Advertisement

ಪ್ರವಾಹದಿಂದ ಭತ್ತದ ಗದ್ದೆ ಹಾಳು

03:54 PM Aug 17, 2019 | Naveen |

ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿ ದಂಡೆಯಲ್ಲಿರುವ ಹೆರಕಲ್ಲು ಮತ್ತು ಕೆಂಚನಗುಡ್ಡ ಗ್ರಾಮಗಳ ರೈತರು ನಾಟಿಮಾಡಿದ ಭತ್ತದ ಗದ್ದೆಗಳಿಗೆ ನದಿ ನೀರು ನುಗ್ಗಿದ ಪರಿಣಾಮ ಗದ್ದೆಗಳಲ್ಲಿ ಮರಳು ಮತ್ತು ಕೆಸರು ತುಂಬಿಕೊಂಡಿದ್ದು, ಇನ್ನೊಂದೆಡೆ ಗದ್ದೆಗಳಲ್ಲಿ ನದಿಯ ನೀರು ನಿಂತ ಪರಿಣಾಮ ನಾಟಿ ಮಾಡಿದ ಭತ್ತದ ಸಸಿಯು ಕೊಳೆಯುತ್ತಿದೆ.

Advertisement

ಈ ಭಾಗದಲ್ಲಿ ನದಿಯ ತಗ್ಗುದಿನ್ನೆಗಳಲ್ಲಿ ನಿಂತ ನೀರನ್ನು ಮತ್ತು ಬೋರ್‌ವೆಲ್ ನೀರನ್ನು ಬಳಸಿಕೊಂಡು ಸುಮಾರು 100ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಭತ್ತದ ಗದ್ದೆಯಲ್ಲಿ 2 ದಿನ ನದಿ ನೀರು ತುಂಬಿ ಹರಿಯುತ್ತಿದ್ದವು.ನಂತರ ನೀರಿನ ಪ್ರವಾಹ ಕಡಿಮೆಯಾಗಿದ್ದರೂ ನೀರಿನೊಂದಿಗೆ ಹರಿದು ಬಂದ ಮರಳು ಮತ್ತು ಮಣ್ಣು ಗದ್ದೆಗಳಲ್ಲಿ ಸಂಗ್ರಹವಾಗಿರುವುದರಿಂದ ಭತ್ತದ ಸಸಿಯು ಕೊಳೆಯುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

ಒಂದು ಎಕರೆ ಭತ್ತ ನಾಟಿಮಾಡಲು ರೂ. 5ರಿಂದ 8ಸಾವಿರದ ವರೆಗೆ ರೈತರು ಖರ್ಚು ಮಾಡಿದ್ದಾರೆ. ಆದರೆ ನದಿ ನೀರಿನ ಪ್ರವಾಹ ಭತ್ತ ನಾಟಿಮಾಡಿದ ರೈತರ ಗದ್ದೆಗಳಿಗೆ ನುಗ್ಗಿರುವುದರಿಂದ ಈ ಭಾಗದ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ನದಿ ತೀರದಲ್ಲಿ ನೀರಿನ ಪ್ರವಾಹದಿಂದ ಹಾನಿಯಾಗಿರುವ ಬೆಳೆಯ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಜಂಟಿ ಸಮೀಕ್ಷೆ ನಂತರ ತಾಲೂಕಿನಲ್ಲಿ ನೆರೆಯಿಂದ ಹಾನಿಯಾದ ಬೆಳೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ತಹಶೀಲ್ದಾರ್‌ ದಯಾನಂದ್‌ ಪಾಟೀಲ್ ತಿಳಿಸಿದ್ದಾರೆ.

ನೀರಿನ ಪ್ರವಾಹದಿಂದ ಉಂಟಾದ ಬೆಳೆ ಹಾನಿ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಸಮೀಕ್ಷೆ ಆರಂಭಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಜೀರ ಅಹಮ್ಮದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next