Advertisement

ಸ್ಮಾರ್ಟ್ ಗಾರ್ಡನ್ ಬಳಸಿ, ಮನೆಯೊಳಗೂ ತರಕಾರಿ ಬೆಳೆಸಿ !

05:11 PM May 13, 2021 | Team Udayavani |

ವಿಶ್ವದಾದ್ಯಂತ ಕೊರೋನಾ ಸಾಂಕ್ರಾಮಿಕವು ದಾಳಿ ಮಾಡಿದ್ದಂದಿನಿಂದ ಪ್ರತಿಯೊಬ್ಬರೂ ಶುದ್ಧ, ಸ್ವಚ್ಛ ಆಹಾರ, ರೋಗ ನಿರೋಧಕ ಶಕ್ತಿ ಇತ್ಯಾದಿಗಳ ಬಗ್ಗೆ ಬಹಳಷ್ಟು ಜಾಗರೂಕತೆಯನ್ನು ವಹಿಸುತ್ತಿದ್ದಾರೆ. ಇಂತಹ ಆಹಾರ ಪದ್ಧತಿಗಳನ್ನು ಪಾಲಿಸಲು ಇನ್ನೊಬ್ಬರ ಮೇಲೆ ಅವಲಂಬಿತರಾಗುವುದಕ್ಕಿಂತ ನಾವೇ ಮನೆಯಲ್ಲಿ ತಾಜಾ ಸಸ್ಯಗಳನ್ನು ಮತ್ತು ಗಿಡಮೂಲಿಕೆಗಳನ್ನು ಬೆಳೆಸಿದರೆ ಎಷ್ಟು ಚಂದ ಅಲ್ವಾ! ತರಕಾರಿ-ಹಣ್ಣುಗಳನ್ನು ನಮ್ಮದೇ ಮನೆಯಲ್ಲಿ ಬೆಳೆಸಿದಾಗ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಕೆಲವರಿಗೆ ಬೆಳೆಸಲು ಜಾಗದ ಕೊರತೆ, ಇನ್ನೂ ಕೆಲವರಿಗೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ತೋಟಗಾರಿಕೆಯತ್ತ ಮುಖ ಮಾಡಲಿಕ್ಕೂ ಪುರಸೋತ್ತು ಇರಲ್ಲ. ಇಂತಹವರಿಗಾಗಿಯೇ ಈ ತಂತ್ರಜ್ಞಾನ ಯುಗದಲ್ಲಿ ಮೂಡಿ ಬಂದಿದೆ ಸ್ಮಾರ್ಟ್ ಗಾರ್ಡನ್!

Advertisement

ಸ್ಮಾರ್ಟ್ ಗಾರ್ಡನ್ ಒಂದು ಸಂಪೂರ್ಣ ಸ್ವಯಂಚಾಲಿತ ಉದ್ಯಾನಗಳಾಗಿದ್ದು, ತೋಟಗಾರಿಕೆಯ ಎಲ್ಲಾ ಕೆಲಸಗಳನ್ನು ಮಾಡುತ್ತವೆ. ತರಕಾರಿಗಳನ್ನು ಮತ್ತು ಗಿಡಮೂಲಿಕೆಗಳನ್ನು ಬೆಳೆಸಿ, ಬೆಳೆಯಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಬಾಲ್ಕನಿ, ತೋಟ ಅಥವಾ ಹಿತ್ತಲು ಇರುವುದಿಲ್ಲ. ಹೀಗಿರುವಾಗ ಉದ್ಯಾನವನ್ನು ಬೆಳೆಸಲೂ ಆಗುವುದಿಲ್ಲ. ಹೀಗಾಗಿ ಒಳಾಂಗಣ ತೋಟಗಾರಿಕೆಯನ್ನು ಈ ಸ್ಮಾರ್ಟ್ ಗಾರ್ಡನ್ ಉತ್ತೇಜಿಸುತ್ತದೆ. ಹಾಗಂತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಷ್ಟು ಅಥವಾ ಪ್ರತಿನಿತ್ಯ ಮನೆಯಲ್ಲಿ ಸಲಾಡ್ ಮಾಡಿ ತಿನ್ನುವಷ್ಟು ತರಕಾರಿಗಳನ್ನು ಬೆಳೆಸಲು ಆಗದಿದ್ದರೂ, ಕಡಿಮೆ ಪ್ರಯತ್ನದಲ್ಲಿ ಆರೋಗ್ಯಕರ ತರಕಾರಿ-ಗಿಡಮೂಲಿಕೆಗಳನ್ನು ಬೆಳೆಸಲು, ಇದೊಂದು ಚತುರ ಮಾರ್ಗವಾಗಿದೆ.

ಹೀಗೆ ಒಳಾಂಗಣ ತೋಟಗಾರಿಕೆಯಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಬ್ರ್ಯಾಂಡ್ ಕ್ಲಿಕ್ ಆ್ಯಂಡ್ ಗ್ರೋ ಮತ್ತು ಏರೋಗಾರ್ಡನ್. ಅದರಲ್ಲಿ ಮಾಡಬೇಕಾಗಿರುವುದು ಇಷ್ಟೇ. ಯಾವುದೇ ಸಸ್ಯದ ಬೀಜಗಳನ್ನು ಮತ್ತು ಸ್ಮಾರ್ಟ್ ಗಾರ್ಡನ್ ಕಿಟ್ ಅನ್ನು ಖರೀದಿಸಿ, ಅದರಲ್ಲಿ ಸಿಗುವ ಸಾಕೆಟ್‌ನಲ್ಲಿ ಬೀಜ ಬಿತ್ತಿ, ಟ್ಯಾಂಕ್ ಒಳಗೆ ನೀರನ್ನು ಹಾಕಬೇಕು. ವಿದ್ಯುತ್ ತಲುಪಿಸಬಲ್ಲ, ಮನೆಯ ಯಾವುದೇ ಮೂಲೆಯಲ್ಲಿ ಇದನ್ನು ಇಡಬಹುದು. ಸ್ವಿಚ್ ಹಾಕಿದ ಬಳಿಕ, ನೀವು ಬಿತ್ತಿದ ಬೀಜಗಳಿಗೆ ಸರಿಯಾದ ಪ್ರಮಾಣದ ನೀರು, ಬೆಳಕು ಮತ್ತು ಇನ್ನಿತರ ಪೋಷಕಾಂಶಗಳು ಇದೆಯಾ ಎಂಬುವುದನ್ನು ಅದು ತನ್ನಿಂತಾನೇ ಖಚಿತಪಡಿಸುತ್ತದೆ. ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ, ಅದು ಸುಮಾರು ಮೂರು ವಾರಗಳಷ್ಟು ಕಾಲ ಗಿಡಕ್ಕೆ ನೀರು ಪೂರೈಸಬಲ್ಲದು.

ನಿಮಗೆ ಅಷ್ಟೇನೂ ಕೆಲಸ ಇಲ್ಲ!

ಬೀಜ ಬಿತ್ತಿ, ನೀವು ಅದರಲ್ಲಿ ತುಂಬುವಷ್ಟು ನೀರು ಹಾಕಿಟ್ಟು, ಅದರ ಕೇಬಲ್ ಅನ್ನು ಪ್ಲಗ್ ಇನ್ ಮಾಡಿ ಸ್ವಿಚ್ ಹಾಕಿದರೆ ಆಯ್ತು. ಬಳಿಕ ಆ ಟ್ಯಾಂಕ್ ಖಾಲಿ ಆಗುವವರೆಗೆ ನಿಮಗೆ ಯಾವುದೇ ಕೆಲಸ ಇರುವುದಿಲ್ಲ. ನೀವು ಚಿಂತೆ ಮಾಡಬೇಕಾಗಿರುವುದು ಏನೆಂದರೆ, ಸ್ಮಾರ್ಟ್ ಗಾರ್ಡನ್‌ನಲ್ಲಿರುವ ಸಸ್ಯಗಳಿಗೆ ಬೇಕಾಗುವಷ್ಟು ನೀರು ಕಿಟ್ ಒಳಗಡೆ ಇದೆಯಾ ಎಂಬುವುದನ್ನು ಖಾತ್ರಿಪಡಿಸುವುದು ಮತ್ತು ಸರಿಯಾಗಿ ಪ್ಲಗ್ ಇನ್(ವಿದ್ಯುತ್ ಸರಬರಾಜು) ಮಾಡಿದ್ದೀರಾ ಎಂದು ನೋಡಿಕೊಳ್ಳುವುದು. ಇದನ್ನು ಬಿಟ್ಟರೆ, ಬೇರೆಲ್ಲವನ್ನೂ ಸ್ಮಾರ್ಟ್ ಗಾರ್ಡನ್ ನೋಡಿಕೊಳ್ಳುತ್ತದೆ. ನೀವು ನೆಟ್ಟ ಸಸ್ಯಗಳು ಎತ್ತರವಾಗುತ್ತಿದ್ದಂತೆ, ಬೆಳೆಯಲು ಇನ್ನಷ್ಟು ಸ್ಥಳವನ್ನು ನೀಡಲು ಹಾಗೂ ಬೆಳಕು ಮತ್ತು ಸಸ್ಯದ ನಡುವೆ ಲ್ಯಾಂಪ್ ಎಕ್ಸ್ಟೆಂಡರ್ ಬಳಸಿ ಅಂತರವನ್ನು ಹೆಚ್ಚಿಸಬೇಕಾಗುತ್ತದೆ.

Advertisement

ಪ್ರಯೋಜನಗಳು:

ಅನುಕೂಲಕರ ಮತ್ತು ಸರಳವಾಗಿದೆ.  ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮತ್ತು ಮನೆ ಬಿಟ್ಟರೆ ಬೇರಾವ ಹಿತ್ತಲ ಪ್ರದೇಶ ಇಲ್ಲದಿರುವವರಿಗೆ ಈ ಒಳಾಂಗಣ ತೋಟಗಾರಿಕೆ ಬಹಳ ಅನುಕೂಲಕರ. ಮನೆಯೊಳಗಿನ ಯಾವುದೇ ಜಾಗದಲ್ಲಿ ಸ್ಮಾರ್ಟ್ ಗಾರ್ಡನ್‌ ಅನ್ನು ಸ್ಥಾಪಿಸಬಹುದು. ನಾವು ನೆಟ್ಟ ಸಸ್ಯಗಳ ಕಾಳಜಿಯನ್ನು ಅದುವೇ ವಹಿಸುವುದರಿಂದ ತೋಟಗಾರಿಕೆಯನ್ನು ಬಹಳ ಸರಳವನ್ನಾಗಿಸುತ್ತದೆ. ನಾವು ಅದಕ್ಕಾಗಿ ಹೆಚ್ಚೇನೂ ಸಮಯವನ್ನೂ ಮೀಸಲಿಡಬೇಕಾದ ಅನಿವಾರ್ಯತೆಯೂ ಇಲ್ಲ.

ಸ್ವಯಂಚಾಲಿತ ನೀರು-ಬೆಳಕಿನ ವ್ಯವಸ್ಥೆ

ಸ್ಮಾರ್ಟ್ ಗಾರ್ಡನ್‌ಗೆ ಯಾವುದೇ ಸೂರ್ಯಕಿರಣದ ಅಗತ್ಯತೆ ಇಲ್ಲ. ಇನ್-ಬಿಲ್ಟ್ ಎಲ್‌ಇಡಿ ಬೆಳಕಿನ ವ್ಯವಸ್ಥೆ ಇರುವುದರಿಂದ ಅದು ಸಸ್ಯಗಳನ್ನು ಪೌಷ್ಟಿಕವಾಗಿ ಬೆಳೆಸಲು ಸಹಕಾರಿಯಾಗುತ್ತದೆ. ಹಾಗೆಯೇ ಕಿಟ್‌ನಲ್ಲಿರುವ ಸಾಕೆಟ್‌ನೊಳಗೆ ಭರ್ತಿ ಆಗುವಷ್ಟು ನೀರನ್ನು ನಾವು ಒಮ್ಮೆ ತುಂಬಿಸಿಟ್ಟರೆ, ಮುಂದಿನ ಎಲ್ಲಾ ಕೆಲಸವನ್ನು ಅದುವೇ ಸ್ವಯಂಚಾಲಿತವಾಗಿ ಮಾಡುತ್ತದೆ. ಬೀಜ-ಸಸ್ಯಗಳಿಗೆ ಬೇಕಾದ ಹಾಗೆ, ಕಾಲಕಾಲಕ್ಕೆ ನೀರು ಬಿಡುಗಡೆ ಮಾಡುತ್ತದೆ. ಆ ಸಾಕೆಟ್‌ನಲ್ಲಿ ನೀರು ಖಾಲಿ ಆದ ಹಾಗೆ ತುಂಬಿಸಿಡುವ ಜವಾಬ್ದಾರಿ ನಮ್ಮದು.

ಸ್ಮಾರ್ಟ್ ಮಣ್ಣು

ಕ್ಲಿಕ್ ಆ್ಯಂಡ್ ಗ್ರೋ ಸಂಸ್ಥೆಯು ನಾಸಾದ ತಂತ್ರಜ್ಞಾನದಿಂದ ಪ್ರೇರಿತವಾದ ಸ್ಮಾರ್ಟ್ ಮಣ್ಣನ್ನು ಬಳಸುತ್ತದೆ. ಈ ಸ್ಮಾರ್ಟ್ ಮಣ್ಣು ಸಾಮಾನ್ಯ ಮಡಕೆ ಮಣ್ಣಿಗಿಂತ ಭಿನ್ನವಾಗಿದೆ. ಇದು ಸಸ್ಯದ ಜೀವನ ಚಕ್ರದೊಂದಿಗೆ ಹೊಂದಿಕೊಂಡು, ಅದಕ್ಕೆ ಬೇಕಾದ ರೀತಿಯಲ್ಲಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಮಣ್ಣಿನ ಪಿ ಹೆಚ್ ಅನ್ನು ಸಮತೋಲನದಲ್ಲಿರಿಸುತ್ತದೆ.

365 ದಿನವೂ ಬೆಳೆಸಬಹುದು

ಸ್ಮಾರ್ಟ್ ಗಾರ್ಡನ್‌ನಲ್ಲಿ ವರ್ಷದ 365 ದಿನವೂ ಗಿಡಗಳನ್ನು ಬೆಳೆಸಬಹುದು. ಮಳೆ, ಬಿಸಿಲು, ಮಣ್ಣು ಯಾವುದರ ಮೇಲೆಯೂ ಅವಲಂಬಿತವಾಗದೇ, ಎಲ್ಲವನ್ನೂ ಸ್ಮಾರ್ಟ್ ಆಗಿ ನಿಭಾಯಿಸುತ್ತದೆ.

ನಿಮ್ಮ ಸಸ್ಯಗಳನ್ನು ಸ್ಥಳಾಂತರಿಸಬಹುದು.

ಎಲ್ಲಾ ಸಸ್ಯಗಳೂ ತನ್ನದೇ ಆದ ಜೀವಿತಾವಧಿಯನ್ನು ಹೊಂದಿರುತ್ತದೆ. ತನ್ನ ಜೀವನ ಚಕ್ರದ ಅವಧಿ ಮುಗಿಯುವವರೆಗೆ ಸ್ಮಾರ್ಟ್ ಗಾರ್ಡನ್‌ನಲ್ಲಿ ಬೆಳೆಯುತ್ತವೆ. ಆದರೆ, ಇನ್ನಷ್ಟು ವರ್ಷ ಆ ಸಸ್ಯಗಳನ್ನು ಬೆಳೆಸಲು ನೀವು ಬಯಸಿದರೆ, ಅದನ್ನು ಬೇರೆಡೆ, ಮಣ್ಣಿನ ಮಡಕೆಯೊಳಗೆ ಅಥವಾ ಇತರ ಹೊರಾಂಗಣ ಪ್ರದೇಶಗಳಿಗೆ ಸ್ಥಳಾಂತರಿಸಿ ಬೆಳೆಸಬಹುದು.

ಆದರೆ, ಈ ಸಂದರ್ಭ ನೀವು ಏನನ್ನು ಗಮನದಲ್ಲಿರಿಸಬೇಕೆಂದರೆ, ಯಾವುದೇ ಗಿಡದ ನೈಸರ್ಗಿಕ ಜೀವಿತಾವಧಿ ಮುಗಿಯುವ ಮುನ್ನವೇ ನೀವು ಅದನ್ನು ಸ್ಥಳಾಂತರಿಸಬೇಕು. ಸಸ್ಯಗಳನ್ನು ಕಸಿ ಮಾಡಿದ ನಂತರ, ಅದಕ್ಕೆ ಪುಷ್ಟೀಕರಿಸಿದ ಮಣ್ಣನ್ನು ಸೇರಿಸಿ, ಪ್ರತಿನಿತ್ಯ ನೀರು ಹಾಕುತ್ತಿರಬೇಕು.

ಯಾವ ಬೀಜವನ್ನೂ ಬಿತ್ತಬಹುದು

ಸಾಮಾನ್ಯವಾಗಿ ಈ ಸ್ಮಾರ್ಟ್ ಗಾರ್ಡನ್ ಕಿಟ್‌ನಲ್ಲಿ ಒಂದಷ್ಟು ಬೀಜಗಳು ಲಭ್ಯವಿರುತ್ತದೆ. ಇದನ್ನು ಹೊರತುಪಡಿಸಿ ನಾವೇ ಮಾರುಕಟ್ಟೆಯಿಂದ ಬೀಜಗಳನ್ನು ತಂದು ಬಿತ್ತಬಹುದು. ತುಳಸಿ, ಟೊಮ್ಯಾಟೋ, ಎಲೆ ಸಾಸಿವೆ, ಮೆಣಸಿನಕಾಯಿ, ಸಿಹಿ ಮೆಣಸು ಇತ್ಯಾದಿ ಜನಪ್ರಿಯವಾದವುಗಳು.

‘ಅದನ್ನೆಲ್ಲಾ ಮಾಡೋಕೆ ನನಗೆ ಟೈಮ್ ಇಲ್ಲ’ ಎಂದು ಹೇಳುವವರಿಗೆ ಇದು ಬಹಳ ಉಪಕಾರಿಯಾಗಬಲ್ಲದು. ಎಲ್ಲವನ್ನೂ ಸ್ಮಾರ್ಟ್ ಆಗಿ ನಿಭಾಯಿಸಬಲ್ಲ ಈ ಗಾರ್ಡನ್ ಇ-ಕಾಮರ್ಸ್ ಪ್ಲಾಟ್‌ ಫಾರ್ಮ್ ಗಳಲ್ಲಿ ಲಭ್ಯವಿದೆ. ನೀವೇ ತರಕಾರಿಗಳನ್ನು ಬೆಳೆಸಿ, ಸವಿಯಿರಿ.

ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next