ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್ ಕಿಶೋರ್ ಅವರಿಗೆ ಪೂರ್ಣ ಪ್ರಮಾಣದ ನೇತೃತ್ವದ ನೀಡಲು ನಿರಾಕರಿಸಿತ್ತು ನಿಜ. ಆದರೆ, ಅವರ ಮಾಜಿ ನಿಕಟವರ್ತಿ ಕರ್ನಾಟಕ ಮೂಲದ ಸುನೀಲ್ ಕಾನುಗೋಲು ಅವರಿಗೆ ಚುನಾವಣಾ ರಣತಂತ್ರ ರಚನೆಯ ಹೊಣೆ ನೀಡಲಾಗಿದೆ.
ಮಹತ್ವದ ಅಂಶವೆಂದರೆ ಮೂರು ಸಮಿತಿಗಳಲ್ಲಿ ಕರ್ನಾಟಕದ ನಾಲ್ವರು ಮುಖಂಡರು ಸ್ಥಾನ ಪಡೆದುಕೊಂಡಿದ್ದಾರೆ, ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆ ತಲಾ ಎಂಟು ಸದಸ್ಯರಿರುವ ಮೂರು ಸಮಿತಿಗಳನ್ನು ರಚನೆ ಮಾಡಲಾಗಿದೆ.
ರಾಜಕೀಯ ವ್ಯವಹಾರಗಳ ಸಮಿತಿ, 2024ನೇ ಚುನಾವಣೆಗಾಗಿನ ಟಾಸ್ಕ್ಫೋರ್ಸ್, ಭಾರತ್ ಜೋಡೋ ಯಾತ್ರೆಗಾಗಿ ಕೇಂದ್ರೀಯ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಲಾಗಿದೆ.
ಸುನೀಲ್ ಕಾನುಗೋಲು ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ನ ಚುನಾವಣಾ ರಣತಂತ್ರ ರೂಪಿಸುವ ಹೊಣೆಯನ್ನೂ ಹೊತ್ತಿದ್ದಾರೆ.
Related Articles
ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಕಾಂಗ್ರೆಸ್ನ ಭಿನ್ನಮತೀಯ ಗುಂಪು “ಜಿ-23’ರ ಗುಂಪಿನ ನಾಯಕ ಗುಲಾಂ ನಬಿ ಆಜಾದ್, ಆನಂದ ಶರ್ಮ ಪ್ರಮುಖವಾಗಿ ಸ್ಥಾನಪಡೆದಿದ್ದಾರೆ. ಇನ್ನುಳಿದಂತೆ ಸಮಿತಿಯಲ್ಲಿ ಕಾಂಗ್ರೆಸ್ನ ಮಾಜಿ ಅಧಕ್ಷ ರಾಹುಲ್ ಗಾಂಧಿ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ.
ಜಿ 23ರ ಸದಸ್ಯರಿಲ್ಲ:
ಮುಂದಿನ ಲೋಕಸಭೆ ಚುನಾವಣೆಗಾಗಿ ವ್ಯೂಹರಚನೆ ಮಾಡಲು ರಚಿಸಲಾಗಿರುವ ಸಮಿತಿಯಲ್ಲಿ “ಜಿ-23′ ಮುಖಂಡರಿಗೆ ಅವಕಾಶ ನೀಡಲಾಗಿಲ್ಲ. ಅದಕ್ಕೆ ಪಿ.ಚಿದಂಬರಂ ನೇತೃತ್ವ ವಹಿಸಿದ್ದಾರೆ. ಕರ್ನಾಟಕ ಮೂಲದ ಸುನೀಲ್ ಕಾನುಗೋಲು, ಜೈರಾಮ್ ರಮೇಶ್, ಪ್ರಿಯಾಂಕಾ ವಾದ್ರಾ ಸ್ಥಾನಪಡೆದಿದ್ದಾರೆ.
ಇಬ್ಬರಿಗೆ ಸ್ಥಾನ:
ಕಾಂಗ್ರೆಸ್ನ “ಭಾರತ್ ಜೋಡೋ ಯಾತ್ರಾ’ ಸಮಿತಿಯಲ್ಲಿ ಕರ್ನಾಟಕದ ಇಬ್ಬರು ಕಾಂಗ್ರೆಸ್ ಮುಖಂಡರಿಗೆ ಸ್ಥಾನ ಲಭಿಸಿದೆ. ಕರ್ನಾಟಕದ ಮಾಜಿ ಗೃಹ ಸಚಿವ, ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಮಿತಿಗೆ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್ ನೇತೃತ್ವ ವಹಿಸಿದ್ದಾರೆ. ಈ ಸಮಿತಿ ಅ.2ರಿಂದ ದೇಶಾದ್ಯಂತ ಯಾತ್ರೆ ಶುರು ಮಾಡಲಿದೆ.