ಸೊರಬ: ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಡುರಸ್ತೆಯಲ್ಲೇ ಕರುವೊಂದು ಪ್ರಾಣ ಬಿಟ್ಟ ಘಟನೆ ಭಾನುವಾರ ಪಟ್ಟಣದ ಚಾಮರಾಜ ಪೇಟೆಯಲ್ಲಿ ಸಂಭವಿಸಿದ್ದು, ತಾಯಿ ಹಸು ಮೃತಪಟ್ಟ ತನ್ನ ಕರುವಿನ ಬಳಿ ನಿಂತು ಕಣ್ಣೀರು ಹಾಕುತ್ತಿರುವ ದೃಶ್ಯ ನೆರೆದವರ ಮನ ಕಲುಕಿತು.
ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಐದು ದಿನದ ಕರು ಮೃತಪಟ್ಟಿದೆ. ಹಸು ಮತ್ತು ಕರು ರಸ್ತೆಯಲ್ಲಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಸ್ಥಳೀಯರು ಕರುವನ್ನು ಬದುಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಮೃತ ಕರುವನ್ನು ಎಬ್ಬಿಸಲು ಹಸು ಪ್ರಯತ್ನಿಸುತ್ತಿರುವುದ ಕಂಡು ಜನರ ಕಣ್ಣಂಚಿನಲ್ಲಿ ನೀರು ತುಂಬಿದವು.
ಈ ವೇಳೆ ಅಲ್ಲಿಗೆ ಬಂದ ಇನ್ನೊಂದು ದನ ಸಹ ಕರುವನ್ನು ಏಳಿಸಲು ಯತ್ನಿಸಿದ್ದು ಕಂಡರೆ, ಮೂಕ ಪ್ರಾಣಿಗಳಲ್ಲಿನ ಬಾಂಧವ್ಯವನ್ನು ಸಾರುತ್ತಿತ್ತು. ಜೊತೆಗೆ ಕರುವಿನ ಅಂತ್ಯಕ್ರಿಯೆ ಮುಗಿಯುವವರೆಗೂ ತಾಯಿ ಹಸು ಜಾಗ ಬಿಟ್ಟು ಕದಲಲಿಲ್ಲ. ಸ್ಥಳೀಯ ಬಜರಂಗದಳ ಕಾರ್ಯಕರ್ತರು ಕರುವಿನ ಅಂತ್ಯಕ್ರಿಯೆಗೆ ಸಹಕರಿಸಿದರು.
ಇದನ್ನೂ ಓದಿ :ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ
ಅಪ್ರಾಪ್ತರಿಂದ ವಾಹನ ಚಲಾವಣೆ: ಪಟ್ಟಣದ ಚಾಮರಾಜಪೇಟೆ, ಚಿಕ್ಕಪೇಟೆ ಸೇರಿದಂತೆ ಜನ ವಸತಿ ಪ್ರದೇಶಗಳಲ್ಲಿ ಅಪ್ರಾಪ್ತರು ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಪೋಷಕರು ಸಹ ಬೇಜವಾಬ್ದಾರಿಯಿಂದ ಮಕ್ಕಳಿಗೆ ಲಘುವಾಹನಗಳನ್ನು ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.