ಬಾರಾಬಂಕಿ, ಉತ್ತರ ಪ್ರದೇಶ : ಬಾರಾಬಂಕಿ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ವಿಷ ಮದ್ಯ ಸೇವಿಸಿ ಕನಿಷ್ಠ ಆರು ಮಂದಿ ಮೃತಪಟ್ಟು ಇತರ ಅನೇಕರು ಅಸ್ವಸ್ಥರಾಗಿರುವುದಾಗಿ ರಾಜ್ಯ ಅಬಕಾರಿ ಸಚಿವ ಜೈ ಪ್ರಕಾಶ್ ಸಿಂಗ್ ಇಂದು ಮಂಗಳವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 10 ಅಬಕಾರಿ ಸಿಬಂದಿಗಳನ್ನು ಅಮಾನತು ಮಾಡಲಾಗಿದೆ.
ರಾಮನಗರ ಸಮೀಪ ದನ್ವೀರ್ ಸಿಂಗ್ ಎಂಬಾತನ ಅಂಗಡಿಯಲ್ಲಿ ನಿನ್ನೆ ಸೋಮವಾರ ರಾತ್ರಿ ಮದ್ಯ ಖರೀದಿಸಿ ಸೇವಿಸಿದವರ ಪೈಕಿ ಆರು ಮಂದಿ ಮೃತಪಟ್ಟರೆಂದು ಸಚಿವರು ತಿಳಿಸಿದ್ದಾರೆ.
ರಾಣಿಗಂಜ್ ಮತ್ತು ಆಸುಪಾಸಿನ ಹಳ್ಳಿಗರು ಈ ವಿಷ ಮದ್ಯ ಸೇವಿಸಿದ್ದು ಹಲವರು ಅಸ್ವಸ್ಥರಾಗಿದ್ದಾರೆ. ಇವರನ್ನು ರಾಮನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ಮಂದಿ ಮೃತರಲ್ಲಿ ನಾಲ್ಕು ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಅಬಕಾರಿ ಇಲಾಖೆಯ ಜಿಲ್ಲಾ ಅಬಕಾರಿ ಅಧಿಕಾರಿ, ಇನ್ಸ್ಪೆಕ್ಟರ್, ಮೂವರು ಹೆಡ್ ಕಾನ್ಸ್ಟೆಬಲ್ಗಳು ಮತ್ತು ಐವರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.