Advertisement

ಪ್ರಜಾಪ್ರಭುತ್ವ ವ್ಯವಸ್ಥೆ ಕಸಿಯಲು ಹುನ್ನಾರ; ಎಂ.ವೀರಪ್ಪ ಮೊಯ್ಲಿ

06:01 PM May 11, 2022 | Team Udayavani |

ಗದಗ: ಅಧಿಕಾರ ವಿಕೇಂದ್ರೀಕರಣ ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯಾಗಿದ್ದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಬಲ ಅಸ್ತ್ರವಾಗಲಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಸಿದುಕೊಳ್ಳಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸುತ್ತಿವೆ. ಅಂತಹ ದುಶಷ್ಟ ಶಕ್ತಿಗಳಿಂದ ದೇಶವನ್ನು ರಕ್ಷಿಸಲು ರಾಜಕೀಯ ಇಚ್ಛಾಶಕ್ತಿ ಹಾಗೂ ಸೈದ್ಧಾಂತಿಕ ಬದ್ಧತೆ ಕಾಂಗ್ರೆಸ್‌ನಲ್ಲಿ ಮಾತ್ರ ಜೀವಂತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

Advertisement

ರಾಜೀವಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ಹಾಗೂ ಕೆ.ಎಚ್‌.ಪಾಟೀಲ ಪ್ರತಿಷ್ಠಾಪನದಿಂದ ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೆ.ಎಚ್‌.ಪಾಟೀಲ ಸಭಾಂಗಣದಲ್ಲಿ ಮಂಗಳವಾರ ನಡೆದ “ಕರ್ನಾಟಕ ಪಂಚಾಯತ ರಾಜ್‌ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಹಿಂದಿನ ಪ್ರಧಾನಿ ರಾಜೀವಗಾಂಧಿ ಅವರ ಆಶಯದಂತೆ ಗ್ರಾಮೀಣ ಮಟ್ಟದ ಆಡಳಿತವನ್ನು ಬಲಪಡಿಸಲು 1993ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ತರಲಾಗಿದೆ. ಅದರ ಆಶಯಗಳನ್ನು ಸಾಕಾರಗೊಳಿಸಲು ಪಂಚಾಯತ್‌ ರಾಜ ಕಾಯ್ದೆಯನ್ನು ರೂಪಿಸಿ, ಸಾಮಾಜಿಕ ಸಮಾನತೆಯ ಕ್ರಾಂತಿಗೆ ಕಾರಣೀಭೂತವಾದ ಐತಿಹಾಸಿಕ ದಿನ ಇಂದು. ಹೀಗಾಗಿ, ಮೇ 10 ರಂದು ಕರ್ನಾಟಕ ಪಂಚಾಯತ್‌ ದಿನವನ್ನಾಗಿ ಆಚರಿಸಲು ತೀರ್ಮಾನಿಸುರುವುದು ಅಭಿನಂದನೀಯ ಎಂದರು.

ಪಂಚಾಯತ್‌ ಮಟ್ಟದಿಂದ ಆಡಳಿತವನ್ನು ಬಲಪಡಿಸಲು ಕಾಂಗ್ರೆಸ್‌ ಸದಾ ಪ್ರಯತ್ನಿಸುತ್ತಿದ್ದರೆ, ಮತ್ತೂಂದೆಡೆ ನಾನಾ ಕಾರಣಗಳನ್ನು ಮುಂದು ಮಾಡಿ ಜಿಪಂ, ತಾಪಂ ಚುನಾವಣೆಗಳನ್ನು ಮುಂದೂಡಿಕೆ ಮಾಡುತ್ತಿರುವುದು ದುರಂತ ಎಂದು ಟೀಕಿಸಿದ ಅವರು, ರಾಜ್ಯ ವಿಧಾನ ಸಭೆ, ವಿಧಾನಪರಿಷತ್‌ ಚುನಾವಣೆಗಳಿಗೆ ತೋರುವ ಆಸಕ್ತಿಯನ್ನು ಜಿಪಂ ಚುನಾವಣೆಗಳಿಗೂ ತೋರಬೇಕು.ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಚುನಾವಣೆ ಗಳನ್ನು ಮುಂದೂಡುವಂತಿಲ್ಲ. ಆದರೆ, ಏನೇನೋ ನೆಪವೊಡ್ಡಿ ಜಿಪಂ, ತಾಪಂ ಚುನಾವಣೆ ಮುಂದೂಡುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಕೆ.ಪಾಟೀಲ ಮಾತನಾಡಿ, ಸಂವಿಧಾನದ 73ನೇ ತಿದ್ದುಪಡಿ ಮೂಲಕ ಮೂರು ಹಂತದ ಪಂಚಾಯತ್‌ ವ್ಯವಸ್ಥೆಯನ್ನು ಹುಟ್ಟುಹಾಕಿ, ಶೋಷಿತರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದ ಕೀರ್ತಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಹಾಗೂ ಮುಖ್ಯಮಂತ್ರಿಯಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರಿಗೆ ಸಲ್ಲುತ್ತದೆ ಎಂದರು. ಜಗಜ್ಯೋತಿ ಬಸವಣ್ಣನವರ ವಚನ ಸಂದೇಶಗಳಂತೆ ಎಲ್ಲರಿಗೂ ಸೂಕ್ತ ಸ್ಥಾನಮಾನ ಕಲ್ಪಿಸಲಾಗಿದೆ. ಬಸವಣ್ಣನ ನಂತರ 800 ವರ್ಷಗಳು ಕಳೆದರೂ ಮಹಿಳಾ ಸಬಲೀಕರಣ ಎಂಬುದು ವೇದಿಕೆಗಳ ಭಾಷಣಕ್ಕೆ ಸೀಮಿತವಾಗಿತ್ತು.

Advertisement

ಇಂದು ಶೋಷಿತರು, ಹಿಂದುಳಿದವರ ಮೀಸಲಾತಿ ಬಗ್ಗೆ ಮಾತನಾಡುವ ರಾಜಕೀಯ ಪಕ್ಷಗಳು, ದಶಕಗಳ ಹಿಂದೆ ಅವರಿಗೆ ಕೇವಲ ಯಾವುದೋ ಒಂದು ಕ್ಷೇತ್ರದಲ್ಲಿ ಶಾಸನ ಸಭೆ ಟಿಕೆಟ್‌ ನೀಡಿ, ಇಲ್ಲವೇ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ಳಲಾಗುತ್ತಿತ್ತು. ಅದನ್ನು ತೊಡೆದು ಹಾಕಲು ಸಂವಿಧಾನದ 73ನೇ ತಿದ್ದುಪಡಿ ಹಾಗೂ ಸಿದ್ಧರಾಮಯ್ಯ ಮುಖ್ಯಮಂತ್ರಿ, ತಾವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್‌ ರಾಜ್‌ ಕಾನೂನು ತಿದ್ದುಪಡಿಯಿಂದ ಪಂಚಾಯತ್‌ ಆಡಳಿತವನ್ನು ಶಕ್ತಿಯುತ ಮಾಡಿದ್ದಾಗಿ ವಿವರಿಸಿದರು. ರಾಜೀವ ಗಾಂಧಿ ಪಂಚಾಯತ್‌ ರಾಜ್‌ ಸಂಘಟನ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಡಿ.ಆರ್‌.ಪಾಟೀಲ, ಮಾಜಿ ಶಾಸಕ ಜಿ.ಎಸ್‌ .ಪಾಟೀಲ ಮಾತನಾಡಿದರು.

ಮಾಜಿ ಸಚಿವ ಎ.ಎಂ.ಹಿಂಡಸಗೀರಿ, ಮಾಜಿ ಶಾಸಕ ಬಿ.ಆರ್‌. ಯಾವಗಲ್‌, ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ, ಶ್ರೀಶೈಲಪ್ಪ ಬಿದರೂರು, ರಾಮಕೃಷ್ಣ ದೊಡ್ಡಮನಿ, ವಿ.ವೈ.ಘೋರ್ಪಡೆ, ಡಿ.ಆರ್‌. ಪಾಟೀಲ, ಚನ್ನಪ್ಪ ಜಗಲಿ, ವಾಸಣ್ಣ ಕುರಡಗಿ ಇದ್ದರು.

ಜನಪ್ರತಿನಿಧಿಗಳು ತಮ್ಮ ಹಕ್ಕು, ಅಧಿಕಾರಕ್ಕಾಗಿ ಹೋರಾಡುವ ಅಗತ್ಯ ಈಗಿಲ್ಲ. ಸಂವಿಧಾನಾತ್ಮಕವಾಗಿಯೇ ಅವಕಾಶ ಮತ್ತು ಅಧಿಕಾರಗಳನ್ನು ಒದಗಿಸಲಾಗಿದೆ. ಪಂಚಾಯತ್‌ ಮಟ್ಟದಲ್ಲಿ ಅಧ್ಯಕ್ಷರು, ಸದಸ್ಯರು ತಮ್ಮ ಅಧಿಕಾರ, ಹಕ್ಕುಗಳನ್ನು ಸಮರ್ಥವಾಗಿ ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಶಾಸಕ, ಸಂಸದರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಗ್ರಾಮಗಳಲ್ಲಿ ನಿಯಮಿತವಾಗಿ ಗ್ರಾಮ ಸಭೆ ನಡೆಸಿ ಜನರ ಬೇಕು, ಬೇಡಗಳನ್ನು ಈಡೇರಿಸಲು ಪ್ರಯತ್ನಿಸಬೇಕು.
ಎಚ್‌.ಕೆ.ಪಾಟೀಲ,
ಕಾಂಗ್ರೆಸ್‌ ಹಿರಿಯ ನಾಯಕ

ಮಹಿಳೆಯರಿಗೆ ಮೀಸಲಾತಿ ನೀಡಿದರೆ ಸಾಲದು, ಅವರಿಗೆ ನೈಜವಾಗಿ ಅಧಿಕಾರ ಚಲಾಯಿಸುವ ವಾತಾವರಣ ಕಲ್ಪಿಸಬೇಕು. ದೇಶದಲ್ಲಿ ಮೊದಲ ಬಾರಿಗೆ ಜಿಪಂ, ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್‌ ಪಕ್ಷಕ್ಕೆ ಸಲ್ಲುತ್ತದೆ. ಅದು ಕರ್ನಾಟಕದಲ್ಲಿ ಮೊದಲು ಜಾರಿಗೆ ಬಂದಿದೆ. ಸಂವಿಧಾನದ 73ನೇ ತಿದ್ದುಪಡಿ, ಅಧಿ ಕಾರ ವಿಕೇಂದ್ರೀಕರಣದ ಬಗ್ಗೆ ಜನರಲ್ಲಿ ಜಗೃತಿ ಮೂಡಿಸುವ ಕಾರ್ಯ ದೇಶಾದ್ಯಂತ
ನಡೆಯಬೇಕು. ಅದರ ಸದಾಶಯವನ್ನು ಈಡೇರಿಸಲು ಎಲ್ಲರೂ ಕೈಜೋಡಿಸಬೇಕು.
ಎಂ.ವೀರಪ್ಪ ಮೋಯ್ಲಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next