Advertisement

ಸ್ಮಾರ್ಟ್‌ನೆಸ್‌ ಟೆಕ್‌ ಸಮಿಟ್‌

10:23 PM Nov 17, 2022 | Team Udayavani |

ಮನೋರೋಗವನ್ನೂ ತಿಳಿಸುವ ವಾಚ್‌!:‌ 

Advertisement

ಈ ವಾಚ್‌ (ಕೈ ಗಡಿಯಾರ) ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಮಾತ್ರವಲ್ಲ; ಮಾನಸಿಕ ಆರೋ­ಗ್ಯದ ಮಾಹಿತಿಯನ್ನೂ ನೀಡುತ್ತದೆ!

ನೀವು ಖನ್ನತೆಗೆ ಒಳಗಾಗಿದ್ದರೆ ಅಥವಾ ಆತಂಕ­ಗೊಂಡಿದ್ದರೆ ಪ್ರತೀ 15 ನಿಮಿಷಕ್ಕೊಮ್ಮೆ ಈ ಸ್ಮಾರ್ಟ್‌ ವಾಚ್‌ ಮಾಹಿತಿ ನೀಡುವುದರ ಜತೆಗೆ ಅದರಿಂದ ಹೊರಬರಲು ನೀವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನವನ್ನೂ ಮಾಡು­ತ್ತದೆ. ಹೀಗೆ ಮಾನಸಿಕ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನೀಡುವ ವಿಶ್ವದ ಮೊದಲ ವೈದ್ಯಕೀಯ ದರ್ಜೆಯ ಸ್ಮಾರ್ಟ್‌ ವಾಚ್‌ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇದರ ಹೆಸರು ಕ್ಝಾಂತ್ (Xaant). ಈ ಮುಂಗೈಗೆ ಧರಿಸಬಹುದಾದ ಅತ್ಯಾ­ಧುನಿಕ ಸ್ಮಾರ್ಟ್‌ ವಾಚ್‌ನಲ್ಲಿ ಏಳು ಪ್ರಕಾರದ ಸೆನ್ಸರ್‌ಗ­ಳನ್ನು ಅಳವಡಿಸ­ಲಾಗಿರುತ್ತದೆ. ಅವುಗಳು ಕೃತಕ ಬುದ್ಧಿಮತ್ತೆ­ಯಿಂದ ದೇಹದ ನರ­ಮಂಡಲದ ವರ್ತನೆಯನ್ನು ಆಧರಿಸಿ ದೇಹದ ಮಾನಸಿಕ ಸ್ಥಿತಿಗತಿಯನ್ನು ವಿಶ್ಲೇಷಣೆ ಮಾಡುತ್ತವೆ. ಇದರಿಂದ ಆತಂಕ, ಆಯಾಸ, ಖನ್ನತೆ, ನಿದ್ರೆ ಮತ್ತಿತರ ಅಂಶಗಳ ಜತೆಗೆ ಅದಕ್ಕೆ ಪರಿಹಾರಗಳ ಬಗ್ಗೆ ಇದು ತಿಳಿಸುತ್ತದೆ ಎಂದು ಕ್ಝಾಂತ್ ಸಂಸ್ಥೆಯ ವಿಜ್ಞಾನಿಯೊಬ್ಬರು ತಿಳಿಸಿದರು.

 ಮಾತ್ರೆ ನುಂಗಲು ಹೇಳುವ ಅಲೆಕ್ಸಾ! :

Advertisement

ಫ್ಯಾನ್‌ ಹಾಕುವ, ಎಸಿ ಆನ್‌ ಮಾಡುವ ಅಥವಾ ನೀವು ಸೂಚಿಸಿದ ಹಾಡು ಪ್ಲೇ ಮಾಡುವ ನೆಚ್ಚಿನ ಅಲೆಕ್ಸಾ ನಿಮಗೆ ಚಿರಪರಿಚಿತ. ಆದರೆ ಈಗ ಎಷ್ಟೊ­ತ್ತಿಗೆ ಯಾವ ಮಾತ್ರೆ ನುಂಗಬೇಕು? ಒಂದು ವೇಳೆ ಮಾತ್ರೆ ನುಂಗುವುದನ್ನು ಮರೆತರೆ ಅದನ್ನು ನೆನಪಿ­ಸುವ ವಿನೂತನ “ಅಲೆಕ್ಸಾ’ ಮಾರುಕಟ್ಟೆಗೆ ಬಂದಿದೆ!

ಮಾತ್ರೆ ತೆಗೆದುಕೊಳ್ಳುವುದು ಮರೆತಿದ್ದರೆ ಯಾವ ಹೊತ್ತಿಗೆ ಯಾವ ಮಾತ್ರೆ ತೆಗೆದುಕೊಳ್ಳ­ಬೇಕು ಎಂಬುದು ಗೊತ್ತಾಗದಿದ್ದರೆ ಯಾವ ಮಾತ್ರೆ­ಗಳನ್ನು ಎಷ್ಟು ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಸುವ ಅಲೆಕ್ಸಾ ಮಾದರಿಯ “ವರಿಡೋಸ್‌’ ಎಂಬ ತಂತ್ರಜ್ಞಾನ ಬಂದಿದೆ. ಇದು ಅಲೆಕ್ಸಾ ಮುಂದುವರಿದ ಭಾಗದಂತೆ ಕಾರ್ಯನಿರ್ವಹಿಸುತ್ತದೆ. ಟೆಕ್‌ ಸಮಿಟ್‌ನಲ್ಲಿ ಇದು ಆಕರ್ಷಣೆಯ ಕೇಂದ್ರಬಿಂದು ಆಗಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಅತ್ಯಂತ ಚಿಕ್ಕ ಕುಟುಂಬಗಳಿರುತ್ತವೆ. ಮನೆಯಲ್ಲಿ ಹಿರಿಯ ನಾಗರಿಕರು ಹಲವು ಕಾಯಿಲೆಗಳಿಂದ ಬಳಲುತ್ತಿ ರುತ್ತಾರೆ. ಯಾವಾಗ ಯಾವ ಮಾತ್ರೆ ತೆಗೆದುಕೊಳ್ಳ­ಬೇಕು ಎಂಬ ತಿಳಿವಳಿಕೆಯೂ ಅವರಿಗೆ ಇರುವುದಿಲ್ಲ. ಅಂತಹ ಕಡೆ ಇದು ನೆರವಿಗೆ ಧಾವಿಸಲಿದೆ. ಮಾತ್ರೆಗ­ಳನ್ನು ತೆಗೆದುಕೊಳ್ಳ­ದಿರುವ ಬಗ್ಗೆ ಸಂಬಂಧ­ಪಟ್ಟ­ವರಿಗೆ ಮೊಬೈಲ್‌ ಕರೆ ಕೂಡ ಹೋಗುತ್ತದೆ. ಇದರಲ್ಲಿ ಮೂರು ವಿಭಾಗಗಳಿದ್ದು, ಅದರಲ್ಲಿ  ಮಾತ್ರೆಗಳನ್ನು ಇಡಬ ಹುದು. ಡಿವೈಸ್‌ನಲ್ಲಿ ಮಾತ್ರೆಗಳ ಸಂಖ್ಯೆ, ಪ್ರಕಾರಗಳು ಸಹಿತ ಹಲವು ಮಾಹಿತಿ ನೀಡಲಾಗಿರುತ್ತದೆ. ಅದನ್ನು ಆಧರಿಸಿ ಡಿವೈಸ್‌ ಕಾರ್ಯನಿರ್ವಹಿಸುತ್ತದೆ ಎಂದು “ವರಿ­ಡೋಸ್‌’ನ ಅನುಷಾ ವೆಂಕಟೇಶ್‌ ತಿಳಿಸಿದರು.

 ಸೊಳ್ಳೆಪರದೆಯಂತೆ ಗಿಡಗಳಿಗೂ ಪರದೆ ಹಾಕಿ :

ಮನೆಯಲ್ಲಿ ಸೊಳ್ಳೆಯಿಂದ ರಕ್ಷಣೆಗೆ ಸೊಳ್ಳೆಪರದೆ ಬಳಕೆ ಮಾಡುವುದು ಸಹಜ. ಈಗ ಅದೇ ಮಾದರಿಯಲ್ಲಿ ತಾರಸಿಯಲ್ಲಿ ಬೆಳೆಯುವ ಗಿಡಗಳಿಗೂ ರಕ್ಷಣ ಪರದೆಗಳು ಬಂದಿವೆ!

ಇತ್ತೀಚಿನ ದಿನಗಳಲ್ಲಿ ತಾರಸಿಯಲ್ಲಿ ಪಪ್ಪಾಯ, ಲಿಂಬೆಯಂತಹ ಗಿಡಗಳನ್ನು ನೆಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಜಮೀ­ನು­ಗಳಲ್ಲಿ ರೋಗಗಳ ರಕ್ಷಣೆಗಾಗಿ ಪಾಲಿಹೌಸ್‌ನಲ್ಲಿ ಬೆಳೆ­ಯು­ವುದು ಸಾಮಾನ್ಯವಾಗಿದ್ದು, ಆ ಮೂಲಕ ರಕ್ಷಣೆ ಮಾಡಲಾಗು­ತ್ತದೆ. ಆದರೆ ತಾರಸಿಯಲ್ಲಿ ಈ ಮಾದರಿ ಕಷ್ಟ. ಈ ಹಿನ್ನೆಲೆಯಲ್ಲಿ ಪ್ರತೀ ಗಿಡಗಳಿಗೆ ಪ್ರತ್ಯೇಕವಾದ ಪರದೆಗಳನ್ನು ಹಾಕಿ ರೋಗಬಾಧೆ­ಯಿಂದ ರಕ್ಷಿಸಬಹುದಾಗಿದೆ.

ತಾರಸಿ ಅಥವಾ ಹಿತ್ತಲು ಅಥವಾ ಮನೆಯಂಗಳದಲ್ಲೂ ಹಸುರುಹೊದಿಕೆ ಅಳವಡಿಸಬಹುದು. ಆದರೆ ಅದಕ್ಕೆ ಸಾಕಷ್ಟು ಜಾಗ ಬೇಕಾಗುತ್ತದೆ. ಜತೆಗೆ ದುಬಾರಿಯೂ ಆಗಿದೆ. ಆದರೆ ಪರದೆ ತುಂಬಾ ಸರಳ ಮತ್ತು ಅಗ್ಗದ ವಿಧಾನವಾಗಿದೆ. ಬೆಳೆಗಳು ಉತ್ತಮವಾಗಿ ಬರುತ್ತವೆ. ಪಪ್ಪಾಯಕ್ಕಂತೂ ಇದು ಹೇಳಿಮಾಡಿಸಿದ್ದಾಗಿದೆ ಎಂದು ಥಾಮಸ್‌ ಬಯೋಟೆಕ್‌ ಆ್ಯಂಡ್‌ ಸೈಟೋಬ್ಯಾಕ್ಟ್$Õ ಸೆಂಟರ್‌ ಫಾರ್‌ ಬಯೋಸೈನ್ಸಸ್‌ (ಒಪಿಸಿ) ಪ್ರೈ.ಲಿ., ಸಿಇಒ ಡಾ| ಪಿಯುಸ್‌ ಥಾಮಸ್‌ ತಿಳಿಸುತ್ತಾರೆ. ಇದರಿಂದ ಇಳುವರಿ ಹೆಚ್ಚುವುದರ ಜತೆಗೆ ಗುಣಮಟ್ಟದ ಉತ್ಪನ್ನಗಳನ್ನು ಕೂಡ ಪಡೆಯಬಹುದು ಎಂದೂ ಅವರು ಹೇಳಿದರು.

ವೈರಾಣುಗಳನ್ನು ಹುಡುಕಿ ನಿಷ್ಕ್ರಿಯಗೊಳಿಸುವ ಡಿವೈಸ್‌ :

ಆಲ್‌ಔಟ್‌, ಗುಡ್‌ನೈಟ್‌ನಂತಹ ಯಂತ್ರಗಳು ಸೊಳ್ಳೆ­ಗಳನ್ನು ಹುಡುಕಿ ಕೊಲ್ಲು­ವಂತೆಯೇ ಬರಿಗಣ್ಣಿಗೆ ಕಾಣದ ಸಾಂಕ್ರಾಮಿಕ ರೋಗ ಹರಡುವ ವೈರಾಣು­ಗಳನ್ನು ಹುಡುಕಿ, ಸ್ವಾಭಾವಿಕ­ವಾಗಿ ನಿಷ್ಕ್ರಿಯ­ಗೊಳಿಸಿ ಶುದ್ಧ ಗಾಳಿಯನ್ನು ಪೂರೈಸುವ ವ್ಯವಸ್ಥೆ ಈಗ ಮಾರುಕಟ್ಟೆಗೆ ಬಂದಿದೆ.

ಶೈಕೊಕ್ಯಾನ್‌ (shycocan) ಎಂಬ ಡಿವೈಸ್‌ ಅನ್ನು ಶೈಕೋ­ಕ್ಯಾನ್‌ ಕಾರ್ಪೋರೇಶನ್‌ ಅಭಿವೃದ್ಧಿ­ಪಡಿಸಿದೆ. ಇದು ರೋಗ ಹರಡುವ ವೈರಾಣುಗಳನ್ನು ನಾಶಪಡಿಸಿ, ಶುದ್ಧಗಾಳಿಯನ್ನು ನೀಡುತ್ತದೆ. ಕೋವಿಡ್‌ ಮತ್ತಿತರ ಸಾಂಕ್ರಾಮಿಕ ರೋಗಗಳು ಬಂದರೆ ಅಂಥವರನ್ನು ಪ್ರತ್ಯೇಕ­ವಾಗಿಡುವ ಆವಶ್ಯಕತೆ ಇಲ್ಲ. ಆ ರೋಗ ಹರಡುವ ಆ ವೈರಾಣುಗಳೇ ನಮ್ಮ ಹತ್ತಿರ ಸುಳಿಯದಂತೆ ಮಾಡುವ ತಂತ್ರಜ್ಞಾನ ಇದಾಗಿದೆ ಎಂದು ಸಂಸ್ಥೆಯ ಸ್ಟ್ರಾéಟರ್ಜಿ ವಿಭಾಗದ ಮುಖ್ಯಸ್ಥೆ ಸಿರಿಯಾ ತಿಳಿಸುತ್ತಾರೆ.

ಯಾವುದೇ ರಾಸಾಯನಿಕ ಅಂಶಗಳು, ವಿಕಿರಣಗಳಿಲ್ಲದ ನೈಸರ್ಗಿಕ­ವಾಗಿ ಶುದ್ಧೀಕರಿಸುವ ತಂತ್ರಜ್ಞಾನ ಇದಾಗಿದ್ದು, ವಿಶ್ವದ ಮೊದಲ ಗಾಳಿ ಮತ್ತು ಬಯೋಸೇಫ್ಟಿ ಡಿವೈಸ್‌ ಎಂದು ವಿಶ್ಲೇಷಿಸಲಾಗಿದೆ. ಒಂದು ಡಿವೈಸ್‌ ಸುಮಾರು ಸಾವಿರ ಚದರಡಿ ವ್ಯಾಪ್ತಿಯಲ್ಲಿನ ವೈರಾಣುಗಳನ್ನು ನಾಶಪಡಿಸುತ್ತದೆ. ಇದರ ನಿಖರತೆಯು ಶೇ. 95ರಿಂದ 100ರಷ್ಟಿದೆ. ಈಗಾಗಲೇ 30 ಸಾವಿರಕ್ಕೂ ಅಧಿಕ ಡಿವೈಸ್‌ಗಳನ್ನು ಮಾರಾಟ ಮಾಡಲಾಗಿದೆ. ಇದರ ಬೆಲೆ ತೆರಿಗೆ ಹೊರತುಪಡಿಸಿ 21 ಸಾವಿರ ರೂ. ಆಗಿದೆ ಎಂದರು.

ಹೃದಯಬಡಿತದ ಶಬ್ದ ದಾಖಲಿಸುವ ಸ್ಮಾರ್ಟ್‌ ಸ್ಟೆಥೊಸ್ಕೋಪ್‌ :

ನೋಡಲು ಸಾಮಾನ್ಯ ಸ್ಟೆಥೊಸ್ಕೋಪ್‌ನಂತೆ ಕಾಣುವ ಇದು ಸ್ಮಾರ್ಟ್‌ ಸ್ಟೆಥೊಸ್ಕೋಪ್‌. ಕೃತಕ ಬುದ್ಧಿಮತ್ತೆ ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಬ್ಲೂಟೂತ್‌ ಸೌಲಭ್ಯವಿದ್ದು, ಅದನ್ನು ಮೊಬೈಲ್‌ಗೆ ಕನೆಕ್ಟ್ ಮಾಡಬಹುದು. ಅದರಿಂದ ರೋಗಿಯ ಹೃದಯಬಡಿತದ ಶಬ್ದ ಮೊಬೈಲ್‌ನಲ್ಲಿ ದಾಖಲಾಗುತ್ತದೆ. ಜತೆಗೆ ಹೃದಯದ “ಮರ್ಮರ್‌’ ಕೂಡ ತಿಳಿಯಬಹುದು.

ಅಷ್ಟೇ ಅಲ್ಲ, ಮೊಬೈಲ್‌ನಲ್ಲಿ ದಾಖಲಾಗುವ ಹೃದಯಬಡಿತದ ಶಬ್ದ ಮತ್ತು “ಮರ್ಮರ್‌’ (murmur) ಅನ್ನು ರೋಗಿಯು ಇದ್ದಲ್ಲಿಂದಲೇ ವೈದ್ಯರಿಗೆ ಶೇರ್‌ ಮಾಡಬಹುದು. ವೈದ್ಯರು ಮಾತ್ರವಲ್ಲ; ಸಾಮಾನ್ಯ ವ್ಯಕ್ತಿಗಳೂ ಇದನ್ನು ಬಳಸಬಹುದು. ಮುಂದುವರಿದ ಭಾಗವಾಗಿ ಇದೇ ಸ್ಮಾರ್ಟ್‌ ಸ್ಟೆಥೊಸ್ಕೋಪ್‌ನಲ್ಲಿ ಶ್ವಾಸಕೋಶದ ಮಾಹಿತಿಯನ್ನೂ ಪತ್ತೆಹಚ್ಚಿ, ಮೊಬೈಲ್‌ನಲ್ಲಿ ದಾಖಲಿಸುವ ಪ್ರಯತ್ನ ನಡೆದಿದೆ ಎಂದು ಎಐ ಹೆಲ್ತ್‌ ಹೈವೇ ಇಂಡಿಯಾ ಪ್ರೈ.ಲಿ.,ನ ಮಂಜುನಾಥ್‌ ತಿಳಿಸಿದರು.  ಮೂರು ವರ್ಷಗಳ ಹಿಂದೆ ಇದನ್ನು ಅಭಿವೃದ್ಧಿಪಡಿಸಿದ್ದು, ಎರಡು ಸಾವಿರಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟವಾಗಿವೆ. ವೈದ್ಯಕೀಯ ವಿದ್ಯಾರ್ಥಿ ಗಳು ಇದನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಈಗ ನಾವು ಗ್ರಾಮೀಣ ಭಾಗಕ್ಕೆ ಇದನ್ನು ಪರಿಚಯಿಸುವ ಪ್ರಯತ್ನ ನಡೆಸಿದ್ದೇವೆ ಎಂದೂ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next