Advertisement

Special Article ಸರಳ-ಸಂಘಜೀವಿ ಪಿ.ಎಚ್‌.ಪೂಜಾರ

10:30 PM Nov 01, 2023 | Team Udayavani |

ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ, ಸಾಮಾಜಿಕ ಸೇವೆ ಮೈಗೂಡಿಸಿಕೊಂಡಿರುವ ಪಿ.ಎಚ್‌. ಪೂಜಾರ ಹೋರಾಟದ ಮೂಲಕವೇ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಚಿರಪರಿಚಿತರು. ಭಾರತೀಯ ಜನಸಂಘ, ಭಾರತೀಯ ಜನತಾ ಪಾರ್ಟಿಯನ್ನು ಬೇರು ಮಟ್ಟದಿಂದ ಸಂಘಟಿಸಿದವರು. ಬಿಜೆಪಿ ಅಂದ್ರೆ ಪೂಜಾರ ಎಂಬಂತಹ ವಾತಾವರಣ ಬಸವನಾಡಿನಲ್ಲಿದೆ.

Advertisement

ಪಿ.ಎಚ್‌. ಪೂಜಾರ, ಶ್ರೀಕಾಂತ ಕುಲಕರ್ಣಿ ಅವರು ಬಸ್‌ ಹತ್ತಿ ಹೊರಟರೆ ಮನೆ-ಮಠ ಮರೆತು ಪಕ್ಷಕ್ಕಾಗಿ ಹಗಲು-ರಾತ್ರಿ ಎನ್ನದೇ ದುಡಿದವರು. ಇವರು ಕಷ್ಟಪಟ್ಟು ನೀರು-ಗೊಬ್ಬರ ಹಾಕಿ ಬೆಳೆಸಿದ ಹಣ್ಣಿನ ಗಿಡದಲ್ಲಿ ಬೆಳೆದ ಸಿಹಿಯಾದ ಹಣ್ಣು ತಿಂದವರು ಬಹಳ. ಪೂಜಾರರು ಮಾತ್ರ ರಾಜಕೀಯದಲ್ಲಿ ಸಿಹಿಗಿಂತ ಕಹಿ ಅನುಭವಿಸಿದ್ದೇ ಹೆಚ್ಚು.

ದೊಡ್ಡ ಸವಾಲು : ಪೂಜಾರರು ಬಾಗಲಕೋಟೆ ಶಾಸಕರಾಗಿದ್ದಾಗ ನಿಭಾಯಿಸಿದ ಸವಾಲುಗಳೇ ರೋಚಕ. 123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯ ನಿರ್ಮಾಣಗೊಂಡರೂ ನೀರು ನಿಲ್ಲಿಸಲು ಆಗಿರಲಿಲ್ಲ. ವಿರೋಧ ಪಕ್ಷದಲ್ಲಿದ್ದರೂ ಇಡೀ ಸಚಿವ ಸಂಪುಟವನ್ನೇ ಬಾಗಲಕೋಟೆಗೆ ಕರೆಸಿ ನೀರು ನಿಲ್ಲಿಸುವ, ಸಂತ್ರಸ್ತರಿಗೆ ಯೋಗ್ಯ ಪರಿಹಾರ, ಪುನರ್ವಸತಿ ಕಲ್ಪಿಸಲು ನಡೆಸಿದ ಹೋರಾಟ, ಪ್ರಯತ್ನ ಮರೆಯುವಂತಿಲ್ಲ. ಅಂದು ಪೂಜಾರರ ಸಂಘಟನೆಗೆ ಸ್ವತಃ ಬಿಜೆಪಿ ವರಿಷ್ಠ ನಾಯಕ ಯಡಿಯೂರಪ್ಪ ಸಹಿತ ಕೈಜೋಡಿಸಿ ಇಲ್ಲಿಯೇ ಸಂತ್ರಸ್ತರೊಂದಿಗೆ ಹೋರಾಟಕ್ಕೆ ಕುಳಿತಿದ್ದರು.

ನಗರದ ಮುಳುಗಡೆ ಪ್ರದೇಶಕ್ಕೆ ಕಾಲಿಟ್ಟಾಗ ಬಿದ್ದ ಮನೆಗಳು, ಪರಿಹಾರ ಕೊಡದೇ ಮನೆ ಖಾಲಿ ಮಾಡಿಸುವ ಪರಿಸ್ಥಿತಿ ಕಂಡು ರೋಸಿ ಹೋಗಿದ್ದರು. ಅದಕ್ಕಾಗಿ ನಡೆದ ಅಂದಿನ ಆಹೋರಾತ್ರಿ ಹೋರಾಟದ ಫಲವೇ ಇಂದು ನವನಗರ ಎದ್ದು ನಿಂತಿದೆ.

ತುಂಬು ಕುಟುಂಬ : ಪೂಜಾರ ಅವರದು ತುಂಬು ಕುಟುಂಬ. ಪತ್ನಿ ಪ್ರಮೀಳಾ, ಪುತ್ರರಾದ ಅಪ್ಪಣ್ಣ (ತಂದೆಯ ಹೆಸರಿಡಲಾಗಿದೆ), ವಿಶ್ವನಾಥ, ಅಶ್ವಿ‌ನಿ, ಅನುಪಮಾ ಎಂಬ ನಾಲ್ವರು ಮಕ್ಕಳಿದ್ದಾರೆ. ಬಿಎಸ್ಸಿ, ಎಲ್‌ಎಲ್‌ಬಿ ಪದವಿ ಪಡೆದ ಇವರು ಧಾರವಾಡದಲ್ಲಿ ಎಲ್‌ಎಲ್‌ಬಿ ಕಲಿಯುವ ವೇಳೆಯೇ ಭಾರತೀಯ ಜನ ಸಂಘದ ಮೂಲಕ 1972ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ಬಾಗಲಕೋಟೆಯಲ್ಲಿ ಆಗ ಬಸವರಾಜ ಶೆಟ್ಟರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಪೂಜಾರರು ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಆಗಲೇ ಜನಸಂಘದ ಧ್ವಜ ಹಿಡಿದು, ಪಕ್ಷ ಸಂಘಟನೆ, ರಾಜಕೀಯ ಪ್ರಚಾರ ಮಾಡಿದವರು.

Advertisement

1977ರಲ್ಲಿ ಜನಸಂಘ, ವಿವಿಧ 13 ಪಕ್ಷಗಳ ವಿಲೀನದೊಂದಿಗೆ ಬಿಜೆಪಿ ಆಗಿ ಹೊರ ಹೊಮ್ಮಿತು. ಅಂದಿನಿಂದ ಬಿಜೆಪಿಗಾಗಿ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಸಂಚರಿಸದೇ ಹಳ್ಳಿಗಳಿಲ್ಲ. ಇವರ ಸಂಘಟನಾ ಚಾಣಾಕ್ಷéತನ ಕಂಡ ಪಕ್ಷದ ಹಿರಿಯರು, 1989ರಲ್ಲಿ ಬಾಗಲಕೋಟೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆಗೆ ಸೂಚಿಸಿದ್ದರು. 00ಕಾಂಗ್ರೆಸ್‌-ಜನತಾದಳ ಅಬ್ಬರದಲ್ಲೂ 00ಬಿಜೆಪಿ ಅಲ್ಲಲ್ಲಿ ಕಾಣುವಂತೆ ಮಾಡಿದ್ದು ಇವರ 00ಪ್ರಯತ್ನದಿಂದ ಎಂಬುದು ಸುಳ್ಳಲ್ಲ.

1998ರಲ್ಲಿ ಬಾಗಲಕೋಟೆ ಶಾಸಕರಾಗಿದ್ದ ಅಜಯಕುಮಾರ ಸರನಾಯಕರು ಲೋಕಸಭೆಗೆ ನಿಂತು ಗೆದ್ದರು. ಆಗ ನಡೆದ 18 ತಿಂಗಳ ಅವಧಿಯ ಉಪ ಚುನಾವಣೆಯಲ್ಲಿ ಪೂಜಾರರು ಮತ್ತೆ ಸ್ಪರ್ಧಿಸಿದರು. ಆಗ ಕಾಂಗ್ರೆಸ್‌ನಿಂದ ಸಿ.ವಿ.ಕೋಟಿ ಸ್ಪರ್ಧಿಸಿದ್ದರು. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಪೂಜಾರರು, ಬಾಗಲಕೋಟೆ ಜಿಲ್ಲೆಯ ಬಿಜೆಪಿಯ 2ನೇ ಶಾಸಕರೆಂಬ ಖ್ಯಾತಿ ಪಡೆದರು.

ಪುನಃ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಪೂಜಾರರು, ಬಾಗಲಕೋಟೆ ಹೊಸ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ನಿರಂತರ ಪ್ರಯತ್ನ ಮಾಡಿದರು.

ರಾಜಕೀಯ ಸಿಹಿ-ಕಹಿ : ಪೂಜಾರರು 2004ರಿಂದ ರಾಜಕೀಯ ಏರಿಳಿತ ಅನುಭವಿಸಿದವರು. ತಾವೇ ಕಟ್ಟಿ ಬೆಳೆಸಿದ ಪಕ್ಷದಲ್ಲಿ ಕೆಲವರ ಕುತಂತ್ರದಿಂದ ಟಿಕೆಟ್‌ ಕೂಡ ತಪ್ಪುವಂತಾಯಿತು. ಇವರ ಹಿಂದೆ ನಡೆದ ಹಲವಾರು ಷಡ್ಯಂತ್ರಗಳ ಮಧ್ಯೆಯೂ ರಾಜಕೀಯ ಪರೀಕ್ಷೆಗಿಳಿದಾಗ ಸಾಲು ಸಾಲು ಸೋಲುಂಡರು. ಆದರೂ ಅವರ ಸಮಾಜ ಸೇವೆ, ಸಂಘಟನಾ ಶಕ್ತಿಗೆ ಕೊರತೆ ಇರಲಿಲ್ಲ. ಇವರನ್ನು ನಂಬಿದ ಬೆಂಬಲಿಗರೂ ಸದಾ ಇವರೊಂದಿಗೆ ಹೆಜ್ಜೆ ಹಾಕಿದರು. ಪಕ್ಷಾಂತರ ಸುತ್ತಾಟದ ಮಧ್ಯೆಯೂ 2018ರಲ್ಲಿ ಪುನಃ ತಮ್ಮ ಮಾತೃಪಕ್ಷಕ್ಕೆ ಮರಳಿದರು. ಆಗ ಜಿಲ್ಲೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳ ಗೆಲುವಿಗಾಗಿ ಜಿಲ್ಲೆಯಾದ್ಯಂತ ಓಡಾಡಿದರು. ಮುಂದೆ ನಡೆದ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬರೋಬ್ಬರಿ 17 ವರ್ಷಗಳ ರಾಜಕೀಯ ವನವಾಸ ಅಂತ್ಯವಾಯಿತು. ಇವರ ಹಿಂದೆ ಮಸಲತ್ತು ನಡೆಸಿದವರು ಮನೆ ಸೇರಿದರು. ಎಷ್ಟೇ ನೋವುಂಡರೂ ಮತದಾರರು, ಜನರು, ಪಕ್ಷ ಇವರ ಕೈ ಹಿಡಿಯಿತು ಎನ್ನುತ್ತಾರೆ ಅವರ ಕಟ್ಟಾ ಬೆಂಬಲಿಗ ಶಂಭುಗೌಡ ಪಾಟೀಲ.

ಕರುಣೆಯ ತುತ್ತು !
ಪೂಜಾರರ ಬದುಕಿನಲ್ಲಿ ಸಾರ್ಥಕ ಕಾರ್ಯವೆಂದರೆ ಅಶಕ್ತ ವೃದ್ಧರಿಗೆ ಮನೆ ಬಾಗಿಲಿಗೆ ನಿತ್ಯವೂ ಕರುಣೆಯ ತುತ್ತು ಹೆಸರಿನಲ್ಲಿ ಊಟ ಕಳುಹಿಸುತ್ತಿರುವುದು. ಇದನ್ನು ಆರಂಭಿಸಿರುವುದೇ ಒಂದು ವಿಶೇಷ ಘಟನೆಯ ಹಿಂದಿನ ಕರಾಳ ಮುಖದಿಂದ. ಬಾಗಲಕೋಟೆಯ ಹಳೆಯ ನಗರದಲ್ಲಿ ಮುಳುಗಡೆ ಜನರ ಪರಿಸ್ಥಿತಿ ನೋಡಲು ಹೋದಾಗ ಒಬ್ಬ ವೃದ್ಧೆ ಬಂದು ಕಾಲಿಗೆ ಬಿದ್ದರು. ಮಗ ತೀರಿಕೊಂಡಿದ್ದ. ಸೊಸೆ, ತವರು ಮನೆಗೆ ಹೋಗಿದ್ದರು. ಅಲ್ಲಿನ ಓಣಿಯ ಜನರೇ ಆ ವೃದ್ಧೆಗೆ ಊಟ ಕೊಡುತ್ತಿದ್ದರು. ಇದು ಪೂಜಾರರ ಮನ ಕಲುಕಿತು. ಸಂಧ್ಯಾ ಕಾಲದಲ್ಲಿ ಒಂದು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಕಂಡು ತಮ್ಮದೇ ಚಾರಿಟೇಬಲ್‌ ಟ್ರಸ್ಟ್‌ನಿಂದ ಕರುಣೆಯ ಕೈ ತುತ್ತು ಆರಂಭಿಸಿದರು. ಮಕ್ಕಳು, ಸೊಸೆಯಂದಿರು ಅಥವಾ ಆಸರೆ ಇಲ್ಲದ ವೃದ್ಧರ ಮನೆ ಬಾಗಿಲಿಗೆ ನಿತ್ಯವೂ ಊಟ ಕಳುಹಿಸುವ ವ್ಯವಸ್ಥೆ ಆರಂಭಿಸಿದರು. ಆಸರೆ ಇಲ್ಲದವರ ಬಾಯಿಗೆ ಅನ್ನ ಸಿಕ್ಕಾಗ ಸಿಗುವ ಆನಂದ-ಸಂಭ್ರಮ ಕಂಡು ಪೂಜಾರರು ಆನಂದಭಾಷ್ಪ ಹಾಕಿದರು. ಇದು ಇಂದಿಗೂ ಚಾಲ್ತಿಯಲ್ಲಿದೆ. ಯಾವುದೇ ಪ್ರಚಾರವಿಲ್ಲದೇ ನಿರಂತರವಾಗಿ ಕರುಣೆಯ ತುತ್ತು ಸಾಗಿದೆ.

ಗೌರವಧನ ಹೆಚ್ಚಳ
ಇವರು ಪರಿಷತ್‌ ಶಾಸಕರಾಗಿ ಆಯ್ಕೆಯಾಗಿದ್ದೇ ಗ್ರಾಪಂ ಸದಸ್ಯರ ಬಲದಿಂದ. ಹೀಗಾಗಿ ಅವರ ಬಗ್ಗೆ ವಿಶೇಷ ಕಾಳಜಿ-ಕಕ್ಕುಲತೆ ಹೊಂದಿರುವ ಪೂಜಾರರು, ಕೌನ್ಸಿಲ್‌ನಲ್ಲಿ ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳಕ್ಕೆ ಗಟ್ಟಿಧ್ವನಿ ಎತ್ತಿದರು. ಪರಿಣಾಮ ಸದಸ್ಯರಿಗೆ 500 ರೂ.ದಿಂದ 1 ಸಾವಿರಕ್ಕೆ, ಉಪಾಧ್ಯಕ್ಷರಿಗೆ 4 ಸಾವಿರ, ಅಧ್ಯಕ್ಷರಿಗೆ 6 ಸಾವಿರ ಗೌರವಧನ ಹೆಚ್ಚಳವಾಯಿತು. ಸದನದಲ್ಲಿ ಮುಳುಗಡೆ ಸಮಸ್ಯೆ, ಸಂತ್ರಸ್ತರ ಸಂಕಷ್ಟಕ್ಕೆ ಧ್ವನಿಯಾಗಿದ್ದಾರೆ. ಇಲ್ಲಿನ ಜನರಿಗೆ ಉದ್ಯೋಗ ದೊರೆಯಬೇಕು, ಉದ್ಯಮಗಳು ಸ್ಥಾಪನೆಯಾಗಬೇಕು ಎಂಬುದು ಅವರ ದೊಡ್ಡ ಆಶಯ.

ಎರಡು ಜಿಲ್ಲೆ, 15 ವಿಧಾನಸಭೆ ಮತಕ್ಷೇತ್ರ ಒಳಗೊಂಡ ಕ್ಷೇತ್ರ ನಮ್ಮದು. ಒಂದು ಕ್ಷೇತ್ರದ ಶಾಸಕರಿಗೆ ಇರುವಷ್ಟೇ ಪ್ರದೇಶಾಭಿವೃದ್ಧಿ ನಮಗೂ ಇದೆ. ಶಾಸಕರಿಗೆ ಇರುವಂತೆ 2 ಕೋಟಿ ಅನುದಾನವನ್ನು ಪರಿಷತ್‌ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರ ಪರಿಗಣಿಸಿ, ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಿಸಬೇಕು. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತದೆ.
– ಪಿ.ಎಚ್‌. ಪೂಜಾರ, ವಿಧಾನ ಪರಿಷತ್‌

Advertisement

Udayavani is now on Telegram. Click here to join our channel and stay updated with the latest news.

Next