Advertisement

ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ

11:49 AM May 22, 2022 | Team Udayavani |

ದೇವನಹಳ್ಳಿ: ಈ ವರ್ಷ ಜಿಲ್ಲೆಯಲ್ಲಿ ಸಕಾಲಕ್ಕೆ ಬಿದ್ದ ಪೂರ್ವ ಮುಂಗಾರು ಮಳೆಯಿಂದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ. ಕಳೆದ ಒಂದು ವಾರದಿಂದ ಮಳೆಚೆನ್ನಾಗಿ ಆಗುತ್ತಿದ್ದು, ಖುಷಿಯಿಂದ ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.

Advertisement

ಭರಣಿ ಮಳೆ ಸುರಿದರೆ ಧರಣಿ ಬೆಳೆ ಎಂಬ ನಾಣ್ಣುಡಿ ಗ್ರಾಮೀಣ ಭಾಗದ ರೈತರಲ್ಲಿ ವಾಡಿಕೆಯಲ್ಲಿದೆ. ಇತ್ತೀಚೆಗೆ ಕೃಷಿ, ಬೀಜ, ಗೊಬ್ಬರ, ಉಳುಮೆ ಮತ್ತು ಕೂಲಿ ವೆಚ್ಚಗಳು ದುಬಾರಿಯಾಗಿದ್ದರೂ, ರೈತರು ಹರ್ಷದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಮಳೆಗೆ ಬಿತ್ತನೆಯನ್ನು ರಾಗಿ, ಮುಸುಕಿನ ಜೋಳ, ಅವರೆ, ತೊಗರಿ, ನವಣೆ, ಸಾಸಿವೆ, ಅಲಸಂದಿ, ಸ್ವಾಮೆ, ಸಜ್ಜೆ, ಹಾರಿಕ, ಸೇರಿದಂತೆ ಎಲ್ಲ ಬೆಳೆಗಳಿಗೆ ಬಿತ್ತನೆ ಕಾರ್ಯವನ್ನು ರೈತರು ಮಾಡುತ್ತಾರೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಬೆಳೆಗಳನ್ನಿಡಲು ಇಲಾಖೆ ಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮಾನ್ಯವಾಗಿ ಒಟ್ಟು 77  ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತದೆ. ಅದರಲ್ಲಿ 66 ಸಾವಿರ ಹೆಕ್ಟೇರ್‌ ರಾಗಿ ಬೆಳೆಯನ್ನು ರೈತರು ಇಡುತ್ತಾರೆ.

ಉಳಿದಂತೆ ಮುಸುಕಿನ ಜೋಳ ಇಡುತ್ತಾರೆ. ಈ ಬಾರಿ ಮುಸುಕಿನ ಜೋಳವನ್ನು ಹೆಚ್ಚಳದ ನಿರೀಕ್ಷೆ ಇದೆ.

ಬೆಳೆಯನ್ನಿಡಲು ಉತ್ತಮ ವಾತಾವರಣ: ಮಳೆಯು ರೈತರಿಗೆ ವರದಾನ ಆಗಿರುವುದರಿಂದ ಈಗಿನಿಂದಲೇ ರೈತರು ಭೂಮಿಯನ್ನು ಹದಗೊಳಿಸಿ ಕೃಷಿ ಚಟುವಟಿಕೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಉತ್ತಮ ಮುಂಗಾರು ಮಳೆ ಆಗಿರುವುದ‌ರಿಂದ ಮುಸುಕಿನ ಜೋಳ, ರಾಗಿ, ಆಹಾರ ಧಾನ್ಯಗಳ ಬೆಳೆಯನ್ನಿಡಲು ಉತ್ತಮ ವಾತಾವರಣವಿದೆ. ರೈತರು ಮಳೆಯಾಗುವುದರ ಆಧಾರದಲ್ಲಿ ಬಿತ್ತನೆ ಕಾರ್ಯ ನಡೆಸುತ್ತಾರೆ. ಜೂನ್‌ನಲ್ಲಿ ಪ್ರಾರಂಭವಾಗುವ ಮಳೆ ಬೇಗನೇ ಬೀಳುತ್ತಿರುವುದರಿಂದ ಅಲ್ಪಾವಧಿ ಬೆಳೆಯನ್ನಿಡಲು ಸಹಕಾರಿಯಾಗುತ್ತದೆ. ಇದೇ ರೀತಿ ಮಳೆ ಮುಂದುವರಿದರೆ ಜೋಳ ಬಿತ್ತನೆ ಶುರುವಾಗುತ್ತದೆ. ತದನಂತರ ರಾಗಿ ಬಿತ್ತನೆಯನ್ನು ರೈತರು ಪ್ರಾರಂಭಿಸುತ್ತಾರೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯಾಗಿದೆ.

Advertisement

ಗರಿಗೆದರಿದ ಕೃಷಿ ಚಟುವಟಿಕೆ: ಈಗ ಬೇಸಾಯ ಮಾಡಿದರೆ, ಕಳೆ ಮತ್ತು ಹುಲ್ಲು ಬೀಜಗಳು ಭೂಮಿಯ ಮೇಲೆ ಬಂದು ಬಿಸಿಲಿಗೆ ಒಣಗಿ ಹೋಗುತ್ತವೆ. ಇದರಿಂದ ಬಿತ್ತನೆ ಬಳಿಕ ಕಳೆ ನಿರ್ವಹಣೆ ಸುಲಭವಾಗುತ್ತದೆ. ಹೀಗಾಗಿ, ರೈತರು ತಮ್ಮ ಜಮೀನುಗಳಲ್ಲಿ ಬೇಸಾಯಕ್ಕಾಗಿ ಮುಂದಾಗಿರುವುದು ಕಾಣಬಹುದು. ಜೂನ್‌ ತಿಂಗಳ ಮೊದಲ ವಾರದಲ್ಲಿ ಪ್ರಾರಂಭಿಸಬೇಕಾಗಿದ್ದ ಬಿತ್ತನೆ ಕೆಲಸಕ್ಕೆ ಮೇ ತಿಂಗಳಿನಲ್ಲಿಯೇ ರೈತರು ಭೂಮಿಯನ್ನು ಹದಗೊಳಿಸಲು ಮುಂದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳಲ್ಲಿ ಬಿರುಸಿನ ಕೃಷಿ ಚಟುವಟಿಕೆ ಗರಿಗೆದರಿದೆ.

ಡಿಸೇಲ್‌ ಸಬ್ಸಿಡಿ ರೈತರ ಖಾತೆಗೆ ಜಮಾ: ಸರ್ಕಾರ ರೈತ ಶಕ್ತಿ ಹೊಸ ಯೋಜನೆ ಘೋಷಿಸಿದೆ. ಎಫ್ಐಡಿ(ರೈತರ ಐಡಿ) ಮೂಲಕ ದಾಖಲೆ ರಹಿತವಾಗಿಯೇ ಅರ್ಹ ರೈತರು ಡಿಸೇಲ್‌ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ರೈತ ಸಂಪರ್ಕ ಕೇಂದ್ರದಲ್ಲಿ ಎಫ್ಐಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. 1 ಲಕ್ಷ 49ಸಾವಿರ ಎಫ್ಐಡಿಗಳು ಈಗಾಗಲೇ ನೋಂದಾಯಿತವಾಗಿದ್ದು, 40 ಸಾವಿರ ರೈತರು ಮಾಡಿಸಿಕೊಳ್ಳುವವರಿದ್ದಾರೆ. ಪ್ರತಿ ಎಕರೆಗೆ 250ರೂ.ಗಳಂತೆ 5 ಎಕರೆಗೆ 1250 ರೂ.ಗಳ ವರೆಗೆ ಸಬ್ಸಿಡಿ ರೈತ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಲು ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.

ಗೊಬ್ಬರದ ಕೊರತೆ ಇಲ್ಲ :

ಕೃಷಿ ಇಲಾಖೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸ್ತತ ವರ್ಷದಲ್ಲಿ ಯಾವುದೇ ರಸಗೊಬ್ಬರದ ಕೊರೆತೆ ಇಲ್ಲದಂತೆ ಇಲಾಖೆ ಎಚ್ಚರವಹಿಸಿದೆ. ರೈತರು ಒಂದೇರಸಗೊಬ್ಬರದ ಮೇಲೆ ಅವಲಂಬಿತರಾಗುವಬದಲಿಗೆ ಯಾವ ರಸಗೊಬ್ಬರ ಸಿಗುತ್ತದೆಯೋ ಅದನ್ನು ಬಳಕೆ ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ. ಒಂದು ವೇಳೆ ಡಿಎಪಿ ರಸಗೊಬ್ಬರಸಿಗದ ಪಕ್ಷದಲ್ಲಿ ಬದಲಿಗೆ ಕಾಂಪೋಸ್ಟ್‌ ಬಳಕೆಮಾಡಬಹುದು. ಡಿಎಪಿ 20-20 ಸಾಕಷ್ಟುಕೊರತೆ ಇದೆ. ಆದರೆ, ಗಾಬರಿಯಾಗುವ ಅವಶ್ಯಕತೆ ಇಲ್ಲ. ಒಂದು ವೇಳೆ ರಸಗೊಬ್ಬರಕೊರತೆ ಇದ್ದಲ್ಲಿ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಇಲಾಖೆ ಸಜ್ಜಾಗಿದೆ.

ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆ ಕಾರ್ಯ ಮಾಡಲು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ರೈತರು ಮಳೆ ಸಮಯದಲ್ಲಿ ಬಿತ್ತನೆ ಕಾರ್ಯಕ್ಕೆಅನುಕೂಲ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಗೊಬ್ಬರ, ಬೀಜ, ಇತರೆ ಬೆಲೆ ಏರಿಕೆಯಾಗಿದ್ದರೂ, ಕೃಷಿ ಚಟುವಟಿಕೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. – ರಮೇಶ್‌, ರೈತ

ರೈತರು ಇಲಾಖೆಯಲ್ಲಿ ದೊರೆಯುವ ರೈತ ಶಕ್ತಿ ಯೋಜನೆ ಮತ್ತು ರಸಗೊಬ್ಬರವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹದು. ಜಿಲ್ಲೆಯಲ್ಲಿಮುಂಗಾರು ಬಿತ್ತನೆ ಪೂರ್ವ ಚಟುವಟಿಕೆ ಪ್ರಾರಂಭಿಸಲು ಸೂಕ್ತ ವಾತಾವರಣವಿದೆ. – ಜಯಸ್ವಾಮಿ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

 

– ಎಸ್‌.ಮಹೇಶ್

Advertisement

Udayavani is now on Telegram. Click here to join our channel and stay updated with the latest news.

Next