Advertisement

ಎಸ್‌ಒಪಿ ರಸಗೊಬ್ಬರ ಚೀಲದಲ್ಲಿ ರಂಗೋಲಿಪುಡಿ!

06:12 PM May 27, 2022 | Team Udayavani |

ಹುಣಸೂರು: ತಂಬಾಕು ಮಂಡಳಿಯಿಂದ ಹೊಗೆಸೊಪ್ಪು ಬೆಳೆಗಾರರಿಗೆ ವಿತರಿಸಿರುವ ಎಸ್‌ಒಪಿ (ಪೊಟಾಷ್‌)ಗೊಬ್ಬರವು (ರಂಗೋಲಿಪುಡಿ) ನಕಲಿಯಾಗಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಪ್ರಸಕ್ತ ಸಾಲಿನ ಆರಂಭದಲ್ಲಿ ಉತ್ತಮ ಮಳೆಯಾಗಿದ್ದು, ತಂಬಾಕು ಬೆಳೆಗಾರರು ತಮ್ಮ ಜಮೀನಿಗೆ ತಂಬಾಕು ಸಸಿ ನಾಟಿ ಮಾಡಿದ್ದಾರೆ. ತಂಬಾಕು ಮಂಡಳಿಯಿಂದ ಸಕಾಲದಲ್ಲೇ ರಸಗೊಬ್ಬರ ವಿತರಣೆಗೆ ಕ್ರಮಕೈಗೊಂಡು ಪ್ರತಿ ಹೊಗೆಸೊಪ್ಪು ಬೆಳೆಗಾರನಿಗೆ ಎರಡು ಚೀಲ ಡಿಎಪಿ, ಎ.ಎಸ್‌ 6 ಚೀಲ ಹಾಗೂ ಎರಡು ಚೀಲ ಎಸ್‌ಒಪಿ ರಸಗೊಬ್ಬರ ವಿತರಿಸಿದೆ.

ಆದರೆ ಮಂಡಳಿಯಿಂದ ವಿತರಿಸಿರುವ ಎರಡು ಚೀಲದಲ್ಲಿ ಒಂದು ಚೀಲ ಗುಣಮಟ್ಟದಿಂದ ಕೂಡಿದ್ದರೆ ಮತ್ತೂಂದು ಚೀಲ ರಂಗೋಲಿ ಪುಡಿಯಂತಿದೆ. ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಲು ಸಜ್ಜಾಗುತ್ತಿದ್ದಂತೆ ಚೀಲ ಸುರಿದು ಪರಿಶೀಲಿಸಿದಾಗಲಷ್ಟೇ ರಂಗೋಲಿ ಪುಡಿ ಇರುವುದು ಪತ್ತೆಯಾಗಿದೆ.

2019ರಿಂದೀಚೆಗೆ ಬರಗಾಲ, ಅತಿವೃಷ್ಟಿಯ ಸುಳಿಗೆ ಸಿಲುಕಿರುವ ತಂಬಾಕು ಬೆಳೆಗಾರರು, ಈ ಬಾರಿಯ ಮಳೆಗೆ ಸಸಿ ಉಳಿಸಿಕೊಳ್ಳಲು ಹೆಣಗಾಡಿ, ಅಳಿದುಳಿದ ಸಸಿಗಳೊಂದಿಗೆ ಸಾಲಸೋಲ ಮಾಡಿ ಮತ್ತೆ ನಾಟಿ ಮಾಡಿದ್ದು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಆದರೆ ಕೆಲ ಅನಧಿಕೃತ ಏಜೆನ್ಸಿಯವರು ಮಂಡಳಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಗೊಬ್ಬರ ವಿತರಿಸಿ ರೈತರ ಬದುಕನ್ನೇ ಮೂರಾಬಟ್ಟೆ ಮಾಡಲು ಮುಂದಾಗಿದ್ದಾರೆ.

ತಂಬಾಕು ಮಂಡಳಿ ವಿತರಣೆ ಮಾಡಿರುವ ಗೊಬ್ಬರ ಚೀಲದಲ್ಲಿ ಇಂತಿಷ್ಟು ಪ್ರಮಾಣದ ಸಾರಜನಕ, ರಂಜಕ, ಪೊಟಾಷಿಯಂ ಇರಬೇಕೆಂಬ ಮಾನದಂಡ ನಮೂದಿಸಿ ದ್ದಾರೆ. ಆದರೆ ಚೀಲದೊಳಗೆ ಮಾತ್ರ ರಂಗೋಲಿ ಪುಡಿಯ ನಕಲಿ ಗೊಬ್ಬರವಿದೆ. ಇದ್ಯಾವುದನ್ನೂ ಗಮನಿಸದ ರೈತರು ತಂಬಾಕು ಸಸಿಗಳಿಗೆ ಗೊಬ್ಬರ ಹಾಕಿದ್ದು, ರಂಗೋಲಿ ಎಂಬುದನ್ನು ಕಂಡಿದ್ದು, ಲಕ್ಷಾಂತರ ರೂ. ಸಾಲ ಮಾಡಿ ಹಾಕಿದ್ದ ಹಣ ಸಿಗುವುದೋ ಇಲ್ಲವೋ ಎಂಬ ಭೀತಿಯಲ್ಲಿ ರೈತರಿದ್ದಾರೆ.

Advertisement

ವರದಿಗಾಗಿ ಕಾಯುತ್ತಿದ್ದೇವೆ
ಹರಾಜು ಮಾರುಕಟ್ಟೆ ಅಧೀಕ್ಷಕ ಡಾ.ಬ್ರಿಜ್‌ ಭೂಷಣ್‌ ಮಾತನಾಡಿ, ಮಂಡಳಿಯಿಂದ ವಿತರಿಸಿರುವ ಗೊಬ್ಬರವನ್ನು ತಂಬಾಕು ಹರಾಜು ಮಾರುಕಟ್ಟೆ ರೈತಸಮಿತಿಯವರೇ ಶಿಫಾರಸು ಮಾಡಿರುವ ಟ್ರಾನ್ಸ್‌ವಲ್ಡ್‌ ಹಾಗೂ ಐಪಿಎಲ್‌ ಕಂಪನಿಯ ಪೊಟಾಷ್‌ಅನ್ನು ವಿತರಣೆ ಮಾಡಲಾಗಿದೆ. ಟ್ರಾನ್ಸ್‌ ವಲ್ಡ್‌ ಕಂಪನಿ ಸರಬರಾಜು ಮಾಡಿರುವ ಪೊಟಾಷ್‌ ಕಲ್ಲರ್‌ ಸ್ಪಲ್ಪ ವ್ಯತ್ಯಾಸ ಕಂಡುಬಂದಿದ್ದು, ಆದರೆ ಅದರಲ್ಲಿರುವ ಖನಿಜಾಂಶ ಸಮ ಪ್ರಮಾಣದಲ್ಲಿದೆ. ಕೆಲವರು ರಂಗೋಲಿಪುಡಿ ಬಗ್ಗೆ ದೂರು ನೀಡಿದ್ದಾರೆ. ಮಂಡಳಿಯಿಂದ ಈಗಾಗಲೆ ಗೊಬ್ಬರವನ್ನು ಪ್ರಯೋಗಾ ಲಯಕ್ಕೆ ಕಳುಹಿಸಲಾಗಿದೆ. ನಕಲಿಗೊಬ್ಬರವಾಗಿದ್ದರೆ ಈಗಾಗಲೇ ಪ್ರಯೋಗಾಲಯದಿಂದ ತಕ್ಷಣವೇ ಮಾಹಿತಿ ನೀಡುತ್ತಿದ್ದರು, ಆದರೂ ವರದಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

ನನಗೆ ಎರಡು ಚೀಲ ಡಿಎಪಿ, ಆರು ಚೀಲ ಎಎಸ್‌, ಎರಡು ಚೀಲ ಪೊಟಾಷ್‌ ವಿತರಿಸಿದ್ದಾರೆ. ಒಂದರಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರವಿದೆ. ಮತ್ತೂಂದು ಚೀಲ ಬಿಚ್ಚಿ ನೋಡಿದ ವೇಳೆ ರಂಗೋಲಿಪುಡಿ ಇದ್ದು, ಯಮಗುಂಬ ಗ್ರಾಮದ 16 ರೈತರಿಗೆ ವಿತರಣೆ ಮಾಡಿರುವ ಗೊಬ್ಬರದ ಸ್ಥಿತಿಯೂ ಇದೇ ಆಗಿದೆ.
ಮಹದೇವಪ್ಪ, ಯಮಗುಂಬ ರೈತ

ಈಗಾಗಲೆ ಕಟ್ಟೆಮಳಲವಾಡಿಯ ಮೂರು ಹರಾಜು ಮಾರುಕಟ್ಟೆ ಹಾಗೂ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಎಸ್‌ಒಪಿ ಮಾದರಿಯನ್ನು ಸಂಗ್ರಹಿಸಿದ್ದು, ಮೇಲ್ನೋಟಕ್ಕೆ ಗುಣಮಟ್ಟ ಇದೆ. ಆದರೂ ಮಂಡ್ಯದ ಕೃಷಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ.
ವೆಂಕಟೇಶ್‌, ಹಿರಿಯ ಸಹಾಯಕ ಕೃಷಿ ನಿರ್ದೇಶಕ,
ಹುಣಸೂರು.

*ಸಂಪತ್‌ ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next