Advertisement

ತೊಗರಿ ಬೆಂಬಲ ಬೆಲೆ ಹೆಚ್ಚಿಸಲು ಸಿಂಗ್‌ಗೆ ಮನವಿ

02:43 PM Feb 10, 2017 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕದ ವಾಣಿಜ್ಯ ಬೆಳೆ ತೊಗರಿಗೆ ಹೆಚ್ಚುವರಿ ಬೆಂಬಲ ಘೋಷಿಸುವಂತೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ರಾಧಾ ಮೋಹನ್‌  ಸಿಂಗ್‌ ಅವರಿಗೆ ಗುರುವಾರ ನವದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

Advertisement

ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಬೆಂಬಲ ಬೆಲೆಗಿಂತ ಕಡಿಮೆಯಾಗಿದೆ. ಅಲ್ಲದೆ ಬೆಂಬಲ ಬೆಲೆ ಸರ್ವ ರೈತರ ನೆರವಿಗೆ ಬರುತ್ತಿಲ್ಲ. ಹೀಗಾಗಿ ತಕ್ಷಣವೇ ಹೆಚ್ಚುವರಿ ಬೆಂಬಲ ಬೆಲೆ ನೀಡಿದರೆ ರೈತರಿಗೆ ಸಹಾಯವಾಗುವುದು. ಅಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಿದಂತಾಗುತ್ತದೆ.

ಜತೆಗೆ ಖರೀದಿ ಪ್ರಕ್ರಿಯೆ ಇನ್ನಷ್ಟು ವ್ಯಾಪಕಗೊಳ್ಳಬೇಕೆಂದು ಯಡಿಯೂರಪ್ಪ ಮನವಿ ಸಲ್ಲಿಸಿ ಸಚಿವರ ಗಮನಕ್ಕೆ ತಂದರು. ಕಳೆದ ವರ್ಷ 11 ಸಾವಿರ ರೂ. ಇದ್ದ ಬೆಲೆ ಈ ವರ್ಷ 4500 ರೂ.ಗೆ ಇಳಿದಿದೆ. ಇದಕ್ಕೆ ವಿದೇಶಿ ಬೇಳೆಕಾಳುಗಳ ಮೇಲೆ ಗಣನೀಯವಾಗಿ ಆಮದು ಶುಲ್ಕ ಹಾಕದಿರುವುದು ಸೇರಿದಂತೆ ಇತರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಯಿತು.

ಇದಕ್ಕೆ ಉತ್ತರ ನೀಡಿದ ಕೃಷಿ ಸಚಿವರು, ತೊಗರಿ ಬೆಂಬಲ ಬೆಲೆ ಹೆಚ್ಚುವರಿ ಘೋಷಣೆ ಮಾಡುವ ಸಂಬಂಧವಾಗಿ ವಿತ್ತ ಸಚಿವ ಅರುಣ ಜೈಟಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಂಸದರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಜಿ.ಎಂ. ಸಿದ್ದೇಶ್ವರ, ಸುರೇಶ ಅಂಗಡಿ ಹಾಗೂ ಮುಂತಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next