Advertisement

ಶಾಲಾರಂಭವಾದರೂ ವಿದ್ಯಾರ್ಥಿಗಳಿಗೆ ಸಾಕಷ್ಟು ಬಸ್‌ಗಳಿಲ್ಲದೆ ಸಂಕಟ

07:46 PM Sep 20, 2021 | Team Udayavani |

ಮಹಾನಗರ: ದಕ್ಷಿಣ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿರುವ ಕಾರಣ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟನೆ ಕಂಡು ಬರುತ್ತಿದೆ. ಮುಖ್ಯವಾಗಿ ಮಂಗಳೂರು -ತಲಪಾಡಿ ಮಾರ್ಗದಲ್ಲಿ ಸರಕಾರಿ ಬಸ್‌ಗಳ ಸಂಚಾರ ಇಲ್ಲದಿರುವ ಕಾರಣ ಪೀಕ್‌ ಅವರ್‌ಗಳಲ್ಲಿ ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.

Advertisement

ಈ ಮಾರ್ಗದಲ್ಲಿ ಮಂಗಳೂರು- ಕಾಸರಗೋಡು ಮಧ್ಯೆ 3 ನಿಮಿಷಕ್ಕೊಂದರಂತೆ ಸಂಚರಿಸುತ್ತಿದ್ದ ಕರ್ನಾಟಕ ಮತ್ತು ಕೇರಳ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಕರ್ನಾಟಕ ಸರಕಾರವು ಕರ್ನಾಟಕ-ಕೇರಳ ಮಧ್ಯೆ ಅಂತಾರಾಜ್ಯ ಬಸ್‌ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಈಗ ಕಾರ್ಯಾಚರಣೆ ನಡೆಸುತ್ತಿಲ್ಲ. ಜೂನ್‌, ಜುಲೈ ತಿಂಗಳಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕೆಲವು ಬಸ್‌ಗಳನ್ನು ಮಂಗಳೂರು- ತಲಪಾಡಿ ಮಧ್ಯೆ ಕಾರ್ಯಾಚರಣೆಗೆ ಇಳಿಸಿದ್ದರೂ ಕೇರಳದಲ್ಲಿ ಕೊರೊನಾ ಜಾಸ್ತಿಯಾಗಿ ಕ್ರಮೇಣ ನಿಫಾ ಸೋಂಕಿನ ಭೀತಿ ಎದುರಾದಾಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಹಾಗಾಗಿ ಈಗ ಮಂಗಳೂರು- ತಲಪಾಡಿ ಮಧ್ಯೆ ಖಾಸಗಿ ಸಿಟಿ ಬಸ್‌ಗಳು ಮಾತ್ರ ಓಡಾಡುತ್ತಿವೆ.

ಮಂಗಳೂರು – ತಲಪಾಡಿ ಮಧ್ಯೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿಯ 2 ನರ್ಮ್ ಬಸ್‌ಗಳ ಕಾರ್ಯಾ ಚರಣೆಯನ್ನು 2 ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಆ ಬಳಿಕ ಕೆ.ಸಿ.ರೋಡ್‌- ಕಿನ್ಯಾ ಪ್ರದೇಶಕ್ಕೆ ಎರಡು ನರ್ಮ್ ಬಸ್‌ಗಳು ಓಡಾಡುತ್ತಿದ್ದರೂ ಈಗ ಕರ್ಫ್ಯೂ ಬಳಿಕ ಅವುಗಳ ಸಂಚಾರ ಪುನರಾರಂಭ ಆಗಿಲ್ಲ. ಇದೀಗ ಸರಿಸುಮಾರು 5 ನಿಮಿಷಕ್ಕೆ ಒಂದರಂತೆ ಕಾರ್ಯಾಚರಿಸುವ ಖಾಸಗಿ ಸಿಟಿ ಬಸ್‌ಗಳು ಮಾತ್ರ ಪ್ರಯಾಣಿಕರಿಗೆ ಆಸರೆ.

ಸೆ. 1ರಿಂದ ದ್ವಿತೀಯ ಪಿಯುಸಿ, ಬಳಿಕ 8, 9, 10ನೇ ತರಗತಿ, ಪ್ರಥಮ ಪಿಯುಸಿ ಮತ್ತು ಪದವಿ ತರಗತಿಗಳು ಆರಂಭವಾಗಿದ್ದು, ಇದೀಗ ಸೆ. 20ರಿಂದ 6, 7ನೇ ತರಗತಿಯ ಭೌತಿಕ ತರಗತಿಗಳು ಆರಂಭವಾಗಿವೆ. ಆನ್‌ಲೈನ್‌ ತರಗತಿಗೆ ಅವಕಾಶವಿದ್ದರೂ ಶೇ. 60ರಷ್ಟು ವಿದ್ಯಾರ್ಥಿಗಳು ತರಗತಿಗಳು ಆರಂಭವಾದಂದಿನಿಂದಲೂ ಶಾಲಾ- ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಈಗ ಈ ಪ್ರಮಾಣ ಶೇ. 80ಕ್ಕೆ ತಲುಪಿದೆ.

ವಾರಾಂತ್ಯ ಕರ್ಫ್ಯೂ ರದ್ದುಗೊಂಡಿದ್ದು, ಪ್ರಸ್ತುತ ನೈಟ್‌ ಕರ್ಫ್ಯೂ ಮಾತ್ರ ಜಾರಿಯಲ್ಲಿದೆ. ಇದರಿಂದಾಗಿ ವ್ಯಾಪಾರ ವ್ಯವಹಾರ ಚಟುವಟಿಕೆಗಳೂ ಪುನರಾರಂಭಗೊಂಡಿದ್ದು, ಉದ್ಯೋಗಕ್ಕೆ ತೆರಳುವವರ ಸಂಖ್ಯೆಯೂ ಏರಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ತನಕ ಮತ್ತು ಮಧ್ಯಾಹ್ನ ಬಳಿಕ ಎಂಬುದಾಗಿ ಎರಡು ಪಾಳಿಗಳಲ್ಲಿ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಿದ್ದರಿಂದ ಬೆಳಗ್ಗೆ ಮತ್ತು ಸಂಜೆ ಮಾತ್ರವಲ್ಲ, ಇಡೀ ದಿನ ಬಸ್‌ಗಳಿಗೆ ಪ್ರಯಾಣಿಕರು ಲಭಿಸುವಂತಾಗಿದೆ. ಮಂಗಳೂರು- ತಲಪಾಡಿ ಮಧ್ಯೆ ಬಸ್‌ಗಳಲ್ಲಿ ಜನ ದಟ್ಟಣೆ ಅತ್ಯಧಿಕವಾಗಿದೆ. ಹಾಗಾಗಿ ಈ ಮಾರ್ಗದಲ್ಲಿ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನಾದರೂ ಪುನರಾರಂಭಿಸ ಬೇಕೆಂಬುದು ಸಾರ್ವಜನಿಕರ ಬೇಡಿಕೆ.

Advertisement

ಅಂಕಿ ಅಂಶಗಳ ಪ್ರಕಾರ ಮಂಗಳೂರಿನಲ್ಲಿ 325 ಖಾಸಗಿ ಸಿಟಿ ಬಸ್‌ಗಳ ಪೈಕಿ 275 ಬಸ್‌ಗಳು (ಶೇ. 84) ಹಾಗೂ ಕೆಎಸ್‌ಆರ್‌ಟಿಸಿಯ 32 ನರ್ಮ್ ಬಸ್‌ಗಳ ಪೈಕಿ 20 ಬಸ್‌ಗಳು ಪ್ರಸ್ತುತ ಸಂಚಾರ ನಡೆಸುತ್ತಿವೆ. ಖಾಸಗಿ ಸಿಟಿ ಬಸ್‌ಗಳು ಮಂಗಳೂರಿನ ಬಹುತೇಕ ಎಲ್ಲ ಮಾರ್ಗಗಳಲ್ಲಿ ಓಡಾಟ ನಡೆಸುತ್ತಿವೆ. ಸರಕಾರದ ನರ್ಮ್ ಬಸ್‌ಗಳು ಕೆಲವೇ ಮಾರ್ಗಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಇವೆ.

ಪ್ರಸ್ತುತ ಶೇ. 80- 84ರಷ್ಟು ಖಾಸಗಿ ಸಿಟಿ ಬಸ್‌ಗಳು ಕಾರ್ಯಾಚರಿಸುತ್ತಿವೆ. ಈಗ ಬಸ್‌ಗಳಿಗೆ ಆಗುತ್ತಿರುವ ಕಲೆಕ್ಷನ್‌ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ನೈಟ್‌ ಕರ್ಫ್ಯೂ ಹಿಂಪಡೆದ ಬಳಿಕ ಹಾಗೂ ಶಾಲಾ, ಕಾಲೇಜುಗಳ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡ ಬಳಿಕ ಎಲ್ಲ ಬಸ್‌ಗಳನ್ನು ರಸ್ತೆಗಿಳಿಸಲು ಕ್ರಮ ವಹಿಸಲಾಗುವುದು.

-ಜಯಶೀಲ ಅಡ್ಯಂತಾಯ,ಅಧ್ಯಕ್ಷರು, ದ.ಕ. ಬಸ್‌ ಮಾಲಕರ ಸಂಘ

ಕೆ.ಎಸ್‌.ಆರ್‌.ಟಿ.ಸಿ. ಎಸಿ ಬಸ್‌ಗಳನ್ನು ಹಾಗೂ ಮಂಗಳೂರು- ಕಾಸರಗೋಡು ಮಾರ್ಗದ ಬಸ್‌ಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಬಸ್‌ಗಳು ಈಗ ಕಾರ್ಯಾಚರಣೆ ನಡೆಸುತ್ತಿವೆ. ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ಇದೆ. ಆದರೆ ಮಂಗಳೂರು- ತಲಪಾಡಿ ಮಧ್ಯೆ ಬಸ್‌ ಸಂಚಾರ ಪುನರಾಂಭಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೈಗೊಳ್ಳ ಬೇಕಾಗಿದೆ. -ಅರುಣ್‌ ಕುಮಾರ್‌, ವಿಭಾಗ ನಿಯಂತ್ರಣ ಅಧಿಕಾರಿ,ಕೆಎಸ್‌ಆರ್‌ಟಿಸಿ, ಮಂಗಳೂರು. 

 

-ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next