Advertisement

ಕರಾವಳಿಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಾರದ ಸೈರನ್‌ ಟವರ್‌ಗಳು

02:14 AM Jun 28, 2022 | Team Udayavani |

ಮಂಗಳೂರು: ಚಂಡ ಮಾರುತ, ಸುನಾಮಿ ಸಂದರ್ಭದಲ್ಲಿ ತುರ್ತು ಮುನ್ನೆಚ್ಚರಿಕೆ ನೀಡಿ ಕ್ಷಿಪ್ರಗತಿಯಲ್ಲಿ ಪರಿಹಾರ ಕಾರ್ಯಾಚರಣೆಗೆ ಪೂರಕವಾಗಿ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸೈರನ್‌ ಟವರ್‌ ಯೋಜನೆ ಮಂಜೂರುಗೊಂಡು ನಾಲ್ಕು ವರ್ಷಗಳು ಸಂದರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

Advertisement

ನ್ಯಾಶನಲ್‌ ಸೈಕ್ಲೋನ್‌ ರೆಸಿಸ್ಟ್‌ ಮಿಟಿಗೇಶನ್‌ ಪ್ರೊಜೆಕ್ಟ್ (ರಾಷ್ಟ್ರೀಯ ಚಂಡಮಾರುತ ಅಪಾಯ ಮುನ್ಸೂ ಚನೆ, ಉಪಶಮನ ಯೋಜನೆ -ಎನ್‌ಸಿಆರ್‌ಎಂಪಿ) ವತಿಯಿಂದ 26.92 ಕೋ.ರೂ. ವೆಚ್ಚದಲ್ಲಿ 26 ಸೈರನ್‌ ಟವರ್‌ಗಳನ್ನು ಅಳವಡಿಸುವ ಯೋಜನೆ ಇದಾಗಿದೆ.

ಅರಬಿ ಸಮುದ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಾಗ ವಾಯುಭಾರ ಕುಸಿತದಿಂದ ಚಂಡಮಾರುತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕಾರ್ಯಾಚರಣೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿ ಸಂಭಾವ್ಯ ಅನಾಹುತಗಳನ್ನು ಕನಿಷ್ಠಗೊಳಿಸಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುನ್ನಚ್ಚರಿಕೆ ಹಾಗೂ ಪ್ರಸರಣ ವ್ಯವಸ್ಥೆಗೆ ಸೈರನ್‌ ಟವರ್‌ (ಎಚ್ಚರಿಕೆ ಗೋಪುರ) ನಿರ್ಮಾಣ ಯೋಜನೆಯನ್ನು 4 ವರ್ಷಗಳ ಹಿಂದೆ ಎನ್‌ಸಿಆರ್‌ಎಂಪಿ ರೂಪಿಸಿತ್ತು. ಸ್ಥಳ ಸಮೀಕ್ಷೆ ನಡೆಸಿ ಒಟ್ಟು 26 ಕಡೆಗಳಲ್ಲಿ ಸ್ಥಳ ಆಯ್ಕೆ ಮಾಡ ಲಾಗಿತ್ತು.

ಆಯ್ಕೆಯಾಗಿರುವ ತಾಣಗಳು
ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ 8 ಹಾಗೂ ಉತ್ತರ ಕನ್ನಡದಲ್ಲಿ 10 ಪ್ರದೇಶಗಳನ್ನು ಸೈರನ್‌ ಟವರ್‌ಗೆ ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್‌, ಸಸಿಹಿತ್ಲು ಬೀಚ್‌ಗಳು ಹಾಗೂ ಹೊಸಬೆಟ್ಟು, ಉಡುಪಿಯಲ್ಲಿ ಪಡುಬಿದ್ರಿ, ಕಾಪು, ಮಲ್ಪೆ, ಕೋಡಿ, ಮಟ್ಟು, ಮರವಂತೆ, ಶಿರೂರು ಬೀಚ್‌ಗಳ ಬಳಿ ಹಾಗೂ ತೆಕ್ಟಟ್ಟೆ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕನ್ನಡದಲ್ಲಿ ಮುರುಡೇಶ್ವರ ಬೀಚ್‌, ಎಕೋ ಬೀಚ್‌ ಪಾರ್ಕ್‌, ಓಂ ಮತ್ತು ಕುಡ್ಲೆ ಬೀಚ್‌ ನಡುವಣ ಪ್ರದೇಶ, ಗೋಕರ್ಣ ಬೀಚ್‌, ಆರ್‌.ಟಿ. ಬೀಚ್‌, ಮಂಕಿ, ಬೇಲೆಕೇರಿ, ಪುಜಾಗೇರಿ ಕಾಲೇಜು ಆವರಣ, ಶಿರಾಲಿ, ಚಿಟ್ಟಕುಳ ಗ್ರಾಮ ಪ್ರದೇಶ ಆಯ್ಕೆಯಾಗಿವೆ.

ಪ್ರಕೃತಿ ವಿಕೋಪಗಳ ಸಂದರ್ಭ ತುರ್ತು ಆಶ್ರಯಕ್ಕಾಗಿ ದ. ಕನ್ನಡ ದಲ್ಲಿ ಉಳ್ಳಾಲ ಹಾಗೂ ಹೊಸಬೆಟ್ಟುವಿ ನಲ್ಲಿ ಬಹುಉದ್ದೇಶ ಆಶ್ರಯ ತಾಣಗಳನ್ನು ಈಗಾಗಲೇ ನಿರ್ಮಿಸ ಲಾಗಿದೆ. ಉಡುಪಿ ಜಿಲ್ಲೆಯ ತೆಕ್ಕಟ್ಟೆ ಮತ್ತು ಕಾಪುವಿನಲ್ಲಿ ಆಶ್ರಯತಾಣ ನಿರ್ಮಿಸಲಾಗಿದೆ. ತಲಾ ಸುಮಾರು 1,000 ಜನರಿಗೆ ಆಶ್ರಯ ಸಾಮರ್ಥ್ಯ ವನ್ನು ಇದು ಹೊಂದಿದೆ. ಇದರ ಜತೆಗೆ ತ್ವರಿತ ಕಾರ್ಯಾ ಚರಣೆಗೆ ನೆರವಾಗುವಂತೆ ಈ ಯೋಜನೆಯಲ್ಲಿ ಕರಾವಳಿ ತೀರದಲ್ಲಿ ಸೇತುವೆ ಹಾಗೂ ರಸ್ತೆಗಳನ್ನು ಕೂಡ ನಿರ್ಮಿಸಲಾಗಿದೆ.

Advertisement

ಸೈರನ್‌ ಮೂಲಕ ಎಚ್ಚರಿಕೆ
ಸಂಭಾವ್ಯ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ಹವಾಮಾನ ಇಲಾಖೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ಲಭ್ಯವಾದ ಕೂಡಲೇ ಎಚ್ಚರಿಕೆ ಹಾಗೂ ಸಂದೇಶವನ್ನು ಈ ಮೆಗಾ ಟವರ್‌ಗಳಿಗೆ ರವಾನಿಸಲಾಗುತ್ತದೆ. ಸೈರನ್‌ ಟವರ್‌ ಮೂಲಕ ಸುತ್ತಲಿನ 10 ಕಿ.ಮೀ. ವರೆಗೆ ಸಂಭಾವ್ಯ ಅಪಾಯದ ಮುನ್ನೆಚರಿಕೆ ನೀಡಲಾಗುತ್ತದೆ. ಇದು ಸ್ಥಳೀಯವಾಗಿ ತ್ವರಿತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪರಿಹಾರ ತಂಡಗಳಿಗೆ ಸೂಕ್ತ ಪರಿಹಾರ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ನೆರವಾಗುತ್ತದೆ.

– ಕೇಶವ ಕುಂದರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next