Advertisement

ಚುನಾವಣೆ ಘೋಷಣೆಗೆ ಮುನ್ನವೇ ಕಾಂಗ್ರೆಸ್‌-ಬಿಜೆಪಿ ನಾಯಕರ ವಾಕ್ಸಮರ

12:37 AM Jan 24, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಗೆ ಮುನ್ನವೇ ರಾಜ್ಯದಲ್ಲಿ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಮಾತಿನ ಸಮರ ಪ್ರಾರಂಭವಾಗಿದ್ದು, ಭ್ರಷ್ಟಾಚಾರ ವಿಚಾರದಲ್ಲಿ ಆರೋಪ- ಪ್ರತಿ ಆರೋಪದಲ್ಲಿ ತೊಡಗಿದ್ದಾರೆ.

Advertisement

ಬಿಜೆಪಿ ಸರಕಾರದ ಶೇ. 40 ಕಮಿಷನ್‌ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್‌ ರಾಜಧಾನಿ ಬೆಂಗಳೂರಿನ 300 ಕಡೆ ಪ್ರತಿ ಭಟನೆ ಹಮ್ಮಿಕೊಂಡಿತ್ತು. ಇದರ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್‌ ಭ್ರಷ್ಟಾ ಚಾರದ ಗಂಗೋತ್ರಿ ಎಂದು ಹರಿಹಾಯ್ದಿದ್ದಾರೆ.

ತಮ್ಮ ಕರ್ಮಕಾಂಡ ಮರೆ ಮಾಚಲು ಲೋಕಾಯುಕ್ತ ಮುಚ್ಚಿದ ಕಾಂಗ್ರೆಸ್‌ನವರು ನಮಗೆ ನೀತಿ ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರೆ, ಸಿದ್ದರಾಮಯ್ಯ ಸರಕಾರದ ಸಂದರ್ಭ ಐಟಿ ದಾಳಿಗೆ ಒಳಗಾದ ಅವರ ಅನುಯಾಯಿಯ ಮನೆಯಲ್ಲಿ ಹೈಕಮಾಂಡ್‌ಗೆ1,000 ಕೋಟಿ ರೂ. ಕಪ್ಪ ಕೊಟ್ಟದ್ದು ಬಯಲಾಯಿತು. ಅದನ್ನು ಬಜೆಟ್‌ನಲ್ಲಿ ಮೀಸಲಿಟ್ಟು ಕೊಡಲಾಗಿತ್ತೇ ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ಪ್ರಶ್ನಿಸಿದ್ದಾರೆ.

ಬೆಂಗಳೂರು ಹಾಗೂ ಕೋಲಾರದಲ್ಲಿ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರಕಾರಕ್ಕೆ ಭ್ರಷ್ಟಾಚಾರದ ತೂಗುಗತ್ತಿಯ ಆತಂಕ ಪ್ರಾರಂಭವಾಗಿದೆ. ವಿಧಾನಸೌಧದ ಗೋಡೆ ಮುಟ್ಟಿದರೆ ಲಂಚ ಲಂಚ ಎಂಬ ಸದ್ದು ಬರುತ್ತಿದೆ. ಬಿಜೆಪಿ ಸರಕಾರದಲ್ಲಿ ಎಲ್ಲದಕ್ಕೂ ದರ ನಿಗದಿಪಡಿಸಲಾಗಿದೆ ಎಂದು ದೂರಿದರು.

ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧವಿದ್ದು, ಬಿಜೆಪಿ ನಾಯಕರು ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.

Advertisement

ಸೋಲಿನ ಭಯ ಎಂದ ಸಿದ್ದು
ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಸೋಲಿನ ಭಯವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಬೆಂಗಳೂರು ಸಹಿತ ರಾಜ್ಯದಲ್ಲಿ ಡಿಸಿಪಿ, ಎಸ್ಪಿ ಪೋಸ್ಟಿಂಗ್‌ಗೂ ಲಂಚ ಕೊಡಬೇಕು. ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಆಯಕಟ್ಟಿನ ಜಾಗಕ್ಕೆ 70-80 ಲಕ್ಷ ರೂ. ವರೆಗೂ ಲಂಚ ನೀಡಿ ಬಂದಿದ್ದಾರೆ. ಲಂಚ ನೀಡಿ ಬಂದ ಮೇಲೆ ಸುಮ್ಮನೆ ಇರು ತ್ತಾರೆಯೇ? ವಸೂಲಿ ಮಾಡುವುದು ಬೇಡವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಎಲ್ಲೂ ಲಂಚವಿಲ್ಲದೆ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಜನ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಮುಂದಾಗಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರ ವಾಗಿರುತ್ತದೆ. 40 ಪರ್ಸೆಂಟ್‌ ಅಲ್ಲ, 50 ಪರ್ಸೆಂಟ್‌ ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್‌ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುತ್ತಿದ್ದಾರೆ. ಆಗ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಸಿಎಂ ಏನೆಂದರು?
ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ. ಶೇ. 60ರಷ್ಟು ಪ್ರೀಮಿಯಂ ಬೆಂಗಳೂರಿನಲ್ಲಿ ನೀಡಿರುವುವು ಸಿದ್ದರಾಮಯ್ಯ ಅವಧಿಯ ಸರಕಾರಿ ದಾಖಲೆಗಳಲ್ಲಿದೆ. ಸುಮಾರು 800 ಕೋಟಿ ರೂ.ಗಳಲ್ಲಿ ಶೇ. 60ರಷ್ಟು ಪ್ರೀಮಿಯಂ ದೇಶದಲ್ಲಿ ಎಲ್ಲಿಯಾದರೂ ಕೊಟ್ಟಿದ್ದಾರೆಯೇ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು. ಕಾಂಗ್ರೆಸ್‌ ತಾನು ಮಾಡಿರುವುದನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳುತ್ತಿದೆ ಎಂದರು.

ಲೋಕಾಯುಕ್ತ ಮುಚ್ಚಿದ ಪುಣ್ಯಾ ತ್ಮರು ಇವರು. 300 ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಎಂಬ ಸ್ವತಂತ್ರ, ಸಂವಿಧಾನಬದ್ಧ ಸಂಸ್ಥೆಯನ್ನು ಮುಚ್ಚಿರುವ ಇವರು ನಮಗೆ ಪಾಠ ಹೇಳುತ್ತಾರೆ. ಇವರ ವಿರುದ್ಧ 59 ಪ್ರಕರಣಗಳು ದಾಖಲಾಗಿದ್ದವು. ಎಸಿಬಿ ಸೃಜಿಸಿ, ಪ್ರಕರಣ ಮುಚ್ಚಿಹಾಕಲು ಬಿ ವರದಿ ಹಾಕಿದರು. ಅವೆಲ್ಲವನ್ನೂ ಲೋಕಾಯುಕ್ತಕ್ಕೆ ಶಿಫಾರಸು ಮಾಡುತ್ತಿದ್ದೇವೆ. ಇವರಿಗೆ ಯಾವ ನೈತಿಕ ಹಕ್ಕಿದೆ ಎಂದು ಸಿಎಂ ದೂರಿದರು.

ಸಿದ್ದು ವಿರುದ್ಧ ದೂರು
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಟೆಂಡರ್‌ ಶ್ಯೂರ್‌ನಲ್ಲಿ ಭಾರೀ ಅಕ್ರಮ ಎಸಗಿದ್ದು, ಟೆಂಡರ್‌ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿಯು ಲೋಕಾಯುಕ್ತಕ್ಕೆ ದೂರು ನೀಡಿದೆ. ಬಿಜೆಪಿಯ ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಸೋಮವಾರ ಲೋಕಾಯುಕ್ತ ಪ್ರಧಾನ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿ ಟ್ವೀಟ್‌
ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಬಿಜೆಪಿ ಮತ್ತೆ ಕೆದಕಿದೆ. ಸರಣಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನೆನಪಿಸಿದೆ. ಅರ್ಕಾವತಿ ಡಿ-ನೊಟಿಫಿಕೇಶನ್‌ ಮೂಲಕ ಬಡವರ ಕನಸಿಗೆ ಕಾಂಗ್ರೆಸ್‌ ಕೊಳ್ಳಿ ಇಟ್ಟಿತ್ತು. ಕಸದಲ್ಲೂ ಹಗರಣ, ಉಕ್ಕಿನ ಸೇತುವೆಗೆ ಲಂಚ, ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್‌ ಕೊಟ್ಟ ಇಂಥ ಕೊಡುಗೆಯನ್ನು ರಾಜ್ಯದ ಜನ ಯಾವತ್ತೂ ಮರೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ದಿಲ್ಲಿಯ ಪಾಲಿಗೆ ಎಟಿಎಂ ಆಗಿತ್ತು. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ ಪ್ರತಿಭಟನೆ ನಡೆಸುವುದು ಎಂದರೆ ಇಲಿಗಳ ರಕ್ಷಣೆಗೆ ಬೆಕ್ಕು ನಿಯೋಜನೆಗೊಂಡಂತೆ. ಕಾಂಗ್ರೆಸ್‌ ಪ್ರತಿಭಟನೆಗೆ ಜನರು ನೀರಸವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಪರ ಒಲವಿರುವುದಕ್ಕೆ ಸಾಕ್ಷಿ ಎಂದು ಹೇಳಿದೆ.

ಸಿದ್ದರಾಮಯ್ಯ ಪ್ರಧಾನಿಯವರನ್ನು ಹಿಟ್ಲರ್‌ ಎಂದು ಕರೆದಿದ್ದಾರೆ. ಪ್ರಧಾನಿವಿಶ್ವವ್ಯಾಪಿ ನಾಯಕರು. ಇಡೀ ದೇಶದಲ್ಲಿ ಜನಮನ್ನಣೆ ಗಳಿಸಿದವರು. ಅವರ ಬಗ್ಗೆ ಇರುವ ಸದಭಿಪ್ರಾಯ ಬಹುತೇಕ ಯಾವುದೇ ಪ್ರಧಾನಿಗಳಿಗಿಲ್ಲ. ಅಂಥವರ ಬಗ್ಗೆ ಇಂಥ ಮಾತನಾಡಿದರೆ ಜನ ನಂಬುವುದಿಲ್ಲ. ಇದು ಆಕಾಶಕ್ಕೆ ಉಗುಳಿದಂತೆ.
-ಬಸವರಾಜ ಬೊಮ್ಮಾಯಿ,
ಮುಖ್ಯ ಮಂತ್ರಿ

ಡಾ| ಸುಧಾಕರ್‌ ಹಿಂದೆ ಯಾವ ಪಕ್ಷದಲ್ಲಿ ಇದ್ದರು? ಕೊರೊನಾ ಸಮಯದಲ್ಲಿ ಲೂಟಿ ಮಾಡಿದ್ದು ಅವರೇ ತಾನೆ? ನಮ್ಮ ಮುಖ ಚೆನ್ನಾಗಿದೆ, ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ. 60 ವರ್ಷಗಳಲ್ಲಿ ನಾವು ಲೂಟಿ ಮಾಡಿದ್ದರೆ ತನಿಖೆ ಮಾಡಿಸಿ.
-ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next