Advertisement

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

06:17 PM Dec 02, 2021 | Team Udayavani |

ಇಂಡಿ: ಸುಮಾರು 45ರಿಂದ 50 ಸಾವಿರ ಜನಸಂಖ್ಯೆ ಹೊಂದಿದ ಇಂಡಿ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮಿಣ ಭಾಗದಿಂದ ಬರುವ ಜನರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಬಸವೇಶ್ವರ ವೃತ್ತದಲ್ಲಿರುವ ಸಿಗ್ನಲ್‌ ಸಹ ಕಾರ್ಯ ನಿರ್ವಹಿಸದೇ ಇರುವ ಕಾರಣ ವಾಹನ ಸವಾರರು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದಾರೆ.

Advertisement

ಪಟ್ಟಣದ ಹೃದಯ ಭಾಗ ಎಂದೆ ಕರೆಸಿಕೊಳ್ಳುವ ಜಗಜ್ಯೋತಿ ಬಸವೇಶ್ವರ ವೃತ್ತ ಪ್ರಮುಖ ಮಾರ್ಗಗಳಿಂದ ಕೂಡಿದ್ದು ಸುತ್ತವರಿದು ವಾಹನಗಳು ಹಾದು ಹೊಗಬೇಕು. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ಬಸವೇಶ್ವರ ವೃತ್ತ ಪ್ರಮುಖ ಮಾರ್ಗಗಳಿಂದ ಕೂಡಿದ್ದು ಲಾರಿ, ಭಾರಿ ಗಾತ್ರದ ಹೈವಾ, ಟ್ರ್ಯಾಕ್ಟರ್‌, ಬಸ್‌, ಕಾರು, ಜಿಪು, ದ್ವಿಚಕ್ರ ವಾಹನ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ನಿತ್ಯ ವಾಹನಗಳು ಓಡಾಡುತ್ತವೆ. ಅಡ್ಡಾ ದಿಡ್ಡಿಯಾಗಿ ವಾಹನಗಳು ಒಡಾಡುತ್ತಿರುವುದರಿಂದ ಈ ವೃತ್ತದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ.

ಆದರೆ ಈ ವೃತ್ತದ ಮೂಲಕ ವಿಜಯಪುರ, ಝಳಕಿ, ಕಲಬುರಗಿ, ಅಕ್ಕಲಕೊಟ, ಸೊಲ್ಲಾಪುರ, ಪಂಢರಪುರ, ಗಾಣಗಾಪುರ, ಲಿಂಗಸಸೂರು ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರ ಕಡೆ ಹಾದು ಹೋಗಬೇಕು. ಹೀಗಾಗಿ ನಾನಾ ಭಾಗಗಳಿಂದ ಹೋಗಿ ಬರುವ ಎಲ್ಲ ವಾಹನಗಳು ಈ ವೃತ್ತದ ಮೂಲಕ ಸಂಚರಿಸುತ್ತಿರುವುದರಿಂದ ವಾಹನ ದಟ್ಟಣೆ ಹಾಗೂ ಪಕ್ಕದಲ್ಲಿ ಬಸ್‌ ನಿಲ್ದಾಣ ಇರುವುದರಿಂದ ಜನ ದಟ್ಟಣೆ ಕೂಡಾ ಹೆಚ್ಚಾಗಿದೆ. ಅಲ್ಲದೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಿಗ್ನಲ್‌ ಬಲ್ಬ್ಗಳು ಪೊಲೀಸರಿಗೆ ಸಹಕಾರಿಯಾಗಿದ್ದು ಸಿಗ್ನಲ್‌ ಬಲ್ಬ್ ಗಳ ನಿರ್ವಹಣೆ ಮಾಡಬೇಕಾದ ಪುರಸಭೆಯವರು ಹಾಗೂ ಪೊಲೀಸ್‌ ಇಲಾಖೆಯವರು ಕೈ ಕಟ್ಟಿ ಕುಳಿತಿದ್ದಾರೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈ ಕುರಿತು ಈಗಾಗಲೆ ಪುರಸಭೆಯವರ ಗಮನಕ್ಕೆ ತರಲಾಗಿದೆ. ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಇದರ ನಿರ್ವಹಣೆ, ರಿಪೇರಿ ವೆಚ್ಚ ಏನಿದ್ದರೂ ಪುರಸಭೆಯವರು ನೋಡಿಕೊಳ್ಳಬೇಕು.
ಭೀಮನಗೌಡ ಬಿರಾದಾರ,
ಸಿಪಿಐ ಶಹರ ಠಾಣೆ, ಇಂಡಿ

Advertisement

ವಿಜಯಪುರ ಜಿಲ್ಲೆಯ ಯಾವ ತಾಲೂಕು ಕೇಂದ್ರದಲ್ಲಿ ಇಲ್ಲದೆ ಇರುವ ಸಿಗ್ನಲ್‌ ಬಲ್ಬ್ಗಳನ್ನು ಪಟ್ಟಣದಲ್ಲಿ ಅಳವಡಿಸಲಾಗಿದೆ. ಇದರ ಕೀರ್ತಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಲ್ಲಬೇಕು. ಶಾಸಕರು ಮುತುವರ್ಜಿ ವಹಿಸಿ ಅನುದಾನ ಕೊಡಿಸಿದ್ದರಿಂದ ಸಿಗ್ನಲ್‌ ಅಳವಡಿಸಲು ಸಾಧ್ಯವಾಗಿದೆ. ಆದರೆ ಇಂದು ಅದೇ ಸಿಗ್ನಲ್‌ ಬಲ್ಬ್ಗಳು ಸ್ಥಗಿತಗೊಂಡು ಜನರ ಅಪಹಾಸ್ಯಕೆ ಈಡಾಗಿದ್ದು ಸಂಬಂಧಿಸಿದವರು ತ್ವರಿತವಾಗಿ ಸಿಗ್ನಲ್‌ ಆರಂಭಿಸಬೇಕು.
ಲಕ್ಷ್ಮಣ ಕರಕ್ಕಿ, ಇಂಡಿ ನಿವಾಸಿ

ಯಲಗೊಂಡ ಬೇವನೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next