Advertisement

ನೀವು ಬೆಳಗಿನ ಉಪಹಾರ ತಪ್ಪಿಸಿಕೊಂಡರೆ ಅಪಾಯ ಖಂಡಿತಾ..!

04:38 PM Sep 05, 2022 | ಕಾವ್ಯಶ್ರೀ |

ಬೆಳಗಿನ ಉಪಹಾರ ಬಹಳ ಮುಖ್ಯ. ದಿನವನ್ನು ಪ್ರಾರಂಭಿಸಲು ಮತ್ತು ಇಡೀ ದಿನ ಉಲ್ಲಾಸಭರಿತರಾಗಿರಲು ನಮ್ಮ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಬೆಳಗಿನ ಆಹಾರ ಆರೋಗ್ಯಕರವಾಗಿದ್ದರೆ, ನಮ್ಮ ದಿನವೂ ಚೆನ್ನಾಗಿರುತ್ತದೆ. ಹೀಗಾಗಿ ಬೆಳಗಿನ ಉಪಹಾರವನ್ನು ತ್ಯಜಿಸಬಾರದು. ಜೀವನದ ಒತ್ತಡದಲ್ಲಿ ಇಂದಿನ ಜನರು ಸಾಮಾನ್ಯವಾಗಿ ದಿನದ ಪ್ರಮುಖ ಉಪಹಾರವನ್ನು ಬಿಟ್ಟುಬಿಡುತ್ತಾರೆ. ಇನ್ನೂ ಹಲವರು ತೂಕ ಇಳಿಸಬೇಕು ಎನ್ನುವ ಕಾರಣಕ್ಕೆ ಬೆಳಗ್ಗೆ ತಿಂಡಿ ತಿನ್ನುವುದಿಲ್ಲ.

Advertisement

ಬೆಳಗಿನ ಉಪಹಾರ ತ್ಯಜಿಸಿದರೆ ಹಲವಾರು ಅಡ್ಡ ಪರಿಣಾಮಗಳು ನಮ್ಮ ದೇಹದ ಮೇಲೆ ಪ್ರಭಾವ ಬೀರುತ್ತವೆ. ಬೆಳಗ್ಗಿನ ಉಪಹಾರ ನಮ್ಮನ್ನು ಅನೇಕ ಕಾಯಿಲೆಗಳಿಂದ ರಕ್ಷಿಸಬಹುದು ಎಂಬುದು ಹಲವರಿಗೆ ಗೊತ್ತಿಲ್ಲ. ಬೆಳಗ್ಗಿನ ಉಪಹಾರವನ್ನು ಬಿಟ್ಟು ಬಿಡುವ ಅಭ್ಯಾಸ ನಿಮ್ಮಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಪೌಷ್ಟಿಕಾಂಶವಿರುವ ಆರೋಗ್ಯಕರ ಉಪಹಾರದಿಂದ ನಾವು ದಿನವಿಡಿ ಉಲ್ಲಾಸಭರಿತರಾಗಿರಲು ಸಾಧ್ಯ. ಉಪಹಾರ ತಪ್ಪಿಸಿಕೊಂಡರೆ ಏನೆಲ್ಲಾ ರೋಗಗಳು ನಮ್ಮನ್ನು ಕಾಡಬಹುದು.. ತಿಳಿದುಕೊಳ್ಳೋಣ..

ಮೈಗ್ರೇನ್:

ರಾತ್ರಿಯಲ್ಲಿ ದೀರ್ಘ ಕಾಲ ನೀವು ಹಸಿದಿರುವ ಕಾರಣ ದೇಹದಲ್ಲಿನ ಸಕ್ಕರೆಯ ಮಟ್ಟವು ಬೆಳಗ್ಗೆ ಕಡಿಮೆ ಇರುತ್ತದೆ. ಆದ್ದರಿಂದ ಬೆಳಿಗ್ಗೆ ತಿಂಡಿ ತಿನ್ನದೇ ಇದ್ದರೆ ಕಡಿಮೆ ಸಕ್ಕರೆ ಮಟ್ಟವನ್ನು ಸರಿದೂಗಿಸಲು ದೇಹವು ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಹೈಪೊಗ್ಲಿಸಿಮಿಯಾ ಎನ್ನುತ್ತಾರೆ. ಈ ಪ್ರಕ್ರಿಯೆಯು ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಆದರೆ ಇದು ಅಡ್ಡಪರಿಣಾಮಗಳನ್ನು ಹೊಂದಿದೆ. ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದಿಂದ ಪ್ರಾರಂಭದಲ್ಲಿ ಸಣ್ಣ ತಲೆನೋವು ಕಾಣಿಸಿಕೊಳ್ಳಬಹುದು. ಬಳಿಕ ತೀವ್ರ ಮೈಗ್ರೇನ್ ಆಗಿ ಬದಲಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಉಪಹಾರವನ್ನು ನಿಯಮಿತವಾಗಿ ಬಿಟ್ಟು ಬಿಡುವವರು ನಿರಂತರ ತಲೆನೋವು ಮತ್ತು ಮೈಗ್ರೇನ್‌ನಿಂದ ಬಳಲುತ್ತಿರುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತದೆ.

ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ:

Advertisement

ಬೆಳಗಿನ ಉಪಹಾರ ತ್ಯಜಿಸಿದರೆ ನೀವು ದಿನವಿಡೀ ಅತಿಯಾಗಿ ಆಹಾರ ಸೇವಿಸುವ ಸಾಧ್ಯತೆ ಹೆಚ್ಚು. ಇದು ಪ್ರತಿಯಾಗಿ, ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ರಿಸರ್ಚ್ ಯುಕೆ ನಡೆಸಿದ ಸಂಶೋಧನೆಯ ಪ್ರಕಾರ, ಅಧಿಕ ಬೊಜ್ಜು ಅಥವಾ ತೂಕ ಹೊಂದಿರುವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಕಂಡು ಬಂದಿದೆ.

ತೂಕ ಹೆಚ್ಚಾಗುತ್ತದೆ:

ಹಲವರು ತೂಕ ಹೆಚ್ಚಾಗುತ್ತದೆ ಎಂದು ಭಾವಿಸಿ ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಡುತ್ತಾರೆ. ಆದರೆ ನಿಮ್ಮ ದೇಹವು ಈಗಾಗಲೇ ರಾತ್ರಿಯಿಡೀ ಹಸಿವಿನಿಂದ ಬಳಲುತ್ತಿರುತ್ತದೆ. ಆದ ಕಾರಣ ಬೆಳಗ್ಗೆಯೂ ಆಹಾರ ತ್ಯಜಿಸಿದಾಗ, ದೇಹವು ಸಕ್ಕರೆ ಮತ್ತು ಕೊಬ್ಬಿನ ಆಹಾರಕ್ಕಾಗಿ ಹಂಬಲಿಸಲು ಪ್ರಾರಂಭಿಸುತ್ತದೆ. ಅದಲ್ಲದೇ ಜಾಸ್ತಿ ಹಸಿವು ಉಂಟಾದಾಗ, ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಗಮನಿಸದೆ ನೀವು ಕಂಡುಕೊಂಡದ್ದನ್ನು ತಿನ್ನುವ ಸಾಧ್ಯತೆ ಹೆಚ್ಚು. ಆದ್ದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಚಯಾಪಚಯ ಕ್ರಿಯೆ ನಿಧಾನಗೊಳಿಸುತ್ತದೆ:

ಬೆಳಗ್ಗಿನ ಉಪಹಾರ ಬಿಡುವುದರಿಂದ ಚಯಾಪಚಯ ಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೇಹವು ಬೆಳಿಗ್ಗೆ ಕಾರ್ಯನಿರ್ವಹಿಸಲು ಶಕ್ತಿ ಅಗತ್ಯವಿದೆ. ಹಾಗಾಗಿ ದಿನದ ಮೊದಲ ಆಹಾರ ಬಿಟ್ಟುಬಿಟ್ಟರೆ, ಅದು ಚಯಾಪಚಯ ಚಟುವಟಿಕೆಯನ್ನು ತಡೆಯುತ್ತದೆ ಹಾಗೂ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಮಾತ್ರವಲ್ಲದೇ ರಾತ್ರಿಯಿಡೀ ತಿನ್ನದ ನಂತರ ಬೆಳಗ್ಗೆ ದೀರ್ಘಾವಧಿಯ ಉಪವಾಸವು ಕ್ಯಾಲೊರಿಗಳನ್ನು ಸುಡುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಬೆಳಗಿನ ಉಪಹಾರವನ್ನು ನಿಯಮಿತವಾಗಿ ಸೇವಿಸುವ ಜನರು ಹೆಚ್ಚಿನ ಮಟ್ಟದ ಚಯಾಪಚಯವನ್ನು ಹೊಂದಿರುತ್ತಾರೆ ಎಂದು ದೃಢಪಡಿಸಿದ ಅನೇಕ ಅಧ್ಯಯನಗಳು ಇವೆ.

ಮಧುಮೇಹದ ಅಪಾಯ:

ಬೆಳಗಿನ ಉಪಹಾರ ತಪ್ಪಿಸಿದಾಗ ಮತ್ತು ದೀರ್ಘಾವಧಿಯ ನಂತರ ತಿನ್ನುವಾಗ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಜನರು ಟೈಪ್ 2 ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆ. ನೀವು ಸೇವಿಸುವ ಊಟವು ನಿಮ್ಮ ಶಕ್ತಿಯ ಮಟ್ಟಗಳ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಆಯಾಸ ಶುರುವಾಗುತ್ತದೆ, ಕೆಲಸ ಮಾಡುವ ಚೈತನ್ಯ ಕುಗ್ಗುತ್ತದೆ.

ಕೂದಲು ಉದುರುತ್ತದೆ:

ಬೆಳಗಿನ ಸಮಯ ಆಹಾರ ತ್ಯಜಿಸುವುದರಿಂದ ಆಗುವ ಅಡ್ಡಪರಿಣಾಮವೆಂದರೆ ಕೂದಲು ಉದುರುವುದು. ಇದು ಕೂದಲಿನ ಬೆಳವಣಿಗೆಯನ್ನು ತಪ್ಪಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಿದೆಯೋ, ಇಲ್ಲವೋ ನೀವು ಬೆಳಗಿನ ಸಮಯ ಉಪಹಾರ ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ವಿಮರ್ಶಾತ್ಮಕವಾಗಿ ಕಡಿಮೆ ಮಟ್ಟದ ಪ್ರೋಟೀನ್ ಹೊಂದಿರುವ ಆಹಾರ ಸೇವಿಸುವುದರಿಂದ ದೇಹದಲ್ಲಿ ಕೆರಾಟಿನ್ ಮಟ್ಟಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಕೆರಾಟಿನ್ ಒಂದು ಪ್ರಮುಖ ಅಂಶವಾಗಿದ್ದು ಅದು ಕೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. . ಆದ್ದರಿಂದ, ಕೂದಲು ಉದುರುವುದನ್ನು ತಪ್ಪಿಸಲು ನೀವು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಉಪಹಾರವನ್ನು ಪ್ರತಿದಿನ ಸೇವಿಸುವುದು ಉತ್ತಮ.

ಹೃದಯಾಘಾತದ ಸಾಧ್ಯತೆ:

ಜಾಮಾ ಅಧ್ಯಯನದ ಪ್ರಕಾರ ಬೆಳಗಿನ ಉಪಹಾರ ತ್ಯಜಿಸುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಶೇ.27ಕ್ಕಿಂತ ಹೆಚ್ಚಿರುತ್ತದೆ. ಬೆಳಗಿನ ಆಹಾರ ತ್ಯಜಿಸಿದರೆ ಜನರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದು ಅಪಧಮನಿಗಳ ಅಡಚಣೆಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಪಾರ್ಶ್ವ ವಾಯು ಸೇರಿದಂತೆ ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚು ಮಾಡುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.  ಹೀಗಾಗಿ ಆರೋಗ್ಯವಂತರಾಗಿರಲು ಬೆಳಗಿನ ಉಪಹಾರವೂ ಅತೀ ಅಗತ್ಯ ಎಂಬುದು ಹಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ.

-ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next