ಶಹಾಪುರ: ನಗರದ ನೂತನ ಬಸ್ ನಿಲ್ದಾಣದ ಎದುರಿರುವ ಉದ್ಯಾನವನ ನಿರ್ವಹಣೆ ಇಲ್ಲದೆ ಹಾಳಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಮೊದಲು ಉದ್ಘಾಟನೆಗೊಳ್ಳುವ ಮುಂಚೆ ಬಸ್ ನಿಲ್ದಾಣ ಸುತ್ತಲೂ ಉದ್ಯಾನವನ ಹಸಿರಾಗಿತ್ತು, ಆದರೆ ಪ್ರಸ್ತುತ ಅಲ್ಲಿನ ಹುಲ್ಲುಗಾವಲು ಸೇರಿದಂತೆ ಸಸಿ, ಗಿಡ ಮರಗಳಿಗೆ ನೀರುಣಿಸುವವರಿಲ್ಲದೆ ಸಂಪೂರ್ಣ ಒಣಗಿದೆ. ರಾತ್ರಿ ಸಮಯದಲ್ಲಿ ಪುಂಡಪೋಕರಿಗಳು ಪಾರ್ಟಿ ಮಾಡಿ ಕುಡಿದು ಬಾಟಲಿಗಳು ಇಲ್ಲಿಯೇ ಎಸೆದು ಹೋಗಿದ್ದಾರೆ. ಕಸ ಕಡ್ಡಿ ತ್ಯಾಜ್ಯ ಬಿದ್ದು ನೀರಿಲ್ಲದೆ ಹಸಿರೆಲ್ಲ ಮಾಯವಾಗಿದೆ.
ಹಸಿರಿನಿಂದ ಕಂಗೊಳಿಸುತ್ತಿರುವಾಗ ಬೆಳಗಿನ ಜಾವ ಸಾಕಷ್ಟು ಜನರು ಬಸ್ ನಿಲ್ದಾಣ ಸುತ್ತಲು ಎರಡು ರೌಂಡ್ ವಾಕ್ ಮಾಡುವ ಮೂಲಕ ಬೆಳಗಿನ ವಿಹಾರ ನಡೆಸುತ್ತಿದ್ದರು. ಪ್ರಸ್ತುತ ಹಸಿರು ಮಾಯವಾಗಿದ್ದರಿಂದ ಯಾರು ಬರುವುದಿಲ್ಲ ಎಂದು ಕೆಎಸ್ಆರ್ ಟಿಸಿ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಬಸ್ಗಳ ಸಮರ್ಪಕ ಸಂಚಾರ ಕಡಿಮೆ ಇತ್ತು. ಈಗ ಸಂಚಾರ ದಟ್ಟಣೆವಾಗುತ್ತಿದ್ದು, ನಿಲ್ದಾಣ ಸೇರಿದಂತೆ ಮುಂದಿನ ಹಸಿರು ಗಾರ್ಡನ್ ಹಾಳಾಗಿ ಹೋಗಿದೆ. ಕೂಡಲೇ ಮೇಲಧಿಕಾರಿಗಳು ಈ ಕುರಿತು ಗಮನ ಹರಿಸಬೇಕು. ನಿಲ್ದಾಣದಲ್ಲಿ ಕಸ ಹಾಕಲು ಬುಟ್ಟಿಗಳ ವ್ಯವಸ್ಥೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವತ್ಛ ಶೌಚಾಲಯದ ಸೌಲಭ್ಯ ಕಲ್ಪಿಸುವ ಅಗತ್ಯವಿದೆ.
ಗಿಡಮರ, ಸಸಿಗಳು, ಹುಲ್ಲುಗಾವಲು ಒಣಗಿ ಹೋಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.