Advertisement

ಆರು ದಶಕಗಳ ಬಳಿಕ ಕಿ.ಪ್ರಾ. ಹಂತದಿಂದ ಮೇಲೇರಿದ ಶಾಲೆ

09:40 AM Nov 09, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1911 ಶಾಲೆ ಆರಂಭ
ಬಡ ಮಕ್ಕಳ ವಿದ್ಯಾರ್ಜನೆಗೆ ಆರಂಭಗೊಂಡ ಶಾಲೆ

ಬಂಟ್ವಾಳ: ಬೊಳಂತೂರು ಪರಿಸರದ ಬಡ ಮಕ್ಕಳ ವಿದ್ಯಾರ್ಜನೆಗಾಗಿ ಬೊಳಂತೂರಿನ ಮಾಡದಾರು (ಮಾಡದ ಬಳಿ)ಯಲ್ಲಿ ಮುಳಿಹುಳ್ಳಿನ ಛಾವಣಿಯೊಂದಿಗೆ ಆರಂಭಗೊಂಡ ಬೋಳಂತೂರು ಶಾಲೆ ಕಿ.ಪ್ರಾ. ಹಂತದಿಂದ ಮೇಲಕ್ಕೇರಿದ್ದು ಬರೋಬ್ಬರಿ 6 ದಶಕಗಳ ಬಳಿಕ. ಪ್ರಸ್ತುತ ದ.ಕ. ಜಿ.ಪಂ. ಮಾದರಿ ಹಿ.ಪ್ರಾ. ಶಾಲೆಯಾಗಿ ಬೆಳೆದಿದೆ.

1911ರಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕ ದಿ| ಉಗ್ಗಪ್ಪ ರೈ ಅವರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂದು ತನ್ನ ಉಸ್ತುವಾರಿಯಲ್ಲೇ ಈ ಶಾಲೆ ಯನ್ನು ಪ್ರಾರಂಭಿಸಿದ್ದರು. 27 ವರ್ಷಗಳ ಕಾಲ ಶಾಲೆ ಅವರ ಉಸ್ತುವಾರಿಯಲ್ಲೇ ಮುನ್ನಡೆದಿದ್ದು, ಮುಕ್ಕಾರು ಅನಂತಯ್ಯ ಪ್ರಾರಂಭದ ಹಂತದಲ್ಲಿ
ಶಿಕ್ಷಕರಾಗಿ ದುಡಿದಿದ್ದರು.

ಪ್ರಾರಂಭದಲ್ಲಿ 1-5ರ ವರೆಗೆ
14 ವಿದ್ಯಾರ್ಥಿಗಳ ಮೂಲಕ ಪ್ರಾರಂಭಗೊಂಡ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಮಾತ್ರ ಶಿಕ್ಷಣ ನೀಡಲಾಗುತ್ತಿತ್ತು. 6ನೇ ಪ್ರಾರಂಭ ಗೊಂಡಿದ್ದು 62 ವರ್ಷಗಳ ಬಳಿಕ 1973-74ರಲ್ಲಿ. ಮುಂದೆ ಸರಕಾರದ ಅನುದಾನದೊಂದಿಗೆ ಅಭಿವೃದ್ಧಿ ಹೊಂದಿದೆ. ಪ್ರಸ್ತುತ 1ರಿಂದ 8ನೇ ತರಗತಿಯವರೆಗೆ 175 ವಿದ್ಯಾರ್ಥಿಗಳಿದ್ದು, ಒಟ್ಟು 8 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೊಳಂತೂರಿಗೆ ಸೀಮಿತವಾಗಿದ್ದ ಶಾಲೆ ಬಳಿಕ ಕೊಕ್ಕಪುಣಿ, ಗುಂಡಿಮಜಲು, ಬಂಡೆಸಾಲೆ, ಚನಿಲ, ಮಾಡದಬಳಿ, ನಾಡಾಜೆ, ದಂಡೆಮಾರು ಪ್ರದೇಶಕ್ಕೆ ವಿಸ್ತರಣೆಗೊಂಡಿತ್ತು. ಪ್ರಸ್ತುತ ಇದು ಬೊಳಂತೂರು ಗ್ರಾಮದಲ್ಲಿರುವ ಏಕೈಕ ಸರಕಾರಿ ಶಾಲೆಯಾಗಿದೆ.

Advertisement

ರಾಷ್ಟ್ರಮಟ್ಟದ ಸಾಧನೆ
ಪ್ರಸ್ತುತ 1.84 ಎಕ್ರೆ ನಿವೇಶನವು ಶಾಲೆಯ ಸುಪರ್ದಿಯಲ್ಲಿದ್ದು, ವ್ಯವಸ್ಥಿತ ಕಟ್ಟಡದೊಂದಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ವಿಶಾಲವಾದ ಆಟದ ಮೈದಾನ ಹಾಗೂ ರಂಗಮಂದಿರವಿದೆ. ಶಾಲೆಯ ಸುತ್ತ ತೆಂಗಿನ ಮರಗಳ ಜತೆಗೆ ಇತರ ಕೆಲವೊಂದು ಮರಗಳಿವೆ. ವಿದ್ಯಾರ್ಥಿಗಳ ಸಾಧನೆಯನ್ನು ನೋಡುವುದಾದರೆ, 2010ರಲ್ಲಿ ಈ ಶಾಲೆಯ ನಾಲ್ವರು ವಿದ್ಯಾರ್ಥಿಗಳು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ
ಆಡಿದ್ದಾರೆ. 2003-04ರಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟವನ್ನೂ ಪ್ರತಿನಿಧಿಸಿರುವುದು ವಿಶೇಷವಾಗಿದೆ.
ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು

ಬೊಳಂತೂರು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ನೂರಾರು ಮಂದಿ ಇಂದು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಾಧನೆ ಮಾಡಿದ್ದಾರೆ. ಪ್ರಾಧ್ಯಾಪಕರು, ಎಂಜಿನಿಯರ್‌ಗಳು ಹಾಗೂ ವೈದ್ಯರಾಗಿಯೂ ದುಡಿಯುತ್ತಿದ್ದಾರೆ. ರಾಜಕೀಯ ಕ್ಷೇತ್ರ ನೋಡುವುದಾದರೆ, ಹಿಂದೆ ಬಂಟ್ವಾಳ ತಾಲೂಕು ಪಂಚಾಯತ್‌ನ ಅಧ್ಯಕ್ಷರಾಗಿದ್ದ ಚಂದ್ರಹಾಸ ಶೆಟ್ಟಿ ಬೊಳಂತೂರು ಅವರು ಇಲ್ಲಿನ ಹಳೆ ವಿದ್ಯಾರ್ಥಿಯಾಗಿದ್ದು, ಜತೆಗೆ ತಾಲೂಕು ಪಂಚಾಯನ ಹಾಲಿ ಉಪಾಧ್ಯಕ್ಷ ಬಿ.ಎಂ.ಅಬ್ಟಾಸ್‌ ಆಲಿ ಅವರೂ ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

108 ವರ್ಷಗಳ ಇತಿಹಾಸವಿರುವ ಬೊಳಂತೂರು ಶಾಲೆ ಮುಳಿಹುಲ್ಲಿನ ಛಾವಣಿಯಲ್ಲಿ ಆರಂಭವಾಗಿ ಪ್ರಸ್ತುತ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ. ಪಠ್ಯೇತರ ಚಟುವಟಿಕೆ ಗಳಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗುತ್ತಿದೆ.
-ಶಾಲಿನಿ ಪಿ., ಮುಖ್ಯ ಶಿಕ್ಷಕಿ

ಸಮಾಜದ ಜತೆ ಹೇಗೆ ಬೆರೆಯಬೇಕು ಎಂಬುದನ್ನು ಬೊಳಂತೂರು ಶಾಲೆ ಕಲಿಸಿದೆ. ಇದು ಬದುಕಿಗೆ ಅನುಕೂಲ ವಾಗಿದೆ. ಎಲ್ಲರೊಳಗೊಂದಾಗಿ ಬದುಕುವ ತತ್ತ್ವವನ್ನು ಅಂದಿನ ಶಿಕ್ಷಕರು ಕಲಿಸಿ ದ್ದರು. ಬೊಳಂತೂರು ಶಾಲೆಯ ಅಂದಿನ ಗುಣಮಟ್ಟದ ಶಿಕ್ಷಣ ಇಂದಿಗೂ ಮುಂದುವರಿದಿರುವುದು ಹೆಮ್ಮೆಯ ವಿಚಾರ.
-ಬಿ.ಎಂ. ಅಬ್ಟಾಸ್‌ ಆಲಿ, ಉಪಾಧ್ಯಕ್ಷರು, ತಾ.ಪಂ. ಬಂಟ್ವಾಳ, ಹಳೆ ವಿದ್ಯಾರ್ಥಿ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next