Advertisement

ಶಿಕ್ಷಣದಿಂದ ಸಮಾಜ ಗಟ್ಟಿಯಾಗಿ ನೆಲೆಯೂರಲು ಸಾಧ್ಯ –ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್‌

08:25 PM Mar 12, 2023 | Team Udayavani |

ರಬಕವಿ-ಬನಹಟ್ಟಿ: ಮುಂದಿನ ದಿನಗಳಲ್ಲಿ ತಳವಾರ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಮತ್ತು ಗಟ್ಟಿಯಾಗಿ ನೆಲೆಯೂರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ತಿಳಿಸಿದರು.

Advertisement

ಅವರು ಭಾನುವಾರ ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಬಾಗಲಕೋಟೆ ಜಿಲ್ಲಾ ತಳವಾರ ಮಹಾಸಭಾದ ಆಶ್ರಯದಲ್ಲಿ ನಡೆದ ಸರ್ಕಾರಕ್ಕೆ ಕೃತಜ್ಞತ ಅರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ತಳವಾರ ಸಮುದಾಯಕ್ಕೆ ಕೇವಲ ಉತ್ತಮ ಮಾರ್ಕ್ಸ ಕಾರ್ಡ್ ಮಾತ್ರ ಇದ್ದರೆ ಸಾಲದು, ಈಗ ಮಾರ್ಕ್ಸ್ ಕಾರ್ಡ್ ಜೊತೆಗೆ ಎಸ್.ಟಿ. ಪ್ರಮಾಣ ಪತ್ರ ಕೂಡಾ ಲಭ್ಯವಾಗಿವೆ. ಈ ಎರಡು ಕಾರ್ಡ್ ಗಳಿಂದ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಸ್. ಟಿ ಪ್ರಮಾಣ ಪತ್ರದಿಂದ ತಳವಾರ ಸಮುದಾಯವು ಶಿಕ್ಷಣ, ರಾಜಕೀಯ, ಕೈಗಾರಿಕೆ, ಕೃಷಿ ಸೇರಿದಂತೆ ಇನ್ನೀತರ ಕ್ಷೇತ್ರಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಎಸ್.ಟಿ ಪ್ರಮಾಣ ಪತ್ರದಿಂದಾಗಿ ಈ ಬಾರಿ ೧೩ ಜನ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ತಳವಾರ ಸಮುದಾಯಕ್ಕೆ ಎಸ್.ಟಿ ಪ್ರಮಾಣ ಪತ್ರದಿಂದಾಗಿ ಮರಭೂಮಿಯಲ್ಲಿ ನೀರು ದೊರೆತಂತಾಗಿದೆ. ಎಸ್.ಟಿ ಪ್ರಮಾಣ ಪತ್ರದೊಂದಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತಾಗಬೇಕು.

ಎಸ್.ಟಿ ಪಂಡಗದಲ್ಲಿ ೫೧ ಸಮುದಾಯಗಳಿವೆ. ಆದರೆ ನಾವು ಉಳಿದ ಸಮುದಾಯಕ್ಕಿಂತ ಮುಂದೆ ಬರಬೇಕಾದರೆ ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಮನೆಯ ಹಿರಿಯರು ಕಷ್ಟದ ಮಧ್ಯದಲ್ಲಿಯೂ ಉತ್ತಮ ಶಿಕ್ಷಣ ನೀಡುವತ್ತ ಗಮನ ನೀಡಬೇಕು. ದೇಶದ ಪ್ರತಿಯೊಂದು ಸಮುದಾಯ ಅಭಿವೃದ್ಧಿಯಾದರೆ ಭಾರತವೂ ಕೂಡಾ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ತಳವಾರ ಸಮುದಾಯದ ನಾಲ್ಕು ದಶಕಗಳ ಹೋರಾಟದಿಂದಾಗಿ ನಮ್ಮ ಸಮುದಾಯಕ್ಕೆ ಎಸ್. ಟಿ ಪ್ರಮಾಣ ಪತ್ರ ನೀಡಲಾಗಿದೆ. ಆದ್ದರಿಂದ ನಾವೆಲ್ಲರೂ ಈ ಪ್ರಮಾಣ ಪತ್ರದ ಸಹಾಯದಿಂದ ಜೀವನದಲ್ಲಿ ಉನ್ನತ ಸಾಧನೆಯನ್ನು ಮಾಡಬೇಕು ಎಂದು ಎನ್.ರವಿಕುಮಾರ ತಿಳಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ತಳವಾರ ಸಮುದಾಯಕ್ಕೆ ಎಸ್.ಟಿ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ಅದೇಶ ಮಾಡಿದ್ದರೂ ಕೆಲವು ಸಮುದಾಯಗಳು ವಿರೋಧ ವ್ಯಕ್ತ ಮಾಡಿದ್ದವು. ಆದರೂ ಬೊಮ್ಮಾಯಿ ಸರ್ಕಾರ ಎಸ್.ಟಿ ಪ್ರಮಾಣ ಪತ್ರ ನೀಡುವುದರಿಂದ ತಳವಾರ ಸಮುದಾಯವನ್ನು ಮುಂಚೂಣಿಯಲ್ಲಿ ತಂದಿದೆ. ತಳವಾರ ಸಮುದಾಯ ತಮ್ಮದೆ ಆದ ಆರ್ಥಿಕ ಸಂಸ್ಥೆಗಳನ್ನು ಆರಂಭಿಸಿ ಬಡವರಿಗೆ ಸಾಲ ನೀಡುವುದರ ಜೊತೆಗೆ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವತ್ತ ಗಮನ ನೀಡಬೇಕು. ಸಮುದಾಯದ ಪ್ರಜ್ಞಾವಂತರನ್ನು ಮತ್ತು ಶಕ್ತಿವಂತರನ್ನು ಸಂಪರ್ಕಿಸಿ ಸಮುದಾಯವನ್ನು ಬೆಳೆಸಬೇಕು ಎಂದು ಶಾಸಕ ಸವದಿ ತಿಳಿಸಿದರು.
ಬಾಗಲಕೋಟೆ ಜಿಲ್ಲಾ ತಳವಾರ ಮಹಾಸಭಾದ ಅಧ್ಯಕ್ಷ ಚಿನ್ನಪ್ಪ ಅಂಬಿ ಮಾತನಾಡಿದರು.

Advertisement

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಳವಾರ ಸಮುದಾಯದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಹುಕ್ಕೇರಿ ತಾಲ್ಲೂಕಿನ ಝಂಗಟಿಹಾಳದ ಮರಡಿಸಿದ್ಧೇಶ್ವರ ಮಠದ ಮರಡಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಅಧ್ಯಕ್ಷ ಸಿದ್ಧರಾಮ ಜೇರಟಗಿ, ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ ತಳವಾರ, ಖಜಾಂಚಿ ಅಣ್ಣಾರಾಯ ತಳವಾರ, ರವಿ ಕೋಟಾರಗಸ್ತಿ, ಸಿದ್ರಾಮೇಶ ಮೀಸಿ, ಭೀಮಶಿ ತಳವಾರ, ಪ್ರಭು ಗಸ್ತಿ, ಬಸವರಾಜ ತಳವಾರ, ಡಾ.ಸೋನಾಲ್ಕರ್, ಮಹಾದೇವ ತಳವಾರ, ಸತೀಷ ಬಂಡಿವಡ್ಡರ ಸೇರಿದಂತೆ ಬಾಗಲಕೋಟೆ, ಕಲಬುರಗಿ, ಬೆಳಗಾವಿ, ಧಾರವಾಡ ಜಿಲ್ಲೆಯ ತಳವಾರ ಸಮುದಾಯ ಬಾಂಧವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next