Advertisement

ದುಬಾೖಯ ಕೈ ತುಂಬಾ ಸಂಬಳದ ಕೆಲಸ ಬಿಟ್ಟು ಕಾಡು ಬೆಳೆದ ಎಂಜಿನಿಯರ್‌ 

11:52 PM May 21, 2022 | Team Udayavani |

ಕೇರಳದ ಕೈಪುಝ ಎಂಬ ಸಣ್ಣ ಗ್ರಾಮವೊಂದರಲ್ಲಿ ಜನಿಸಿ, ಎಂಜಿನಿಯರಿಂಗ್‌ ಪದವಿ ಪಡೆದಿದ್ದ ನೆಲ್ಲಿಕ್ಕುಜಿ ಕುರಿಯಾಕೋಸ್‌ ಕುರಿಯನ್‌ ಮುಂಬಯಿಯ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಕೈ ತುಂಬ ಹಣ ಸಂಪಾದಿಸುತ್ತಿದ್ದರು. 1995ರಲ್ಲಿ ಅವರು 25 ವರ್ಷದವರಾಗಿದ್ದಾಗ ಸೌದಿ ಅರೇಬಿಯಾದಲ್ಲಿ ಕೆಲಸ ಸಿಕ್ಕಿ ಅಲ್ಲಿಗೆ ಸ್ಥಳಾಂತರಗೊಂಡರು. ಅಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ ಅನಂತರ ಅವರಿಗೆ ದುಬಾೖಯ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಅವಕಾಶ ಸಿಕ್ಕು, ಅಲ್ಲಿಗೆ ಸ್ಥಳಾಂತರಗೊಂಡರು. ಹಲವು ವರ್ಷಗಳ ಕಾಲ ದುಡಿದ ಅವರು ಸಾಕಷ್ಟು ಹಣ ಮಾಡಿಕೊಂಡು ತಮ್ಮದೇ ಒಂದು ಸಂಸ್ಥೆ ಸ್ಥಾಪಿಸಿಕೊಂಡು ಕೆಲಸ ಆರಂಭಿಸಿದರು.

Advertisement

ದುಬಾೖಯಲ್ಲಿ ಒಮ್ಮೆ ಯಾವುದೋ ಸೈಟ್‌ ವಿಸಿಟ್‌ಗೆಂದು ತೆರಳುವಾಗ ಅವರಿಗೆ ಮರುಭೂಮಿಯ ನಡುವೆ ಮಾನವ ನಿರ್ಮಿತ ಓಯಸಿಸ್‌ ಕಣ್ಣಿಗೆ ಬಿದ್ದಿದಂತೆ. ಅದನ್ನು ನೋಡಿದವರಿಗೆ ತಮ್ಮ ತಾಯ್ನಾಡು ಕೇರಳದಲ್ಲೂ ಇದೇ ರೀತಿಯಲ್ಲಿ ಮಾನವ ನಿರ್ಮಿತ ಕಾಡನ್ನು ರಚಿಸಿ, ಪರಿಸರವನ್ನು ಇನ್ನಷ್ಟು ಚಂದಗಾಣಿಸಬಹುದಲ್ಲವೇ ಎನ್ನುವ ಆಲೋಚನೆ ಮೂಡಿತು. 2002ರಲ್ಲಿ ಭಾರತಕ್ಕೆ ಬಂದ ಅವರು ಅದೇ ಆಲೋಚನೆಯನ್ನು ಕಾರ್ಯ ರೂಪಕ್ಕೆ ತರಲೆಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಆಯಂಕುಡಿಯಲ್ಲಿ 5 ಎಕ್ರೆ ಬರಡು ಭೂಮಿಯನ್ನು ಖರೀದಿಸಿದರು. ಕೇವಲ ನಾಲ್ಕು ತೆಂಗಿನ ಮರ ಮಾತ್ರವೇ ಇದ್ದ ಆ ಭೂಮಿಯಲ್ಲಿ ಫ‌ಲವತ್ತತೆ ಇಲ್ಲವೇ ಇಲ್ಲ, ಯಾವ ಸಸಿಯನ್ನೂ ಬೆಳೆಯಲು ಸಾಧ್ಯವೇ ಇಲ್ಲ ಎಂದು ಸ್ಥಳೀಯರು ಹೇಳಿದ್ದರು. ಆದರೂ ಯೋಚಿಸದ ಅವರು ತಮಗೆ ಲಭ್ಯವಾದ ತರಹೇವಾರು ಗಿಡಗಳನ್ನು ನೆಟ್ಟು ಪೋಷಿಸಿದರು. ಅನಂತರ ಮತ್ತೆ ದುಬಾೖಗೆ ತೆರಳಿ ಕೆಲಸ ಆರಂಭಿಸಿದರು. ಆಗಾಗ ಭಾರತಕ್ಕೆ ಬರುತ್ತಿದ್ದ ಅವರು ತಮ್ಮ ಜಾಗದ ಸುತ್ತಮುತ್ತಲಿನ ಜಾಗವನ್ನೂ ಖರೀದಿಸುತ್ತ ಜಾಗದ ವಿಸ್ತೀರ್ಣ ಹೆಚ್ಚಿಸಲಾರಂಭಿಸಿದರು. ಹಾಗೆಯೇ ಅಲ್ಲಿ ವಿವಿಧ ರೀತಿಯ ಸಸಿಗಳನ್ನು ತಂದು ನೆಡಲಾರಂಭಿಸಿದರು.
ಆದರೆ ಜಾಗದ ವಿಸ್ತೀರ್ಣ ಜಾಸ್ತಿಯಾಗಿ ಗಿಡಗಳ ಸಂಖ್ಯೆ ಹೆಚ್ಚಾದಂತೆ ಅವರಿಗೆ ಸಮಸ್ಯೆಯೊಂದು ಕಾಡಲಾರಂಭಿಸಿತು. ಪ್ರತೀ ಬಾರಿ ಅವರು ಕೇರಳಕ್ಕೆ ಬಂದಾಗ ಸಾಕಷ್ಟು ಗಿಡಗಳು ಒಣಗಿ ಸತ್ತು ಹೋಗಿರುವುದು ಕಾಣುತ್ತಿತ್ತು. ಹಾಗಾಗಿ ತಮ್ಮ ಈ ಜಾಗವನ್ನು ನೋಡಿಕೊಳ್ಳಲೆಂದೇ ಅವರು ಜನರನ್ನು ನೇಮಿಸಿದರು.

2009ರ ಹೊತ್ತಿಗೆ ನೆಲ್ಲಿಕ್ಕುಜಿ ಬರೋಬ್ಬರಿ 30 ಎಕ್ರೆ ಜಮೀನು ಖರೀದಿಸಿದ್ದರು. ಆ ಸಮಯಕ್ಕೆ ಅವರಿಗೆ ತಮ್ಮ ಜವಾಬ್ದಾರಿ ಹೆಚ್ಚಾಗಿದೆ ಎನ್ನುವುದು ಗೊತ್ತಾಗಿತ್ತು. ದುಬಾೖಯಲ್ಲಿದ್ದುಕೊಂಡೇ ಎಲ್ಲವನ್ನೂ ನಿಭಾಯಿಸುವುದು ಸಾಧ್ಯವಿಲ್ಲ ಎಂದು ಪರಿಗಣಿಸಿ, ಅಲ್ಲಿನ ಕೆಲಸ ತ್ಯಜಿಸಿ ಕೊಟ್ಟಾಯಂಗೇ ಬಂದು ನೆಲೆಸಿದರು.

ಆಗಿನ್ನೂ ಇಂಟರ್‌ನೆಟ್‌ ಅಷ್ಟಾಗಿ ಬಳಕೆಯಲ್ಲಿರಲಿಲ್ಲ. ಎಲ್ಲೋ ಕೆಲವರಿಗೆ ಮಾತ್ರವೇ ಅದರ ಬಳಕೆ ಗೊತ್ತಿತ್ತು. ತಮ್ಮ ಜಾಗದಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಬಗೆಯ ಗಿಡ ಬೆಳೆಸಬೇಕೆಂಬ ಕನಸು ಹೊತ್ತಿದ್ದ ನೆಲ್ಲಿಕ್ಕುಜಿಗೆ ಗಿಡಗಳ ಪ್ರಭೇದ ಹುಡುಕುವುದೂ ದೊಡ್ಡ ಸವಾಲಾಗಿತ್ತು. ಕೃಷಿ ವಿಶ್ವವಿದ್ಯಾನಿಲಯಗಳನ್ನು, ನರ್ಸರಿಗಳನ್ನು ಸುತ್ತಲಾರಂಭಿಸಿದರು. ಅಲ್ಲಿರುವ ತಜ್ಞರುಗಳಿಂದ ಮಾಹಿತಿ ಪಡೆದು, ಆ ಗಿಡಗಳು ಎಲ್ಲಿ ಲಭ್ಯ? ಹೇಗೆ ಬೆಳೆಸಬೇಕು? ಯಾವ ರೀತಿಯ ವಾತಾವರಣ ಇರಬೇಕು? ಎಂಬೆಲ್ಲ ಮಾಹಿತಿ ಕಲೆ ಹಾಕಲಾರಂಭಿಸಿದರು. ದೂರದೂರುಗಳಿಗೆ ತೆರಳಿ ಬಗೆ ಬಗೆಯ ಗಿಡಗಳನ್ನು ತಂದು ತಮ್ಮ ನೆಲದಲ್ಲಿ ನೆಡಲಾರಂಭಿಸಿದರು. ಆ ರೀತಿಯಲ್ಲಿ ಒಂದೊಂದಾಗಿ ಸಸಿಗಳನ್ನು ನೆಡಲಾರಂಭಿಸಿದ ಜಮೀನಿನಲ್ಲಿ ಇದೀಗ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಮರಗಳಿವೆ. 4,800 ಜಾತಿಯ ಗಿಡ, ಮರಗಳು ತಲೆ ಎತ್ತಿ ನಿಂತಿವೆ. ಅದಷ್ಟೇ ಅಲ್ಲದೆ 85 ಜಾತಿಯ ತರಕಾರಿಗಳು, 145 ಜಾತಿಯ ಹಣ್ಣಿನ ಮರಗಳಿವೆ. 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಬೆಳೆಯುವ ರೋಡೋಡೆಂಡ್ರಾನ್‌ ಅಬೋìರಿಯಂನಿಂದ ಹಿಡಿದು 45-50 ಡಿಗ್ರಿ ಸೆಲ್ಸಿ ಯಸ್‌ ತಾಪಮಾನದಲ್ಲಿ ಬೆಳೆಯುವ ಖರ್ಜೂರದವರೆಗೆ ಎಲ್ಲ ರೀತಿಯ ಗಿಡ ಮರಗಳು ಇಲ್ಲಿವೆ.

ಭಾರತದಲ್ಲೇ ಅತೀ ವಿಶೇಷವೆನಿಸುವ ಮ್ಯಾಂಗ್ರೋವ್‌ ಸೇಬು, ಅಂಜೂರ, ವಾದ್ಯಗಳ ತಯಾರಿಯಲ್ಲಿ ಬಳಸುವ ಸೋರೆ, ರುದ್ರಾಕ್ಷ ಸೇರಿ ಅನೇಕ ಮರಗಳು ಈ ಜಾಗದಲ್ಲಿವೆ. ನೆಲ್ಲಿಕ್ಕುಜಿ ತಮ್ಮ ಜಾಗದಲ್ಲಿ ಬರೀ ಸಸಿ ಗಳನ್ನು ಬೆಳೆಸುವುದು ಮಾತ್ರವಲ್ಲದೆ ವಿಶೇಷವಾಗಿ ಕೆರೆಗಳನ್ನೂ ನಿರ್ಮಿಸಿದ್ದಾರೆ. ನಾಲ್ಕು ದೊಡ್ಡ ದೊಡ್ಡ ಕೆರೆಗಳನ್ನು ನಿರ್ಮಿಸಿದ್ದು, ಅವುಗಳ ನಡುವೆ ಮೀನುಗಳು ಸಂಚರಿಸಲೆಂದು ಸಂಪರ್ಕವನ್ನೂ ಕಲ್ಪಿಸಿಕೊಡಲಾಗಿದೆ. ಅಂದ ಹಾಗೆ ಈ ಕೆರೆಗಳನ್ನು ನಿರ್ಮಿಸುವುದಕ್ಕೂ ವಿಶೇಷ ಕಾರಣವೊಂದಿದೆಯಂತೆ. ಕರಾವಳಿ ನಾಡಾದ ಕೇರಳದಲ್ಲಿ ಮೀನುಗಾರರು ಮೀನು ಹಿಡಿದು ಕೊಡುತ್ತಾರಾದರೂ ಅದು ಮಾರುಕಟ್ಟೆಗೆ ಬರುವಾಗ ಮೀನಿನ ಬೆಲೆ ದುಪ್ಪಟ್ಟು, ಮೂರು ಪಟ್ಟು ಆಗುತ್ತದೆ. ಮೀನುಗಾರರಿಗೆ ಅತ್ಯಲ್ಪ ಪ್ರಮಾಣದಲ್ಲಿ ಹಣ ಸಿಕ್ಕರೆ, ಮಧ್ಯವರ್ತಿಗಳು ಭಾರೀ ಪ್ರಮಾಣದಲ್ಲಿ ಲಾಭ ಗಳಿಸುತ್ತಿದ್ದಾರೆ ಎನ್ನುವುದನ್ನು ನೆಲ್ಲಿಕ್ಕುಜಿ ಅರಿತಿದ್ದರು. ಅದೇ ಹಿನ್ನೆಲೆ ತಾನು ನಿರ್ಮಿಸುವ ಕೆರೆಗಳಲ್ಲಿ ರೈತರು ಮೀನು ಸಾಕಿ, ಅದನ್ನು ಅವರೇ ಹಿಡಿದು ಮಾರಾಟ ಮಾಡಬೇಕು ಎನ್ನುವ ಉದ್ದೇಶದಿಂದ ಕೆರೆ ನಿರ್ಮಿಸಿದರು. ಅವರು ನಿರ್ಮಿಸಿರುವ ಕೆರೆಗಳಲ್ಲಿ ಈಗ ಬರೋಬ್ಬರಿ 64 ಜಾತಿಯ ಮೀನುಗಳಿವೆ. ಸುತ್ತ ಮುತ್ತಲಿನ ಹಳ್ಳಿಗಳ 300ಕ್ಕೂ ಅಧಿಕ ಮೀನುಗಾರರು ಈ ಕೆರೆಗಳಲ್ಲಿ ಮೀನು ಸಾಕಿ, ಅದನ್ನು ಹಿಡಿದು ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದಾರೆ.

Advertisement

ತಮ್ಮದೇ ಆದ ವೈವಿಧ್ಯತೆಯ ಕಾಡು ನಿರ್ಮಾಣ ಮಾಡಲು ಹೊರಟಿದ್ದ ನೆಲ್ಲಿಕ್ಕುಜಿ ಆ ಪ್ರದೇಶದಲ್ಲಿ ತಾವು ನೆಲೆಸಲೆಂದು ಸಣ್ಣದೊಂದು ಫಾರ್ಮ್ಹೌಸ್‌ ನಿರ್ಮಿಸಿಕೊಂಡಿದ್ದರು. ಆದರೆ ನೆಲ್ಲಿಕ್ಕುಜಿಯ ಈ ಕಾಡಿನ ಬಗ್ಗೆ ತಿಳಿದುಕೊಂಡಿದ್ದ ಅವರ ಸ್ನೇಹಿ ತರು ಹಾಗೂ ಸಂಬಂಧಿಗಳು ಆಗಾಗ ಆ ಫಾರ್ಮ್ ಹೌಸ್‌ಗೆ ಬಂದು ಪ್ರಕೃತಿಯ ಮಧ್ಯೆ ಒಂದಿಷ್ಟು ದಿನಗಳ ಕಾಲ ಇದ್ದು ಹೋಗುತ್ತಿದ್ದರಂತೆ. ಅಲ್ಲಿನ ಪ್ರಕೃತಿ ಸೌಂದರ್ಯ ಹೆಚ್ಚು ತ್ತಿದ್ದಂತೆಯೇ ಫಾರ್ಮ್ ಹೌಸ್‌ಗೆ ಬರುತ್ತಿದ್ದವರ ಸಂಖ್ಯೆಯೂ ಹೆಚ್ಚಿದೆ.

ಅದೇ ಸಮಯದಲ್ಲಿ ಕೇರಳದಲ್ಲಿ ಭಾರೀ ಪ್ರವಾಹ ಉಂಟಾಗಿ, ನೆಲ್ಲಿಕ್ಕುಜಿ ಅವರ ಕಾಡಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಯಿತು. ಮತ್ತೆ ಕಾಡನ್ನು ಮರು ನಿರ್ಮಾಣ ಮಾಡುವುದಕ್ಕೆ ಅವರಿಗೆ ಬರೋಬ್ಬರಿ 25 ಕೋಟಿ ರೂ. ಸಾಲ ಮಾಡಬೇಕಾಗಿ ಬಂದಿತು. ಅದಲ್ಲದೆ ಕಾಡಿನ ನಿರ್ವಹಣೆಗೆ ಪ್ರತೀ ತಿಂಗಳು 7 ಲಕ್ಷ ರೂ. ವೆಚ್ಚವಾಗುತ್ತಿತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅವರು ತಮ್ಮ ಫಾರ್ಮ್ ಹೌಸ್‌ ಅನ್ನು ಹೋಂ ಸ್ಟೇ ಆಗಿ ಬದಲಾಯಿಸಿದರು. ಆ ಸಂಪೂರ್ಣ ಸ್ಥಳವನ್ನು “ಮ್ಯಾಂಗೋ ಮಿಡೋ ಅಗ್ರಿಕಲ್ಚರ್‌ ಥೀಮ್‌ ಪಾರ್ಕ್‌’ ಎಂದು ಕರೆದರು. ಅದನ್ನು ಸಾರ್ವ ಜನಿಕರಿಗೂ ಮುಕ್ತವಾಗಿಸಿ, ಅದರಿಂದ ಬಂದ ಹಣವನ್ನು ಮತ್ತೆ ಕಾಡಿನ ಅಭಿವೃದ್ಧಿಗೇ ಬಳಸಲಾರಂಭಿಸಿದರು.

ಈಗ ನೆಲ್ಲಿಕ್ಕುಜಿ ಅವರ ಕಾಡಿನಲ್ಲಿ ಸುಂದರ ಹೋಂ ಸ್ಟೇ ಜತೆಗೆ ಗೋ ಕಾರ್ಟಿಂಗ್‌, ಕೇಬಲ್‌ ಕಾರ್‌, ಸ್ವಿಮ್ಮಿಂಗ್‌ ಪೂಲ್‌, ಬೋಟಿಂಗ್‌, ಬೋಟ್‌ ಸಫಾರಿ, ರೋಪ್‌ವೇ, ಆರ್ಚೆರಿ, ರೆಸ್ಟೋರೆಂಟ್‌, ರೆಸಾರ್ಟ್‌ ಸೇರಿ ಹಲವು ಸೌಲಭ್ಯವಿದೆ. ಅಷ್ಟೆಲ್ಲ ಇದ್ದರೂ ಈ ಪ್ರದೇಶ ಪ್ಲಾಸ್ಟಿಕ್‌ ಮುಕ್ತ ಮತ್ತು ಯಾವುದೇ ಕಾರಣಕ್ಕೂ ಇಂಧನ ಚಾಲಿತ ವಾಹನಕ್ಕೆ ಇಲ್ಲಿ ಎಂಟ್ರಿ ಇಲ್ಲ. ಬರುವ ಪ್ರವಾಸಿಗರಿಗೆ ಕಾಡು ಸುತ್ತಲು ಇ-ವಾಹನ, ಎತ್ತಿನಗಾಡಿಯ ವ್ಯವಸ್ಥೆಯಿದೆ. ಅವೆರೆಡೂ ಬೇಡ ಎನ್ನುವವರು ನಡೆದುಕೊಂಡೇ ಕಾಡು ಸುತ್ತಬಹುದು. ದೇಶ ವಿದೇಶದ ಕೃಷಿ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧಕರು ಕೂಡ ಇಲ್ಲಿಗೆ ಬಂದು ಸಸ್ಯ ಪ್ರಭೇದಗಳ ಬಗ್ಗೆ ಮಾಹಿತಿ ಪಡೆದು ಹೋಗುತ್ತಾರೆ.

ನೆಲ್ಲಿಕ್ಕುಜಿ ಅವರ ಈ ಕಾಡು ಅದೆಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದುಕೊಂಡಿದೆಯೆಂದರೆ ಗುಜರಾತ್‌ನ ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಸಚಿವಾಲಯದ ಸಚಿವರು ಕೆಲವು ತಿಂಗಳ ಹಿಂದೆ ಈ ಕಾಡಿಗೆ ಭೇಟಿ ಕೊಟ್ಟಿ ದ್ದಾರೆ. ಈ ಕಾಡಿನಿಂದಾಗಿ ಸ್ಫೂರ್ತಿ ಪಡೆದುಕೊಂಡಿರುವ ಅವರು ತಮ್ಮ ರಾಜ್ಯದಲ್ಲೂ ಇಂಥದ್ದೊಂದು ಜೀವ ವೈವಿ ಧ್ಯದ ಕಾಡನ್ನು ನಿರ್ಮಿಸಿಕೊಡಲು ನೆಲ್ಲಿಕ್ಕುಜಿಗೆ ಕೇಳಿ ಕೊಂಡಿದ್ದಾರೆ. ಅದಕ್ಕೆ ಅವರು ಒಪ್ಪಿದ್ದಾರೆ ಕೂಡ. ಇದ್ದ ಹಣವನ್ನು ವ್ಯರ್ಥ ಮಾಡದೆ, ನಿಸರ್ಗ ದೇವತೆಗೆ ಅರ್ಪಿಸಿ ದ್ದರಿಂದಾಗಿ ಅದೆಷ್ಟೋ ಜನರಿಗೆ ಸಸ್ಯ ಜಗತ್ತಿನ ಅಸಂಖ್ಯಾತ ಪ್ರಭೇದಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗುತ್ತಿದೆ ಎಂದು ನಗುತ್ತಾ ಹೇಳುತ್ತಾರೆ ನೆಲ್ಲಿಕ್ಕುಜಿ. ಹಣ ಸಿಕ್ಕರೆ ಅದನ್ನು ದುಪ್ಪಟ್ಟು ಮಾಡುವುದು ಹೇಗೆ? ಎಂದು ಯೋಚಿ ಸುವ ಇಂದಿನ ಸಮಾಜದ ಎದುರು ಕಾಡಿಗಾಗಿ ಯೇ ದುಡಿಯುತ್ತಿರುವ ನೆಲ್ಲಿಕ್ಕುಜಿ ಆದರ್ಶವೇ ಸರಿ.

ಕೃಪೆ : ಬೆಟರ್‌ ಇಂಡಿಯಾ

– ಮಂದಾರ ಸಾಗರ

Advertisement

Udayavani is now on Telegram. Click here to join our channel and stay updated with the latest news.

Next