Advertisement

ಸಾಗರ ಮಾರಿಕಾಂಬಾ ಜಾತ್ರೆ; ತಾಯಿಯ ಕೃಪೆಗಾಗಿ ಭಕ್ತರ ಆರಾಧನೆ

07:43 PM Feb 07, 2023 | Team Udayavani |

ಸಾಗರ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ನಗರದ ಮಾರಿಕಾಂಬಾ ಜಾತ್ರೆ ಹತ್ತು ಹಲವು ಧಾರ್ಮಿಕ ಆಚರಣೆಗಳನ್ನು ಒಂದಿನಿತೂ ವ್ಯತ್ಯಯಗಳಿಲ್ಲದೆ ನಡೆಸುವ ವ್ಯವಸ್ಥೆ. ಇದರಲ್ಲಿ ಭಕ್ತರು ಇನ್ನಿಲ್ಲದ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಂದೂ ಜನರಲ್ಲಿರುವ ಧಾರ್ಮಿಕ ನಂಬಿಕೆಗಳಿಗೆ ಮಂಗಳವಾರದಿಂದ ಆರಂಭವಾಗಲಿರುವ ಮಾರಿಕಾಂಬಾ ಜಾತ್ರೆ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಒಂಬತ್ತು ದಿನಗಳ ಜಾತ್ರಾ ಅವಧಿಯಲ್ಲಿ ಮೊದಲ ದಿನ ತವರುಮನೆಯಲ್ಲಿ ಹಾಗೂ ಉಳಿದ ಎಂಟು ದಿನ ಗಂಡನ ಮನೆಯಲ್ಲಿ ದೇವಿಯ ದರ್ಶನ ಪಡೆಯಲು ಭಕ್ತರ ಸಾಲು ಸಾಲು ಪ್ರತಿ ದಿನ ನಿರ್ಮಾಣವಾಗುವುದನ್ನು ಊಹಿಸಬಹುದು.

Advertisement

ನಗರದ ಹೃದಯ ಭಾಗದಲ್ಲಿನ ಮಾರಿಕಾಂಬಾ ದೇವಾಲಯಗಳೆರಡರ ಆಜುಬಾಜಲ್ಲಿ ಹೆಚ್ಚು ಸ್ಥಳಾವಕಾಶವಿಲ್ಲ. ಈ ಇಕ್ಕಟ್ಟಿನಲ್ಲಿಯೇ ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿಗಳು ನಡೆಯುವುದು ಕೂಡ ಸಂಪ್ರದಾಯವೇ ಆಗಿದೆ. ಬೇರೆಲ್ಲ ಸಂದರ್ಭಗಳಲ್ಲಿ ಜನ ಈ ಕಿಷ್ಕಿಂಧೆಗೆ ಕಿರಿಕಿರಿಗೊಳ್ಳಬಹುದು, ಆಜುಬಾಜಿನ ಅಂಗಡಿಯವರು ವ್ಯಾಪಾರಕ್ಕೆ ಕಸಿವಿಸಿಯಾಗುವ, ಧಕ್ಕೆಯಾಗುವ ಕುರಿತಾಗಿ ಅಸಮಾಧಾನಗೊಳ್ಳಬಹುದು. ಆದರೆ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಅವರೆಲ್ಲರು ಇವನ್ನೆಲ್ಲ ಮರೆತು ಖುಷಿಯಿಂದ ಪಾಲ್ಗೊಳ್ಳುವಂತಾಗುವುದು ವಿಶೇಷವೇ ಸರಿ.

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಗಾಂಧಿ ಮೈದಾನದಲ್ಲಿ:
ಪ್ರತಿ ಬಾರಿ ಮಾರಿಕಾಂಬಾ ಗಂಡನ ಮನೆ ದೇವಾಲಯದ ಬಲ ಪಕ್ಕದ ರಸ್ತೆಯಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಳೆದ ಬಾರಿ ಇದನ್ನು ಅಶೋಕ ರಸ್ತೆಯ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಇದು ಒಂದು ರೀತಿಯಲ್ಲಿ ಜಾತ್ರೆಯಿಂದ ಹೊರಗೆ ಎಂಬ ಭಾವ ಮೂಡಲು ಕಾರಣವಾಗಿತ್ತು. ಶಾಶ್ವತವಾದ ಛಾವಣಿ ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಾಂಧಿ ಮೈದಾನದಲ್ಲಿ ಈ ವರ್ಷ ಅಮ್ಯೂಸ್‌ಮೆಂಟ್ ಪಾರ್ಕ್ ರೂಪಿಸಲು ಅವಕಾಶವಿಲ್ಲ. ಇದರಿಂದ ಇನ್ನೊಂದು ಅನುಕೂಲ ಏರ್ಪಟ್ಟಿದೆ. ಈ ಬಾರಿಯ ಮಾರಿಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಜಾತ್ರೆಯ ಗೌಜಿನ ಜೊತೆಗೆ ಸಾಂಸ್ಕೃತಿಕ ಕಲರವವೂ ನಡೆಯುವುದರಿಂದ ಹಾಗೂ ಇದರ ಪಕ್ಕದಲ್ಲಿಯೇ ಆಹಾರ ಮೇಳವನ್ನೂ ಹಮ್ಮಿಕೊಂಡಿರುವುದರಿಂದ ಜಾತ್ರೆಗೆ ಹೊಸದಾದ ಮುಖ ಬಂದಂತಾಗಲಿದೆ.

ನೆಹರೂ ಮೈದಾನಕ್ಕೆ ಅಮ್ಯೂಸ್‌ಮೆಂಟ್ ಪಾರ್ಕ್:
ಜಾತ್ರೆಯ ಸಂದರ್ಭದಲ್ಲಿ ಮಾತ್ರ ಗಾಂಧಿ ಮೈದಾನದ ಸ್ವರೂಪವನ್ನೇ ಬದಲಿಸುತ್ತಿದ್ದ ಅಮ್ಯೂಸ್‌ಮೆಂಟ್ ಪಾರ್ಕ್ ಈ ಬಾರಿ ನೆಹರೂ ಮೈದಾನಕ್ಕೆ ಪಲ್ಲಟಗೊಂಡಿದೆ. ಸ್ಥಳಾವಕಾಶದ ದೃಷ್ಟಿಯಿಂದ ಬೃಹತ್ತಾದ ನೆಹರೂ ಮೈದಾನ ಹೆಚ್ಚು ಹೆಚ್ಚು ಮನರಂಜನಾ ಪರಿಕರಗಳನ್ನು ಅಳವಡಿಸುವುದಕ್ಕೆ ತೆರೆದುಕೊಂಡಂತಾಗಿದೆ. ಈ ಮೊದಲು ನೆಹರೂ ಮೈದಾನವೆಂಬುದು ಜಾತ್ರಾ ಸಂದರ್ಭದ ಯಕ್ಷಗಾನ ಪ್ರದರ್ಶನಗಳ ಜಾಗವಾಗಿತ್ತು. ಕಳೆದ ಬಾರಿ ವಾಹನ ನಿಲುಗಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಎಲ್ಲ ಧರ್ಮೀಯರಿಗೂ ಅವಕಾಶ:
ಜಾತ್ರೆಗಳ ಸಂದರ್ಭದಲ್ಲಿ ನಿರ್ದಿಷ್ಟ ಕೋಮಿನ ಜನರ ಅಂಗಡಿ ಮುಗ್ಗಟ್ಟುಗಳಿಗೆ ಅವಕಾಶ ಕೊಡಬಾರದು ಎಂಬ ಕೂಗು ಕೇಳುತ್ತದೆ. ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲೂ ಅಂತದೊಂದು ಹುಯಿಲು ಕೇಳಿಸಿತ್ತು. ಆದರೆ ಮಾರಿಕಾಂಬೆಯನ್ನು ನಗರದ ಗ್ರಾಮ ದೇವತೆಯಾಗಿ ಪರಿಗಣಿಸುವುದರಿಂದ ಇಲ್ಲಿ ಎಲ್ಲ ಧರ್ಮೀಯರೂ ಪಾಲ್ಗೊಳ್ಳುವುದರಿಂದ ಅಂತಹ ಯಾವುದೇ ನಿರ್ಬಂಧಗಳು ಸಮ್ಮತವಲ್ಲ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಈ ಮುನ್ನವೇ ಹೇಳಿದ್ದರು. ಮಾರಿಕಾಂಬಾ ಜಾತ್ರಾ ವ್ಯವಸ್ಥಾಪಕ ಸಮಿತಿ ಕೂಡ ಆ ಮಾತು ಹೇಳಿದೆ. ಹಾಗಾಗಿ ಸಾಗರದ ಮಾರಿಜಾತ್ರೆ ಸರ್ವಜನರ ಜಾತ್ರೆಯಾಗಿ ದಾಖಲಾಗಲಿದೆ.

Advertisement

ಪಾರ್ಕಿಂಗ್ ಸಮಸ್ಯೆಗೆ ಎಲ್ಲಿದೆ ಉತ್ತರ?
ವಾಹನಗಳ ಸಂಖ್ಯೆ ಹಲವು ಪಟ್ಟು ಏರಿರುವುದು ಹಾಗೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಗಳಾದ ಬಸ್ ಸೌಲಭ್ಯ ಕೊರೊನಾ ನಂತರ ಸಾಗರದ ಗ್ರಾಮೀಣ ಭಾಗದಲ್ಲಿ ಸಂಪೂರ್ಣವಾಗಿ ಕುಸಿದಿರುವುದು, ಜಾತ್ರಾ ವಿಶೇಷ ಬಸ್‌ಗಳನ್ನು ಜಾತ್ರೆಗೆ ಮೂರು ದಿನ ಮೊದಲೇ ಹೊರಡಿಸಿ ಜನರಿಗೆ ವಿಶ್ವಾಸ ತರದ ಕೆಲಸ ಆಗದಿರುವುದರಿಂದ ಪ್ರತಿ ದಿನ ಸಂಜೆಯಿಂದ ತಡರಾತ್ರಿಯವರೆಗೆ ಸಾಗರದಲ್ಲಿ ಟ್ರಾಫಿಕ್ ಜ್ಯಾಮ್ ಸಹಜ ಎಂಬಂತಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಪಾರ್ಕಿಂಗ್ ಸಮಸ್ಯೆ ನಮ್ಮದಲ್ಲ ಎಂಬ ಭಾವ ಮಾರಿಕಾಂಬಾ ಜಾತ್ರಾ ವ್ಯವಸ್ಥಾಪಕ ಸಮಿತಿಯಲ್ಲಿದೆ. ನೆಹರೂ ಮೈದಾನ ಪಾರ್ಕಿಂಗ್‌ಗೆ ಲಭ್ಯವಿಲ್ಲ. ನಗರದ ಹೊರಗಡೆಯೇ ವಾಹನ ನಿಲ್ಲಿಸಿ ಜಾತ್ರೆಯೊಳಗೆ ಬರುವವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡುವಂತಾಗಿದ್ದರೆ, ಸಾಗರದ ಎಲ್ಲ ಬಡಾವಣೆಗಳಿಗೆ ನಿರಂತರವಾಗಿ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದರೆ ಸಮಸ್ಯೆಯನ್ನು ಬಗೆಹರಿಸಬಹುದಿತ್ತು ಎಂಬ ಅಭಿಪ್ರಾಯವೂ ಇದೆ.

50 ರೂ. ಷರತ್ತು ಕೆಲಸ ಮಾಡೀತೇ?
ಶಾಸಕ ಹಾಲಪ್ಪ ಅವರ ಒತ್ತಡದಿಂದಾಗಿ ಮಾರಿಕಾಂಬಾ ಜಾತ್ರಾ ಅಮ್ಯೂಸ್‌ಮೆಂಟ್ ಪಾರ್ಕ್‌ನ ಎಲ್ಲ ಆಟಗಳ ಪ್ರವೇಶ ಶುಲ್ಕ ಗರಿಷ್ಠ 50 ರೂ. ಆಗಿರಲಿದೆ. 50 ರೂ.ಗೆ ಹೆಚ್ಚುವರಿಯಾಗಿ ಜಿಎಸ್‌ಟಿ ಸೇರುತ್ತದೆ, ಅದರಿಂದ ಶುಲ್ಕ 70 ರಿಂದ 80 ರೂ. ಆಗಬಹುದು ಎಂಬುದನ್ನು ಖಡಾಖಂಡಿತವಾಗಿ ನಿರಾಕರಿಸಿರುವ ಮಾರಿಕಾಂಬಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಭಟ್, 50 ರೂ.ಗಳ ಒಳಗೇ ಯಾವುದೇ ರೀತಿಯ ತೆರಿಗೆಯಿದ್ದರೂ ಸೇರಿರುತ್ತದೆ. ಯಾವುದೇ ರೀತಿಯಲ್ಲಿ 50 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

– ಮಾ.ವೆಂ.ಸ.ಪ್ರಸಾದ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next