ಬೆಂಗಳೂರು: ರಾಜ್ಯ ಸರ್ಕಾರ ಕನ್ನಡಕ್ಕೆ ವಿಶೇಷವಾದ ಆದ್ಯತೆ ನೀಡಿದ್ದು ಎಲ್ಲೆಲ್ಲಿ ಕನ್ನಡವನ್ನು ಪ್ರಾಧಾನ್ಯವಾಗಿ ತೆಗೆದುಕೊಂಡು ಬರಲು ಸಾಧ್ಯವೋ ಅದೆಲ್ಲವನ್ನು ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಅಕಾಡೆಮಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2020ನೇ ಸಾಲಿನ ಗೌರವ ಪ್ರಶಸ್ತಿ 2019-20ನೇ ಸಾಲಿನ ಸಾಹಿತ್ಯಶ್ರೀ ಮತ್ತು 2018-19ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಮಾಡಿದ ಅವರು, ಮುಂದಿನ ರಾಜ್ಯೋತ್ಸವವನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹತ್ತಾರು ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ಮೂಲಕ ಕನ್ನಡ ಸಂಸ್ಕೃತಿ ಭಾಷೆಯನ್ನು ಇನ್ನಷ್ಟು ಶ್ರೀಮಂತ ಗೊಳಿಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಈ ಬಾರಿಯ ಕನ್ನಡ ರಾಜ್ಯೋತ್ಸವ ವಿಶಿಷ್ಟವಾಗಿ ಮತ್ತು ವಿಜೃಂಬಣೆಯಿಂದ ಕೋವಿಡ್ ನಿಯಗಳನ್ನು ಪಾಲನೆ ಮಾಡಿ ಕೊಂಡು ಆಚರಣೆ ಮಾಡಲಾಗುವುದು ಎಂದು ಹೇಳಿದರು. ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ಯಾವ ಭಾಷೆಗಳಿಗೂ ಇರುವಂತೆ ನಮ್ಮಲ್ಲೂ ಕೂಡ ಭಾಷಾ ಬೆಳವಣಿಗೆ ಕೊರತೆಯಿದೆ. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತಷ್ಟು ಬೆಳೆಯಬೇಕಾದರೆ ಇಂಗ್ಲಿಷ್ ಭಾಷೆ ಯಲ್ಲಿ ಯಾವೆಲ್ಲ ಸಾಹಿತ್ಯ ಬಂದಿದೆಯೋ ಅವೆಲ್ಲವು ಕನ್ನಡ ಭಾಷೆಯಲ್ಲಿ ಕನ್ನಡದ ಮಕ್ಕಳಿಗೆ ಸಿಗುವಂತಾಗಬೇಕು ಎಂದು ತಿಳಿಸಿದರು.
ಕನ್ನಡ ಭಾಷೆ ಜಗತ್ತಿನ ಬೇರೆಲ್ಲಾ ಭಾಷೆಗಳಿಗಿಂತಲೂ ಉತ್ಕೃಷ್ಟ ಭಾಷೆಯಾಗಿದೆ.ಇಲ್ಲಿ ಕೂಡ ವಿಶ್ವದಲ್ಲೇ ಅತ್ಯುತ್ತಮವಾದ ಸಾಹಿತಿಗಳು ರಚನೆಯಾಗಿದೆ.ವಚನ ಸಾಹಿತ್ಯ,ದಾಸ ಸಾಹಿತ್ಯ ನಮ್ಮ ಹಿರಿಯರ ಕೊಡುಗೆಯಾಗಿದ್ದು ಅವುಗಳು ಬೇರೆ ಯಾವ ಭಾಷೆಯಲ್ಲೂ ಕೂಡ ಇಲ್ಲ. ಈ ವಿಚಾರದಲ್ಲಿಕನ್ನಡಿಗರು ಹೆಮ್ಮೆ ಪಡಬೇಕು ಎಂದು ತಿಳಿಸಿದರು.
ಅಕಾಡೆಮಿ ಕಾರ್ಯಕ್ಕೆ ಪ್ರಶಂಸೆ: ಕನ್ನಡ ಕವಿಗಳು ಕಂಡ ಭಾರತ ಕೃತಿ ಬಿಡುಗಡೆಗೊಳಿಸಿದ ಸಂಸದ ತೇಜಸ್ವಿ ಸೂರ್ಯ, ಮೈಸೂರು ಪ್ರಾಂತ್ಯದ ಕುವೆಂಪು ಮತ್ತು ಮುಂಬೈ ಪ್ರಾಂತ್ಯದ ವರಾಗಿದ್ದ ದ.ರಾ.ಬೇಂದ್ರೆ ಅವರು ಇಡೀ ಭಾರತವನ್ನು ಒಂದೇ ದೃಷ್ಟಿಕೋನದಿಂದ ನೋಡಿದರು ಎಂದು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಆದರ್ಶ ಪ್ರಿಯವಾದ ಕಾರ್ಯವನ್ನು ಮಾಡುತ್ತಿದೆ. ಕನ್ನಡ ಕವಿಗಳು ಕಂಡ ಭಾರತ ಕೃತಿಯ ಇಂಗ್ಲಿಷ್ ಮಾದ್ಯಮದಲ್ಲಿ ಓದಿದ ನನ್ನಂತವರಿಗೆ ನಾಡಿನ ಕವಿಗಳ ಬಗ್ಗೆ ಬೆಳಕು ಚಲ್ಲಲಿದೆ.
ನಾಡಿನ ಸಾಹಿತ್ಯವನ್ನು, ಕವಿಗಳನ್ನು ಪರಿಚಯಿಸುವ ಇಂತಹ ಮತ್ತಷ್ಟು ಪುಸ್ತಕಗಳು ಸಾಹಿತ್ಯ ಲೋಕಕ್ಕೆ ಬರಲಿ ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ರಿಜಿಸ್ಟ್ರಾರ್ ಕರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.