ಉಡುಪಿ : ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವದ ಅಂಗವಾಗಿ ರವಿವಾರ ಚೂರ್ಣೋತ್ಸವ (ಹಗಲು ರಥೋತ್ಸವ) ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.
ಜ. 9ರಂದು ಆರಂಭಗೊಂಡ ವಾರ್ಷಿಕ ಸಪ್ತೋತ್ಸವವು ಚೂರ್ಣೋತ್ಸವದೊಂದಿಗೆ ಸಮಾಪನಗೊಂಡಿತು. ಬೆಳಗ್ಗೆ ಪರ್ಯಾಯ ಶ್ರೀಪಾದರು ಮಹಾಪೂಜೆಯನ್ನು ಮುಗಿಸಿದ ಬಳಿಕ ಚೂರ್ಣೋತ್ಸವ ಆರಂಭಗೊಂಡಿತು. ಬ್ರಹ್ಮರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ಸಾವಿರಾರು ಭಕ್ತರ ಸಮ್ಮುಖ ಪ್ರದಕ್ಷಿಣೆ ಬಂದು ಪಲ್ಲಪೂಜೆ, ವಸಂತಮಹಲ್ನಲ್ಲಿ ಅಷ್ಟಾವಧಾನ, ಓಲಗಮಂಟಪ ಪೂಜೆ ನಡೆಯಿತು.
ಅನಂತರ ಮಧ್ವ ಸರೋವರದಲ್ಲಿ ಉತ್ಸವಮೂರ್ತಿ ಸಹಿತವಾಗಿ ಮಠಾಧೀಶರು ಅವಭೃಥ ಸ್ನಾನ ಮಾಡಿ ಸಪ್ತೋತ್ಸವವನ್ನು ಕೃಷ್ಣಾರ್ಪಣಗೈದರು. ರಥೋತ್ಸವದ ವೇಳೆ ಸಾವಿರಾರು ಭಕ್ತರು ರಥವನ್ನು ಎಳೆದರು. ಉತ್ಸವದಲ್ಲಿ ಪಲಿಮಾರು ಹಿರಿಯ, ಕಿರಿಯ, ಪೇಜಾವರ, ಕಾಣಿಯೂರು, ಅದಮಾರು, ಸೋದೆ, ಶೀರೂರು ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.
ಇದನ್ನೂ ಓದಿ: ಏಕದಿನ ಕ್ರಿಕೆಟ್ ನಲ್ಲಿ ದಾಖಲೆ ಅಂತರದ ಗೆಲುವು; ಭಾರತದ ಹೊಸ ದಾಖಲೆ