Advertisement

ನಕ್ಸಲ್‌ ನಿಗ್ರಹ ಪಡೆಯಿಂದ ಸಮಾಜಮುಖೀ ಕಾರ್ಯ

11:05 PM Jul 01, 2019 | Sriram |

ವಿಶೇಷ ವರದಿ-ಉಡುಪಿ: ನಕ್ಸಲ್‌ ಚಟುವಟಿಕೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಎನ್‌ಎಫ್ ಹೆಜ್ಜೆಯಿರಿಸಿರುವಂತೆಯೇ, ಜನರ ವಿಶ್ವಾಸಗಿಟ್ಟಿಸಿಕೊಳ್ಳಲು ಮುಂದಾಗಿದೆ.

Advertisement

ಸದ್ಯ ನಕ್ಸಲರ ಉಪಟಳವೂ ಸಾಕಷ್ಟು ಕಡಿಮೆಯಾದ್ದರಿಂದ ಎಎನ್‌ಎಫ್ ಸಾಮಾಜಿಕ ಸೇವಾ ಚಟವಟಿಕೆಗೆ ಮುಂದಾಗಿದೆ.

ಆರೋಗ್ಯ ಸೇವೆ
ಕುದುರೆಮುಖ ಅಭಯಾರಣ್ಯ, ಮೂಕಾಂಬಿಕಾ ಅಭಯಾರಣ್ಯ, ವಂಡ್ಸೆ, ಜಡಕಲ್‌, ಅಮಾಸೆಬೈಲ್‌, ಹೆಬ್ರಿ, ಕಬ್ಬಿನಾಲೆ, ನಾಡಪಾಲ್‌, ಈದು ಮುಂತಾದ ನಕ್ಸಲ್‌ ಪೀಡಿತ ಪ್ರದೇಶಗಳು ಮೂಲಸೌಕರ್ಯಗಳಿಂದ ವಂಚಿತ ಸ್ಥಳಗಳು. ಈ ಭಾಗದ ಜನರಿಗೆ ಶೀತ,ಜ್ವರ ಬಂದರೂ 40 ಕಿ.ಮೀ. ನಷ್ಟು ದೂರ ಚಿಕಿತ್ಸೆಗೆ ತೆರಳಬೇಕು.

ಮಳೆಗಾಲದಲ್ಲಿ ಇವರ ಕಷ್ಟ ಇನ್ನೂ ಹೆಚ್ಚು. ಇದನ್ನು ಮನಗಂಡಿರುವ ನಕ್ಸಲ್‌ ನಿಗ್ರಹ ಪಡೆ ಮಳೆಗಾಲದ ಆರಂಭದಲ್ಲೇ ನಕ್ಸಲ್‌ ಪೀಡಿತ ಪ್ರದೇಶದ ಜನರ ಆರೋಗ್ಯ ತಪಾಸಣೆ ಸಹಿತ ಇನ್ನಿತರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಚಟುವಟಿಕೆ ನಡೆಸಿದ್ದಾರೆ. ತಜ್ಞ ವೈದ್ಯರಿಂದ ಚಿಕಿತ್ಸೆಯನ್ನೂ ನೀಡಲು ಉದ್ದೇಶಿಸಲಾಗಿದೆ.

ಜನರಿಗೆ ಸಹಕಾರ
ಈಗಾಗಲೇ ಬೇರೆ ಬೇರೆ ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ಆಯೋಜಿತವಾಗಿವೆ. ಹೀಗಾಗಿ ಆಸ್ಪತ್ರೆಗೆ ಹತ್ತಾರು ಕಿ.ಮೀ ನಡೆದೇ ಹೋಗಬೇಕಿದ್ದ ಗ್ರಾಮಸ್ಥರು, ಹಿರಿಯರು, ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆಯುತ್ತಿದ್ದಾರೆ.

Advertisement

ಪೊಲೀಸರಿಗೆ ಬೆದರಿಕೆ ಹಾಕಿದ್ದರು!
ಉಡುಪಿ ಜಿಲ್ಲೆಯ ಹೆಬ್ರಿ ವ್ಯಾಪ್ತಿಯ ಮುಟ್ಲುಪಾಡಿ, ಮತ್ತಾವು, ನೀರಾಣಿ, ಮುದ್ರಾಡಿ, ಬಚ್ಚಪ್ಪು, ಕಂಕಣಾರಬೆಟ್ಟು, ಸೋಮೇಶ್ವರ, ಸೀತಾನದಿ, ಕೈಕಂಬ ಗ್ರಾಮಗಳಲ್ಲಿ ಈ ಹಿಂದೆ ನಕ್ಸಲರು ಸಂಚರಿಸುತ್ತಿದ್ದು, ಅದರಲ್ಲೂ ಮತ್ತಾವು ನಲ್ಲಿ ಪೊಲೀಸ್‌ ವಾಹನ ಸಂಚರಿಸುವ ರಸ್ತೆಯಲ್ಲಿ ನಾಡ ಬಾಂಬ್‌ ಸ್ಫೋಟಿಸುವ ಮೂಲಕ ನಕ್ಸಲರು ಪೊಲೀಸರಿಗೆ ಬೆದರಿಕೆಯನ್ನೂ ಹಾಕಿದ್ದರು. ನಕ್ಸಲರ ಸಂಚಾರ ಇದ್ದ ಈ ಗ್ರಾಮಗಳನ್ನು ನಕ್ಸಲ್‌ ಪೀಡಿತ ಎಂದು ಘೋಷಿಸಲಾಗಿತ್ತು.

ನಕ್ಸಲ್‌ ಚಟುವಟಿಕೆ ಇಳಿಮುಖ
ಜಿಲ್ಲೆಯ ಅರಣ್ಯದ ತಪ್ಪಲು ಪ್ರದೇಶ ನಕ್ಸಲ್‌ ಪೀಡಿತ ಪ್ರದೇಶವಾದರೂ ಸದ್ಯ ನಕ್ಸಲ್‌ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಇದರಿಂದ ಕೆಂಪು ಕ್ರಾಂತಿಕಾರಿಗಳ ಮಟ್ಟ ಹಾಕುವ ಕಾಯಕಕ್ಕೆ ನಿಯೋಜಿತಗೊಂಡ ಎಎನ್‌ಎಫ್ ಪಡೆಗೆ ಸದ್ಯ ತಲೆನೋವು ಕಡಿಮೆಯಾಗಿದೆ. ಇದೇ ಕಾರಣದಿಂದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಾಮಾಜಿಕ ಸೇವೆಗೆ ಎಎನ್‌ಎಫ್ ಅಧಿಕಾರಿಗಳು ಮುಂದಾಗಿದ್ದು, ಜನರ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ.

ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ
ನಕ್ಸಲ್‌ ಕಾರ್ಯಾಚರಣೆಗಳನ್ನೆಲ್ಲ ನೋಡಿ ಜನರು ಭಯಭೀತರಾಗಿದ್ದಾರೆ. ಅವರನ್ನು ಸಮಾಜಕ್ಕೆ ಇನ್ನಷ್ಟು ಹತ್ತಿರವಾಗಿಸುವ ಸಲುವಾಗಿ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರ ಪ್ರಾರಂಭಿಕ ಹಂತವಾಗಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ನುರಿತ ವೈದ್ಯರಿಂದ ಚಿಕಿತ್ಸೆಯನ್ನೂ ನೀಡಲಾಗಿದೆ. ಸುಮಾರು 300ರಷ್ಟು ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ.
-ಗಣೇಶ್‌ ಹೆಗಡೆ, ಡಿವೈಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next