ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾಡ್ಯುಲರ್ ಫುಡ್ಕೋರ್ಟ್ ನಿರ್ಮಿಸಿದ್ದು, ನವೆಂಬರ್ ತಿಂಗಳಿನಿಂದ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ಮೈಸೂರಿನ ಜಯದೇವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಫುಡ್ಕೋರ್ಟ್ ಪರಿಶೀಲಿಸಿ ಮಾತನಾಡಿದ ಅವರು, ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಈ ಫುಡ್ಕೋರ್ಟ್ ಅನ್ನು ನಿರ್ಮಿಸಿದ್ದು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಾಗಲಿ ಖಾಸಗಿ ಆಸ್ಪತ್ರೆಗಳಲ್ಲಾಗಲಿ ಈ ರೀತಿಯ ಆಧುನಿಕ ಫುಡ್ಕೋರ್ಟ್ ಇರುವುದನ್ನು ನಾನು ನೋಡಿಲ್ಲ. ಆಧುನಿಕ ಸೌಲಭ್ಯವುಳ್ಳ ಮಾಡ್ಯುಲರ್ ಕಿಚನ್ ಇದಾಗಿದ್ದು,
ಆಹಾರ ಪದಾರ್ಥಗಳು ತಣ್ಣಗಾಗದ ರೀತಿ ಹಾಟ್ ಬೆನ್ಮೆರೆನ್ ವ್ಯವಸ್ಥೆ ಇದ್ದು, 120 ಜನರಿಗೆ ಕೂರುವ ವ್ಯವಸ್ಥೆಯಿದೆ. ವೈದ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆಟೋಮೆಟಿಕ್ ವಾಷಿಂಗ್ ಸೌಲಭ್ಯವಿದ್ದು ಗುಣಮಟ್ಟದ ಆಹಾರ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಒದಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ವೈದ್ಯರು ಹಾಗೂ ಸಿಬ್ಬಂದಿಗೆ ಒತ್ತಡ ಕಡಿಮೆಯಾಗಲು ಬ್ಯಾಡ್ಮಿಂಟನ್ ಕೋರ್ಟ್, ವಾಲಿಬಾಲ್ ಕೋರ್ಟ್ ಒಳಾಂಗಣದಲ್ಲಿ ಟೇಬಲ್ ಟೆನ್ನಿಸ್, ಜಿಮ್ನಾಷಿಯಂ, ಯೋಗ ಕೇಂದ್ರ, ಗ್ರಂಥಾಲಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಆಸ್ಪತ್ರೆಯ ಆವರಣದಲ್ಲಿ 1,500 ಗಿಡಗಳನ್ನು ಸಹ ನೆಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ, ಆರ್ಎಂಒ ಡಾ.ಪಾಂಡುರಂಗಯ್ಯ, ಡಾ.ಸಂತೋಷ್, ಡಾ. ಜಯಪ್ರಕಾಶ್, ಡಾ.ಕುಮಾರ್, ಡಾ.ಶಿವಶಂಕರ್, ಡಾ.ಪೂರ್ಣೇಶ್, ನರ್ಸಿಂಗ್ ಅಧೀಕ್ಷಕ ಹರೀಶ್ಕುಮಾರ್, ಪಿಆರ್ಒ ವಾಣಿಮೋಹನ್, ಯೋಗಾನಂದ, ರಮೇಶ್, ಪುನೀತ್, ಸುನೀತಾ ಹಾಜರಿದ್ದರು.