Advertisement

ಶ್ರೀಕೃಷ್ಣಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

09:00 PM Oct 16, 2021 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಆಶ್ವೀಜ (ಅಶ್ವಯುಜ) ಮಾಸದ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿವರೆಗೆ ನಡೆಯುವ ಪಶ್ಚಿಮಜಾಗರ ಪೂಜೆ ಶನಿವಾರ ಬೆಳಗ್ಗೆ ಆರಂಭಗೊಂಡಿತು. ಮುಂಜಾವದಲ್ಲಿ ಅಪರೂಪದ ವಾದ್ಯಘೋಷಗಳ ವಾದನ ಬಳಿಕ ಪರ್ಯಾಯ ಶ್ರೀಪಾದರಿಂದ ಪಶ್ಚಿಮ ಜಾಗರ ಪೂಜೆ ನಡೆಯುತ್ತಿದೆ.

Advertisement

ಇದೊಂದು ವಾರ್ಷಿಕ ವಿಶೇಷ ಪೂಜೆ. ಒಂದು ತಿಂಗಳ ಈ ಪೂಜೆ ಮುಗಿದ ಮರುದಿನ ಉತ್ಥಾನದ್ವಾದಶಿಯಂದು ಶ್ರೀಕೃಷ್ಣಮಠದಲ್ಲಿ ಉತ್ಸವಾದಿಗಳು ಆರಂಭವಾಗುವುದು.

ಬೆಳಗ್ಗೆ ಸುಮಾರು 4ರಿಂದ ವಾದ್ಯಘೋಷ ಅನುಕ್ರಮವಾಗಿ ಶಂಖ, ನಗಾರಿ, ಡಮರು, ಡೋಲು ಕೊಂಬು, ಉಡಿಕೆ ವಾದ್ಯ (ಚರ್ಮ ವಾದ್ಯ), ತಾಸೆ, ಸೂರ್ಯವಾದ್ಯ ನಾಗಸ್ವರದೊಂದಿಗೆ, ನಾಗಸ್ವರ ಡೋಲಕ್‌ನೊಂದಿಗೆ, ಚೆಂಡೆ, ಸ್ಯಾಕ್ಸೋಫೋನ್ ವಾದನ ನಡೆಯುತ್ತದೆ. ಈ ವೇಳೆ ಭಾಗವತರು ಪುರಂದರ, ಕನಕ ಮೊದಲಾದ ದಾಸವರೇಣ್ಯರ ಹಾಡುಗಳನ್ನು ಉದಯರಾಗದೊಂದಿಗೆ ಹಾಡುತ್ತಾರೆ. ಪರ್ಯಾಯ ಶ್ರೀಪಾದರು ಸೂರ್ಯೋದಯಕ್ಕೆ ಮುಂಚೆ ಪ್ರಾರ್ಥನೆ ಮಾಡಿ ಕೂರ್ಮಾರತಿಯನ್ನು ಹೊರಗಿನ ಒಂದು ಸುತ್ತು ತಂದು ದೇವರಿಗೆ ಬೆಳಗುತ್ತಾರೆ, ಬಳಿಕ ತುಳಸಿ (ಲಕ್ಷ್ಮೀ ಸನ್ನಿಧಾನ), ಮುಖ್ಯಪ್ರಾಣ, ಮಧ್ವಾಚಾರ್ಯರು, ಗರುಡ ದೇವರಿಗೆ ಬೆಳಗುತ್ತಾರೆ.

ಅನಂತರ ಕಲಾವಿದರು ವಾದ್ಯ ವಾದನವನ್ನು ಜಂಪೆ, ರೂಪಕ, ತ್ರಿಪುಟ, ಆದಿ, ಸಂಕೀರ್ಣ ತಾಳದೊಂದಿಗೆ ನುಡಿಸುತ್ತ ಐದು ಸುತ್ತು ಬರುತ್ತಾರೆ. ಇದೇ ವೇಳೆ ಭಾಗವತರೂ ಹಾಡುಗಳನ್ನು ಹಾಡುತ್ತಿರುತ್ತಾರೆ. ವಿದ್ಯುತ್‌ ಬೆಳಕಿನ ಬದಲು ಸುತ್ತಲೂ ಹಣತೆಗಳು ಬೆಳಕನ್ನು ಹೊರಸೂಸುತ್ತಿರುತ್ತವೆ. ವಿವಿಧ ಬಗೆಯ ವಾದ್ಯಪ್ರಕಾರಗಳು, ಹಾಡುಗಳು, ಹಣತೆಗಳ ಬೆಳಕಿನ ಸಂಯೋಜನೆ ಈ ಒಂದು ತಿಂಗಳ ಅವಧಿಯಲ್ಲಿ ನೋಡಲು ಸಿಗುತ್ತದೆ.

ಪಶ್ಚಿಮ ಜಾಗರ ಪೂಜೆ ಆರಂಭವಾಗುವಾಗ ಪರ್ಯಾಯ ಮತ್ತು ಇತರ ಮಠಾಧೀಶರು ಆಗಮಿಸಿ ನೈರ್ಮಾಲ್ಯ ವಿಸರ್ಜನೆ, ಬಾಲರೂಪ, ಉಷಃಕಾಲ, ಗೋಪೂಜೆ, ಅಕ್ಷಯಪಾತ್ರೆ, ಪಂಚಾಮೃತ ಅಭಿಷೇಕ ಪೂಜೆಗಳನ್ನು ನಡೆಸುತ್ತಾರೆ.

Advertisement

ಪಶ್ಚಿಮ ಜಾಗರ ಪೂಜೆ ಅನಂತರ ಉಧ್ವರ್ತನ, ಕಲಶ ಪೂಜೆ, ತೀರ್ಥಪೂಜೆ, ಅಲಂಕಾರ ಪೂಜೆ, ಅನಂತರ ಲಕ್ಷ ತುಳಸಿ ಅರ್ಚನೆ, ಮಹಾಪೂಜೆಗಳು ನಡೆಯುತ್ತವೆ. ಪಶ್ಚಿಮ ಜಾಗರ ಪೂಜೆ ಇಷ್ಟು ವಿಸ್ತೃತವಾಗಿಯಲ್ಲದಿದ್ದರೂ ಕೆಲವು ದೇವಾಲಯಗಳಲ್ಲಿ ವಿಶೇಷವಾಗಿ ಮಠ ಪರಂಪರೆಯ ದೇವಸ್ಥಾನಗಳಲ್ಲಿ ನಡೆಯುತ್ತದೆ.

ಇದನ್ನೂ ಓದಿ:ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

ಆಷಾಢಶುದ್ಧ ಏಕಾದಶಿ ಯಿಂದ ಭಗವಂತ ಯೋಗನಿದ್ರೆಯಲ್ಲಿದ್ದಾನೆಂಬ ನಂಬಿಕೆ. ಈ ಒಂದು ತಿಂಗಳು ಬೆಳಗ್ಗೆ ಅಪೂರ್ವ ವಾದ್ಯಘೋಷ, ಬಳಿಕ ಪಶ್ಚಿಮಜಾಗರ ಪೂಜೆ ನಡೆಯುತ್ತದೆ. ಯೋಗನಿದ್ರೆಯಿಂದ ಭಗವಂತನನ್ನು ಎಚ್ಚರಿಸಲು ಭಕ್ತರು ಮಾಡುವ ಸೇವೆ ಇದು. ಜಾಗರ= ನಿದ್ರೆ, ಪಶ್ಚಿಮಜಾಗರ= ರಾತ್ರಿಯ ಕೊನೆಯ ಭಾಗ ಅಂದರೆ ಪ್ರಾತಃ ಕಾಲ. ಇದನ್ನು ಪಶ್ಚಿಮ ಯಾಮದ ಪೂಜೆ ಎಂದೂ ಕರೆಯುತ್ತಾರೆ. ಯಾಮ=ಜಾವ. ರಾತ್ರಿಯ ಕೊನೆಯ ಯಾಮವೇ ಮುಂಜಾವದ ಅವಧಿ. ಪಕ್ಷಿಗಳು ಮುಂಜಾವ ಎದ್ದು ಚಿಲಿಪಿಲಿಗುಟ್ಟುವ ಸಮಯವಾದ ಕಾರಣ ಕೆಲವರು ಪಕ್ಷಿಜಾಗರ ಪೂಜೆ ಎಂದದ್ದೂ ಇದೆ. ಆದರೆ ಇದು ಶಾಸ್ತ್ರೀಯ ಹೆಸರಲ್ಲ. ಪ್ರಬೋಧೋತ್ಸವ ಪೂಜೆ ಎಂದೂ ಶಾಸ್ತ್ರೀಯವಾಗಿ ಕರೆಯಲಾಗುತ್ತದೆ. ಈ ಪೂಜಾ ಆಚರಣೆಯನ್ನು ಮಧ್ವಾಚಾರ್ಯರು ವರಾಹ ಪುರಾಣದಿಂದ ಉಲ್ಲೇಖೀಸಿ ಚಾಲ್ತಿಗೆ ತಂದಿದ್ದಾರೆ.

ವಾದ್ಯಗಳ ಪಟ್ಟಿಗೆ ವೇಣು, ವೀಣೆ, ಪಿಟೀಲಿಗೂ ಅವಕಾಶ
ಪಶ್ಚಿಮ ಜಾಗರ ಪೂಜೆ ಬೆಳಗ್ಗೆ ಸುಮಾರು 5.45ಕ್ಕೆ ನಡೆಯುತ್ತದೆ. ಬೆಳಗ್ಗೆ 3.45ರಿಂದ 5.45ರ ವರೆಗೆ ಶ್ರೀಮಠದಲ್ಲಿ ನಿತ್ಯ ಉಪಯೋಗಿಸುವಂತಹ ವಾದ್ಯಗಳಲ್ಲದೆ ಕೆಲವೊಂದು ವಿಶೇಷ ವಾದ್ಯಗಳ ವಾದನ ನಡೆಯುತ್ತದೆ. ಶಂಖನಾದ, ನಗಾರಿ, ಬಾರ್‌ ತಂಬೂರಿ, ರಣಕಹಳೆ, ಡೋಲು, ದಮಣಿ, ತ್ರಾಸೆ, ಉಡುಕು ನಾಗಸ್ವರ, ಸೂರ್ಯವಾದ್ಯ, ಸ್ಯಾಕ್ಸೋಫೋನ್ ಅದೇ ರೀತಿಯಲ್ಲಿ ನಮ್ಮ ಸುತ್ತಮುತ್ತಲಿನ ಕೊಳಲು, ವೀಣೆ, ವಯಲಿನ್‌ ವಾದನ ನುಡಿಸುವ ಯುವ ಪ್ರತಿಭೆಗಳಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅವಕಾಶ ಕಲ್ಪಿಸಿದ್ದಾರೆ. ಯುವಪ್ರತಿಭೆಗಳ ಕಾರ್ಯಕ್ರಮಗಳು ಬೆಳಗ್ಗೆ ಸುಮಾರು 4.50 ಗಂಟೆಯಿಂದ 25 ನಿಮಿಷಗಳ ಕಾಲ ಗರ್ಭಗುಡಿ ಎದುರು ಚಂದ್ರಶಾಲೆಯಲ್ಲಿ ನಡೆಯಲಿದೆ. ನ. 16ರ ವರೆಗೆ ಯುವ ಪ್ರತಿಭೆಗಳ ಕಾರ್ಯಕ್ರಮಗಳು ನಿಗದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next