Advertisement

ನಿಧಾನಗತಿಯ ಕಾಮಗಾರಿ: ಜನಸಂಚಾರಕ್ಕೆ ಸಮಸ್ಯೆ

06:45 AM Jun 04, 2018 | Team Udayavani |

ಕಾರ್ಕಳ: ತಾಲೂಕಿನ ಮುರತಂಗಡಿ- ಇರ್ವತ್ತೂರು ಸಂಪರ್ಕ ಕೊಂಡಿಯಾಗಿರುವ ಇರ್ವತ್ತೂರಿನ ಭಾಗದಲ್ಲಿ ನೂತನ ಸೇತುವೆ ನಿಮಾರ್ಣದ ಹಂತದಲ್ಲಿದ್ದು , ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರಮುಖ ಸಂಪರ್ಕ ಕಳೆದುಕೊಳ್ಳುವಂತಾಗಿದೆ.

Advertisement

ಹಳೆಯ ಸೇತುವೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಕಾಮಗಾರಿಯ ವೇಳೆ ನದಿಗೆ ಮಣ್ಣುಹಾಕಿ ಎರಡೂ ಕಡೆಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾಕಿರುವ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸೇತುವೆಗೆ ಕಳೆದ ಮಾರ್ಚ್‌ ತಿಂಗಳಿನಲ್ಲಿ ಶಿಲಾನ್ಯಾಸ ನಡೆದರೂ ಮೇ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ.

ಪರ್ಯಾಯ ವ್ಯವಸ್ಥೆ …!
ಸದ್ಯ ಸೇತುವೆ ನಿರ್ಮಾಣದ ಸಮೀಪದಲ್ಲೇ ಮೋರಿಗಳನ್ನು ಹಾಕಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಅಷ್ಟು ದೊಡ್ಡ  ಹೊಳೆಗೆ ನಾಲ್ಕು ಮೋರಿಗಳನ್ನು ಹಾಕಿ ಮೇಲ್ಭಾಗಕ್ಕೆ ಮಣ್ಣು ಹಾಕಿದರೆ ಈ ಮಳೆಗಾಲದಲ್ಲಿ ಉಳಿಯಬಹುದೇ ಎನ್ನುವ ಆತಂಕ ಆ ಭಾಗದ ಜನತೆಯದ್ದಾಗಿದೆ.

ಸದ್ಯ ಮಳೆಗಾಲ ಪ್ರಾರಂಭಗೊಂಡಿದ್ದು, ಸೂಕ್ತ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ, ಆ ಭಾಗದ ಜನತೆ 5-6 ಕಿ. ಮೀ. ರಸ್ತೆಗೆ ಬೆಳುವಾಯಿ ಮೂಲಕ 15 ಕಿ.ಮೀ. ಅಧಿಕ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಸಂಪರ್ಕ ಕಡಿತ
ಕಳೆದೊಂದು ತಿಂಗಳಿನಿಂದ ಕಾಮಗಾರಿ ಕಾರ್ಯ ನಡೆಯುತ್ತಿದ್ದು, ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಎರಡೂ ಭಾಗಗಳ ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಕೊಳಕೆ, ಇರ್ವತ್ತೂರು ಭಾಗದ ಸಾಕಷ್ಟು ಮಂದಿ ಉದ್ಯೋಗಸ್ಥರು, ವಿದ್ಯಾರ್ಥಿಗಳು ಪ್ರತೀದಿನ ಕಾರ್ಕಳಕ್ಕೆ ಬರುತ್ತಾರೆ. ಹೀಗಾಗಿ ಅವರಿಗೆ ಸಮಸ್ಯೆಯಾಗಿದೆ.

Advertisement

ಮಳೆಗಾಲದಲ್ಲಿ ಸಮಸ್ಯೆ 
ಎರಡು ತಿಂಗಳ ಹಿಂದೆಯೇ ಕಾಮಗಾರಿ ಪ್ರಾರಂಭಿಸಿ ವೇಗವಾಗಿ ಕೆಲಸ ಕಾಮಗಾರಿ ನಡೆಸುತ್ತಿದ್ದರೆ ಈಗ ಸಮಸ್ಯೆಯಾಗುತ್ತಿರಲಿಲ್ಲ. ಈಗ ಮಣ್ಣು ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಭಾರೀ ನೀರು ಬರುವುದರಿಂದ ಅದು ನಿಲ್ಲುತ್ತದೇಯೇ ಎನ್ನುವ ಅನುಮಾನವಿದೆ. ಒಂದು ವೇಳೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ಈ ಭಾಗದ ಜನತೆಗೆ ಭಾರೀ ಸಮಸ್ಯೆಯಾಗಲಿದೆ.
–  ದಿನೇಶ್‌,ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next