Advertisement

ಶ್ರೀ ಬಸವರಾಜ ಗ್ರಂಥಾಲಯ ಶತಮಾನೋತ್ಸವ ಸಂಭ್ರಮ

02:16 PM Oct 21, 2019 | Team Udayavani |

ಗದಗ: ಸ್ಥಳೀಯರಲ್ಲಿ ಸ್ವಾತಂತ್ರ್ಯಸಂಗ್ರಾಮದ ಕಿಚ್ಚು ಹೊತ್ತಿಸಿದ್ದ, ಸರಕಾರ, ಸಂಘ-ಸಂಸ್ಥೆಗಳ ನೆರವಿನ ಹಂಗಿಲ್ಲದೇ ಸ್ಥಳೀಯರೇ ಟೊಂಕ ಕಟ್ಟಿ ಮುನ್ನಡೆಸಿದ್ದ ಇಲ್ಲಿನ ಶಹಪುರಪೇಟೆಯ ಶ್ರೀ ಬಸವರಾಜ ಗ್ರಂಥಾಲಯ ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿದೆ.

Advertisement

ಇಲ್ಲಿನ ಮಹಾತ್ಮ ಗಾಂಧಿ ವೃತ್ತದಿಂದ ಕೂಗಳತೆ ದೂರದಲ್ಲಿರುವ ಶಹಪುರ ಪೇಟೆಯಲ್ಲಿ 4-10-1919ರಲ್ಲಿ ವೀರಶೈವ ತರುಣ ಸಂಘದ ವಾಚನಾಲಯ ಸ್ಥಾಪನೆಗೊಂಡಿದೆ. ಸ್ವಾತಂತ್ರ್ಯಪೂರ್ವ ಶಹಪುರ ಹಳ್ಳಿಯಾಗಿದ್ದು, ಬಳಿಕ ಕಾಲಾಂತರದಲ್ಲಿ ಅದು ಶಹಪುರ ಪೇಟೆಯಾಗಿ, ಇದೀಗ ಬಸವೇಶ್ವರ ನಗರವೆಂದು ಗುರುತಿಸಿಕೊಂಡಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ನೂರು ವರ್ಷಗಳ ಹಿಂದೆ ಇಲ್ಲಿನ ವೀರಶೈವ ತರುಣ ಸಂಘದ ಪ್ರಮುಖರು ಶ್ರೀ ಶಂಕರಲಿಂಗ ದೇವಸ್ಥಾನ ಶಾಲಾ ಕೊಠಡಿಯೊಂದರಲ್ಲಿ ಗ್ರಂಥಾಲಯ ಆರಂಭಿಸಿದ್ದರು. ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವಂತಹ ಮರಾಠಿ, ಹಿಂದಿ ಹಾಗೂ ಆಂಗ್ಲ ದೈನಿಕಗಳು ಬರುತ್ತಿದ್ದವು. ಆಗಿನ ಕಾಲದಲ್ಲಿ ಓದುಗರ ಸಂಖ್ಯೆಯೂ ಬೆರಳೆಣಿಕೆಯಷ್ಟಿರುತ್ತಿದ್ದರಿಂದ ದಸರಾ ಸೇರಿದಂತೆ ವಿವಿಧ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪಂ|ನಾಗಭೂಷಣ ಶಾಸ್ತ್ರಿಗಳವರಿಂದ ನಡೆಯುವ ಪ್ರವಚನಕ್ಕೆ ಇದೇ ಗ್ರಂಥಾಲಯ ವೇದಿಕೆಯಾಗುತ್ತಿತ್ತು.

ಗ್ರಂಥಾಲಯಕ್ಕಾಗಿ ದೇಣಿಗೆ ಸಂಗ್ರಹ: ಸುಮಾರು ಎರಡೂವರೆ ದಶಕದ ಶಾಲೆಯಲ್ಲಿ ತರಗತಿ ಕೊಠಡಿಗಳ ಸಮಸ್ಯೆ ಎದುರಾಗಿದ್ದರಿಂದ ವಾಚನಾಲಯವನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಮತ್ತೂಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಅದು ಅಚ್ಚುಕಟ್ಟಾಗಿರಲಿಲ್ಲ. ಹೀಗಾಗಿ ಸ್ಥಳೀಯರು ಆಗಿನ ಕಷ್ಟ ಕಾಲದಲ್ಲೂ ವಾಚನಾಲಯ ನಿರ್ಮಾಣಕ್ಕೆ ಒಂದೊಂದು ರೂಪಾಯಿ ವಂತಿಗೆ ಸೇರಿಸಿದರು.

ಸ್ಥಿತಿವಂತರು ಉದಾರತೆ ಮೆರೆದು 10, 20 ರೂ. ದೇಣಿಗೆ ನೀಡಿದ್ದರಿಂದ 1936ರಲ್ಲಿ ದೇವಸ್ಥಾನದ ಖಾಲಿ ಜಾಗೆಯಲ್ಲಿ 50×20 ವಿಸ್ತೀರ್ಣದಲ್ಲಿ ಸುಂದರ ಕಟ್ಟಡ ತಲೆ ಎತ್ತಿತು. ಶರಣ ಸಂಸ್ಕೃತಿ ಹಾಗೂ ಬಸವ ತತ್ವಗಳಲ್ಲಿ ಅಪಾರ ನಿಷ್ಠೆ ಹೊಂದಿದ್ದ ಈ ಭಾಗದ ಜನರು, ವೀರಶೈವ ತರುಣ ಸಂಘದ ಬದಲಾಗಿ ಶ್ರೀ ಬಸವರಾಜ ವಾಚನಾಲಯವನ್ನಾಗಿ ಮರು ನಾಮಕರಣ ಮಾಡಿದರು.

Advertisement

ಹೆಚ್ಚಿದ ಓದುಗರ ಸಂಖ್ಯೆ: ಬಳಿಕ ಮತ್ತೂಮ್ಮೆ ಕೊಡುಗೈ ದಾನಿಗಳು ಲೈಬ್ರರಿ ಜೀರ್ಣೋದ್ಧಾರಕ್ಕಾಗಿ ಕೈಜೋಡಿಸಿದರು. ಅವರ ನೆರವಿನ ಫಲವಾಗಿ ಜ| ತೋಂಟದ ಸಿದ್ಧಲಿಂಗ ಸ್ವಾಮಿಗಳಿಂದ 1976ರಲ್ಲಿ ಮೊದಲ ಮಹಡಿಯೂ ಲೋಕಾರ್ಪಣೆಗೊಂಡಿತು. ವಿದ್ಯಾರ್ಥಿಗಳು-ಓದುಗರ ಅನುಕೂಲಕ್ಕಾಗಿ ಅನೇಕರು ಪುಸ್ತಕ ಖರೀದಿಸಿ ಕೊಡುತ್ತಿದ್ದರು. ಪರಿಣಾಮ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆಯೂ ಹೆಚ್ಚಿತ್ತು. 1976 ರಿಂದ ಈಚೆಗೆ ಪ್ರತಿನಿತ್ಯ ಸರಾಸರಿ 45- 50 ಜನ ಓದುಗರು ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

ಹಲವರಿಗೆ ಜ್ಞಾನದಾಲಯ: ಶಾಲೆ, ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಶಾಲೆ ಬಿಟ್ಟವರು, ಅಕ್ಷರ ಜ್ಞಾನ ಹೊಂದಿದವರಿಗೆ ಇದು ಜ್ಞಾನದ ಆಲಯವಾಗಿತ್ತು. ಸ್ಥಳೀಯರಿಗೆ ದೇಶ-ವಿದೇಶ ಸುದ್ದಿ ತಿಳಿಯಲೆಂದು ರೇಡಿಯೋ ವಾರ್ತೆ ಕೇಳಿಸಲಾಗುತ್ತಿತ್ತು. ಹೀಗಾಗಿ ಇತರೆ ಬಡಾವಣೆಯಿಂದಲೂ ಇಲ್ಲಿಗೆ ಜನ ಬರುತ್ತಿದ್ದರು. ಕೆಲವರು ದಿನವಿಡೀ ಇದೇ ಗ್ರಂಥಾಲಯದಲ್ಲಿ ಕಾಲ ಕಳೆಯುತ್ತಿದ್ದರು.

ಆ ಪೈಕಿ ಗದಗ ದಂಡಪ್ಪ ಮಾನ್ವಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ| ವೀರಣ್ಣ ಹಳೇಮನಿ, ರೋಣ ತಾಲೂಕು ಆಸ್ಪತ್ರೆಯ ಡಾ| ವೀರೇಶ ಶೆಟ್ಟರ್‌, ಅನೇಕರು ಇಂಜಿನಿಯರ್‌ಗಳು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿನ ಗ್ರಂಥಗಳನ್ನು ಬಳಸಿಕೊಂಡು ಡಾ|ರಶ್ಮಿ ಅಂಗಡಿ ಅವರು ಪಿಎಚ್‌ಡಿ ಪೂರ್ಣಗೊಳಿಸಿದರು. ಇಂತಹ ಅನೇಕ ವ್ಯಕ್ತಿಗಳಿಗೆ ಈ ಗ್ರಂಥಾಲಯ ಜ್ಞಾನ ದೀವಿಗೆಯಾಗಿದೆ ಎನ್ನುತ್ತಾರೆ ವಾಚನಾಲಯದ ಆಡಳಿತ ಮಂಡಳಿ ಸದಸ್ಯ ದಾನಪ್ಪ ಬಸಪ್ಪ ತಡಸದ. ನಾನಾ ಕಾರಣಗಳಿಂದ ಸರಕಾರದ ಗ್ರಂಥಾಲಯಗಳು ನಿರ್ವಹಣೆಯಿಲ್ಲದೇ ಸೊರಗುತ್ತಿವೆ. ಆದರೆ, ಯಾರ ನೆರವೂ ಬಯಸದೇ ಸ್ಥಳೀಯರೇ ಈ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ.

ಇಲ್ಲಿವೆ ಎರಡು ಸಾವಿರ ಪುಸ್ತಕಗಳು: ವಾಚನಾಲಯ ಆರಂಭದಲ್ಲಿ ಕೇವಲ 20 ಪುಸ್ತಕಗಳಿದ್ದವು. ಬಳಿಕ ದಾನಿಗಳು ಕೊಡಿಸಿದ ಹೊಸ ಪುಸ್ತಕಗಳು, ವಿದ್ಯಾರ್ಥಿಗಳು ಓದಿ ಮುಗಿಸಿದ ಹಳೆಯ ಪುಸ್ತಕಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಂಗ್ರಹಗೊಂಡಿದ್ದವು. 2007ರಲ್ಲಿ ಜ| ತೋಂಟದಾರ್ಯ ಮಠದವರೂ ಸಾಕಷ್ಟು ಪುಸ್ತಕ ನೀಡಿದ್ದರು. ಆದರೆ, ಕೆಲವರು ಮನೆಗೆ ಕೊಂಡೊಯ್ದು, ಮತ್ತೆ ಹಿಂದಿರುಗಿಸಿಲ್ಲ. ಸದ್ಯ ಕತೆ, ಕಾದಂಬರಿ ಹಾಗೂ ವಚನ ಸಾಹಿತ್ಯಕ್ಕೆ ಸಂಬಂಧಿಸಿ ಸುಮಾರು 2000ಕ್ಕಿಂತ ಹೆಚ್ಚು ಪುಸ್ತಕಗಳು ಇವೆ. ಇಂದಿಗೂ ಪ್ರತಿನಿತ್ಯ ಬೆಳಗ್ಗೆ 7 ರಿಂದ 11, ಸಂಜೆ 4 ರಿಂದ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದೆ.

ಇವರೇ ರೂವಾರಿಗಳು :  ಸ್ವಾತಂತ್ರ್ಯ ಪೂರ್ವದಲ್ಲಿ ವೀರಶೈವ ತರುಣ ಸಂಘ ಕಟ್ಟಿಕೊಂಡಿದ್ದ ಮಹದೇವಪ್ಪ ಪರಪ್ಪ ಮುಧೋಳ ಅವರ ಮುಂದಾಳತ್ವದಲ್ಲಿ ಬಸಪ್ಪ ಗೂಳಪ್ಪ ತಡಸದ, ದುಂಡಪ್ಪ ಕಾಡಪ್ಪ ಮುನವಳ್ಳಿ, ಕೊಟ್ರಬಸಪ್ಪ ಚನ್ನಬಸಪ್ಪ ಬಡಿಗಣ್ಣವರ, ಮುದುಕಯ್ಯ ಮಡಿವಾಳಯ್ಯ ಹಡಗಲಿಮಠ, ವಿರೂಪಾಕ್ಷಪ್ಪ ಪಿಳ್ಳಿ ಅವರು ಸದುದ್ದೇಶದಿಂದ ಗ್ರಂಥಾಲಯ ಇಂದು ಶತಮಾನದ ಹೊಸ್ತಿಲಲ್ಲಿದೆ. ಆಗೊಮ್ಮೆ- ಈಗೊಮ್ಮೆ ಸಮಸ್ಯೆ, ಸವಾಲುಗಳನ್ನು ಕಂಡರೂ, ಎಂದೂ ಬಾಗಿಲು ಮುಚ್ಚಿಲ್ಲ ಎಂಬುದು ಗಮನಾರ್ಹ.

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next