Advertisement

ರಾಜ್ಯ ಸಚಿವ ಸಂಪುಟ ಸಭೆ: ಸಾರಿಗೆ ನೌಕರರ ಮೇಲಿನ ಪ್ರಕರಣ ಹಿಂದೆಗೆ‌ತ

11:13 PM Sep 20, 2021 | Team Udayavani |

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರ ಮೇಲೆ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ವಾಪಸ್‌ ಪಡೆಯಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ನಾಲ್ಕು ಸಾರಿಗೆ ನಿಗಮಗಳ  ವ್ಯವಸ್ಥಾಪಕ ನಿರ್ದೇಶಕರ ಜತೆ ಸಾಧಕ – ಬಾಧಕಗಳ ಕುರಿತು ಚರ್ಚಿಸಿದ್ದೇನೆ. ಮುಷ್ಕರ ಸಮಯದಲ್ಲಿ ಕೆಲವರು ಅಮಾನತಾಗಿದ್ದಾರೆ, ಮತ್ತೆ ಕೆಲವರು ವರ್ಗಾವಣೆಯಾಗಿ  6 ಸಾವಿರ ನೌಕರರು ತೊಂದರೆಗೆೆ ಸಿಲುಕಿದ್ದರು. 4 ಸಾವಿರ ನೌಕರರ ಮೇಲೆ ತೆಗೆದುಕೊಂಡಿದ್ದ ಕ್ರಮವನ್ನು ಹಿಂಪಡೆಯಲಾಗಿದೆ.  ಉಳಿದ 2 ಸಾವಿರ ನೌಕರರನ್ನು ಮಂಗಳವಾರ ಕರೆದು ಮಾತನಾಡಲಾಗುವುದು.  ಮುಷ್ಕರದಲ್ಲಿ ಪಾಲ್ಗೊಂಡ ನೌಕರರಿಗೆ  ತೊಂದರೆಯಾಗಬಾರದು. ಎಫ್ಐಆರ್‌  ಬಗ್ಗೆ ಕಾನೂನು ತಂಡದ ಜತೆ ಚರ್ಚಿಸಲಾಗುವುದು ಎಂದರು.

ಕೆಎಸ್‌ಆರ್‌ಟಿಸಿಗೆ ಪಿಆರ್‌ಸಿಐ ಎಕ್ಸಲೆನ್ಸ್‌ ಪ್ರಶಸ್ತಿ:

ಕೆಎಸ್‌ಆರ್‌ಟಿಸಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಅಳವಡಿಸಿಕೊಂಡ ಉಪಕರಣಗಳಿಗೆ ಪ್ರತಿಷ್ಠಿತ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ “ಪಿಆರ್‌ಸಿಐ ಎಕ್ಸಲೆನ್ಸ್‌’ ಪ್ರಶಸ್ತಿ ಲಭಿಸಿದೆ.

ಕೋವಿಡ್‌ ನಿರ್ವಹಣೆಗಾಗಿ ಬೆಳ್ಳಿ ಪದಕ, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿ ಉಪಕರಣಗಳ ಅನುಷ್ಠಾನಕ್ಕೆ ಸಾಮಾಜಿಕ ಅತ್ಯುತ್ತಮ ಸಾರ್ವಜನಿಕ ಉದ್ದಿಮೆ ವಿಭಾಗದಲ್ಲಿ ಕಂಚಿನ ಪದಕ, ಆರೋಗ್ಯ ರಕ್ಷಣೆ ಸಂವಹನ ಸಾಕ್ಷ್ಯಚಿತ್ರಗಳಿಗೆ ಕಂಚಿನ ಪದಕ, ಆಂತರಿಕ ನಿಯತಕಾಲಿಕೆ “ಸಾರಿಗೆ ಸಂಪದ’ಕ್ಕೆ ಚಿನ್ನದ ಪದಕ, ಕೋವಿಡ್‌ ಸಂದರ್ಭ ನೂತನ ಗ್ರಾಹಕ ಸ್ನೇಹಿ ಉಪಕ್ರಮಕ್ಕೆ ಚಿನ್ನದ ಪದಕ ಸಹಿತ ಒಟ್ಟು ಐದು ವಿಭಾಗ ಗಳಲ್ಲಿ ನಿಗಮಕ್ಕೆ ಈ ಪ್ರಶಸ್ತಿ ದೊರಕಿದೆ.

Advertisement

ಈಚೆಗೆ ಗೋವಾದಲ್ಲಿ ಜರಗಿದ್ದ 15ನೇ ವಿಶ್ವ ಸಾರ್ವಜನಿಕ ಸಂಪರ್ಕ ಮಂಡಳಿ ಸಮ್ಮೇಳನದಲ್ಲಿ ಅಲ್ಲಿನ ಕಲೆ ಮತ್ತು ಸಂಸ್ಕೃತಿ, ಬುಡಕಟ್ಟು ಕಲ್ಯಾಣ ಸಚಿವ ಗೋವಿಂದ ಗವುಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

3 ವರ್ಷಗಳ ಡಿಪ್ಲೊಮಾ  ಪಿಯುಸಿಗೆ ಸಮಾನ :

ಬೆಂಗಳೂರು, ಸೆ. 20: ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‌ ಅನ್ನು ಪಿಯುಸಿ ತತ್ಸಮಾನ ವಿದ್ಯಾರ್ಹತೆ ಎಂದು ಸರಕಾರಿ ನೇಮಕಾತಿಯಲ್ಲಿ ಪರಿಗಣಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಅಂತೆಯೇ,  ಕರ್ನಾಟಕ ರಾಜ್ಯ (ವಿಧಿ ವಿಜ್ಞಾನ ಪ್ರಯೋಗಾಲಯ ಸೇವೆಗಳು)(ನೇಮಕಾತಿ) ನಿಯಮಗಳು 2021 ಗೆ ಅನುಮೋದನೆ ನೀಡಲಾಗಿದೆ.

ಇತರ ನಿರ್ಣಯಗಳು :

  • ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ವಿಧೇಯಕ 2021ಕ್ಕೆ ಒಪ್ಪಿಗೆ
  • ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳು 2021ಕ್ಕೆ ಒಪ್ಪಿಗೆ
  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಹಾಗೂ 17  ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ78 ಕೋ. ರೂ. ವೆಚ್ಚದ ಪರಿಷ್ಕೃತ ಅಂದಾಜು ಪಟ್ಟಿಗೆ ಒಪ್ಪಿಗೆ
  • ಪರಿಶಿಷ್ಟ ಪಂಗಡ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್‌ ಪೂರ್ವ ಮತ್ತು ಅನಂತರದ ವಿದ್ಯಾರ್ಥಿ ನಿಲಯಗಳು ಮತ್ತು ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ49 ಕೋಟಿ ರೂ. ವೆಚ್ಚದಲ್ಲಿ ಆಹಾರ ಸಾಮಗ್ರಿ ಮತ್ತು ಶುಚಿ ಸಂಭ್ರಮ್‌ ಕಿಟ್‌ ವಿತರಣೆಗೆ ಅನುಮೋದನೆ
  • ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಕೊಪ್ಪಳದ ಮುನಿರಾಬಾದ್‌ನಲ್ಲಿ ನಡೆಸುತ್ತಿರುವ ಪದವಿ ಪೂರ್ವ ಕಾಲೇಜು ಕಟ್ಟಡದ ಅವಧಿ 30 ವರ್ಷ ಮುಂದೂಡಲು ಒಪ್ಪಿಗೆ ನೀಡಲಾಯಿತು.
  • ಶುಭ್ರ ಬೆಂಗಳೂರು ಯೋಜನೆ ಅಡಿಯಲ್ಲಿ ಮಲ್ಲತ್‌ಹಳ್ಳಿ ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಯುವ40 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಲಾಯಿತು.
  • ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪ ಚುನಾವಣೆ, ಅಧ್ಯಕ್ಷ, ಉಪಾಧ್ಯಕ್ಷ, ಮೇಯರ್‌, ಉಪ ಮೇಯರ್‌ ಚುನಾವಣೆಗಳನ್ನು ನಡೆಸಲು ಸಂಪುಟ ಒಪ್ಪಿಗೆ ನೀಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next