ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ಹಾಸ್ಯ ಕಲಾವಿದೆ ನಯನಾ ವಿರುದ್ಧ ಜೀವ ಬೆದರಿಕೆ ಹಾಗೂ ಅವಾಚ್ಯ ಪದಗಳಿಂದ ನಿಂದನೆ ಆರೋಪದಡಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಪಡೆದಿದ್ದ ನಯನಾ ಮತ್ತವರ ತಂಡದಲ್ಲಿದ್ದ ಕಾಮಿಡಿಯನ್ ಸೋಮಶೇಖರ್ ಎಂಬುವವರು ನಯನಾ ವಿರುದ್ಧ ಆರ್ಆರ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಹುಮಾನ ಮೊತ್ತದ ನಗದು ಹಂಚಿಕೆ ವಿಚಾರದಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾಮಿಡಿ ಗ್ಯಾಂಗ್ ಕಾರ್ಯಕ್ರಮದ ನಯನಾ ತಂಡಲ್ಲಿ ಕಲಾವಿದ ಸೋಮಶೇಖರ್, ಚಿದಂಬರ್ ಮತ್ತು ಅನಿಶ್ ಕೂಡ ಇದ್ದರು. ಈ ತಂಡ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದಿಂದ ಪಡೆದಿದ್ದು ನಗದು ಹಣ ಬಹುಮಾನ ಹಂಚಿಕೆ ವಿಚಾರವಾಗಿಯೇ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಸೀನಿಯರ್ ನಟರಿಗೆ ಹಣ ಕೊಟ್ಟಿಲ್ಲ ಎಂದು ಸೋಮಶೇಖರ್ ವಿರುದ್ಧ ನಯನಾ ಕಿಡಿಕಾರಿದ್ದಾರೆ.
ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಆ ಹಿನ್ನೆಲೆಯಲ್ಲಿ ಕೂಡಲೇ ನಯನಾ ಅವರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ತಿಳಿ ಹೇಳುವಂತೆ ಸೋಮಶೇಖರ್ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರಿಗೆ ಮನವಿ ಮಾಡಿದ್ದಾರೆ. ಜತೆಗೆ ನಯನಾ ಅವರು ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸೋಮಶೇಖರ್ ಪೊಲೀಸರಲ್ಲಿ ವಿನಂತಿಸಿದ್ದಾರೆ.
Related Articles
ಈ ಮಧ್ಯೆ ನಯನಾ ಅವರು, ಸೋಮಶೇಖರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಈ ಆಡಿಯೋ ಫೇಸ್ ಬುಕ್ ಸೇರಿದಂತೆ ಇನ್ನಿತರ ಜಾಲತಾಣಗಳಲ್ಲಿ ಲೀಕ್ ಆಗಿದ್ದು, ಇದು ಸಾಕ ಷ್ಟು ವೈರಲ್ ಆಗಿದೆ.
ಸೋಮಶೇಖರ್ ಧೈರ್ಯ ಇಲ್ಲದ ಹೇಡಿ: ನಯನಾ: ಸೋಮಶೇಖರ್ ವಿರುದ್ಧ ನಯನಾ ವಾಗ್ಧಾಳಿ ನಡೆಸಿದ್ದಾರೆ. ಆತನೊಬ್ಬ ಹೇಡಿ, ಮನುಷ್ಯರ ಎದುರು ಮಾತನಾಡಲು ಧೈರ್ಯ ಇಲ್ಲದವನು. ಈಗ ಪೊಲೀಸರಿಗೆ ದೂರು ನೀಡಿದ್ದಾನೆ. ಈಗಾಗಲೇ ಈ ಸ್ಪರ್ಧೆಯ ಮೊದಲ ವಿಜೇತ ತಂಡದ ಸದಸ್ಯರು ಸಮಾನವಾಗಿ ಬಹುಮಾನದ ನಗದು ಹಂಚಿಕೊಂಡಿದ್ದಾರೆ. ನಮ್ಮ ತಂಡದ ಬಹುಮಾನದ ನಗದು ಹಣವನ್ನು ಈತನ ಅಕೌಂಟ್ಗೆ ಹಾಕಲಾಗಿತ್ತು. ಅದನ್ನು ಕೊಡು ಎಂದು ಕೇಳಿದ್ದೇವೆ. ಸ್ವಲ್ಪ ದಿನ ಬಿಟ್ಟು ಕೊಡುತ್ತೇನೆ ಎಂದು ಹೇಳಬಹುದಾಗಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ.