ಶೃಂಗೇರಿ: ಕಾಶ್ಮೀರದಲ್ಲಿ ಅನಾದಿ ಕಾಲದಿಂದಲೂ ಸರ್ವಜ್ಞ ಪೀಠದಲ್ಲಿ ಶ್ರೀ ಶಾರದೆ ವಿರಾಜಮಾನಳಾಗಿದ್ದಾಳೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಕಾಶ್ಮೀರದ ತಿತ್ವಾಲ್ನಲ್ಲಿ ಶ್ರೀ ಶಾರದಾಂಬಾ ದೇವಾಲಯ ಆವರಣದಲ್ಲಿ ಶ್ರೀ ಶಾರದಾ ಸೇವಾ ಸಮಿತಿಯಿಂದ ಸೋಮವಾರ
ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀ ಶಾರದಾಂಬಾ ದೇಗುಲದ ಕುಂಭಾಭಿಷೇಕ,
ಪ್ರಾಣಪ್ರತಿಷ್ಠೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಿದೆ.
ಕರ್ಮವನ್ನು ನಿಮಿತ್ತ ಮಾತ್ರ ಮಾಡು-ನನ್ನ ಸಂಕಲ್ಪದಂತೆ ಜಗತ್ತಿನಲ್ಲಿ ಎಲ್ಲವೂ ನಡೆಯುತ್ತದೆ ಎಂದು ಗೀತೆಯಲ್ಲಿ ಶ್ರೀಕೃಷ್ಣ ತಿಳಿಸಿದ್ದಾನೆ. ಶ್ರೀ ಶಾರದೆ ತಾನೇ ಸಂಕಲ್ಪ ಮಾಡಿಕೊಂಡು ಸಕಲಗುಣ ಸ್ವರೂಪಿಯಾಗಿ ಪ್ರಕಟವಾಗಿ ನಿರಂತರ ಭಕ್ತರನ್ನು
ಅನುಗ್ರಹಿಸುತ್ತಾಳೆ. ವಿಶ್ವದಲ್ಲಿ ಅನಾದಿ ಕಾಲದಿಂದ ಕಾಶ್ಮೀರ ಹಾಗೂ ಶೃಂಗೇರಿ ಶ್ರೀ ಶಾರದಾ ಪರಮೇಶ್ವರಿಗೆ ಪ್ರಧಾನ ಸ್ಥಾನವಿದೆ.
ಆಕೆ ಸಕಲವನ್ನು ಕರುಣಿಸುವ ಮಮತಾಮಯಿ. ದೇವಿಯ ಸಾನ್ನಿಧ್ಯಕ್ಕೆ ಮೂರ್ತರೂಪದ ಶಕ್ತಿ ಉಂಟಾಗಿದೆ. ವಿಶ್ವದ ಆಸ್ತಿಕ ಬಾಂಧವರು ಇನ್ನು ಈ ದೇವಾಲಯವನ್ನು ದರ್ಶಿಸಿ ಆಶೀರ್ವಾದ ಪಡೆಯುವ ಪರಮಭಾಗ್ಯ ಒದಗಿ ಬಂದಿದೆ ಎಂದರು.
ಸನಾತನ ಶ್ರೇಷ್ಠವಾದ ಧರ್ಮ. ಇದರ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಶ್ರೀ ಶಂಕರ ಭಗವತ್ಪಾದರು ದೂರದೃಷ್ಟಿತ್ವದಿಂದ ದೇಶದಲ್ಲಿ ನಾಲ್ಕು ಪೀಠ ಸ್ಥಾಪಿಸಿದ್ದರು. ಸಣ್ಣ ವಯಸ್ಸಿನಲ್ಲಿಯೇ ಉನ್ನತ ಉದ್ದೇಶವಿರಿಸಿಕೊಂಡು ಸ್ವಹಿತ ಲಾಭವಿಲ್ಲದೆ ಜನಸಾಮಾನ್ಯರ ಶ್ರೇಯಸ್ಸಿಗಾಗಿ ಧರ್ಮದ ಮೌಲ್ಯವನ್ನು ಜಗತ್ತಿಗೆ ಸಾರಿದ ಅವರ ಸಂದೇಶಗಳನ್ನು ನಾವು ಅನುಸರಿಸಬೇಕು. ಶ್ರದ್ಧಾ-ಭಕ್ತಿಯಿಂದ ಲೋಕಗುರು ಶ್ರೀ ಶಂಕರರಿಗೆ ನಿರಂತರವಾಗಿ ಕೃತಜ್ಞತೆಯಿಂದ ಪೂಜಿಸಬೇಕು ಎಂದರು.
Related Articles
ಶ್ರೀಮಠದ ಆಡಳಿತಾಧಿಕಾರಿ ಡಾ|ವಿ.ಆರ್. ಗೌರಿಶಂಕರ್, ಜಗದ್ಗುರುಗಳ ಆಪ್ತ ಸಹಾಯಕರಾದ ಕೃಷ್ಣಮೂರ್ತಿ ಭಟ್, ಶಮಂತ
ಶರ್ಮ, ಸಮಿತಿಯ ರವೀಂದ್ರ ಪಂಡಿತ್, ಮೊಕಾಶಿ, ರವೀಂದ್ರ ಟಿಕ್ಕು, ಮೋತಿಲಾಲ್ ಇದ್ದರು.