Advertisement

ಬೀದಿನಾಯಿ ಹಾವಳಿಗೆ ಬೇಸತ್ತ ಜನ

12:51 PM Dec 28, 2019 | Naveen |

ಸಿರುಗುಪ್ಪ: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಜನ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ಹಿಂಡು ಹಿಂಡಾಗಿ ಬರುವ ಬೀದಿನಾಯಿಗಳಿಂದ ಮಕ್ಕಳು, ವೃದ್ಧರು ತಪ್ಪಿಸಿಕೊಳ್ಳುವುದೇ ಸಾಹಸದ ಕೆಲಸವಾಗಿದೆ!

Advertisement

ನಗರದ ತಾಲೂಕು ಕಚೇರಿ ಆವರಣ, ಸದಾಶಿವನಗರ, ಪಾರ್ವತಿನಗರ, ಡ್ರೈವರ್‌ ಕಾಲೋನಿ, ಮುಖ್ಯರಸ್ತೆಗಳು,  ಜಯನಗರ
ಕಾಲೋನಿ, ತರಕಾರಿ ಮಾರುಕಟ್ಟೆ, ಟಿಪ್ಪುಸುಲ್ತಾನ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.

ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಪೋಷಕರು ಭಯ
ಪಡುತ್ತಿದ್ದಾರೆ. ಶಾಲೆಗೆ ತೆರಳುವ ಮಕ್ಕಳು ಬೀದಿನಾಯಿಗಳ ಉಪಟಳಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳು ಮನೆಗೆ ಬರುವವರೆಗೂ ಪೋಷಕರು ಕೈಯಲ್ಲಿ ಜೀವ ಹಿಡಿದುಕೊಂಡು ಕಾಯುವಂತಾಗಿದೆ. ಬೆಳ್ಳಂಬೆಳಗ್ಗೆ ನಾಯಿಗಳು ಸಾಲುಸಾಲಾಗಿ ರಸ್ತೆಗಿಳಿಯುತ್ತವೆ. ರಾತ್ರಿ ಸಂದರ್ಭದಲ್ಲಿ ಒಬ್ಬರೆ ಸಂಚರಿಸುವಾಗ ಒಮ್ಮೆಲೆ ದಾಳಿ ಮಾಡುತ್ತವೆ. ಬೈಕ್‌ನಲ್ಲಿ ಹೋಗುತ್ತಿದ್ದರೂ ದಾಳಿ ಮಾಡುತ್ತವೆ. ಹಲವರು ಈಗಾಗಲೇ ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿಗಳ ಹಾವಳಿ ವಿರುದ್ಧ ಕ್ರಮ ಕೈಗೊಳ್ಳದ ನಗರಸಭೆ ಅ ಧಿಕಾರಿಗಳ ವಿರುದ್ಧ ಜನ ಶಾಪ ಹಾಕುತ್ತಿದ್ದಾರೆ.

ಬೈಕ್‌ನಲ್ಲಿ ಹೋಗುವ ವೇಳೆಯಲ್ಲಿ ಅಟ್ಟಿಸಿಕೊಂಡು ಬರುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳು ನಡೆದಿವೆ. ಬಳ್ಳಾರಿ ಸೇರಿ ವಿವಿಧೆಡೆ ಕೆಲಸಕ್ಕೆ ಹೋದವರು ರಾತ್ರಿ ಮನೆಗೆ ಬರುತ್ತಾರೆ.

ಬೀದಿನಾಯಿಗಳ ಹಾವಳಿಯಿಂದ ಅವರು ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗಿನ ಜಾವ ಹಾಲು ಮತ್ತು ದಿನಪತ್ರಿಕೆ ಹಂಚುವ ವಿತರಕರಿಗೂ ನಾಯಿಕಾಟ ತಪ್ಪಿಲ್ಲ. ಬೆಳಕು ಮೂಡದ ಹೊತ್ತಿನಲ್ಲಿ ದಿನಪತ್ರಿಕೆ ವಿತರಿಸಲು ನಗರದ ಬೀದಿಗಳಲ್ಲಿ ಸೈಕ್‌ಲ್‌ ಏರಿ ಹೋಗುವಾಗ ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತವೆ.

Advertisement

ನಗರದ ಕಲ್ಯಾಣ ಮಂಟಪಗಳ ಬಳಿಯು ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಉಳಿದ ಆಹಾರ ಪದಾರ್ಥಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದು ನಾಯಿಗಳ ಹಾವಳಿಗೆ ಕಾರಣವಾಗಿದೆ. ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂತಾನ ಶಕ್ತಿಹರಣ ಚಿಕಿತ್ಸೆಗಳನ್ನು
ಮಾಡಿಸುವುದು ಸೇರಿದಂತೆ ಹಲವು ಮಾರ್ಗೋಪಾಯಗಳನ್ನು ಸಂಬಂಧಪಟ್ಟ ನಗರಸಭೆ ಅ ಧಿಕಾರಿಗಳು ಕೈಗೊಂಡು ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಜನರ ಒತ್ತಾಯವಾಗಿದೆ.

ಬೀದಿನಾಯಿಗಳ ಹಾವಳಿ ಹೆಚ್ಚಾಗಲು ಜನರು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಮನೆ ಕಸವನ್ನು ರಸ್ತೆ ಬದಿ ಬಿಸಾಡಿ ಹೋಗುತ್ತಾರೆ. ರಸ್ತೆಗಳ ಬಳಿ ಚೆಲ್ಲಾಡಿರುವ ಕಸದ ರಾಶಿ,
ಖಾಲಿಯಾಗದ ನಗರಸಭೆ ತೊಟ್ಟಿ ಇರುವ ಕಡೆ ನಾಯಿಗಳ ಗುಂಪು
ಇರುವುದು ಸಾಮಾನ್ಯವಾಗಿದೆ. ಬೀದಿನಾಯಿಗಳನ್ನು ಸಾಯಿಸಲು ಅಥವಾ ಬೇರೆಡೆಗೆ ಬಿಡಲು ಅವಕಾಶವಿಲ್ಲ. ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯೇ ಇದಕ್ಕೆ ಪರಿಹಾರ, ಶಸ್ತ್ರಚಿಕಿತ್ಸೆ ಮೂಲಕ ಬೀದಿನಾಯಿಗಳ ಸಂತತಿ ಹೆಚ್ಚಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.
ಪ್ರೇಮ್‌ಚಾರ್ಲ್ಸ್‌,
ಪೌರಾಯುಕ್ತ

ಬೆಳಗಿನ ಜಾವ ಪತ್ರಿಕೆಗಳನ್ನು ಹಂಚಲು ಹೋಗುವ ವೇಳೆ ನಾಯಿಗಳು ಮೈಮೇಲೆ ಬೀಳುತ್ತವೆ. ಇದರಿಂದಾಗಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಳ್ಳಬೇಕು.
ಮಾರೆಪ್ಪನಾಯಕ
ಪತ್ರಿಕೆ ವಿತರಕ

„ಆರ್‌. ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next