Advertisement

ಕುಟುಕುವ ಮೊದಲೇ ಕ್ಲಿಕ್‌ ಮಾಡಿ

09:09 AM Apr 28, 2019 | Hari Prasad |

ಚೇಳನ್ನು ಕಂಡರೆ ಜನ ಅಂಜುತ್ತಾರೆ. ಕಾರಣ, ನಾಗರ ಹಾವಿಗಿಂತಲೂ ಅಪಾಯಕಾರಿಯಾದ ಚೇಳುಗಳಿವೆ. ಮನೆಯ ಮೂಲೆಯಲ್ಲೋ, ಹಳೇ ಮಣ್ಣಿನ ಮನೆಯ ಮಾಡುಗಳಲ್ಲೋ, ಸಂದುಗಳಲ್ಲೋ ಅಡಗಿ ಕುಳಿತು ಕ್ಷಣಾರ್ಧದಲ್ಲಿ ಬಾಲದ ಹಿಂದಿರುವ ಕೊಂಡಿ ಮುಳ್ಳಿನಿಂದ ಕುಟುಕಿ ವಿಷ ಹರಿಬಿಡುತ್ತವೆ. ಇಂಥ ವಿಷ ಜಂತುವಿನ ಪೋಟೋಗ್ರಫಿ ಮಾಡುವುದು ಒಂದು ಸವಾಲೇ. ಮೈಯೆಲ್ಲಾ ಕಣ್ಣಾಗಿದ್ದು­ಕೊಂಡು ಚೇಳಿನ ಫೋಟೋ ಕ್ಲಿಕ್ಕಿಸುವುದು ನಿಜಕ್ಕೂ ಸಾಹಸ. ಕೆಲ ಸಲ ಕ್ಯಾಮರಾ ಬ್ಯಾಗನ್ನು ನೆಲೆದ ಮೇಲೆ ಇಟ್ಟು, ಪೋಟೋಗ್ರಫಿಯಲ್ಲಿ ತಲ್ಲೀನರಾದಾಗ ತಾಯಿಯಿಂದ ಬೇರ್ಪಟ್ಟ ಮರಿ ಚೇಳುಗಳು, ಯಾರಿಗೂ ಅರಿವಿಲ್ಲದಂತೆ ಬ್ಯಾಗನ್ನು ಸೇರಿ ಫೋಟೋಗ್ರಾಫ‌ರ್‌ಗಳ ಮನೆಗೇ ಬಂದದ್ದೂ ಉಂಟಂತೆ. ಹಿರಿಯ ಫೋಟೋಗ್ರಾಫ‌ರ್‌ ಶಶಿಧರಸ್ವಾಮಿ ಆರ್‌. ಹಿರೇಮಠ ಚೇಳನ್ನು ಸೆರೆಹಿಡಿದ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.

Advertisement

ನಮ್ಮ ಕಂತೀಸ್ವಾಮಿ ಮಠದ ಹತ್ತಿರದಲ್ಲಿ ಹಾಕಿದ್ದ ಸಣ್ಣ ರಾಶಿಯ ಕಲ್ಲುಗಳ ಪೈಕಿ ಒಂದರ ಮೇಲೆ ದೊಡ್ಡ ಚೇಳು ಕುಳಿತಿತ್ತು. ಅದು ಕಾಡು ಚೇಳು. ನಮ್ಮ ಹಳ್ಳಿ ಕಡೆ ಇದಕ್ಕೆ ಹಾವಿನ ಕೂಡ, ಆಡೊ ಚೇಳು ಅಂತಾರೆ. ಈ ಚೇಳಿಗೆ ಲಕ್ಷ್ಮೀ ಚೇಳು ಅನ್ನೋರೂ ಇದ್ದಾರೆ. ಇಂಥ ಅನೇಕ ಚೇಳುಗಳು ಸೇರಿ, ಗುಂಪಾಗಿ ನಿಧಿಯನ್ನು ಕಾಯುತ್ತವಂತೆ. ಅದಕ್ಕಾಗಿಯೇ ಇದನ್ನು ಲಕ್ಷ್ಮೀ ಚೇಳು ಎಂದು ಕರೆಯುವ ವಾಡಿಕೆ ಇದೆ ಅಂತ ನನ್ನಜ್ಜಿ ಹೇಳಿದ ನೆನಪು.

ಮೆಲ್ಲಗೆ ಕ್ಯಾಮರಕ್ಕೆ ಮ್ಯಾಕ್ರೋ ಲೆನ್ಸ್‌ ಹಾಕಿಕೊಂಡು, ಚೇಳನ್ನು ಸೆರೆಹಿಡಿಯಲು ಕೋನವನ್ನು ಆಯ್ಕೆ ಮಾಡಿಕೊಂಡು ಕುಳಿತದ್ದೂ ಆಯಿತು. ಇನ್ನೇನು ಚೇಳಿನ ಪೋಟೋ ಕ್ಲಿಕ್ಕಿಸಬೇಕು, ಅಷ್ಟರಲ್ಲಿ ಅದು ಮತ್ತೂಂದು ಕಲ್ಲಿನ ಕೆಳಭಾಗಕ್ಕೆ ಹೋಗಿ ನಿಂತು ಬಿಟ್ಟಿತು. ಅಲ್ಲೇ ಹತ್ತಿರದಲ್ಲಿದ್ದ ಇನ್ನೊಂದು ಕಲ್ಲಿನ ನೆರಳು ಚೇಳಿನ ಮೇಲೆ ಬಿದ್ದು, ಛಾಯಾಚಿತ್ರ ತೆಗೆಯುವ ನನ್ನ ಕನಸನ್ನು ನುಚ್ಚುನೂರು ಮಾಡಿತು. ನೋಡೋಣ, ಮತ್ತೆ ಮೇಲೆ ಬರಬಹುದು ಎಂದು ಕಾಯುತ್ತಾ ಕುಳಿತೆ. ಸುಮಾರು 6-7 ನಿಮಿಷವಾಗಿರಬೇಕು. ಅಂದು ಕೊಂಡಂತೆ, ಆ ಚೇಳು ನಿಧಾನವಾಗಿ ನಡೆದು ಮತ್ತೆ ಸ್ವಸ್ಥಾನಕ್ಕೆ ಬಂದಿತು. ತಕ್ಷಣವೇ ಕ್ಯಾಮರಕ್ಕೆ ಕೆಲಸ ಕೊಟ್ಟೆ.

ಹಿನ್ನೆಲೆ ಸರಿ ಕಾಣಲಿಲ್ಲ. ಹೀಗಾಗಿ ಅಲ್ಲೇ ನೆಲಕ್ಕೆ ಹೊಟ್ಟೆಹಚ್ಚಿ, ಮೊಣಕೈಗಳನ್ನು ಸ್ಟಾಂಡ್‌ ಥರ ಮಾಡಿಕೊಂಡು ಕ್ಲಿಕ್ಕಿಸತೊಡಗಿದೆ. ಸೂರ್ಯನ ಬೆಳಕನ್ನು ಅಪೋಜಿಟ್‌ ಲೈಟ್‌ ಮಾಡಿಕೊಂಡು ಪೋಟೋ ತೆಗೆಯುತ್ತಿದ್ದುದರಿಂದ ಕಿರಣಗಳು ಲೆನ್ಸ್‌ ಮೇಲೆ ಬಿದ್ದು ಗ್ಲೇಸ್‌ ಬರುತ್ತಿತ್ತು. ಏನು ಮಾಡೋದು? ತಕ್ಷಣ ಹೆಂಡತಿಯನ್ನು ಕರೆದು ಆ ಕಡೆ ನಿಲ್ಲಿಸಿ, ಅವಳ ನೆರಳು ಲೆನ್ಸ್‌ ಮೇಲೆ ಬೀಳುವ ಹಾಗೆ ಮಾಡಿ ಗ್ಲೇಸ್‌ಅನ್ನು ತೊಲಗಿಸಿ ಪೋಟೊ ಕ್ಲಿಕ್ಕಿಸಲು ನಿಂತರೆ, ಚೇಳು ಮತ್ತೆ ಚಲಿಸಲು ಅಣಿಯಾಗಿಬಿಡಬೇಕೇ?


ನಮ್ಮ ಹರ ಸಾಹಸ ನೋಡಿದ ರೈತ ತಡಸ್ತರ ಶಿವಣ್ಣ ಬಂದು, ” ಏನ್‌ರೀ ಸ್ವಾಮ್ಯಾರ, ಚೇಳಿನ ಫೋಟೋ ತೆಗ್ಯಾಕತ್ತೀರಿ’ ಅಂದರು. ಅಷ್ಟರಲ್ಲಿ, ಚೇಳು ಅಲ್ಲಿಂದ ನಿಧಾನವಾಗಿ ಚಲಿಸತೊಡಗಿತು. ಶಿವಣ್ಣ ಮಂಡಿ ಊರಿ, ಅದರ ಕೊಂಡಿಗೆ ಇನ್ನೇನು ಅಂಗೈ ತಾಗಬೇಕು ಅನ್ನೋ ರೀತಿ ಕೈಯಾಡಿಸಿದರು. ಅವರ ಈ ಜಾದುವಿನಿಂದಲೋ ಏನೋ, ಕೆರಳಿದ ಚೇಳು ಕೊಂಡಿಯ ಬಾಲವನ್ನು ಮೇಲಕ್ಕೆತ್ತಿ ಕೆರಳಿದ ಗೂಳಿಯಂತೆ ಎದೆ ಉಬ್ಬಿಸಿ ನಿಂತಿತು.


” ಸ್ವಾಮ್ಯಾರ, ಈಗ ಅದು ಎರಡೂ¾ರ ನಿಮಿಷ ಹಿಂಗೆ ನಿಂತಿತೈìತಿ. ಲಗೂನ ಫೋಟೋ ಹೊಡಕೊಳಿÅà’ ಎಚ್ಚರಿಸಿದರು ಶಿವಣ್ಣ. ಬೆಳಗಿನ ಲೈಟಿಂಗ್‌ ಚೆನ್ನಾಗಿದ್ದರಿಂದ ಐಎಸ್‌ಒ 400ಗೆ ಇಟ್ಟು, ಚೇಳಿನ ಪ್ರತಿಯೊಂದು ಅಂಗವೂ ಶಾರ್ಪ್‌ ಆಗಿ ಕಾಣಿಸಲು ಅಪಾರ್ಚರನ್ನು ಎಫ್ 13 ಹಾಕಿ, ಶೆಟರ್‌ ಸ್ಪೀಡ್‌ ಎಸ್‌1/60 ಗೆ ಅಳವಡಿಸಿ ಮ್ಯಾನುವಲ್‌ ಮೋಡ್‌ನ‌ಲ್ಲಿ ಎಲ್ಲ ಸೆಟ್ಟಿಂಗ್‌ ಮಾಡಿಕೊಂಡೆ. ಬ್ಯಾಕ್‌ಲೈಟ್‌ನಲ್ಲಿ ಚೇಳು, ಅದರ ರೋಮಗಳು, ಕೆಂಪಾದ ಕಾಲು ಹಾಗೂ ಕಪ್ಪಾದ ದೇಹದ ಭಾಗಗಳು ಮೋಹಕವಾಗಿ ಗೋಚರಿಸಿದವು. ತಲೆ ಭಾಗವನ್ನೇ ಫೋಕಸಿಂಗ್‌ ಪಾಯಿಂಟ್‌ ಮಾಡಿಕೊಂಡು ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆ.

ಇವೆಲ್ಲ ಗಮನಿಸಿಯೋ ಏನೋ ಚೇಳು, ಸಿಟ್ಟಿನಿಂದ ಕಲ್ಲಿನ ರಾಶಿಯ ಕೆಳಗೆ ಇಳಿದು ಹೊರಟು ಹೋಯಿತು. ಸಣ್ಣ ಕಲ್ಲುಗಳ ರಾಶಿಯ ಮಧ್ಯೆ ಮಾಡುತ್ತಿದ್ದ ಸರ್ಕಸ್ಸುಗಳಿಂದ ಬೆನ್ನು, ಹೊಟ್ಟೆಗೆ ನೋವಾದರೂ, ಸಿಕ್ಕ ಒಳ್ಳೆ ಫೋಟೋಗಳ ಮುಂದೆ ಮೈಕೈ ನೋವೇನೂ ಬಾಲ ಬಿಚ್ಚಲಿಲ್ಲ. ವಾಪಸ್ಸು ಹೋದ ಚೇಳನ್ನು ಕಂಡ ಶಿವಣ್ಣ, “ಕಲ್ಲು ಎತಾØಕಿ ಸಾಯಿಸಿ ಬಿಡ್ಲೆàನ್ರೀ’ ಅಂದರು. ಬ್ಯಾಡ, ಅದರ ಪಾಡಿಗೆ ಅದನ್ನ ಬಿಡು ಎಂದೆ.


ಇನ್ನೊಂದು ಸಲ ಫೋಟೋಗ್ರಫಿ ಸ್ನೇಹಿತ ಬಂಧುಗಳಾದ ಬಿ. ಶ್ರೀನಿವಾಸ್‌ ತಂಡದ ಜೊತೆ ನಮ್ಮೂರ ಬಳಿ ಇರುವ ಗ್ವಾರಪ್ಪನ ಗುಡ್ಡಕ್ಕೆ ಹೊರಟೆವು. ನೀಲಗಿರಿ, ಬಂದರಕ್ಕಿ, ಕಾಡು ಸಸ್ಯಗಳು ಹಾಗೂ ದೊಡ್ಡ ಗಾತ್ರದ ಬಂಡೆಕಲ್ಲುಗಳಿಂದ ಕೂಡಿ ಬಹು ವಿಸ್ತಾರವಾಗಿರುವ ಗುಡ್ಡವದು. ಅಲ್ಲಿ ಮುಳ್ಳು ಹಂದಿಗಳು, ಹೆಬ್ಟಾವುಗಳು ಇವೆ.

Advertisement

ಕ್ಯಾಮರಾದ ಬ್ಯಾಗ್‌ ಹೊತ್ತು ಏದುಸಿರು ಬಿಡುತ್ತಾ, ಗುಡ್ಡ ಏರುತ್ತಾ, ಎತ್ತರದಲ್ಲಿ ಚೇಳಿನ ಹುಡುಕಾಟದಲ್ಲಿ ತೊಡಗಿದೆವು. ಆಯಾಸವಾದಾಗ ಬಂಡೆಗಲ್ಲುಗಳ ಮೇಲೆ ಕುಂತು ವಿಶ್ರಾಂತಿ ಪಡೆದು ಮತ್ತೆ ಮುಂದುವರೆಯುತ್ತಿದ್ದೆವು. ದೂರದಲ್ಲಿ ಕುರಿಗಾಹಿ ಇಳಿವಯಸ್ಸಿನ ಬೀರಪ್ಪಜ್ಜ ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತಾ ನಮ್ಮತ್ತ ಬಂದು,” ಏನ್ರೀ ಸ್ವಾಮೇÂರ? ಏನ್‌ ಹುಡಾRಕತ್ತೀರಿ. ನಾನು ನೋಡಾಕತ್‌ ಬಾಳ ಹೋತ್ತಾತು ‘ ಎಂದ. “ಅಜಾj ಏನಿಲ್ಲ, ಈ ಗುಡ್ಡದಾಗ ಚೋಳದವಲ್ಲ. ಅದನ್ನ ಹುಡಾRಕತ್ತೇವಿ’ ಎಂದೆ. ಅವ, “ಅಯ್ನಾ ಇಷ್ಟೇನಾ! ನಾ ಎಲ್ಲೋ ನಿಧಿ ಹುಡಾRಕತ್ತಾರೇನೊ ಅನ್ಕೊಂಡಿದ್ದೆ’ ಎಂದು ನಕ್ಕ. ಆ ನಗು ಅವನ ಮುಖದ ನೆರಿಗೆ ಮೇಲೆ ಮಿಂಚಾಯಿತು.

ಬೀರಪ್ಪಜ್ಜ ಒಂದು ಸುತ್ತು ಇಡೀ ಗುಡ್ಡವನ್ನೆಲ್ಲಾ ಕಣ್ಣಲ್ಲೇ ಪ್ರದಕ್ಷಿಣೆ ಹಾಕಿ, “ಬರ್ರೀ ನನ್‌ ಹಿಂದ, ನಿಮಗ ಚೇಳು ತೋರಿಸ್ತಿನಿ’ ಎನ್ನುತ್ತಾ ಮುಂದೆ ನಡೆದ. ಅವನ ಹಿಂದೆ ಸಾಗಿದೆವು. ಸುಮಾರು ಹತ್ತು ಹೆಜ್ಜೆ ಸಾಗಿ ಒಂದು ಗೆದ್ದಲು ಹಿಡಿದ ನೀಲಗಿರಿ ಒಣ ಗಿಡದ ಮುಂದೆ ನಿಂತ.

“ಈಗ್‌ ನೋಡ್ರಿ, ಒಂದೆರಡು ಚೋಳು ಕಾಣಾ¤ವ’ ಎನ್ನುತ್ತಾ ಒಣಗಿ ಬಾಯಿ ಬಿಟ್ಟಿದ್ದ ನೀಲಗಿರಿ ಮರದ ತೊಗಟೆಯನ್ನು ಕಿತ್ತ. ಬೀರಪ್ಪಜ್ಜ ಹೇಳಿದಂತೆ ಅಲ್ಲಿ ಎರಡು ಕೆಂಚೇಳುಗಳಿದ್ದವು. ಅವು ಸ್ವಲ್ಪ ಗಾಬರಿಯಾದಂತೆ ಕಂಡು ಬಂದು, ಅದರಲೊಂದು ನಿಧಾನವಾಗಿ ಹತ್ತಿರದ ಒಣಗಲು ಕಡ್ಡಿ ಟೊಂಗೆಯ ಮೇಲೆ ನಿಂತಿತು. ಆಗ ಒಬ್ಬೊಬ್ಬರಾಗಿ ಸರತಿಯಲ್ಲಿ ಅವುಗಳ ಪೋಟೋ ಕ್ಲಿಕ್ಕಿಸಲು ಅಣಿಯಾದೆವು.

ಬೀರಪ್ಪಜ್ಜನನ್ನು “ಈ ಮರದಾಗ ಚೋಳು ಇರುತಾವ್‌ ಅಂತಾ ನಿನಗೆ ಹ್ಯಾಂಗ
ಗೊತ್ತು ?’ ಕೇಳಿದೆವು. ಅವನಿಂದ ಬಂದ ಉತ್ತರ, “ಮರ ಒಣಗಿ, ಗೆದ್ದಿಲು ಹತ್ತಿ, ಆ ಜಾಗ ತಣ್‌Y (ತಂಪಾಗಿ) ಇದ್ರ ಅಲ್ಲಿತೈìತ್ರೀ. ಮತ್ತ ಅಲ್ಗೆ ಬೇರೆ ಹುಳಾ (ಕೀಟ) ಬರ್ತಾವ. ಕಾದು ಕೂತ ಈ ಚೇಳು ಅವನ್ನ ತಿನ್ನತಾವ’ ಅಂದರು. ಅಜ್ಜನ ಜಾnನಕ್ಕೆ ಒಂದು ಸಲಾಂ ಹೊಡೆದು ಮಬ್ಬುಗತ್ತಲಲ್ಲಿ ಗುಡ್ಡವನ್ನು ಇಳಿದು ಮನೆಯತ್ತ ಹೊರಟೆವು.

ಶಿಡೇನೂರಿಗೆ ಸಮೀಪದ ಚಿಗರಿಮಟ್ಟಿಯಲ್ಲಿ ಚೇಳಿರುವ ವಿಚಾರ ತಿಳಿಯಿತು. ಬೈಕ್‌ ಏರಿ ಚಿಗರಿಮಟ್ಟಿಗೆ ಹೋದರೆ ಗೆಳೆಯ ಚಂದ್ರು, “ಚೇಳಿಗೆ ಮರಿಗಳಾಗಿವೆ. ಮರಿಗಳನ್ನು ಹೊತ್ತು ತಿರುಗಾಡುವುದನ್ನು ನಾನೇ ನೋಡಿದ್ದೇನೆ’ ಅಂದ. ಹಾಗಾಗಿ, ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ನಡೆದವು. ಆ ದಿಕ್ಕಿನಿಂದ ಗೆಳೆಯ ಕಿರಣ ಲಮಾಣಿ ಮರಿಯೊಂದಿಗೆ ಚೇಳು ಇಲ್ಲಿದೆ ಎಂದು ಜೋರಾಗಿ ಕೂಗಿದ. ಎಲ್ಲರೂ ಓಡೋಡಿ ಬಂದು ಎಲ್ಲರೂ ಅಲ್ಲಿ ಜಮಾವಣೆಗೊಂಡೆವು.

ಒಂದು ದೊಡ್ಡ ಕಲ್ಲು ಬಂಡೆಯ ಪಕ್ಕದಲ್ಲಿ ಬೆಳದ ಬಂದರಕ್ಕಿ ಗಿಡ ಒಣಗಿದೆ. ಅದಕ್ಕೆ ಆಗತಾನೆ ಗೆದ್ದಿಲು ಹತ್ತಲು ಪ್ರಾರಂಭವಾಗಿದೆ. ಅಲ್ಲಿ ತಾಯಿ ಕೆಂಚೇಳಿನ ಹೆಗಲೇರಿ ಸುಮಾರು 40 ಕೂಸುಗಳು ಕುಳಿತಿದ್ದವು. ಬಾಲವನ್ನು ಮೇಲೆತ್ತಿ, ತನ್ನ ಎರಡು ಮುಂಗಾಲುಗಳನ್ನು, ಮುಂದಿನ ಚಿಂಟಾಂಗವನ್ನು ಕಡ್ಡಿಗೆ ಒತ್ತಿಹಿಡಿದು ಆ ಒಣ ಟೊಂಗೆಯ ಮೇಲೆ ಕೂತಿದೆ. ತಕ್ಷಣ ಲೆನ್ಸ್‌ ಅಳವಡಿಸಿದ ಕ್ಯಾಮರಾವನ್ನು ತೆಗೆದು, ಎಲ್ಲ ಮರಿಗಳು ಶಾರ್ಪಾಗಿ ಮೂಡಲು ಕ್ಯಾಮರದಲ್ಲಿ ಅಪರ್ಚರನ್ನು ಎಫ್ 18ಕ್ಕೆ ಹಾಕಿ, ಶೆಟರ್‌ಸ್ಪೀಡ್‌ ಎಸ್‌ 1/125ಗೆ ಅಳವಡಿಸಿ ಮ್ಯಾನುವಲ್‌ ಮೋಡ್‌ನ‌ ಸೆಂಟರ್‌ ವೆಟೆಡ್‌ ಸೆಟ್ಟಿಂಗ್‌ ಮಾಡಿಕೊಂಡು ಎರಡು ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡೆ.

ನಿಧಾನವಾಗಿ ಚೇಳು ಅಲ್ಲಿಂದ ಚಲಿಸಿ ಮುಂದೆ ಸಾಗಿ ಮತ್ತೂಂದು ಟೊಂಗೆಯನ್ನು ಏರಿ ಅಲ್ಲಿ ಏನಾದರೂ ಕೀಟ ಸಿಗಬಹುದೇ ಅಂತ ನಿಂತಿತು. ನಿಧಾನವಾಗಿ ಚಲಿಸುತ್ತಾ ಟೊಂಗೆ ಯಿಂದ ಇಳಿದು ಕಲ್ಲಿನ ಮೇಲೆ ಹಾಯ್ದು ಹೋಗುತ್ತಿ ರುವಾಗ ಅದರ ಕೂಸೊಂದು ಗುಂಪಿನಿಂದ ಬೇರ್ಪ ಟ್ಟಿತು. ಅದನ್ನು ಗಮನಿಸಿ ಲಗುಬಗೆ ಯಿಂದಲೇ ಒಬ್ಬಂಟಿ ಕೂಸಿನ ಪೋಟೋ ಕ್ಲಿಕ್ಕಿಸಿದೆ. ಆನಂತರದಲ್ಲಿ, ಎಲ್ಲರೂ ಅದಕ್ಕೆ ತೊಂದರೆ ಆಗದಂತೆ ಪೋಟೋ ಕ್ಲಿಕ್ಕಿಸಿದ್ದಾ ಯಿತು. ಹೀಗಿರುವಾ ಗಲೇ, ನಿಮ್ಮ ಕೆಲಸ ಆಯ್ತಲ್ಲಾ ಅನ್ನೋ ರೀತಿ ಮಳೆ ಸುರಿಯಲು ಶುರುವಾ ಯಿತು. ಬೈಕಿನತ್ತ ಓಡಿ ಮನೆಗೆ ಸಾಗಿದೆವು.

ನಿಧಿ ಕಾಯುತ್ತಂತೆ ಲಕ್ಷ್ಮೀ ಚೇಳು?!
ಚೇಳಿನ ವಿಷ ಅಪಾಯಕಾರಿ. ಕೆಲವೊಂದು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆದ ನಂತರವೂ, ಪೂರ್ತಿ 24 ಗಂಟೆಗಳ ಕಾಲ ವಿಪರೀತ ಉರಿ ಇರುತ್ತದಂತೆ. ಹಾಗಂತ ಹಳ್ಳಿಗಳ ಕಡೆ ಈಗಲೂ ಹೇಳುತ್ತಾರೆ. ನಂಬುತ್ತಾರೆ ಕೂಡ. ಕೆಲವೊಂದು ಸ್ಥಳಗಳಲ್ಲಿ ಚೇಳುಗಳು ಗುಂಪಾಗಿ ಇರುತ್ತವೆ. ಇದೆಲ್ಲಾ ಯಾಕೆ ಇಲ್ಲೇ ಉಳಿದಿವೆ ಎಂದು ಕೇಳಿದರೆ, ಹಿರಿಯರು ಉತ್ತರಿಸುತ್ತಿದ್ದುದ್ದು ಹೀಗೆ- ಇಲ್ಲಿ ಲಕ್ಷ್ಮೀ ದೇವಿಗೆ ಸಂಬಂಧಿಸಿದ ನಿಧಿ ಇದೆ. ಈ ಚೇಳುಗಳು ನಿಧಿಯನ್ನು ಕಾಯುತ್ತಿವೆ… ಈ ಕಾರಣದಿಂದಲೇ ಚೇಳುಗಳನ್ನು ಲಕ್ಷ್ಮೀ ಚೇಳು ಎಂದು ಕರೆಯಲಾಗುತ್ತದೆ!’

Advertisement

Udayavani is now on Telegram. Click here to join our channel and stay updated with the latest news.

Next