Advertisement

MLA S.N. Narayanaswamy: ಜನರ ಸಮಸ್ಯೆಗೆ ಎರಡು ದಿನದಲ್ಲೇ ಪರಿಹಾರ!

05:52 PM Dec 21, 2023 | Team Udayavani |

ಬಂಗಾರಪೇಟೆ: ಆಡಳಿತಕ್ಕೆ ಚುರುಕು ಮುಟ್ಟಿಸಿ ಸರ್ಕಾರಿ ಯಂತ್ರವನ್ನು ಕ್ರಿಯಾಶೀಲಗೊಳಿಸುವುದರ ಮೂಲಕ ಜನರ ಮನೆ ಬಾಗಲಿಗೆ ಸರ್ಕಾರಿ ಯೋಜನೆ ತಲುಪಿಸಿ ಸಮಸ್ಯೆಗೆ ಸ್ಥಳದಲ್ಲೇ ಬಗೆಹರಿಸಲು ಜನತಾ ದರ್ಶನ ಕಾರ್ಯಕ್ರಮ ಸಹಕಾರಿ ಆಗಿದೆ ಎಂದು ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಹೇಳಿದರು.

Advertisement

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಅವರ ಸಮ್ಮುಖದಲ್ಲಿಯೇ ಮುಕ್ತಿ ನೀಡುವ ಸಲುವಾಗಿ ಜನತಾ ದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ನೀಡುವ ದೂರುಗಳಿಗೆ ಎರಡು ದಿನದಲ್ಲೇ ಬಗೆಹರಿಸಲಾಗುವುದು ಎಂದರು.

ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಇಲಾಖಾವಾರು ಹಾಗೂ ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರದ ಆಡಳಿತ ಯಂತ್ರವನ್ನು ಜನರ ಬಳಿಯೇ ತೆಗೆದುಕೊಂಡು ಹೋಗಲು ಈ ಜನತಾ ದರ್ಶನ ಹೆಚ್ಚು ಸಹಕಾರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆಗೂ ಮುನ್ನ ನೀಡಿದ ಐದು ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಐದರಲ್ಲಿ ನಾಲ್ಕನ್ನು ಈಡೇರಿಸಿದೆ. ಉಳಿದ ಯುವನಿಧಿಯನ್ನು ಇಷ್ಟರಲ್ಲೆ ಆರಂಭಿಸಲಾಗವುದು ಎಂದು ಹೇಳಿದರು.

ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ: ರಾಜ್ಯದಲ್ಲಿರುವುದು ಜನಪರ, ರೈತಪರ ಸರ್ಕಾರವಾಗಿದೆ. ಸರ್ಕಾರಕ್ಕೆ ಜನ ರನ್ನು ತಮ್ಮ ಸಮಸ್ಯೆಗಳಿಗೆ ವಿನಾಕಾರಣ ಅಲೆಸುವು ದನ್ನು ತಪ್ಪಿಸಲು ಜನತಾ ದರ್ಶನ ರೂಪಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಉತ್ತಮ ಹೆಸರು ಬಂದಿದೆ. ಇಲ್ಲಿ ಸಲ್ಲಿಸುವ ಬಹುತೇಕ ಸಮಸ್ಯೆಗಳನ್ನು ಸ್ಥಳದಲ್ಲೇ ನೀಗಿಸಲು ಶ್ರಮಿಸಲಾಗುವುದು. ಇಲ್ಲವೆ ಕೇವಲ ಎರಡು ದಿನಗಳೊಳಗೆ ನೀಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರಲ್ಲದೆ ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಅನೇಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಜನತಾ ದರ್ಶನ ವೇದಿಕೆ ಪಕ್ಕದಲ್ಲೆ ಸ್ಟಾಲ್‌ಗ‌ಳನ್ನು ಹಾಕಲಾಗಿದೆ. ಅಲ್ಲಿ ರೈತರು ಹೋಗಿ ಮಾಹಿತಿ ಪಡೆಯಬೇಕು ಹಾಗೂ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕೆಂದು ಹೇಳಿದರು.

ಶೀಘ್ರವಾಗಿ ಬಗೆಹರಿಸಲಾಗುವುದು: ಜಿಲ್ಲಾ ಪಂಚಾಯ್ತಿ ಸಿಇಒ ಪದ್ಮಾ ಬಸಂತಪ್ಪ ಮಾತನಾಡಿ, ಸರ್ಕಾರ ಮತ್ತು ಜನರ ನಡುವೆ ಉತ್ತಮ ಬಾಂದವ್ಯ ಬೆಳೆಸಲು ಜೊತೆಗೆ ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿತು ಕೆಲಸ ಮಾಡಲು ಸರ್ಕಾರದ ಪ್ರಥಮ ಹೆಜ್ಜೆ ಜನತಾ ದರ್ಶನ ಕಾರ್ಯಕ್ರಮವಾಗಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಸರ್ವೆಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಅರ್ಜಿಗಳು ಬಂದಿವೆ. ಈ ಅರ್ಜಿಗಳನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಸಾರ್ವಜನಿಕರ ನೀಡುವ ಅರ್ಜಿಗಳನ್ನು ಐಪಿಜೆಆರ್‌ಎಸ್‌ ಪೋರ್ಟ ಲ್‌ನಲ್ಲಿ ದಾಖಲಿಸಲಾಗುವುದು, ಪ್ರತಿಯೊಂದು ಅರ್ಜಿಯ ವಿಲೇವಾರಿ ಎಷ್ಟು ದಿನಗಳಲ್ಲಿ ನಡೆಯುತ್ತದೆ ಎಂಬುವುದನ್ನು ಸರ್ಕಾರದ ಉನ್ನತ ಅಧಿಕಾರಿಗಳು ಪರಿಶೀಲಿಸುತ್ತಾರೆ. ಸಾರ್ವಜನಿಕರಿಗೆ ಅದಷ್ಟು ಬೇಗ ಸಮಸ್ಯೆ ಇತ್ಯರ್ಥಕ್ಕೆ ಸಹಕಾರಿಯಾಗುತ್ತದೆ ಎಂದರು.

Advertisement

ಸ್ವಚ್ಛಂದ ಆಡಳಿತಕ್ಕೆ ವೇದಿಕೆ: ಪುರಸಭೆ ಮುಖ್ಯಾಧಿ ಕಾರಿ ಮೀನಾಕ್ಷಿ ಮಾತನಾಡಿ, ಸರ್ಕಾರದ ಈ ಕಾರ್ಯಕ್ರಮ ಪ್ರಮುಖವಾಗಿದ್ದು, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವ ಹಿಸುತ್ತಿದೆ. ಇದರಿಂದ ಉತ್ತಮ ಬಾಂಧವ್ಯದ ಜೊತೆಯಲ್ಲಿ ಸ್ವತ್ಛಂದ ಆಡಳಿತಕ್ಕೆ ವೇದಿಕೆಯಾಗಲಿದೆ. ಪುರಸಭೆ ವ್ಯಾಪ್ತಿಗೆ ಸಂಬಂಧಪಟ್ಟಂತೆ ಕೆಲವು ಅರ್ಜಿ ಗಳು ಬಂದಿದ್ದು, ಎರಡು ದಿನಗಳಲ್ಲಿ ಬಗೆಹರಿಸ ಲಾಗುವುದೆಂದು ತಿಳಿಸಿದರು.

ಕೋಲಾರ ಉಪಭಾಗಾ ಧಿಕಾರಿ ವೆಂಕಟಲಕ್ಷ್ಮೀ, ತಹಶೀಲ್ದಾರ್‌ ಯು.ರಶ್ಮಿ, ತಾಪಂ ಇಒ ಎಚ್‌.ರವಿಕುಮಾರ್‌, ಬಿಇಒ ಡಿ.ಎನ್‌. ಸುಕನ್ಯಾ, ಡಿವೈಎಸ್ಪಿ ಪಾಂಡುರಂಗ, ಸಿಡಿಪಿಒ ಎಂ. ಮುನಿರಾಜು, ಸಮಾಜ ಕಲ್ಯಾಣ ಅಧಿಕಾರಿ ಶಿವಾರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ, ಬೆಸ್ಕಾಂ ಎಇಇ ರಾಮಕೃಷ್ಣಪ್ಪ, ಪುರಸಭೆ ಸದಸ್ಯ ಷಪಿ, ರಾಕೇಶಗೌಡ, ರತ್ನಮ್ಮ, ಕಂದಾಯ ನಿರೀಕ್ಷಕ ಅಜಯ್‌ ಕುಮಾರ್‌, ಕಾಮಸಮುದ್ರ ಪವನ್‌, ಗ್ರಾಮಲೆಕ್ಕಿಗ ಚೇತನ್‌ ಹಾಗೂ ಮತ್ತಿತರರು ಇದ್ದರು.

ಪಾರದರ್ಶಕ, ಭ್ರಷ್ಟಮುಕ್ತ ಆಡಳಿತಕ್ಕೆ ಮುನ್ನುಡಿ: ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಜನತಾದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಈ ಮದ್ಯೆ ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸುವುದರ ಮೂಲಕ ತಾಲೂಕು ಆಡಳಿತ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಪಾರದರ್ಶಕ ಭ್ರಷ್ಟಮುಕ್ತ ಆಡಳಿತಕ್ಕೆ ಮುನ್ನುಡಿ ಬರೆಯಲು ಜನತಾದರ್ಶನ ಪೂರಕವಾಗಿದೆ ಎಂದು ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಹೇಳಿದರು.

156 ಅರ್ಜಿ ಸಲ್ಲಿಕೆ : ಇಂದಿನ ಜನತಾದರ್ಶನದಲ್ಲಿ ಒಟ್ಟು 156 ಅರ್ಜಿ ಸಲ್ಲಿಕೆಯಾದವು. ಕಂದಾಯ ಇಲಾಖೆ 106, ಪಂಚಾಯತ್‌ ರಾಜ್‌ ಇಲಾಖೆಗೆ 23, ಬೆಸ್ಕಾಂ ಇಲಾಖೆ 1 ಅರ್ಜಿ, ಶಿಕ್ಷಣ ಇಲಾಖೆ 1 ಅರ್ಜಿ, ನಗರಾಭಿವೃದ್ಧಿ ಇಲಾಖೆಗೆ 19ಅರ್ಜಿಗಳು ಸಲ್ಲಿಕೆ ಆಗಿವೆ. ಇದಕ್ಕೂ ಮುನ್ನ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ವೈದ್ಯ ಇಲಾಖೆ, ಪುರಸಭೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳ ಮಳಿಗೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next