ಹೊಸದಿಲ್ಲಿ: ಭಾರತದ ಹೊಸ ಅಧಿಕಾರದ ಗದ್ದುಗೆ ರಾಷ್ಟ್ರದ ಅಭಿವೃದ್ಧಿಗೆ ಮಾತ್ರವಲ್ಲದೆ ಇಡೀ ಪ್ರಪಂಚದ ಅಭಿವೃದ್ಧಿಗೆ ನಾಂದಿ ಹಾಡುತ್ತದೆ ಎಂದು ಹೊಸ ಸಂಸತ್ ಭವನದಲ್ಲಿ ಭಾನುವಾರ ತಮ್ಮ ಚೊಚ್ಚಲ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೂತನ ಸಂಸತ್ ಭವನವನ್ನು ಲೋಕಾಪರ್ಣೆಗೊಳಿಸಿದ ಬಳಿಕ ಅವರು ಮಾತನಾಡಿದರು.
ಹೊಸ ಸಂಸತ್ ಭವನವು ಭಾರತವು ತನ್ನ ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದು ಹಾಕುತ್ತಿದೆ. ನಿಜವಾದ ‘ಆತ್ಮನಿರ್ಭರ್’ (ಸ್ವಾವಲಂಬಿ) ಆಗುತ್ತಿದೆ ಎಂದು ಸೂಚಿಸುತ್ತದೆ. “ಹೊಸ ಸಂಸತ್ ಕಟ್ಟಡ… ವಿಕ್ಷಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಕಡೆಗೆ ನಮ್ಮ ಪ್ರಯಾಣಕ್ಕೆ ಸಾಕ್ಷಿಯಾಗಲಿದೆ” ಎಂದು ಅವರು ಹೊಸ ಲೋಕಸಭೆಯಲ್ಲಿ ಹೇಳಿದರು.
ಇಂದು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸ್ಮರಣಾರ್ಥ ಅಂಚೆಚೀಟಿ ಮತ್ತು 75 ರೂಪಾಯಿ ನಾಣ್ಯವನ್ನು ಅನಾವರಣಗೊಳಿಸಿದರು. ಹೊಸ ಸಂಸತ್ತಿನ ಕಟ್ಟಡದಲ್ಲಿ ತಮ್ಮ ಮೊದಲ ಭಾಷಣದಲ್ಲಿ, ಹೊಸ ಸಂಸತ್ತಿನ ಉದ್ಘಾಟನೆಯ ದಿನವನ್ನು ಅಮರಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ರಾಷ್ಟ್ರದ ಅಭಿವೃದ್ಧಿಯ ಪಯಣದಲ್ಲಿ ಕೆಲವು ಕ್ಷಣಗಳು ಅಮರವಾಗುತ್ತವೆ. ಮೇ 28 ರ ಮಹತ್ವವು ಆ ದಿನಗಳಲ್ಲಿ ಒಂದಾಗಿದೆ ಎಂದು ಅವರು ಒತ್ತಿ ಹೇಳಿದರು.
Related Articles
ಇದನ್ನೂ ಓದಿ:IPL ನಲ್ಲಿ ಭರ್ಜರಿ ಪ್ರದರ್ಶನ: ರಾಷ್ಟ್ರೀಯ ತಂಡದ ಕರೆ ಪಡೆದ ಯುವ ಬ್ಯಾಟರ್ Yashasvi Jaiswal
ಪ್ರಧಾನಿ ಮೋದಿ ಅವರು ಹೊಸ ಸಂಸತ್ತನ್ನು ಕೇವಲ ಭೌತಿಕ ರಚನೆಗಿಂತ ಹೆಚ್ಚು ಎಂದು ಬಣ್ಣಿಸಿದರು, ಇದು ಭಾರತದ 1.4 ಶತಕೋಟಿ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಸಂಕೇತಿಸುತ್ತದೆ ಎಂದು ಹೇಳಿದ್ದಾರೆ. ಇದು ಭಾರತದ ಬದ್ಧತೆಯ ಬಗ್ಗೆ ಜಗತ್ತಿಗೆ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು.