Advertisement

Central Library: ಪುಸ್ತಕಗಳಿದ್ದರೂ ಓದುಗರಿಲ್ಲದೆ ಕೇಂದ್ರ ಗ್ರಂಥಾಲಯ ಭಣ ಭಣ!

01:26 PM Feb 19, 2024 | Team Udayavani |

ಜನರ ವಿಶ್ವವಿದ್ಯಾಲಯ ಎಂದೇ ಖ್ಯಾತಿವೆತ್ತ ರಾಜ್ಯ ಕೇಂದ್ರ ಗ್ರಂಥಾಲಯ (ಸೆಂಟ್ರಲ್‌ ಲೈಬ್ರರಿ)ವು ಪುಸ್ತಕಪ್ರೇಮಿಗಳಿಲ್ಲದೆ ಕಳೆಗುಂದಿದೆ. ಲಕ್ಷಾಂತರ ಪುಸ್ತಕಗಳ ಭಂಡಾರವಿದ್ದರೂ ಓದುಗರ ಕೊರತೆ ಕಾಡುತ್ತಿದೆ. 109 ವರ್ಷ ಇತಿಹಾಸವುಳ್ಳ ಗ್ರಂಥಾಲಯದಲ್ಲಿ ಜ್ಞಾನಾರ್ಜನೆ ಮಾಡಿದ ಅದೆಷ್ಟೋ ಮಂದಿ ಉನ್ನತಾಧಿಕಾರ ಪಡೆದಿದ್ದಾರೆ. ಪಿಎಚ್‌ಡಿ, ಇತರೆ ಸಂಶೋಧನೆ ಮಾಡುವವರಿಗೆ, ಪುಸ್ತಕಕೊಳ್ಳುವ ಶಕ್ತಿ ಇಲ್ಲದವರು ಈ ಗ್ರಂಥಾಲಯವನ್ನು ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ಯುವಕರಲ್ಲಿ ಪುಸ್ತಕ ಪ್ರೀತಿ ಕುಸಿಯುತ್ತಿದೆ. ಕಬ್ಬನ್‌ಪಾರ್ಕ್‌ನ ಆಹ್ವಾದಕರ ವಾತಾವರಣದಲ್ಲಿನ ಸುಸಜ್ಜಿತ ಕೇಂದ್ರ ಗ್ರಂಥಾಲಯ ಪುಸ್ತಕ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಕೇಂದ್ರ ಗ್ರಂಥಾಲಯದ ಹುಟ್ಟಿದ ಬಗೆ, ಐತಿಹ್ಯ, ವರ್ತಮಾನದ ಸುಳಿ ಈ ವಾರದ ಸುದ್ದಿ ಸುತ್ತಾಟದಲ್ಲಿದೆ.

Advertisement

ಬೆಂಗಳೂರು: ಪುಸ್ತಕ ಪ್ರೀತಿಯ ಪ್ರತೀಕವಾಗಿರುವ ರಾಜ್ಯ ಕೇಂದ್ರ ಗ್ರಂಥಾಲಯದ ಕಡೆಗೆ ಹೋಗಿ ಎಷ್ಟು ದಿನ ಆಗಿದೆ ಎಂದು ಬೆಂಗಳೂರಿಗರನ್ನು ಯಾರಾದರು ಪ್ರಶ್ನಿಸಿದರೆ ತಲೆ ಕೆರೆದುಕೊಳ್ಳುವವರೇ ಹೆಚ್ಚು! ಉದ್ಯಾನ ನಗರದಲ್ಲಿ ಹಲವು ಪಾರಂಪರಿಕ ಕಟ್ಟಡಗಳು ಇದ್ದು, ಇದರಲ್ಲಿ ಕಬ್ಬನ್‌ ಉದ್ಯಾನದಲ್ಲಿರುವ ಕೇಂದ್ರ ಗ್ರಂಥಾಲಯ ಕಟ್ಟಡವೂ ಒಂದು.

6 ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹವಿರುವ, ಡಿಜಿಟಲ್‌ ಲೈಬ್ರರಿ ಸೇವೆ ಹೊಂದಿರುವ ಸುಸಜ್ಜಿತ ಕೇಂದ್ರ ಗ್ರಂಥಾಲಯವು ಸದ್ಯ ಓದುಗರಿಲ್ಲದೇ ಭಣಗುಡುತ್ತಿದೆ. ಕೇಂದ್ರ ಗ್ರಂಥಾಲಯಕ್ಕೆ ತೆರಳಲು ಒಂದು ಕಾಲದಲ್ಲಿ ಅತೀ ಉತ್ಸಾಹ ತೋರುತ್ತಿದ್ದ ಪುಸ್ತಕಪ್ರೇಮಿಗಳು, ಸದ್ಯ ಸ್ಮಾರ್ಟ್‌ಪೋನ್‌ ಚಟಕ್ಕೆ ಬಿದ್ದು ಇತ್ತ ಸುಳಿಯುತ್ತಿಲ್ಲ. ಯಾವುದೋ ಕಾಲದಲ್ಲಿ ಕೇಂದ್ರ ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದಿರುವುದು, ಪುಸ್ತಕ ಎರವಲು ಪಡೆಯುತ್ತಿದ್ದ ಸಂಗತಿಗಳು ಅಲ್ಲಲ್ಲಿ ಹರಟೆ ಹೊಡೆಯುವ ವೇಳೆ ಕೇಳಿ ಬರುತ್ತಿವೆ.

ಬೆಂಗಳೂರಿನಲ್ಲಿ ವಾಸಿಸುವ ಯುವ ಪೀಳಿಗೆಯಂತೂ ಈ ಗ್ರಂಥಾಲಯಕ್ಕೆ ಹೋಗುವ ಪರಿಪಾಠ ಕೈ ಬಿಟ್ಟಿದೆ. ಇಲ್ಲಿಗೆ ಭೇಟಿ ಕೊಟ್ಟರೆ ಕೇವಲ ಸ್ಫರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳೇ ಕಣ್ಣಿಗೆ ಬೀಳುತ್ತಾರೆ. ಪರಿಣಾಮ ಗ್ರಂಥಾಲಯವು ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿದೆ.

ಯೂರೋಪಿಯನ್‌ ಶೈಲಿಯಲ್ಲಿರುವ ಗ್ರಂಥಾಲಯ: ರಾಜ್ಯ ಕೇಂದ್ರ ಗ್ರಂಥಾಲಯವು ಐತಿಹಾಸಿಕವಾದ ಸರ್‌. ಶೇಷಾದ್ರಿ ಅಯ್ಯರ್‌ ಭವನದಲ್ಲಿದೆ. ಈ ಭವನವು ಸುಂದರವಾದ ಹಚ್ಚ ಹಸಿರಿನ ಕಬ್ಬನ್‌ ಉದ್ಯಾನದಲ್ಲಿದೆ. ಇದೊಂದು ಅತ್ಯಂತ ಪುರಾತನ ಹಾಗೂ ಪ್ರಾಮುಖ್ಯತೆ ಪಡೆದ ಭವನವಾಗಿದೆ. ಈ ಗ್ರಂಥಾಲಯ ಮೈಸೂರು ಸಂಸ್ಥಾನದ ದಿವಾನರಾಗಿದ್ದ ದಿವಾನ್‌ ಸರ್‌ ಶೇಷಾದ್ರಿ ಅಯ್ಯರ್‌ ಅವರ ನೆನಪಿನಲ್ಲಿ ನಿರ್ಮಾಣವಾಗಿದೆ. ಈ ಭವನವನ್ನು ಶುದ್ಧ ಯೂರೋಪಿಯನ್‌ ಶೈಲಿಯಲ್ಲಿ ನಿರ್ಮಿಸಲಾಗಿದೆ. ಭವನದ ಮುಂಭಾಗದಲ್ಲಿರುವ ಗುಲಾಬಿ ಉದ್ಯಾನವನದಿಂದ ಗ್ರಂಥಾಲಯದ ಸೌಂದರ್ಯವು ಇಮ್ಮಡಿಯಾಗಿದೆ.

Advertisement

ದಿವಾನ್‌ ಸರ್‌ ಶೇಷಾದ್ರಿ ಅಯ್ಯರ್‌ ಸ್ಮಾರಕ ಭವನದ ನಿರ್ಮಾಣದಲ್ಲಿ ಲಾರ್ಡ್‌ ಕರ್ಜನ್‌ ಪಾತ್ರ ಮಹತ್ವದ್ದಾಗಿದೆ. ಸರ್‌ ಶೇಷಾದ್ರಿ ಅಯ್ಯರ್‌ ಅವರ ನಿಸ್ವಾರ್ಥ ಸೇವೆ ಮತ್ತು ಸಾಧನೆಗಳ (ಶಿವನ ಸಮುದ್ರದ ಜಲವಿದ್ಯುತ್‌ ಕೇಂದ್ರದ ಸ್ಥಾಪನೆಯು ಅಯ್ಯರ್‌ ಸಾಧನೆಯ ಮೈಲುಗಲ್ಲಾಗಿದೆ) ಬಗ್ಗೆ ಬ್ರಿಟಿಷ್‌ ರೆಸಿಡೆಂಟ್‌ ಸರ್‌ ಡೊನಾಲ್ಡ್ ರಾಬರ್ಟ್ ಸನ್‌ ಬಳಿ ವಿವರಿಸಿ ಭವನದ ನಿರ್ಮಾಣಕ್ಕೆ ಲಾರ್ಡ್‌ ಕರ್ಜನ್‌ ಒಪ್ಪಿಗೆ ಪಡೆದಿದ್ದರು. 1903 ಅ.15ರಲ್ಲಿ ಬ್ರಿಟಿಷ್‌ ರೆಸಿಡೆಂಟ್‌ ಸರ್‌. ಡೊನಾಲ್ಡ್‌ ರಾಬರ್ಟ್‌ಸನ್‌ ಅವರು ಶೇಷಾದ್ರಿ ಅಯ್ಯರ್‌ ಭವನದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಐತಿಹಾಸಿಕವಾದ ಈ ಭವನ ಬಹಳ ಪುರಾತನ ಸ್ಮಾರಕವಾಗಿದ್ದು, ದಿವಾನ್‌ ಸರ್‌. ಶೇಷಾದ್ರಿ ಅಯ್ಯರ್‌ ನೆನಪಿಗಾಗಿ 1908ರಲ್ಲಿ ನಿರ್ಮಿಸಲಾಗಿದೆ.

1915ರಲ್ಲಿ ಗ್ರಂಥಾಲಯ ಪ್ರಾರಂಭ: 1913 ನ.20ರಂದು ವೈಸರಾಯ್‌ ಲಾರ್ಡ್‌ ಹಾರ್ಡಿಂಗ್‌ ಅವರು ಇಲ್ಲಿ ಶೇಷಾದ್ರಿ ಅಯ್ಯರ್‌ ಪ್ರತಿಮೆ ಸ್ಥಾಪಿಸಿದರು. 1914ರಲ್ಲಿ ಸ್ಮಾರಕ ಸಮಿತಿಯು ಸ್ಮಾರಕವು ಸಾರ್ವಜನಿಕ ಕಟ್ಟಡವಾಗಿ ಹಾಗೂ ಇಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲು ತೀರ್ಮಾನಿಸಿತು. ದಿವಾನ್‌ ಸರ್‌.ಎಂ. ವಿಶ್ವೇಶ್ವರಯ್ಯ ಈ ಭವನವನ್ನು ರಾಜ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹಸ್ತಾಂತರಿಸಿದ ನಂತರ ಅಂದರೆ 1915 ಮೇ1ರಲ್ಲಿ ಈ ಸಾರ್ವಜನಿಕ ಗ್ರಂಥಾ ಲಯ ಪ್ರಾರಂಭವಾಯಿತು. ಸಾರ್ವ ಜನಿಕರ ದೇಣಿಗೆಯಿಂದ 1 ಲಕ್ಷ ರೂ. ಗಳಲ್ಲಿ ಗ್ರಂಥಾಲಯ ನಿರ್ಮಾಣ ವಾಗಿತ್ತು. ಸಾಧಾರಣವಾಗಿ ಸದಸ್ಯತ್ವ ನೋಂದಣಿಗೆ ಹಣ ನೀಡಬೇಕಾಗಿತ್ತು. 1920ರಲ್ಲಿ ಈ ಗ್ರಂಥಾಲಯ ಸರ್ಕಾರದ ಅನುದಾನಕ್ಕೆ ಒಳಪಟ್ಟಿತು. 1943ರಲ್ಲಿ ಗ್ರಂಥಾಲಯ ಪ್ರಾರಂಭವಾದಾಗ 4,750 ಪುಸ್ತಕಗಳಿತ್ತು. ಜೊತೆಗೆ 215 ಸದಸ್ಯರಿದ್ದರು. ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಮಿಲಿಟರಿ ಕೇಂದ್ರಗಳ ಸಂಸ್ಥೆಗಳಿಂದ ಪಡೆದುಕೊಳ್ಳುತ್ತಿತ್ತು.

ಲಕ್ಷಾಂತರ ಪುಸ್ತಕಗಳ ಸಂಗ್ರಹ: ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ 3,74,011 ಪರಾಮರ್ಶನ ಪುಸ್ತಕಗಳು, 2,27,257 ಗ್ರಂಥ ಸ್ವಾಮ್ಯ ವಿಭಾಗದ ಪುಸ್ತಕಗಳು, 694 ಬ್ರೈಲ್‌ ಪುಸ್ತಕಗಳನ್ನು ಹೊಂದಿದೆ. 296 ನಿಯತಕಾಲಿಕೆಗಳು ಹಾಗೂ ದಿನಪತ್ರಿಗಳು ಇಲ್ಲಿ ಲಭ್ಯವಿದೆ. ಗ್ರಂಥಾಲಯವು ಪ್ರಸ್ತುತ 300 ಚ.ಮೀ. ವಿಸ್ತೀರ್ಣ ಹೊಂದಿದೆ. ಮುಖ್ಯದ್ವಾರವು 4.09 ಮೀ., ಪರಾಮರ್ಶನ ವಿಭಾಗವು 44.8 ಅಡಿ ಎತ್ತರ, ನಿಯತಕಾಲಿಕೆ ವಿಭಾಗವು 8.89 ವಿಸ್ತೀರ್ಣ ಹೊಂದಿದೆ. ಸೋಮವಾರ, ಎರಡನೇ ಮಂಗಳವಾರ ಹಾಗೂ ಸರ್ಕಾರ ಘೋಷಿಸುವ ರಜಾ ದಿನ ಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಗ್ರಂಥಾಲಯವು ಓದುಗರಿಗೆ ಮುಕ್ತವಾಗಿ ತೆಗೆದಿರುತ್ತದೆ. ಬೆಳಗ್ಗೆ 8.30ಕ್ಕೆ ಪ್ರಾರಂಭವಾದರೆ ರಾತ್ರಿ 7.30ರವರೆಗೆ ಸಾರ್ವಜನಿಕರಿಗೆ ಗ್ರಂಥಾಲಯಕ್ಕೆ ಭೇಟಿ ನೀಡಲು ಅವಕಾಶಗಳಿವೆ.

ಗ್ರಂಥಾಲಯಕ್ಕೆ ಭೇಟಿ ಕೊಡುವವರು ವಿರಳ ಏಕೆ?: ಇಂದಿನ ಯುವ ಪೀಳಿಗೆ, ಮಕ್ಕಳು, ಮಧ್ಯಮ ವರ್ಗದ ಜನರ ಓದುವ ಮಾರ್ಗ ಬದಲಾಗಿದೆ. ಸ್ಮಾರ್ಟ್‌ಫೋನ್‌ಗಳು ಈ ತಲೆಮಾರಿನ ಮನ ರಂಜನೆಯ ಮಾಧ್ಯಮವಾಗಿದೆ. ಇದರಲ್ಲಿ ಬರುವ ರೀಲ್ಸ್‌ಗಳೇ ಇಂದಿನ ಕಾಲಘಟ್ಟದ ಆಕರ್ಷಣೆಯಾಗುತ್ತಿದೆ. ಹೀಗಾಗಿ, ಮನೋರಂಜನೆ ಅರಸಿ ಗ್ರಂಥಾಲಯಕ್ಕೆ ಹೋಗುವವರು ವಿರಳವಾಗಿದ್ದಾರೆ ಎಂಬುದು ಗ್ರಂಥಾಲಯ ಸಿಬ್ಬಂದಿಯ ಅಭಿಪ್ರಾಯ.

ಗ್ರಂಥಾಲಯದ ಸೇವೆಗಳು: ಅಂತರ್‌ ಗ್ರಂಥಾಲಯ ಮಾಹಿತಿ ಸೇವೆ, ಗ್ರಂಥಸ್ವಾಮ್ಯ ವಿಭಾಗದ ಆಯಾಯ ವರ್ಷದ ಗ್ರಂಥಸೂಚಿ ಸೇವೆ, ಗ್ರಂಥ ವಿವರಣೆ ಸೇವೆ, ದ್ವಿಪ್ರತಿ ಸೇವೆ, ವಿರಳವಾದ ಪುಸ್ತಕಗಳ ಸಂಗ್ರಹ, ಮಾಹಿತಿ ಸೇವೆ, ವಿಸ್ತರಣಾ ಸೇವೆ, ಶ್ರವಣ – ದೃಶ್ಯ ಮಾಧ್ಯಮ ಸೇವೆ, ಗಣಕ ಯಂತ್ರ ಸೇವೆ, (ಒಪೆಕ್‌ ಸರಳವಾಗಿ ಪುಸ್ತಕವನ್ನು ಪಡೆಯುವುದಕ್ಕಾಗಿ), ಅಂತರ್ಜಾಲ ಸೇವೆ, ಬ್ರೈಲ್‌ ವಿಭಾಗದ ಗ್ರಂಥಗಳ ಸೇವೆ, ಮೊಬೈಲ್‌ ತಂತ್ರಾಂಶ ಸೇವೆ, ಕರ್ನಾಟಕ ಡಿಜಿಟಲ್‌ ಗ್ರಂಥಾಲಯ ಸೇವೆಯನ್ನು ಈ ಗ್ರಂಥಾಲಯ ನೀಡುತ್ತಿದೆ.

ಕೇಂದ್ರ ಗ್ರಂಥಾಲಯ ಎಂದು ನಾಮಕರಣ: ಗ್ರಂಥಾಲಯದ ಆಡಳಿತವನ್ನು ಮೈಸೂರು ನೋಂದಣಿ ಕಾಯಿದೆ ಅಡಿಯಲ್ಲಿ ಬರುವ ಆಡಳಿತ ಸಮಿತಿಯು ನಡೆಸುತ್ತಿತ್ತು. ಶಿಕ್ಷಣ ಇಲಾಖೆಯ ಮಹಾನಿರೀಕ್ಷರಾಗಿದ್ದ ಕೃಷ್ಣರಾವ್‌ ಇದರ ಮೊದಲ ಅಧ್ಯಕ್ಷರಾಗಿದ್ದರು. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯಿದೆ 1965ರ ಅಡಿಯಲ್ಲಿ ಕರ್ನಾಟಕ ಸರ್ಕಾರವು ಈ ಗ್ರಂಥಾಲಯವನ್ನು 1966ರಲ್ಲಿ ತನ್ನ ಸುಪರ್ದಿಗೆ ಪಡೆದ ನಂತರ ರಾಜ್ಯ ಕೇಂದ್ರ ಗ್ರಂಥಾಲಯವೆಂದು ಮರು ನಾಮಕರಣ ಮಾಡಲಾಯಿತು. 1986 ಏ.1ರಿಂದ ಇದು ಪರಾಮರ್ಶನ ಗ್ರಂಥಾಲಯವಾಗಿ ಮಾರ್ಪಾಡಾಗಿದೆ. 1966 ಜುಲೈ 4ರಂದು ಎಂ.ಸಿ.ಚಾಗ್ಲಾ ಆಗಿನ ಮಾನ್ಯ ವಿದ್ಯಾ ಮಂತ್ರಿಗಳ ಸಮಕ್ಷಮದಲ್ಲಿ ಕಟ್ಟಡದ ಸುವರ್ಣ ಮಹೋತ್ಸವ ನೆರವೇರಿಸಲಾಗಿತ್ತು. 2017 ಏ.23ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ತನ್ನೀರ್‌ ಸೇಠ್ ಸಮಕ್ಷಮದಲ್ಲಿ ಕಟ್ಟಡದ ಶತಮಾನೋತ್ಸವ ಮಹೋತ್ಸವ ಏರ್ಪಡಿಸಲಾಗಿತ್ತು. ‌

ರಾಜ್ಯ ಕೇಂದ್ರ ಗ್ರಂಥಾಲಯವು ತನ್ನದೇ ಆದ ಮಹತ್ವ ಹೊಂದಿದೆ. ಇಲ್ಲಿ ಓದುಗರಿಗೆ ಬೇಕಾದ ಸೌಲಭ್ಯ ಒದಗಿಸಲಾಗಿದೆ. ಸಾರ್ವಜನಿಕರು ಇಂತಹ ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ. ಇಲ್ಲಿ ಡಿಜಿಟಲ್‌ ಗ್ರಂಥಾಲಯ ಸೇವೆಯೂ ಇದೆ. ●ಡಾ.ಸತೀಶ್‌ ಎಸ್‌.ಹೊಸಮನಿ, ನಿರ್ದೇಶಕ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು.

  ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next