Advertisement

ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನ ಫ‌ಲಿಸದು: CET ಗೆದ್ದಿದೆ, NEET‌ ಗೆಲ್ಲಲು ಬಿಡಿ!

01:49 AM Aug 28, 2020 | Hari Prasad |

ಪದೇ ಪದೆ ಏಕೆ ಹೀಗಾಗುತ್ತದೋ ತಿಳಿಯದು. ಕೆಲವರಿಗೆ ನಿತ್ಯ ಇದೇ ಕೆಲಸವೇನೋ ಎಂಬಂತೆ ಆಗಿಬಿಟ್ಟಿದೆ.

Advertisement

ಉತ್ತಮವಾಗಿರುವ ವ್ಯವಸ್ಥೆಯನ್ನು ಹಾಳು ಮಾಡುವುದು, ಆ ವ್ಯವಸ್ಥೆ ಹಾಳಾದ ಮೇಲೆ ವಿಕೃತಿ ಮೆರೆಯುವುದು, ಅನಂತರ ವ್ಯವಸ್ಥೆಯ ಮೇಲೆಯೇ ಗೂಬೆ ಕೂರಿಸುವುದು ಮಾಮೂಲಿಯಾಗಿಬಿಟ್ಟಿದೆ.

JEE ಮತ್ತು NEET‌ ವಿಷಯದಲ್ಲೂ ಇದೇ ನಡೆಯುತ್ತಿದೆ! ದೇಶದ ಐಐಟಿ, ಎನ್‌ಐಟಿ ಇತ್ಯಾದಿ ಪ್ರತಿಷ್ಠಿತ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ “JEE’ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ “NEET’ ನಡೆಸಲಾಗುತ್ತದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೋವಿಡ್‌ ನೆಪದಲ್ಲಿ ಈ ಪರೀಕ್ಷೆಗಳನ್ನು ಮುಂದೂಡಬೇಕು ಎನ್ನುವ ಒತ್ತಡವನ್ನು ಕೇಂದ್ರ ಸರಕಾರದ ಮೇಲೆ ಹಾಕುತ್ತಿವೆ.

ಆದರೆ ಇಂತಹದ್ದೇ ಪರಿಸ್ಥಿತಿಯಲ್ಲೇ ಕರ್ನಾಟಕವು ಪಿಯುಸಿ, ಎಸೆಸೆಲ್ಸಿ, ಎಂಜಿನಿಯರಿಂಗ್‌, ಪಶು ವಿಜ್ಞಾನ, ಕೃಷಿ ವಿಜ್ಞಾನ, ಯೋಗ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿ ಯಶಸ್ವಿಯಾಗಿದೆ. ಈ ಮಾದರಿಯನ್ನು ದೇಶಕ್ಕೆ ಅನ್ವಯಿಸಬಹುದು. ಸಿಇಟಿ ಬರೆದವರಿಗೆ ಬಾರದ ಕೋವಿಡ್ 19 ನೀಟ್‌ ಮತ್ತು ಜೆಇಇ ಪರೀಕ್ಷೆ ಬರೆದವರಿಗೆ ಬರುತ್ತದೆಯೇ? ಏಕೆ ಈ ಧೋರಣೆ?

Advertisement

ನನಗೆ ಕೆಲವರ ಮನಸ್ಥಿತಿಯ ಬಗ್ಗೆ ಅರ್ಥವಾಗುವುದೇ ಇಲ್ಲ. ಅದೇಕೋ ಕೆಲವರಿಗೆ ಒಂದು ದೇಶ, ಒಂದು ಪರೀಕ್ಷೆ ಎಂಬ ಪರಿಕಲ್ಪನೆಯನ್ನು ಜೀರ್ಣಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಇದರ ಹಿಂದೆ ಏನೋ ಹುನ್ನಾರ ಇದ್ದ ಹಾಗಿದೆ. ಮೇಲಾಗಿ ಅವರಿಗೆ ಮೆರಿಟ್‌ ಆಧಾರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುವುದೇ ಬೇಕಿಲ್ಲ. ಮೆರಿಟ್‌ ಮೂಲಕ ಸೀಟು ಸಿಗಬಾರದು, ವ್ಯವಸ್ಥಿತವಾಗಿ ಸೀಟು ಹಂಚಿಕೆಯಾಗಬಾರದೆನ್ನುವ ದುರುದ್ದೇಶ ಖಂಡಿತ ಇದ್ದಂತೆ ಕಾಣುತ್ತಿದೆ.

ಯಾವೋ ಕಾಣದ ಕೈಗಳು ಇದರ ಹಿಂದಿವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ನೀಟ್‌ ಪರೀಕ್ಷೆಗೆ ಅಡ್ಡಿಪಡಿಸಲು ಯತ್ನಿಸುತ್ತಲೇ ಇವೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬುದು ನನ್ನ ಅನುಮಾನ. ಹಲವಾರು ವರ್ಷಗಳಿಂದ ಈ ದುಷ್ಟ ಯತ್ನಗಳನ್ನು ಮಾಡುತ್ತಾ ಬರಲಾಗುತ್ತಿದೆಯಾದರೂ, ಆವರ ಉದ್ದೇಶ ಈಡೇರುತ್ತಿಲ್ಲ. ಇಂಥ ಹುನ್ನಾರಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರ ಸೊಪ್ಪು ಹಾಕುವುದಿಲ್ಲ ಹಾಗೂ ಘನವೆತ್ತ ಸುಪ್ರೀಂ ಕೋರ್ಟ್‌ ಕೂಡ ಈ ನಿಟ್ಟಿನಲ್ಲಿ ಪರೀಕ್ಷೆ ಬೇಡ ಎಂದವರ ಮೇಲೆ ಚಾಟಿ ಬೀಸಿದೆ.

ಇಷ್ಟೆಲ್ಲ ವರ್ಷಗಳಲ್ಲಿ ಬೇರೆ ಬೇರೆ ನೆಪಗಳೊಂದಿಗೆ ಅಡ್ಡಿಪಡಿಸುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಸಲ ಕೋವಿಡ್‌ ಎಂಬ ದೊಡ್ಡ ಬ್ರಹ್ಮಾಸ್ತ್ರವೇ ಸಿಕ್ಕಿತ್ತು. ಆದರೆ ಆ ಶಕ್ತಿಗಳ ಹುನ್ನಾರ ವಿಫಲವಾಗಿದೆ. ಭಾರತವು ಜಗತ್ತಿನ ಅತಿ ಮುಖ್ಯ ಪ್ರಗತಿಶೀಲ ರಾಷ್ಟ್ರ. ಇಡೀ ದೇಶದ ಪ್ರಗತಿಯ ಪ್ರಮುಖ ಚಕ್ರವೇ ಶಿಕ್ಷಣವಾಗಿದೆ. ಅದರಲ್ಲೂ ಉನ್ನತ ಶಿಕ್ಷಣವು ಎಲ್ಲ ರಂಗಗಳಲ್ಲೂ ನಮ್ಮ ದೇಶವನ್ನು ಜಾಗತಿಕವಾಗಿ ಮುಂಚೂಣಿಯತ್ತ ಮುನ್ನಡೆಸುತ್ತಿದೆ. ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಇಡೀ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ತೋರುವ ಪ್ರಯತ್ನವೂ ಸಾಗುತ್ತಿದೆ.

ಮುಖ್ಯವಾಗಿ ಕೋವಿಡ್‌ ಅನಂತರದ ಕಾಲದಲ್ಲಿ ದೇಶವನ್ನು ಬಲಿಷ್ಠವಾಗಿ ಕಟ್ಟುವ ಸವಾಲು ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಮೋದಿಯವ ರ ನೇತೃತ್ವ ದಲ್ಲಿ ಅಪಾರ ಪ್ರಯತ್ನವೂ ನಡೆಯುತ್ತಿದೆ. ಇಂಥ ಸಮಯ ದ ಲ್ಲಿ ಅತ್ಯಂತ ವೈಜ್ಞಾನಿಕವಾಗಿ, ಶಿಸ್ತುಬದ್ಧ ವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಉದ್ದೇಶಿಸಿರುವ ನೀಟ್‌ ಮತ್ತು ಜೆಇಇ ಪರೀಕ್ಷೆಗಳನ್ನು ತಡೆಯಲು ವ್ಯವಸ್ಥಿತವಾಗಿ ಅಡ್ಡಿ ಉಂಟು ಮಾಡುವುದು ಹಾಗೂ ಸುಮಾರು 15 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಅಭ್ಯರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುವ ಪ್ರಯತ್ನವನ್ನು ಮುಲಾಜಿಲ್ಲದೇ ಹತ್ತಿಕ್ಕಬೇಕಿದೆ.

ಕರ್ನಾಟಕವೇ ಮಾದರಿ
ದೇಶಕ್ಕೆ ಸಿಇಟಿ ಪರೀಕ್ಷೆಯನ್ನು ಪರಿಚಯಿಸಿದ ಕರ್ನಾಟಕ ಯಶಸ್ವಿಯಾಗಿ 2020ರ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಿದೆ. ನೀಟ್‌ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇದನ್ನು ಗಮನಿಸಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎಲ್ಲ ಮುನ್ನೆಚ್ಚರಿಕೆ ಗಳನ್ನು ತೆಗೆದು ಕೊಂಡಿದೆ. ನಮ್ಮಲ್ಲಿ ಮಾಡಿದಂತೆ ವಿದ್ಯಾರ್ಥಿಗಳ ದೈಹಿಕ ಅಂತರ, ಸ್ಯಾನಿಟೈಸೇಷನ್‌, ಮಾಸ್ಕ್ ಕಡ್ಡಾಯ ಇತ್ಯಾದಿ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಪರೀಕ್ಷೆಗೆ ಯಾವ ಆತಂಕವೂ ಇಲ್ಲ. ವಿದ್ಯಾರ್ಥಿಗಳು ಯಾವುದೇ ಅಪಪ್ರಚಾರಕ್ಕೆ ಕಿವಿ ಗೊಡದೇ ಧೈರ್ಯವಾಗಿ ಪರೀಕ್ಷೆ ಬರೆಯಬೇಕು.

ನೀಟ್‌ ಪರೀಕ್ಷೆ ಬೆಸ್ಟ್
ನೀಟ್‌ ಪರೀಕ್ಷೆ ಅತ್ಯುತ್ತಮವಾಗಿದೆ. ಒಂದು ಪರೀಕ್ಷೆಯ ಮೂಲಕ ದೇಶ ವಿವಿಧೆಡೆ ಪ್ರವೇಶಾತಿ ಪಡೆಯುವ ಪದ್ಧತಿ ಇದಾಗಿದೆ. ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅವರವರೇ ಪರೀಕ್ಷೆಗಳನ್ನು ಮಾಡಿ ಕೊಂಡು, ಅವರವರೇ ಅಡ್ಮಿಷನ್‌ ಕೊಟ್ಟು ಕೊಂಡು ವ್ಯವಸ್ಥೆಯನ್ನು ದುರುಪಯೋಗ ಮಾಡಿ ಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅಂಥವರಿಗೆ ನೀಟ್‌ ಬೇಕಾಗಿಲ್ಲ. ಅವರಿಗೆ ಮಕ್ಕಳ ಹಿತದೃಷ್ಟಿಗಿಂತ ವ್ಯವಹಾರದ ಮೇಲೆ ಹೆಚ್ಚು ಆಸಕ್ತಿ ಇದೆ ಎಂಬುದರಲ್ಲಿ ಅನುಮಾನವೇ ಇಲ್ಲ.  ಆದರೆ ರಾಜ್ಯ ಸರಕಾರ ಈ ಪರೀಕ್ಷೆಗೆ ಬೇಕಾದ ಎಲ್ಲ ಸಹಕಾರ ನೀಡುತ್ತದೆ ಹಾಗೂ ನಾವೂ ಪರೀಕ್ಷೆಗೆ ಸನ್ನದ್ಧರಾಗಿದ್ದೇವೆ. ವಿದ್ಯಾರ್ಥಿ ಮತ್ತು ಪೋಷಕರು ಅಪಪ್ರಚಾರಕ್ಕೆ ಕಿವಿಗೊಡದೇ ಇಂಥ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬುದು ನನ್ನ ಮನವಿಯಾಗಿದೆ.

ಸಿಇಟಿ ಕತೆಯೇ ರೋಚಕ
ಎಪ್ರಿಲ್‌ ತಿಂಗಳಲ್ಲಿಯೇ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಲಾಕ್‌ಡೌನ್‌ ಕಾರಣಕ್ಕೆ ಮುಂದಕ್ಕೆ ಹಾಕಬೇಕಾಯಿತು. ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ನಾವು ಧೃತಿಗೆಡಲಿಲ್ಲ. ಎಲ್ಲ ಶಿಕ್ಷಣ ತಜ್ಞರು, ವಿಶ್ವವಿದ್ಯಾಲ ಯಗಳ ಉಪ ಕುಲಪತಿಗಳು ಸೇರಿದಂತೆ ಪರೀಕ್ಷೆಗೆ ಸಂಬಂಧಪಟ್ಟ ಪ್ರತಿಯೊಬ್ಬರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಯಿತು. ಅಂತಿಮವಾಗಿ ಜುಲೈ 30-31ರಂದು ಪರೀಕ್ಷೆ ನಡೆಸುವುದು ಎಂದು ತೀರ್ಮಾನವಾಯಿತು. ವೈರಸ್‌ ಇನ್ನೂ ಬರುತ್ತಿದೆ ಎನ್ನುವಾಗಲೇ ನಮ್ಮ ಉನ್ನತ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಎಲ್ಲ ಸಾಧ್ಯತೆಗಳನ್ನು ಹುಡುಕಿದೆವು. ಅದಕ್ಕೆ ಇಂಬು ಕೊಡುವಂತೆ ಲಾಕ್‌ಡೌನ್‌ ಕಾರಣದಿಂದ ಕೋಚಿಂಗ್‌ನಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳ ನೆರವಿಗೆ ಧಾವಿಸಲಾಯಿತು.

ಅಭಿಪ್ರಾಯ ಸಂಗ್ರಹ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಎಲ್ಲವೂ ಸರಿ. ಪರೀಕ್ಷೆ ನಡೆಸುವುದು ಹೇಗೆ? ಇದಕ್ಕೆ ಅತ್ಯಂತ ವೈಜ್ಞಾನಿಕವಾಗಿ ಪ್ಲಾನ್‌ ಮಾಡಲಾಯಿತು. ಇದಕ್ಕಾಗಿ ದೊಡ್ಡ ಪಡೆಯನ್ನೇ ರಚನೆ ಮಾಡಲಾಯಿತು. ಅದಕ್ಕಾಗಿ ಎಸ್‌ಒಪಿ ಯನ್ನು ರೂಪಿಸಲಾಯಿತು. ಮಕ್ಕಳು ತಮ್ಮ ಮನೆಗಳಿಂದ ಆತಂಕವಿಲ್ಲದೆ ಬಂದು- ಹೋಗುವುದಕ್ಕೆ ಸಾರಿಗೆ ಸಂಸ್ಥೆಗಳು ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದವು. ಕಂಟೈನ್ಮೆಂಟ್‌ ಝೋನ್‌, ಪಾಸಿಟಿವ್‌ ಬಂದಿದ್ದ ಮಕ್ಕಳ ಪರೀಕ್ಷೆ ಹೇಗೆ? ಇತ್ಯಾದಿ ಸಂಗತಿಗಳೆಲ್ಲವನ್ನೂ ಇಟ್ಟುಕೊಂಡು ಪ್ರತಿಯೊಂದು ಸಮಸ್ಯೆಯನ್ನು ಪರಿಶೀಲಿಸುತ್ತಾ ಅದಕ್ಕೆ ಪರಿಹಾರವನ್ನೂ ಹುಡುಕುತ್ತಾ ಹೆಜ್ಜೆ ಇಡಲಾಯಿತು.

ರಾಜ್ಯ ಪರೀಕ್ಷಾ ಪ್ರಾಧಿಕಾರದ ಅಡಿಯಲ್ಲಿ ಆರೋಗ್ಯ, ಬಿಬಿಎಂಪಿ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಉನ್ನತ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಒಳಗೊಂಡ ಕಾರ್ಯ ನಿರ್ವಾಹಕ ಸರಪಳಿಯನ್ನೇ ನಿರ್ಮಿಸಲಾಯಿತು. ಈ ಪ್ಲಾನ್‌ ಅದ್ಭುತವಾಗಿ ಕೆಲಸ ಮಾಡಿತು. ಜಿಲ್ಲಾಧಿಕಾರಿಗಳಂತೂ ಅವರವರ ಜಿಲ್ಲೆಗಳಲ್ಲಿ ಪರೀಕ್ಷಾ ಯೋಧರಂತೆ ಕೆಲಸ ಮಾಡಿದರು.

ಜುಲೈ 30ರಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಎಲ್ಲ ಭಾಗಗಳ ಚಿತ್ರಣ ಗೊತ್ತಾದಾಗ ನಮ್ಮೆಲ್ಲರ ಪ್ರಯತ್ನ, ಸರಕಾರದ ಇಚ್ಛಾಶಕ್ತಿ ಎಲ್ಲವೂ ಫಲ ನೀಡಿ ಪರಿಮಳಿಸುತ್ತಿತ್ತು. ಒಂದು ರೀತಿಯ ಧನ್ಯತೆಯ ಭಾವ ಬಂದಿತ್ತು. ನಮ್ಮೆಲ್ಲರ ಪ್ರಯತ್ನದ ನಡುವೆಯೂ ಮಕ್ಕಳ ಅಧೈರ್ಯಪಟ್ಟು ಪರೀಕ್ಷಾ ಕೇಂದ್ರಗಳಿಗೆ ಬರದೇ ಹೋಗಿದ್ದಿದ್ದರೆ ಏನಾಗಿರುತ್ತಿತ್ತು ಎಂಬುದನ್ನು ಒಮ್ಮೆ ಊಹಿಸಿ ನೋಡಿ. ಎಲ್ಲರೂ ದಯವಿಟ್ಟು ಗಮನಿಸಬೇಕು. ಮಕ್ಕಳ ವಿಷಯದಲ್ಲಿ, ಅವರ ಭವಿಷ್ಯದ ದೃಷ್ಟಿಯಲ್ಲಿ ಚೆಲ್ಲಾಟ ಆಡುವುದು ಅಕ್ಷಮ್ಯ. ಸಿಇಟಿ ಗೆದ್ದಿದೆ, ಅದೇ ರೀತಿ ನೀಟ್‌ ಕೂಡ ಗೆಲ್ಲಲು ಬಿಡಿ.

– ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next