಡ ಬಿಲ್ ಗೇಟ್ಸ್

Advertisement

ಕಳೆದ ಐದು ವರ್ಷಗಳಿಂದ ಈ ಸಮಸ್ಯೆ ಬೆಂಗಳೂರಿನ ನಾಗರಿಕರನ್ನು ಕಾಡುತ್ತಿತ್ತು. ಬಿಬಿಎಂಪಿ ಹಾಗೂ ಇಂಧನ‌ ಇಲಾಖೆಯ ಈ ಧೋರಣೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿಯ ಬೆಂಗಳೂರು ಶಾಸಕರು ಇಂಧನ ಸಚಿವ‌ ವಿ.ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ನಿಯಮ‌ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಕೈಗಾರಿಕೆ ಇಲಾಖೆ ಹಾಗೂ ಕಾಸಿಯಾ ಸಂಸ್ಥೆ ಕೂಡಾ ನಿಯಮ‌ ಬದಲಾವಣೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಸಾಧ್ಯಾಸಾಧ್ಯತೆ ಪರಿಶೀಲನೆಗೆ ಕ್ರಮ ಕೈಗೊಳ್ಳುವಂತೆ ಸುನೀಲ್ ಕುಮಾರ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿದ್ದರು. ‌ನಂತರ ಕೆಇಆರ್ ಸಿಗೆ ಪತ್ರ ಬರೆಯಲಾಗಿತ್ತು. ಈ ಬಗ್ಗೆ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಆಯೋಗ ಹೊರಡಿಸಿದ ಆದೇಶ ಈಗ ರಾಜ್ಯಪತ್ರದ ಮೂಲಕ ಅಧಿಕೃತಗೊಂಡಿದೆ. ಇನ್ನು‌ಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ಹಕ್ಕುಪತ್ರ ಇದ್ದರೆ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next