Advertisement

ಸಮಾಜ ಸುಧಾರಕ ಲಿಂ|ಡಾ|ಮಹಾಂತ ಅಪ್ಪಗಳು

11:01 AM Nov 20, 2018 | |

ಕಲಬುರಗಿ: ಎಲ್ಲ ಜನಾಂಗದವರು ವಚನಗಳ ಅಧ್ಯಯನ ಮಾಡಬೇಕು. ವಚನಗಳಲ್ಲಿ ಬೆಳಕಿದೆ. ವಚನಗಳಲ್ಲಿ ಬದುಕು ಇದೆ. ನೊಂದವರಿಗೆ ಸಾಂತ್ವನವಿದೆ. ಹಸಿವು ತೃಷೆಗಳು ಮನುಷ್ಯನಿಗೆ ಹೇಗೆ ಅನಿವಾರ್ಯವೋ ಹಾಗೆಯೇ ಉತ್ತಮ ಜೀವನ ರೂಪಿಸಿಕೊಳ್ಳಲು ವಚನಗಳ ಅಧ್ಯಯನ ಅತ್ಯಗತ್ಯ ಎಂದು ಗುಳೇದಗುಡ್ಡ ಕಾಡಸಿದ್ಧೇಶ್ವರ ಮಠದ ಪೂಜ್ಯ ಗುರುಬಸವದೇವರು ಹೇಳಿದರು.

Advertisement

ನಗರದ ಬಸವ ಸಮಿತಿಯಲ್ಲಿ ಮಂಗಲ ಜ್ಯೋತಿ ಶರಣ ಗಾಣದ ಕಣ್ಣಪ್ಪಯ್ಯ ಸ್ಮರಣಾರ್ಥ ನಡೆದ ಅರಿವಿನ ಮನೆ 572ನೇ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿ, ಲಿಂ| ಡಾ| ಮಹಾಂತ ಅಪ್ಪಗಳು ಶರಣ ಸಂಸ್ಕೃತಿ ಪ್ರತೀಕವಾಗಿದ್ದರು. ಈ ನಾಡಿನಲ್ಲಿ ಹಲವು ಮಠ ಮಾನ್ಯಗಳು ಶರಣ ಸಂಸ್ಕೃತಿ ಉಳಿಸಲು ಬೆಳೆಸಲು ಗಣನೀಯ ಕಾರ್ಯಮಾಡಿವೆ.

ಅವರಲ್ಲಿ ಇಳಕಲ್ಲ ಮಹಾಂತ ಅಪ್ಪಗಳು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು. ಇವರೊಂದಿಗೆ ಡಾ| ಎಂ.ಎಂ. ಕಲಬುರಗಿ ಅವರ ಸೇವೆ ಮರೆಯುವಂತಿಲ್ಲ.

ಲಿಂ| ಮಹಾಂತ ಅಪ್ಪಗಳು ಶ್ರೇಷ್ಠ ಸಂತರು. ನಿಜವಾದ ವಿರಕ್ತರು. ಪ್ರಭಾವಿ ಪ್ರವಚನಕಾರರಾಗಿ ಜನಮನವನ್ನು ಸೂರೆಗೊಂಡಂತಹ ಅಪ್ರತಿಮ ವಾಗ್ಮಿಗಳಾಗಿದ್ದರು. ಹುಬ್ಬಳ್ಳಿ ಮೂರು ಸಾವಿರ ಮಠದ ಪೂಜ್ಯ ಗಂಗಾಧರ ಮಹಾ ಸ್ವಾಮಿಗಳು ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠಕ್ಕೆ ಲಿಂ| ಮಹಾಂತ ಅಪ್ಪಗಳ ಹೆಸರನ್ನು ಸೂಚಿಸಿ ಅವರ ವ್ಯಕ್ತಿತ್ವಕ್ಕೆ ಮೆರುಗು ತುಂಬುತ್ತಾರೆ. ಬಸವ ತತ್ವಕ್ಕೆ ತಮ್ಮನ್ನೇ
ಅರ್ಪಿಸಿಕೊಂಡು ಸಮಾಜದಲ್ಲಿ ಅಡಗಿದ್ದ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ತಮ್ಮ ಕೊನೆಯುಸಿರು ಇರುವವರೆಗೂ ಮಹಂತ ಅಪ್ಪಗಳು ಶ್ರಮಿಸಿದ್ದಾರೆ. ಮಹಾಂತ ಜೋಳಿಗೆ ಹಿಡಿದು ಜನರಲ್ಲಿ ಅಡಗಿದ್ದ ದುಶ್ಚಟ, ವ್ಯಸನಗಳನ್ನು ಆ ಜೋಳಿಗೆಯಲಿ ಹಾಕಿಸಿಕೊಂಡು ಅವರಿಗೆ ಹೊಸ ಬದುಕುಕೊಟ್ಟವರು ಮಹಾಂತಪ್ಪಗಳು.

ತಮ್ಮ ಮಠದಲ್ಲಿ ನಡೆಯುತ್ತಿದ್ದ ರುದ್ರಾಭಿಷೇಕದಂತಹ ಅರ್ಥಹೀನ ಸಂಪ್ರದಾಯಯಗಳನ್ನು ನಿಲ್ಲಿಸಿದರು. ಶರಣ ಸಿದ್ಧಾಂತ ವಿದ್ಯಾಪೀಠ ಸ್ಥಾಪಿಸಿ ಇಡೀ ನಾಡಿನಲ್ಲಿ ಶರಣ ಸಂಸ್ಕೃತಿ ಸೌರಭ ಬೀರಿದರು. ಸಮಾಜದಲ್ಲಿ ಅಡಗಿದ್ದ ಮೌಡ್ಯ ದೂರ ಮಾಡಲು ತಮ್ಮ ಪ್ರತಿ ನುಡಿ-ನಡೆಯಲ್ಲಿ ತೋರಿಸಿದಂತಹ ಅಪರೂಪದ ವ್ಯಕ್ತಿ ಲಿಂ|ಮಹಾಂತಪ್ಪಗಳಾಗಿದ್ದರು ಎಂದು ಹೇಳಿದರು.

Advertisement

ಕಲಬುರಗಿ ಬಸವ ಸಮಿತಿ ಅಧ್ಯಕ್ಷ ಡಾ| ವಿಲಾಸವತಿ ಖೂಬಾ, ಉಪಾಧ್ಯಕರಾದ ಡಾ| ಜಯಶ್ರೀ ದಂಡೆ. ಡಾ| ಬಿ.ಡಿ. ಜತ್ತಿ
ವಚನ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ| ವೀರಣ್ಣ ದಂಡೆ, ಜಿಲ್ಲಾ ಗಾಣಿಗರ ಸಮಾಜದ ಅಧ್ಯಕ್ಷ ಅಪ್ಪಾರಾವ ಪಾಟೀಲ ಅತನೂರ, ಕಾರ್ಯದರ್ಶಿಗಳಾದ ಡಾ| ಕೇಶವ ಕಾಬಾ, ಜಿಲ್ಲಾ ಗಾಣಿಗರ ನೌಕರರ ಸಂಘದ ಅಧ್ಯಕ್ಷ ಸಂಗನ ಗೌಡ ಪಾಟೀಲ ಹಾಗೂ ಜಿಲ್ಲಾ ಗಾಣಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಸಜ್ಜನ ಇದ್ದರು. ಬಸವ ಸಮಿತಿ ಕಾರ್ಯದರ್ಶಿ ಎಚ್‌.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next