Advertisement

ಸಿಬ್ಬಂದಿ ಕೊರತೆ ನೀಗಿಸಲು ಹೊಸ ಕಸರತ್ತು

04:05 PM Sep 26, 2022 | Team Udayavani |

ಹುಬ್ಬಳ್ಳಿ: ಹೆಚ್ಚುತ್ತಿರುವ ಚಾಲನಾ ಸಿಬ್ಬಂದಿ ಕೊರತೆ ಸರಿದೂಗಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತೂಂದು ಕಸರತ್ತಿಗೆ ಮುಂದಾಗಿದೆ. ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ಶಿಸ್ತು ಹಾಗೂ ಅಪಘಾತ ಪ್ರಕರಣದಲ್ಲಿನ ಅಮಾನತು ಅವಧಿಯನ್ನು ಕೇವಲ 30 ದಿನಗಳಿಗೆ ಕಡಿತಗೊಳಿಸಿದ್ದು, ಮನೆಯಲ್ಲಿ ಕೂಡಿಸಿ ಅರ್ಧ ವೇತನ ನೀಡುವ ಬದಲಿಗೆ ಮಾನವ ಸಂಪನ್ಮೂಲ ಸದ್ಬಳಕೆಗೆ ಮುಂದಾಗಿದೆ.

Advertisement

ಕೋವಿಡ್‌ ನಂತರದಲ್ಲಿ ಸಾರಿಗೆ ಸಂಸ್ಥೆಗಳು ಆರ್ಥಿಕ ನಷ್ಟದ ಜತೆಗೆ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಅದರಲ್ಲಿ ಪ್ರಮುಖವಾಗಿ ಚಾಲಕ, ನಿರ್ವಾಹಕ ಸಿಬ್ಬಂದಿ ಹೆಚ್ಚುತ್ತಿದೆ. ನಷ್ಟದ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿಬ್ಬಂದಿ ನೇಮಕಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. ಪ್ರತಿ ತಿಂಗಳು ಸರಾಸರಿ ಸುಮಾರು 35-40 ನಿರ್ವಾಹಕ, ಚಾಲಕ ಸಿಬ್ಬಂದಿ ನಿವೃತ್ತಿಯಾಗುತ್ತಿದ್ದಾರೆ. ಅಲ್ಲದೆ ಬಡ್ತಿ ಪಡೆದು ಪದೋನ್ನತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಕೆಳ ಸ್ತರದ ಹುದ್ದೆಗಳ ಕೊರತೆ ಹೆಚ್ಚಾಗುತ್ತಿರುವುದು ಸಾರಿಗೆ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕೊರತೆ ನೀಗಿಲು ಹಲವು ನಿಯಮಗಳನ್ನು ಮಾರ್ಪಾಡು ಮಾಡಿ ಇರುವ ಸಿಬ್ಬಂದಿಯನ್ನೇ ಸದ್ಬಳಕೆ ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಈ ನಿಟ್ಟಿನಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ವಿವಿಧ ಪ್ರಕರಣಗಳಲ್ಲಿ ಅಮಾನತು ಆದೇಶಗಳನ್ನು ಒಂದು ತಿಂಗಳಿಗೆ ಇಳಿಸಿದೆ. ಇದರಿಂದ ಒಂದಿಷ್ಟಾದರೂ ಸಿಬ್ಬಂದಿ ಕೊರತೆ ನೀಗಲಿದೆ ಎನ್ನುವ ನಿರೀಕ್ಷೆಯಿದೆ.

33-35 ಸಿಬ್ಬಂದಿ ಅಮಾನತು: ಪ್ರತಿ ತಿಂಗಳು ವಾಯವ್ಯ ಸಾರಿಗೆ ಸಂಸ್ಥೆ ಸರಾಸರಿಯಾಗಿ 33-35 ಸಿಬ್ಬಂದಿ ಅಮಾನತ್ತಿನ ಪ್ರಮಾಣವಿದೆ. ಮಾರ್ಗ ತನಿಖೆಯಲ್ಲಿ ಹೆಚ್ಚುವರಿ ಹಣ, ದುರ್ನಡತೆ, ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುವುದು, ನಿಯಮಾವಳಿ ಗಂಭೀರ ಉಲ್ಲಂಘನೆ, ಹಣ ಪಡೆದು ಟಿಕೆಟ್‌ ನೀಡದಿರುವುದು ಸೇರಿದಂತೆ ತಿಂಗಳಿಗೆ ಸರಿಸುಮಾರು 28-30 ಸಿಬ್ಬಂದಿ ಅಮಾನತು ಆಗುತ್ತಾರೆ. ಇದು ಒಂದು ಭಾಗವಾದರೆ. ಅಪಘಾತ ಪ್ರಕರಣಗಳಲ್ಲಿ ಸರಿಸುಮಾರು 5-7 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗುತ್ತದೆ. ಇದರಿಂದಾಗಿ ಪ್ರತಿ ತಿಂಗಳು ಕನಿಷ್ಠ 33-35 ಸಿಬ್ಬಂದಿ ಕರ್ತವ್ಯದಿಂದ ದೂರ ಉಳಿಯಬೇಕಾಗುತ್ತಿದೆ. ಹೀಗಾಗಿ ಉಂಟಾಗುತ್ತಿರುವ ಸಿಬ್ಬಂದಿ ಕೊರತೆ ಸರಿದೂಗಿಸುವ ಕಾರಣದಿಂದ 2023 ಮಾರ್ಚ್‌ ಅಂತ್ಯದವರೆಗೆ ಚಾಲ್ತಿಯಿರುವಂತೆ ಆದೇಶ ಹೊರಡಿಸಲಾಗಿದೆ.

ಸಂಸ್ಥೆ ನಿಯಮಾವಳಿ ಪ್ರಕಾರ ಇಂತಹ ಪ್ರಕರಣಗಳಲ್ಲಿ ಭಾಗಿಯಾದರೆ 6 ತಿಂಗಳವರೆಗೆ ಅಮಾನತ್ತಿನಲ್ಲಿಡಲಾಗುತ್ತಿತ್ತು. ಆದರೆ ಕೋವಿಡ್‌ ನಂತರದಲ್ಲಿ ಮೂರು ತಿಂಗಳಿಗೆ ಇರಿಸಲಾಯಿತು. ಇದರಿಂದಾಗಿ ಸುಮಾರು 90 ಸಿಬ್ಬಂದಿಯ ಸೇವೆ ಸಂಸ್ಥೆಗೆ ದೊರೆಯುತ್ತಿರಲಿಲ್ಲ. ಇದರೊಂದಿಗೆ ತಿಂಗಳಿಂದ ತಿಂಗಳಿಗೆ ನಿವೃತ್ತಿ ಹೆಚ್ಚುತ್ತಿರುವ ಕಾರಣ ಕೊರತೆ ದೊಡ್ಡದಾಗುತ್ತಿದೆ. ಇದರಿಂದ ಸಮರ್ಪಕ ಸಾರಿಗೆ ಸೇವೆ ನೀಡಲು ಕಷ್ಟಸಾಧ್ಯ. ಹೀಗಾಗಿ ಈ ಅಮಾನತು ಆದೇಶವನ್ನು ಒಂದು ತಿಂಗಳಿಗೆ ಇಳಿಸುವುದರಿಂದ ಗರಿಷ್ಠ ಪ್ರಮಾಣದಲ್ಲಿ ಸಿಬ್ಬಂದಿಯ ಸೇವೆ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶವನ್ನು ಅಧಿಕಾರಿಗಳು ಹೊಂದಿದ್ದಾರೆ. ಸಂಸ್ಥೆಗೆ ಇದು ಉಪಯುಕ್ತವಾದರೆ ಸಿಬ್ಬಂದಿಗೂ ಕೂಡ ಇದರಿಂದ ಅನುಕೂಲವಾಗಲಿದೆ.

ತಗ್ಗಲಿದೆ ಆರ್ಥಿಕ ಹೊರೆ: ಮಾಡಿರುವ ತಪ್ಪಿಗೆ ಶಿಕ್ಷೆ ಅನಿವಾರ್ಯವಾದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇದನ್ನು ಪಾಲನೆ ಕಷ್ಟಸಾಧ್ಯವಾಗಿದೆ. ಆರು ಅಥವಾ ಮೂರು ತಿಂಗಳು ಅಮಾನತು ಮಾಡುವುದರಿಂದ ಈ ಅವಧಿಯಲ್ಲಿ ಸಿಬ್ಬಂದಿಗೆ ಅರ್ಧ ವೇತನ ಪಾವತಿಸಬೇಕು. ಮಾನವ ಸಂಪನ್ಮೂಲ ಸದ್ಬಳಕೆಯಾಗದೆ ಅರ್ಧ ವೇತನ ಪಾವತಿ ಸಂಸ್ಥೆ ಆರ್ಥಿಕ ಹೊರೆಯೂ ಹೌದು. ಸಂಸ್ಥೆ ಅಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಕೋರ್ಟ್‌ಗಳಲ್ಲಿ ಚಾಲೇಂಜ್‌ ಮಾಡಿ ಆ ಅವಧಿಯ ಪೂರ್ಣ ವೇತನವನ್ನು ಬಡ್ಡಿ ಸಮೇತ ಪಡೆಯುತ್ತಿರುವ ನಿದರ್ಶನಗಳು ಕೂಡ ಇವೆ. ಇದರಿಂದ ಕೆಲಸ ಮಾಡದ ಸಮಯಕ್ಕೆ ಪೂರ್ಣ ವೇತನ ಇದರಿಂದಿಗೆ ಬಡ್ಡಿ ಪಾವತಿ ಮಾಡುವುದು ಸಂಸ್ಥೆಗೆ ಆರ್ಥಿಕ ನಷ್ಟದ ಜತೆಗೆ ಹೊರೆಯೂ ಹೌದು. ಹೀಗಾಗಿ ಒಂದು ತಿಂಗಳಿಗೆ ಅಮಾನತು ಆದೇಶ ನಿಗದಿಗೊಳಿಸುವುದರಿಂದ ಕೊರತೆಯಿರುವ ಸಂದರ್ಭದಲ್ಲಿ ಸಿಬ್ಬಂದಿ ಸೇವೆ ದೊರೆಯಲಿದ್ದು, ಇದರೊಂದಿಗೆ ಆರ್ಥಿಕ ಹೊರೆ ತಗ್ಗಲಿದೆ.

Advertisement

ಇತರೆ ಕಸರತ್ತು: ಖಾಲಿಯಾಗುತ್ತಿರುವ ಹುದ್ದೆಗಳಿಗೆ ಪ್ರತಿಯಾಗಿ ಇರುವ ಸಿಬ್ಬಂದಿಯನ್ನು ಗರಿಷ್ಠ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಲು ಹಲವು ಕಸರತ್ತು ನಡೆಸಿದೆ. ಆರೋಗ್ಯಯುತ ನಿವೃತ್ತ ಚಾಲಕರನ್ನು ಸೇವೆಗೆ ಬಳಸಿಕೊಳ್ಳುವುದು, ನೌಕರರಿಗೆ ಪ್ರೇರಣೆ ನೀಡಲು ಬಾಕಿ ಉಳಿದಿದ್ದ 5869 ಶಿಸ್ತು ಪ್ರಕರಣಗಳಿಗೆ ಕನಿಷ್ಠ ದಂಡ ವಿಧಿಸಿ 15 ದಿನದೊಳಗೆ ಏಕಕಾಲಕ್ಕೆ ಇತ್ಯರ್ಥ ಪಡಿಸಲಾಯಿತು. ಮುಂದೆ ದಾಖಲಾಗುವ ಪ್ರಕರಣಗಳನ್ನು ಕೂಡ 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಇತ್ಯರ್ಥ ಪಡಿಸುವುದು. ಅರ್ಹ ನೌಕರರಿಗೆ ಬೇಡಿಕೆ ಸಲ್ಲಿಸಿದ ಸ್ಥಳಗಳಿಗೆ ಖಾಲಿಯಿರುವ ಹುದ್ದೆಗಳಿಗೆ ಪೂರಕವಾಗಿ ವರ್ಗಾವಣೆ. ವಿಶೇಷ ಕರ್ತವ್ಯ ಸಂದರ್ಭದಲ್ಲಿ ಪ್ರೋತ್ಸಹ ಧನ, ನಿರ್ವಾಹಕ ರಹಿತ ಸಾರಿಗೆ ಸೇವೆ ಸೇರಿದಂತೆ ಹಲವು ಕಸರತ್ತುಗಳನ್ನು ನಡೆಸಿದೆ.

ಮೂರು ತಿಂಗಳು ಕಾಲ ಅಮಾನತು ಮಾಡುವುದರಿಂದ ಬಹಳ ಕಷ್ಟವಾಗುತ್ತಿದೆ. ಈ ಅವಧಿಯನ್ನು ಕಡಿತಗೊಳಿಸುವಂತೆ ನೌಕರರಿಂದ ಮನವಿ ಮಾಡಿದ್ದರು. ಅವರ ಮನವಿ ಪರಿಶೀಲಿಸಿ ಅಮಾನತು ಅವಧಿಯನ್ನು ಒಂದು ತಿಂಗಳಿಗೆ ನಿಗದಿಗೊಳಿಸಲಾಗಿದೆ. ಇದರಿಂದ ನೌಕರರ ಕೊರತೆ ನೀಗಿಸಲು ಸಾಧ್ಯವಾಗಲಿದ್ದು, ನೌಕರರು ಕೂಡ ಅನುಕೂಲವಾಗಲಿದೆ. ಇಂತಹ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಸದ್ಬಳಕೆಗೆ ಅನುಕೂಲವಾಗಲಿದೆ. –ಎಸ್‌.ಭರತ, ವ್ಯವಸ್ಥಾಪಕ ನಿರ್ದೇಶಕರು, ವಾಕರಸಾ ಸಂಸ್ಥೆ

-ಹೇಮರಡ್ಡಿ ಸೈದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next