Advertisement

ಸೋದೆ-ಸುಬ್ರಹ್ಮಣ್ಯ ಮಠಾಧೀಶರ ಅಪೂರ್ವ ಸಮಾಗಮ

10:38 AM May 30, 2017 | Team Udayavani |

ಉಡುಪಿ: ಆಚಾರ್ಯ ಮಧ್ವರ ಪೂರ್ವಾಶ್ರಮದ ಸೋದರ ಶ್ರೀ ವಿಷ್ಣುತೀರ್ಥರಿಂದ ಸುಮಾರು 7 ಶತಮಾನಗಳ ಹಿಂದೆ ಆರಂಭಗೊಂಡ ಶ್ರೀ ಸೋದೆ ಮತ್ತು ಶ್ರೀ ಸುಬ್ರಹ್ಮಣ್ಯ ಮಠ ಪರಂಪರೆಯ ಸ್ವಾಮೀಜಿಯವರು ಸುಮಾರು ಎರಡೂವರೆ
ಶತಮಾನಗಳ ಹಿಂದೆ ಕಡಿದುಹೋಗಿದ್ದ ಸಂಬಂಧವನ್ನು ಸೋಮವಾರ ಪುನಃಸ್ಥಾಪಿಸಿದರು.

Advertisement

ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಶ್ರೀ ಅನಂತೇಶ್ವರ ದೇವಸ್ಥಾನದ ಅನಂತೇಶ್ವರ ಮತ್ತು ಆಚಾರ್ಯ ಮಧ್ವರ ತಾಣದಲ್ಲಿ ಸಮಾಗಮಗೊಂಡರು. ಇದಕ್ಕೂ ಮುನ್ನ ಸುಬ್ರಹ್ಮಣ್ಯದಿಂದ ಆಗಮಿಸಿದ ಶ್ರೀ ಸುಬ್ರಹ್ಮಣ್ಯ ಮಠಾಧೀಶರು ವಿವಿಧ ಮಠಾಧೀಶರೊಂದಿಗೆ ಶ್ರೀಕೃಷ್ಣ ಮಠದಿಂದ ಸಕಲ ಗೌರವಗಳೊಂದಿಗೆ ಅನಂತೇಶ್ವರ ದೇವಸ್ಥಾನಕ್ಕೆ ತೆರಳಿದಾಗ ಅಲ್ಲಿದ್ದ
ಶ್ರೀ ಸೋದೆ ಮಠಾಧೀಶರು ಸ್ವಾಗತಿಸಿದರು. ಬಳಿಕ ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ನಂತರ ಚಂದ್ರಮೌಳೀಶ್ವರ, ಶ್ರೀಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ ಶ್ರೀಪಾದರು, ರಾಜಾಂಗಣದಲ್ಲಿ ಪರಸ್ಪರ ಅಭಿನಂದಿಸಿದರು.

ಅನುಗ್ರಹ ಪ್ರಾಪ್ತಿ: ಆಶೀರ್ವಚನ ನೀಡಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಷ್ಣುತೀರ್ಥರ ಮಹಿಮೆಯನ್ನು ಮಧ್ವವಿಜಯ ಸಾರುತ್ತದೆ. ಇವರಿಬ್ಬರ ಅನುಗ್ರಹ ಇಂದು ಪ್ರಾಪ್ತವಾಗಿದೆ ಎಂದರು. ಶ್ರೀ ಸೋದೆ ಶ್ರೀಪಾದರೇ ಸ್ವತಃ ಆಸಕ್ತಿ ವಹಿಸಿ ಈ ಪ್ರಸ್ತಾವವನ್ನು ಮುಂದಿಟ್ಟ ಹೆಜ್ಜೆಗೆ ವಿವಿಧ ಮಠಾಧೀಶರು ಮೆಚ್ಚುಗೆ ಸೂಚಿಸಿದರು. 

ಕಡಿದ ಸಂಬಂಧ
18ನೇ ಶತಮಾನದಲ್ಲಿ ಉಂಡಾರು ಗ್ರಾಮದ ಸೋದರರಾದ ಶ್ರೀ ವಿಶ್ವನಿಧಿತೀರ್ಥರು (1740-1753), ಶ್ರೀ ವಿಶ್ವಾಧೀಶ್ವರತೀರ್ಥರು (1753-1803) ಸೋದೆ ಮಠಾಧೀಶರಾಗಿದ್ದರೆ ಇವರ ಇನ್ನೋರ್ವ ಸೋದರ ಸುಬ್ರಹ್ಮಣ್ಯ ಮಠಾಧೀಶರಾಗಿದ್ದರು. ಅವರ ಹೆಸರು ಮಠದ ದಾಖಲೆಗಳಲ್ಲಿ ನಿಖರವಾಗಿ ತಿಳಿಯುತ್ತಿಲ್ಲ. ಈ ಅವಧಿಯಲ್ಲಿ ಸಂಬಂಧ ಕಡಿದು ಹೋಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next