Advertisement

Tourism ಬೆಳವಣಿಗೆಗೆ ವಿಶೇಷ ಒತ್ತು:ಸಚಿವ ಎಚ್.ಕೆ.ಪಾಟೀಲ್

10:54 PM Jun 10, 2023 | Team Udayavani |

ಹುಬ್ಬಳ್ಳಿ: ಪ್ರವಾಸೋದ್ಯಮ ಬೆಳೆಸಬೇಕಾಗಿದೆ. ಅದು ನಮ್ಮ ಕರ್ತವ್ಯ. ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಲ್ಲಮ್ಮನ ಗುಡ್ಡ, ಬನಶಂಕರಿ ಮತ್ತು ಹುಲಿಗೆಮ್ಮ, ದುರ್ಗಮ್ಮ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರುತ್ತಾರೆ. ಇಂತಹ ಜನಸಾಮಾನ್ಯರ ಶ್ರದ್ಧಾ ಕೇಂದ್ರಗಳು ಪ್ರವಾಸಿ ತಾಣಗಳ ರೀತಿಯಲ್ಲೇ ಇವೆ. ಅವುಗಳ ಅಭಿವೃದ್ಧಿಗೆ ಗಮನ ಹರಿಸಲಾಗುವುದು. ಈ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳ ಬೆಳವಣಿಗೆಗೆ ನಿರೀಕ್ಷೆ ಮಟ್ಟದಲ್ಲಿ ಆದ್ಯತೆ ಸಿಕ್ಕಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಶಾಸಕರ ಸೇವಾ ತಂಡವನ್ನು ಗದಗದಲ್ಲಿ ಸ್ಥಾಪಿಸಲಾಗಿದೆ. ಅದನ್ನು ನೋಂದಣಿ ಮಾಡಿ ಸಾಂಸ್ಥಿಕ ಸ್ವರೂಪ ನೀಡಲಾಗುವುದು ಎಂದರು.

ಗೋಹತ್ಯೆ ನಿಷೇಧ, ಬಜರಂಗದಳ ನಿಷೇಧಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವಗಳು ಸರ್ಕಾರದ ಮುಂದೆ ಇಲ್ಲ. ಇಂತಹ ಚರ್ಚೆಗಳು ಅನಾವಶ್ಯಕ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಶಾಂತಿ, ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಜನಸಾಮಾನ್ಯರ ಅಭಿಪ್ರಾಯ ಗಮನದಲ್ಲಿಟ್ಟುಕೊಂಡು ಕಾನೂನು ರೂಪಿಸಲಾಗುವುದು ಎಂದರು.

ಎಪಿಎಂಸಿ ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿ ತೆಗೆದು ಹಾಕುವ ನಿಟ್ಟಿನಲ್ಲಿ ಎಪಿಎಂಸಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ವಾರದೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಉತ್ತರ ಕರ್ನಾಟಕ ಭಾಗದ ಮಾಮಲೇ ದೇಸಾಯಿ, ಕೆ.ಎಚ್. ಪಾಟೀಲ, ಎಂ.ಆರ್‌. ಪಾಟೀಲ, ಬಿ.ಜಿ. ಬಣಕಾರ ಅವರು ಎಪಿಎಂಸಿಗಳ ಆರಂಭಕ್ಕೆ ವಿಶೇಷ ಪ್ರಯತ್ನ ಮಾಡಿದ್ದರು. ರೈತರ ಶೋಷಣೆ ತಡೆಗಟ್ಟುವ ಕೆಲಸ ಮಾಡಿದ್ದರು. ಅವರ ಕನಸಿಗೆ ಧಕ್ಕೆ ತರುವ ಯಾವುದೇ ಕಾನೂನುಗಳನ್ನು ತೆಗೆದು ಹಾಕಲಾಗುವುದು ಎಂದರು.

ಸಮಾಜ ಸುಧಾರಣೆ, ಆಡಳಿತದಲ್ಲಿ ಶಿಸ್ತು ತರುವುದು, ಜನಕಲ್ಯಾಣದ ದೃಷ್ಟಿಯಿಂದ ಮೊದಲ ಅಧಿವೇಶನದಲ್ಲಿ ಕೆಲವು ಕಾನೂನುಗಳನ್ನು ಜಾರಿಗೆ ತರಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next