Advertisement

ಎಲ್ಲ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ ಉತ್ತಮ ನಿರ್ಧಾರ

12:34 AM Aug 06, 2022 | Team Udayavani |

ದಿನ ಕಳೆದಂತೆ ಆಟೋಮೊಬೈಲ್‌ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ. 90ರ ದಶಕದಲ್ಲಿ ಸಾಮಾನ್ಯ ಜನರ ಕೈಗೆಟಕುವುದೇ ಕಷ್ಟ ಎಂಬಂತಿದ್ದ ಕಾರುಗಳು, ಈಗ ಎಲ್ಲರ ಮನೆಗಳ ಮುಂದೆಯೂ ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ವಾಹನಗಳ ಸಂಖ್ಯೆ ಹೆಚ್ಚಾದಷ್ಟೂ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಇದಕ್ಕೆ ರಸ್ತೆಗಳಲ್ಲಿ ವಾಹನಗಳ ಸಂದಣಿ ಹೆಚ್ಚಾಗಿರುವುದೇ ಕಾರಣ ಎಂದು ಮತ್ತೆ ಹೇಳಬೇಕಾಗಿಲ್ಲ.

Advertisement

ಸದ್ಯ ಕಾರುಗಳ ವಿಚಾರಕ್ಕೆ ಬಂದರೆ, ಆರಂಭದಲ್ಲಿ ಸುರಕ್ಷೆ ನಿಯಮ ಗಳು ಕಡಿಮೆಯೇ ಇದ್ದವು. ಅಂದರೆ ಏರ್‌ಬ್ಯಾಗ್‌ನಂಥ ಅತ್ಯಂತ ಭದ್ರತಾ ಸೌಲಭ್ಯಗಳು ಉನ್ನತ ದರ್ಜೆಯ ಕಾರುಗಳಲ್ಲಿ ಅಥವಾ ದುಬಾರಿ ಕಾರುಗಳಲ್ಲಿ ಮಾತ್ರ ನೋಡಬಹುದಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಕೇಂದ್ರ ಸರಕಾರ, ಚಾಲಕ ಮತ್ತು ಚಾಲಕನ ಪಕ್ಕದ ಪ್ರಯಾಣಿಕನ ಸೀಟಿನ ಮುಂದೆ ಕಡ್ಡಾಯವಾಗಿ ಏರ್‌ಬ್ಯಾಗ್‌ ಇರಲೇಬೇಕು ಎಂಬ ನಿಯಮ ಮಾಡಿತು. ಈ ಕಾರಣದಿಂದಾಗಿ ಈಗ ಎಲ್ಲ ಕಾರುಗಳ ಮುಂದಿನ ಎರಡು ಸೀಟುಗಳಲ್ಲಿ ಏರ್‌ಬ್ಯಾಗ್‌ ಅನ್ನು ಕಾಣುತ್ತಿದ್ದೇವೆ.

ಕೇಂದ್ರ ಹೆದ್ದಾರಿ ಮತ್ತು ರಸ್ತೆ ಇಲಾಖೆಯ ಸಚಿವ ನಿತಿನ್‌ ಗಡ್ಕರಿ ಅವರು ಶುಕ್ರವಾರ ಸಂಸತ್‌ನಲ್ಲೊಂದು ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ಪಾದನೆಯಾಗುವ ಎಲ್ಲ ಕಾರುಗಳಲ್ಲಿಯೂ ಕಡ್ಡಾಯವಾಗಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸಬೇಕು ಎಂಬ ನಿಯಮ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಮಾಡಿಯಾಗಿದ್ದು, ಸದ್ಯದಲ್ಲೇ ಅಧಿಸೂಚನೆ ಹೊರಡಲಿದೆ. ಅಲ್ಲದೆ ಕಾರು ಉತ್ಪಾದನ ಮಾಲಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದೂ ತಿಳಿಸಿದ್ದಾರೆ.

ಸದ್ಯ ಭಾರತದಲ್ಲಿ ಪ್ರತೀ ವರ್ಷ ರಸ್ತೆ ಅಪಘಾತಗಳಲ್ಲಿ ಒಂದು ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಎಲ್ಲೆಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆಯೋ ಅಂಥ ಸ್ಥಳಗಳನ್ನು ಗುರುತಿಸಿ, ಅಲ್ಲಿನ ಸಮಸ್ಯೆಗಳ ನಿವಾರಣೆ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ 2024ರ ವೇಳೆಗೆ ಭಾರೀ ಪ್ರಮಾಣದಲ್ಲಿ ಅಪಘಾತ ತಪ್ಪಿಸಬೇಕು ಎಂಬುವುದು ಕೇಂದ್ರ ಸರಕಾರದ ಗುರಿಯಾಗಿದೆ. ಅಷ್ಟೇ ಅಲ್ಲ, ಜಗತ್ತಿನ ಒಟ್ಟಾರೆ ವಾಹನಗಳಲ್ಲಿ ಭಾರತ ಹೊಂದಿರುವುದು ಶೇ. 1ರಷ್ಟು ಮಾತ್ರ. ಆದರೆ ಜಗತ್ತಿನ ಶೇ. 11ರಷ್ಟು ಅಪಘಾತಗಳು ಭಾರತದಲ್ಲೇ ಸಂಭವಿಸುತ್ತವೆ ಎಂಬುದು ಆತಂಕದ ವಿಚಾರ. ಹೀಗಾಗಿಯೇ ಅಪಘಾತಗಳನ್ನು ಇಳಿಸಲೇಬೇಕಿದೆ.

ಗಡ್ಕರಿ ಅವರೇ ಹೇಳಿದ ಪ್ರಕಾರ, ಕಾರಿನಲ್ಲಿ ಒಂದು ಏರ್‌ಬ್ಯಾಗ್‌ ಅಳವಡಿಸಲು ತಗಲುವ ವೆಚ್ಚ ಕೇವಲ 800 ರೂ. ಅಂದರೆ, ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸಲು 4,800 ರೂ.ಗಳಷ್ಟೇ ಹೆಚ್ಚುವರಿಯಾಗಿ ಬೇಕಾಗುತ್ತದೆ. ಆದರೆ ಇಂದಿಗೂ ಕಾರುಗಳ ಉತ್ಪಾದಕ ಕಂಪೆನಿಗಳು, ಕೇಂದ್ರ ಸರಕಾರದ ಈ ಕಡ್ಡಾಯ ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸಲು ಒಪ್ಪುತ್ತಿಲ್ಲ. ಇದರಿಂದ ವೆಚ್ಚ ಹೆಚ್ಚಾಗುತ್ತದೆ, ಬೇಡ ಎಂದೇ ಹೇಳುತ್ತಿದ್ದಾರೆ. ಹೀಗಾಗಿಯೇ ಗಡ್ಕರಿ ಅವರು, ಪ್ರತೀ ಏರ್‌ಬ್ಯಾಗ್‌ಗೆ ಆಗುವ ವೆಚ್ಚ ಹೇಳಿರುವುದು ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಏನೇ ಆಗಲಿ, ಕೇಂದ್ರ ಸರಕಾರ ಈಗ ಜಾರಿಗೆ ತರಲು ಹೊರಟಿರುವ ನಿರ್ಧಾರ ಸಮಂಜಸವಾಗಿಯೇ ಇದೆ. ಗ್ರಾಹಕರಲ್ಲೂ ಕಾರು ಮಾರಾಟ ಗಾರರು ಈ ಆರು ಏರ್‌ಬ್ಯಾಗ್‌ಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಕಾರುಗಳು ಹೆಚ್ಚು ಸುರಕ್ಷಿತವಾದಷ್ಟು, ಪ್ರಯಾಣಿಕರ ಸಾವು ನೋವುಗಳನ್ನು ತಪ್ಪಿಸಲು ಸಾಧ್ಯವಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಂಡು ಜಾರಿಗೆ ತರಲಿ ಎಂಬುದೇ ಜನರ ಆಶಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next