Advertisement

SSLC ಕನ್ನಡ ಪ್ರಶ್ನೆಪತ್ರಿಕೆ ಜಾಲತಾಣದಲ್ಲಿ ಸೋರಿಕೆ?

11:40 PM Mar 25, 2024 | Team Udayavani |

ಮುದಗಲ್ಲ(ರಾಯಚೂರು): ನಗರದಲ್ಲಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ ಪರೀಕ್ಷೆ ಆರಂಭವಾಗಿ ಎರಡು ಗಂಟೆಗಳೊಳಗೆ ಪ್ರಶ್ನೆ ಪತ್ರಿಕೆಯ 6 ಪುಟಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಮಾಧ್ಯಮದವರು ಮಾಹಿತಿಗಾಗಿ ಧಾವಿಸುತ್ತಿದ್ದಂತೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ನಿಷೇಧವಿದೆ ಎಂದು ಹೇಳಲಾಯಿತು.

Advertisement

ಪರೀಕ್ಷೆ ಮುಗಿಯುವವರೆಗೆ ಕಾದು ವಿದ್ಯಾರ್ಥಿನಿಯರ ಪ್ರಶ್ನೆ ಪತ್ರಿಕೆ ನೋಡುತ್ತಿದ್ದಂತೆ ಎಲ್ಲವೂ ಬೆಳಕಿಗೆ ಬಂದಿತ್ತು. ಆದರೆ ಯಾವ ಕೇಂದ್ರದಿಂದ ಎಂದು ಖಚಿತಪಡಿಸಿಕೊಳ್ಳಲು ಮುಂದಾದಾಗ ಎರಡೂ ಕೇಂದ್ರಗಳ ಮುಖ್ಯಸ್ಥರು, ಸಿಬಂದಿ ವರ್ಗ ಸಮರ್ಪಕ ಮಾಹಿತಿ ನೀಡದೆ ಇರುವುದು ಮತ್ತಷ್ಟು ಅನುಮಾನಕ್ಕೆಡೆ ಮಾಡಿದೆ. ಕಳೆದ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಬಾರಿಯೂ ಮುದಗಲ್ಲ ಪಟ್ಟಣದಲ್ಲಿಯೇ ಜಾಲತಾಣದಲ್ಲಿ ಪ್ರಶ್ನೆಪತ್ರಿಕೆ ಹರಿದಾಡುತ್ತಿದೆ.

ತಾಲೂಕಿನಲ್ಲಿ ಯಾವುದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಅದು ಕೇವಲ ಊಹಾಪೋಹವಷ್ಟೇ. ಕಳೆದ ಬಾರಿ ಕೂಡ ಮುದಗಲ್ಲಿನಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತಾದರೂ ಬಳಿಕ ತನಿಖೆ ನಡೆಸಿದಾಗ ಅನ್ಯ ಜಿಲ್ಲೆಯಲ್ಲಿ ಸೋರಿಕೆಯಾಗಿರುವುದು ತಿಳಿದು ಬಂದಿತ್ತು. ಇಲ್ಲಿಯವರೆಗೆ ಅಂತಹ ಯಾವುದೇ ಪ್ರಕರಣಗಳು ನಮ್ಮ ತಾಲೂಕಿನಲ್ಲಿ ನಡೆದಿಲ್ಲ.
-ಹುಂಬಣ್ಣ ರಾಠೊಡ,
ಕ್ಷೇತ್ರ ಶಿಕ್ಷಣಾಧಿ ಕಾರಿ, ಲಿಂಗಸುಗೂರು

ಯಾದಗಿರಿ: ಪರೀಕ್ಷೆ ಬರೆದ ತಾಯಿ-ಮಗ
ಯಾದಗಿರಿ: ಒಂದೇ ಕೇಂದ್ರದಲ್ಲಿ ತಾಯಿ-ಮಗ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಗಂಗಮ್ಮ (32) ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ಬರೆದು ಗಮನ ಸೆಳೆದಿದ್ದಾರೆ.

ಪರೀಕ್ಷೆಗೆ ಪಿಕಪ್‌ನಲ್ಲಿ ಬಂದ ವಿದ್ಯಾರ್ಥಿಗಳು!
ರಿಪ್ಪನ್‌ಪೇಟೆ: ಎಸೆಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಪಿಕಪ್‌ ವಾಹನದಲ್ಲಿ ಬಂದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಸರಕಾರಿ ಪಪೂ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದು, ಇದರ ವ್ಯಾಪ್ತಿಗೆ ಆರಸಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಚಿಕ್ಕಜೇನಿ ಸರಕಾರಿ ಪ್ರೌಢಶಾಲೆಗಳು ಒಳಪಡುತ್ತಿವೆ. ಖಾಸಗಿಯಾಗಿ ಶ್ರೀ ಬಸವೇಶ್ವರ, ಶಾರದಾ ರಾಮಕೃಷ್ಣ ಮೇರಿಮಾತಾ ಮಲೆನಾಡು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರಬೇಕಾಗಿತ್ತು. ವಿದ್ಯಾರ್ಥಿಗಳಿಗೆ ಸರಕಾರಿ ಬಸ್‌ ವ್ಯವಸ್ಥೆಯೊಂದಿಗೆ ಉಚಿತ ಬಸ್‌ ಸಂಚಾರ ಕಲ್ಪಿಸಲಾಗಿದ್ದರೂ ಹೊಸನಗರ ತಾಲೂಕಿನ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ಸಿಸಿ ಕೆಮರಾ ದಿಕ್ಕು ಬದಲಿಸಿದ ವಿದ್ಯಾರ್ಥಿಗಳು
ವಾಡಿ: ಎಸೆಸೆಲ್ಸಿ ಪರೀಕ್ಷೆ ಕೇಂದ್ರದ ಕೊಠಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾಗಳ ದಿಕ್ಕು ಬದಲಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಎಜುಕೇಷನ್‌ ಹಬ್‌ ಪ್ರದೇಶದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸೆಸೆಲ್ಸಿ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಆರಂಭಕ್ಕೂ ಮೊದಲು ಕೊಠಡಿ ಪ್ರವೇಶಿಸಿದ ವಿದ್ಯಾರ್ಥಿಗಳು ಮೂರು ಕೋಣಿಗಳ ಕೆಮರಾಗಳ ದಿಕ್ಕು ಬದಲಿಸಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ಕೇಂದ್ರದ ಅಧಿಧೀಕ್ಷಕರು ಸಿಸಿ ಕೆಮರಾ ದೃಶ್ಯಗಳು ವೀಕ್ಷಿಸಿದ ಬಳಿಕ ಕೃತ್ಯ ಎಸಗಿದ ವಿದ್ಯಾರ್ಥಿಗಳನ್ನು ಗುರುತಿಸಿದ್ದಾರೆ. ಈ ಕುರಿತು ದೂರು ಸ್ವೀಕರಿಸಿರುವ ವಾಡಿ ಪೊಲೀಸ್‌ ಠಾಣೆ ಪಿಎಸ್‌ಐ ಮಂಜುನಾಥ ರೆಡ್ಡಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಾವೇರಿ ಡಿಸಿ ಕಚೇರಿ ಎದುರು
ಅಣಕು ಪರೀಕ್ಷೆ ಬರೆದ ವಿದ್ಯಾರ್ಥಿ!
ಹಾವೇರಿ: ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯ ದಿಂದಾಗಿ ಎಸೆಸೆಲ್ಸಿ ಪರೀಕ್ಷೆ ಪ್ರವೇಶಪತ್ರ ಬಂದಿಲ್ಲ ಎಂದು ಆರೋಪಿಸಿ, ಪೂರಕ ಪರೀಕ್ಷೆಯಲ್ಲಾದರೂ ಅವಕಾಶ ಕಲ್ಪಿಸುವುದಕ್ಕೆ ಒತ್ತಾಯಿಸಿ ರಾಣಿಬೆನ್ನೂರ ತಾಲೂಕಿನ ಹರನಗಿರಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿ ಅಭಿಷೇಕ ವಿಜಯಕುಮಾರ ಜರಮಲ್ಲ ಅಣಕು ಪರೀಕ್ಷೆ ಬರೆಯುವ ಮೂಲಕ ತನ್ನ ಪೋಷಕರೊಂದಿಗೆ ಸೋಮವಾರ ನಗರದ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾನೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಸರಿಯಾಗಿ ಶಾಲೆಗೆ ಹೋಗುತ್ತಿದ್ದೆ. ಅರ್ಧ ವಾರ್ಷಿಕ ಮೂರು ಕಿರು ಪರೀಕ್ಷೆಗಳನ್ನು ಬರೆದಿದ್ದೇನೆ. ಜನವರಿಯಲ್ಲಿ ಅನಾರೋಗ್ಯದ ಕಾರಣದಿಂದ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದು ಶಾಲೆಗೆ ರಜೆ ಹಾಕಿದ್ದೆ. ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡು ಎಂದು ಧೈರ್ಯ ಹೇಳಿದ್ದ ಗುರುಗಳು ಈಗ ಪ್ರವೇಶ ಪತ್ರ ಬಂದಿಲ್ಲವೆಂದು ಮೋಸ ಮಾಡಿದರು. ದಯವಿಟ್ಟು ಪೂರಕ ಪರೀಕ್ಷೆಯಲ್ಲಾದರೂ ಅವಕಾಶ ಕೊಡಿ ಎಂದು ಅಪರ ಜಿಲ್ಲಾ ಧಿಕಾರಿ ಹಾಗೂ ಡಿಡಿಪಿಐ ಅ ಧಿಕಾರಿಗಳಿಗೆ ಅಭಿಷೇಖ್‌ ಹಾಗೂ ಆತನ ಪೋಷಕರು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿ ಕಾರಿ ವೀರಮಲ್ಲಪ್ಪ ಹಾಗೂ ಡಿಡಿಪಿಐ ಸುರೇಶ ಹುಗ್ಗಿ ಮುಖ್ಯ ಶಿಕ್ಷಕರ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಹಾಗೂ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪರೀಕ್ಷೆ ವೇಳೆ ಅಸ್ವಸ್ಥ: ಓರ್ವ ಸಾವು
ತುಮಕೂರು: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಬ್ಬರು ಅಸ್ವಸ್ಥಗೊಂ ಡಿದ್ದು, ಅವರಲ್ಲಿ ಓರ್ವ ಮೃತಪಟ್ಟಿರುವ ಘಟನೆ ತುರುವೇಕೆರೆಯಲ್ಲಿ ನಡೆದಿದೆ. ಲೋಕ ಮ್ಮನಹಳ್ಳಿ ಗೇಟ್‌ನ ಕಂಚಿರಾಯಸ್ವಾಮಿ ವಸತಿ ಶಾಲೆ ವಿದ್ಯಾರ್ಥಿ ಮೋಹನ್‌ ಕುಮಾರ್‌ ಮೃತ ವಿದ್ಯಾರ್ಥಿ. ಈತ ತುರುವೇಕೆರೆ ಸರಸ್ವತಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಅಸ್ವಸ್ಥಗೊಂಡಿದ್ದು, ಆಸ್ಪತ್ರೆ ದಾರಿ ಮಧ್ಯೆ ಮೃತ ಪಟ್ಟಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ರೋಹಿತ್‌ ಎಂಬಾತನು ಹುಲ್ಲೇಕೆರೆಯ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಅಸ್ವಸ್ಥಗೊಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿ ಅಪಘಾತದಲ್ಲಿ ಸಾವು
ಹೊಳೆಹೊನ್ನೂರು: ಸೋಮವಾರ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿ, ಜಂಬರಘಟ್ಟ ಗ್ರಾಮದ ಉಮ್ಮೆ ಕೂಲ್ಸುಂ (14) ಅಪಘಾತದಲ್ಲಿ ಮೃತಪಟ್ಟ ಘಟನೆ ರವಿವಾರ ಸಂಜೆ ಮೂಡಲವಿಠಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಪರೀಕ್ಷೆಗೆ ಹಾಜರಾಗಲೆಂದು ಗ್ರಾಮದಿಂದ ಶಿವಮೊಗ್ಗಕ್ಕೆ ತೆರಳಲು ಬಸ್‌ ಹತ್ತಲು ರಸ್ತೆ ದಾಟುತ್ತಿದ್ದಾಗ ಚನ್ನಗಿರಿ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಆನಂದಪುರ: ವಿದ್ಯಾರ್ಥಿ ಆತ್ಮಹತ್ಯೆ
ಆನಂದಪುರ: ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ, ಯಡೇಹಳ್ಳಿಯ ಪರಶುರಾಮ (17) ಸೋಮವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನಂದಪುರ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಈತ ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ಮನೆಯ ಹಿಂಬದಿಯಲ್ಲಿ ಸಾವಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next